ಅಪ್ರಾಪ್ತ ಬಾಲಕರಿಂದ ಮದ್ರಾಸದಲ್ಲೇ ಐದು ವರ್ಷದ ಬಾಲಕನ ಹತ್ಯೆ

By Anusha KbFirst Published Aug 25, 2024, 11:43 AM IST
Highlights

ಮದ್ರಾಸದಲ್ಲಿ ರಜೆ ಸಿಗಲಿ ಎಂಬ ಉದ್ದೇಶದಿಂದ ಮೂವರು ಅಪ್ರಾಪ್ತ ಬಾಲಕರು ಐದು ವರ್ಷದ ಬಾಲಕನನ್ನು ಹತ್ಯೆ ಮಾಡಿದ್ದಾರೆ. ಮರಣೋತ್ತರ ಪರೀಕ್ಷೆಯಲ್ಲಿ ಬಾಲಕನ ದೇಹದ ಮೇಲೆ ಹಲ್ಲೆಯ ಗುರುತುಗಳು ಪತ್ತೆಯಾಗಿವೆ.

ನವದೆಹಲಿ: ರಜೆ ಸಿಗಲಿ ಅಂತ ಮೂವರು ಅಪ್ರಾಪ್ತ ಬಾಲಕರು ಸೇರಿ ಮದ್ರಾಸದಲ್ಲಿ ಓದುತ್ತಿದ್ದ ಐದು ವರ್ಷದ ಬಾಲಕನನ್ನು ಹಲ್ಲೆ ಮಾಡಿ ಕೊಂದ ಆಘಾತಕಾರಿ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ.  ಈಶಾನ್ಯ ದೆಹಲಿಯಲ್ಲಿದ್ದ ಮದ್ರಾಸವೊಂದರಲ್ಲಿ ಈ ಬಾಲಕ ವಾಸ ಮಾಡುತ್ತಿದ್ದ.ಈತನ ಮೇಲೆ 9 ರಿಂದ 11 ವರ್ಷದೊಳಗಿನ ಮೂರು ಬಾಲಕರು ಹಲ್ಲೆ ಮಾಡಿದ್ದಾರೆ. ಜಗಳವಾಡಿ ಅದರಿಂದ ರಜೆ ಪಡೆಯಲು ಬಾಲಕರು ಬಯಸಿದ್ದರು ಎಂದು ಪೊಲೀಸರು ಹೇಳಿದ್ದಾರೆ. 

ಆದರೆ ಮೂವರು ಬಾಲಕರು ಸೇರಿ ಮಾಡಿದ ಹಲ್ಲೆಯಿಂದ ಐದು ವರ್ಷದ ಬಾಲಕ ಸಾವನ್ನಪ್ಪಿದ್ದಾನೆ. ಪೊಲೀಸರು ಹೇಳುವ ಪ್ರಕಾರ, ಈ ಬಾಲಕ ಕುಟುಂಬದವರು ಆತನನ್ನು ಐದು ತಿಂಗಳ ಹಿಂದಷ್ಟೇ ಈ ಮದ್ರಾಸಕ್ಕೆ ಓದುವುದಕ್ಕಾಗಿ ಕಳುಹಿಸಿದ್ದರು. ಘಟನೆಯ ಬಳಿಕ ಕೊಲೆಗೆ ಕಾರಣರಾದ ಅಪ್ರಾಪ್ತ ಬಾಲಕರನ್ನು ಪೊಲೀಸರು ಬಂಧಿಸಲಾಗಿದೆ. 

Latest Videos

ಮಸೀದಿ ಮುಂದೆ ಕೊಂಡ ಹಾಯುವಾಗ ಮೊಹರಂ ಅಲಾಯಿ ಕುಣಿಗೆ ಬಿದ್ದು ವ್ಯಕ್ತಿ ಸಜೀವ ದಹನ!

ಶುಕ್ರವಾರ ರಾತ್ರಿ ಈ ಘಟನೆ ನಡೆದಿದೆ. ಆತನ ದೇಹದ ಹಲವೆಡೆ ಹಲ್ಲೆಯಿಂದ ಗುಳ್ಳೆಗಳು ಹಾಗೂ ಗಾಯಗಳಾಗಿವೆ. ಈ ಮದ್ರಾಸದ ಪ್ರಾಂಶುಪಾಲ ಹಾಜಿ ದಿನ್ ಮೊಹಮ್ಮದ್ ಅವರು ಮೊದಲಿಗೆ ಪೊಲೀಸರಿಗೆ ನೀಡಿದ ಮಾಹಿತಿಯಲ್ಲಿ ಬಾಲಕ ಚರ್ಮದ ಕಾಯಿಲೆಯಿಂದ ಸಾವನ್ನಪ್ಪಿದ್ದಾನೆ ಎಂದು ಸುಳ್ಳು ಹೇಳಿದ್ದರು. ಆದರೆ ನಂತರ ನಡೆದ ಮರಣೋತ್ತರ ಪರೀಕ್ಷೆ ವೇಳೆ ಬಾಲಕ ದೇಹದ ಒಳಭಾಗದಲ್ಲೂ ಅನೇಕ ಕಡೆ ಗಾಯಗಳಾಗಿರುವುದು ಕಂಡು ಬಂತು.  ಕಿಡ್ನಿಗೆ ಹಾನಿಯಾಗಿತ್ತು. ಕಿಬ್ಬೊಟ್ಟೆ ಹಾಗೂ ಬಲ ಶ್ವಾಸಕೋಶದಲ್ಲಿ ರಕ್ತಸ್ರಾವವಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ. 

ಶುಕ್ರವಾರ ರಾತ್ರಿ 9.52ರ ಸುಮಾರಿಗೆ ನಮಗೆ ಬಾಲಕನ ಸಾವಿನ ಬಗ್ಗೆ ಪೋನ್ ಕರೆ ಬಂತು. ದೇಹದ ಹಲವು ಭಾಗಗಳಲ್ಲಿ ಗಾಯಗೊಂಡ ಸ್ಥಿತಿಯಲ್ಲಿ ಬಾಲಕ ಪತ್ತೆಯಾಗಿದ್ದ. ಇತ್ತ ಬಾಲಕನ ತಾಯಿ ದೆಹಲಿಯ ಪಂಜಾಬಿ ಬಾಘ್‌ನಲ್ಲಿ ವಾಸ ಮಾಡ್ತಿದ್ದು, ತಾಯಿ ಉತ್ತರ ಪ್ರದೇಶದಲ್ಲಿ ವಾಸ ಮಾಡುತ್ತಿದ್ದ.  ಹಲವು ಮನೆಗಳಲ್ಲಿ ಮನೆ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ ತಾಯಿ ಒಟ್ಟು, ಮೂವರು ಮಕ್ಕಳನ್ನು ಹೊಂದಿದ್ದರು. ಒಬ್ಬ ಬಾಲಕನನ್ನು ಮದ್ರಾಸಕ್ಕೆ ಓದುವುದಕ್ಕಾಗಿ ಕಳುಹಿಸಿದ್ದರು ಎಂದು ಡೆಪ್ಯುಟಿ ಕಮೀಷನರ್ ಜೋಯ್ ಎನ್ ತಿರ್ಕಿ ಹೇಳಿದ್ದಾರೆ. 

ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇಟ್ಟ ಮುಸಾವೀರ್ ಪ್ರಕ್ರಿಯೆ ಮರುಸೃಷ್ಟಿ, ಬಟ್ಟೆ ಬದಲಿಸಿದ ಮಸೀದಿಯ ಮಹಜರ್!

ಶುಕ್ರವಾರ ಸಂಜೆ ಬಾಲಕನ ತಾಯಿಗೆ ಮದ್ರಾಸದಿಂದ ಕರೆ ಬಂದಿದ್ದು, ನಿಮ್ಮ ಮಗನಿಗೆ ಹುಷಾರಿಲ್ಲ ಎಂದು ಮಾಹಿತಿ ನೀಡಿದ್ದಾರೆ. ಬಾಲಕನ್ನು ಬ್ರಿಜ್‌ಪುರಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ವೈದ್ಯರು ಆತ ಮೃತಪಟ್ಟಿದ್ದಾನೆ ಎಂದು ಘೋಷಿಸಿದರು. ಬಳಿಕ ತನಿಖೆ ಆರಂಭಿಸಿದ ಪೊಲೀಸರು ಮದ್ರಾಸದ ಸಿಸಿಟಿವಿಯನ್ನು ತಪಾಸಣೆ ಮಾಡಿದ್ದಾರೆ. ಆ ಸಿಸಿಟಿವಿ ದೃಶ್ಯಾವಳಿಯಲ್ಲಿ ಶುಕ್ರವಾದ ಮಧ್ಯಾಹ್ನದ ನಂತರ ಬಾಲಕನನ್ನು ಇತರ ಮೂವರು ಬಾಲಕರು ಥಳಿಸುತ್ತಿರುವುದು ಸೆರೆ ಆಗಿದೆ. ನಾವು ಆ ಮೂವರು ಬಾಲಕರನ್ನು ಶನಿವಾರ ಬಂಧಿಸಿದ್ದು ವಿಚಾರಣೆ ನಡೆಸಿದೆ. 

ವಿಚಾರಣೆ ವೇಳೆ ಮೃತ ಬಾಲಕನ ಬಗ್ಗೆ ತಮ್ಮ ವಿರುದ್ಧ ದೂರುತ್ತಿದ್ದಿದ್ದರಿಂದ ನಾವು ಆತನ ಬಗ್ಗೆ ಅಸಮಾಧಾನಗೊಂಡಿದ್ದೆವು ಎಂದಿದ್ದರು. ಇದರ ಜೊತೆಗೆ ಈ ಬಾಲಕರು ವಾಪಸ್ ಮನೆಗೆ ಹೋಗಲು ಬಯಸಿದ್ದರು. ಬಾಲಕನ ಸಾವಾದರೆ ಮದ್ರಾಸದಲ್ಲಿರುವ ಎಲ್ಲರನ್ನು ಪ್ರಿನ್ಸಿಪಾಲ್ ಮನೆಗೆ ಕಳುಹಿಸಬಹುದು ಎಂದು ಭಾವಿಸಿದ್ದರು ಹೀಗಾಗಿ ಬಾಲಕನ ಹತ್ಯೆ ಮಾಡಿದ್ದಾಗಿ ಈ ಅಪ್ರಾಪ್ತ ಬಾಲಕರು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಕೊಲೆ ಪ್ರಕರಣದ ದಾಖಲಿಸಲಾಗಿದ್ದು, ಈ ಕೊಲೆ ಪ್ರಕರಣದಲ್ಲಿ ಇತರರ ಪಾತ್ರವಿದೆಯೇ ಎಂಬ ಬಗ್ಗೆ ತನಿಖೆ ಮಾಡಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.  

ಈ ಮದ್ರಾಸದಲ್ಲಿ ಒಟ್ಟು 250 ಬಾಲಕರು ಇದ್ದು, ಅದರಲ್ಲಿ 150 ಬಾಲಕರು ಉತ್ತರ ಪ್ರದೇಶಕ್ಕೆ ಸೇರಿದವರಾಗಿದ್ದಾರೆ. ಶುಕ್ರವಾರ ರಾತ್ರಿ ಈ ಮದ್ರಾಸದ ಮುಂದೆ ಬಾಲಕನ  ಕುಟುಂಬದ ಸದಸ್ಯರು ಹಾಗೂ ಸ್ಥಳೀಯರು ಪ್ರತಿಭಟನೆ ನಡೆಸಿ ಮದ್ರಾಸದ ಪ್ರಾಂಶುಪಾಲರು ಹಾಗೂ ಮೌಲ್ವಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೇ ಕೆಲ ಪೋಷಕರು ಘಟನೆಯ ಬಳಿಕ ತಮ್ಮ ಮಕ್ಕಳನ್ನು ಅಲ್ಲಿಂದ ಕರೆದೊಯ್ದಿದ್ದಾರೆ.  ಒಟ್ಟಿನಲ್ಲಿ ಮಕ್ಕಳು ಓದಿ ಒಳ್ಳೆಯ ಹಾದಿ ಹಿಡಿಯಲಿ ಎಂದು ಮಗನನ್ನು ಮದ್ರಾಸಕ್ಕೆ ಕಳುಹಿಸಿದ ಬಡ ತಾಯಿ ಮದ್ರಾಸದ ನಿರ್ಲಕ್ಷ್ಯದಿಂದಾಗಿ ಮಗನನ್ನು ಕಳೆದುಕೊಳ್ಳುವಂತಾಗಿದೆ. 

click me!