
ಬೆಂಗಳೂರು (ಆ.16): ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ರಾಜ್ಯಾದ್ಯಂತ ಸೋಮವಾರ ವಿಜೃಂಭಣೆಯಿಂದ ನಡೆಯಿತು. ಎಲ್ಲ ಸರ್ಕಾರಿ, ಖಾಸಗಿ ಕಚೇರಿ, ಶಾಲಾ-ಕಾಲೇಜುಗಳಲ್ಲಿ, ಸಂಘ-ಸಂಸ್ಥೆಗಳಲ್ಲಿ ರಾಷ್ಟ್ರ ಧ್ವಜಾರೋಹಣ ನಡೆಯಿತು. ಅದೇ ರೀತಿ ಪ್ರಧಾನಿ ಮೋದಿಯ ‘ಹರ್ ಘರ್ ತಿರಂಗಾ’ ಕರೆಯಂತೆ ಸೋಮವಾರದಂದೂ ಜನ ತಮ್ಮ ತಮ್ಮ ಮನೆಗಳಲ್ಲಿ ಭಾವುಟ ಹಾರಿಸಿ ಸಂಭ್ರಮಿಸಿದರು. ಧ್ವಜಾರೋಹಣದ ಬಳಿಕ ವಿದ್ಯಾರ್ಥಿಗಳಿಂದ ದೇಶಭಕ್ತಿ ಉಕ್ಕಿಸುವ ನೃತ್ಯ, ದೇಶದ ಸಮಗ್ರತೆ ಸಾರುವ ರೂಪಕಗಳು, ಭಾಷಣ, ದೇಶಭಕ್ತಿ ಗೀತೆ ಸೇರಿ ಹಲವು ಸಾಂಸ್ಕೃತಿಕ ಕಾರ್ಯಕ್ರಮ, ಶಿಸ್ತಿನ ಕವಾಯತುಗಳು ನಡೆದವು.
ಎಲ್ಲೆಡೆ ರಾಷ್ಟ್ರಭಕ್ತಿ ವಿಜೃಂಭಿಸಿತು. ಅನೇಕ ಕಡೆಗಳಲ್ಲಿ ಮೆರವಣಿಗೆ, ಬೈಕ್ ರ್ಯಾಲಿಗಳು ನಡೆದವು. ರಾಜ್ಯ ರಾಜಧಾನಿ ಬೆಂಗಳೂರಿನ ಫೀ.ಮಾ.ಮಾಣಿಕ್ ಶಾ ಪರೇಡ್ ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಷ್ಟ್ರಧ್ವಜಾರೋಹಣ ಮಾಡಿದರು. ಇನ್ನು ಜಿಲ್ಲಾಕೇಂದ್ರಗಳಲ್ಲಿ ನಡೆದ ಸಮಾರಂಭಗಳಲ್ಲಿ ಆಯಾ ಜಿಲ್ಲೆಗಳ ಉಸ್ತುವಾರಿ ಸಚಿವರು ನೆರವೇರಿಸಿದರು.
ದೇಶದ ಅತಿದೊಡ್ಡ ಧ್ವಜಸ್ತಂಭದ ಮೇಲೆ ಧ್ವಜಾರೋಹಣ: ಹೊಸ ದಾಖಲೆ ಬರೆದ ವಿಜಯನಗರ
ಬೆಳಗಾವಿಯಲ್ಲಿ ಸಚಿವ ಗೋವಿಂದ ಕಾರಜೋಳ, ಬಾಗಲಕೋಟೆಯಲ್ಲಿ ಸಚಿವ ಸಿ.ಸಿ.ಪಾಟೀಲ, ವಿಜಯಪುರ ಉಮೇಶ ಕತ್ತಿ, ಮಡಿಕೇರಿ ನಾಗೇಶ್, ಉಡುಪಿ ಅಂಗಾರ, ಮಂಗಳೂರು ಸುನಿಲ್ ಕುಮಾರ್, ಧಾರವಾಡ ಹಾಲಪ್ಪ ಆಚಾರ್, ಹಾವೇರಿ ಶಿವರಾಮ್ ಹೆಬ್ಬಾರ್, ಬಳ್ಳಾರಿ ಶ್ರೀರಾಮುಲು, ವಿಜಯನಗರ ಆನಂದ್ ಸಿಂಗ್, ಕೊಪ್ಪಳ ಶಶಿಕಲಾ ಜೊಲ್ಲೆ, ಕಾರವಾರ ಕೋಟ ಶ್ರೀನಿವಾಸ ಪೂಜಾರಿ, ತುಮಕೂರು ಆರಗ, ಮಂಡ್ಯ ಆರ್.ಅಶೋಕ್, ಶಿವಮೊಗ್ಗ ನಾರಾಯಣಗೌಡ, ರಾಮನಗರ ಡಾ.ಅಶ್ವತ್ಥ್ ನಾರಾಯಣ್, ಚಿಕ್ಕಬಳ್ಳಾಪುರ ಎಂ.ಟಿ.ಬಿ.ನಾಗರಾಜ್, ಕೋಲಾರ ಮುನಿರತ್ನ, ಮೈಸೂರು ಎಸ್.ಎಸ್.ಸೋಮಶೇಖರ್, ಚಾಮರಾಜನಗರ ವಿ.ಸೋಮಣ್ಣ, ದಾವಣಗೆರೆ ಭೈರತಿ ಬಸವರಾಜ್, ಯಾದಗಿರಿ ಪ್ರಭು ಚವ್ಹಾಣ್, ಚಿತ್ರದುರ್ಗ ಬಿ.ಸಿ.ಪಾಟೀಲ್ ಧ್ವಜಾರೋಹಣ ಮಾಡಿದರೆ, ಗದಗದಲ್ಲಿ ಜಿಲ್ಲಾಧಿಕಾರಿ ವೈಶಾಲಿ, ಬೀದರ್ನಲ್ಲಿ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಧ್ವಜಾರೋಹಣ ನೆರವೇರಿಸಿದರು.
Chitradurga: ಸರ್ವರ ಪ್ರಯತ್ನ, ಸರ್ವರ ಅಭಿವೃದ್ಧಿಯ ಸಂದೇಶ ಸಾರಿದ ಕೃಷಿ ಸಚಿವ ಬಿ.ಸಿ.ಪಾಟೀಲ್
ತಾಲೂಕು ಕೇಂದ್ರಗಳಲ್ಲಿ ಆಯಾ ಕ್ಷೇತ್ರದ ಶಾಸಕರು ಮತ್ತು ತಹಸೀಲ್ದಾರ್ ನೇತೃತ್ವದಲ್ಲಿ ಧ್ವಜಾರೋಹಣ ಮತ್ತು ವೈವಿಧ್ಯಮಯ ಕಾರ್ಯಕ್ರಮಗಳು ಜರುಗಿದವು. ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ನಡೆದ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಸುಪ್ರೀಂ ಕೋರ್ಚ್ ನ್ಯಾಯಾಧೀಶ ಅಬ್ದುಲ್ ನಝೀರ್ ಧ್ವಜಾರೋಹಣ ನೆರವೇರಿಸಿದರು. ರಾಜ್ಯ ಸಭಾ ಸದಸ್ಯರಾಗಿರುವ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಉಜಿರೆ ಶ್ರೀರತ್ನವರ್ಮ ಕ್ರೀಡಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಧ್ವಜಾರೋಹಣ ಮಾಡಿದರು.