ಡಿಪ್ರೆಶನ್-ಆತ್ಮಹತ್ಯೆ ಬಗ್ಗೆ ದೀಪಿಕಾ ಪಡುಕೋಣೆ ಏನಂತಾರೆ ಗೊತ್ತಾ?

By Suvarna NewsFirst Published Jun 21, 2020, 3:55 PM IST
Highlights

ಹಿಂದೊಮ್ಮೆ ಬಾಲಿವುಡ್‌ ತಾರೆ ದೀಪಿಕಾ ಪಡುಕೋಣೆ ತಾಳಲಾರದ ಡಿಪ್ರೆಶನ್‌ ಅನುಭವಿಸಿದ್ದು ನಿಮಗೆ ನೆನಪಿದೆಯಾ? ಈಗ ಸುಶಾಂತ್‌ ಸಾವಿನ ಹಿನ್ನೆಲೆಯಲ್ಲಿ ಅವರೇನ್‌ ಹೇಳ್ತಾರೆ ಕೇಳಿ.

ಡಿಪ್ರೆಶನ್‌ ಕೂಡ ಇತರ ಕಾಯಿಲೆಗಳ ಹಾಗೆಯೇ. ಕ್ಯಾನ್ಸರ್‌ ಅಥವಾ ಡಯಾಬಿಟಿಸ್‌ ಇರುವ ಹಾಗೆ. ಕಡೆಗಣಿಸಬೇಡಿ, ವ್ಯಂಗ್ಯ ಮಾಡಬೇಡಿ. ಎಚ್ಚರಿಕೆಯಿಂದ ನಿರ್ವಹಿಸಿ.ಹಾಗೊಂದು ಎಚ್ಚರಿಕೆ ನೀಡುತ್ತಾರೆ ನಟಿ ದೀಪಿಕಾ ಪಡುಕೋಣೆ. ಅವರೂ ಡಿಪ್ರೆಶನ್‌ ಅಥವಾ ಖಿನ್ನತೆಯಿಂದ ಬಳಲಿದವರೇ. ಅದು ಅಟ್ಯಾಕ್‌ ಮಾಡಿದರೆ ಏನಾಗುತ್ತದೆ ಎಂಬುದನ್ನು ಕಂಡವರೇ ಅವರು. ಹಾಗಾಗಿ ಅವರು ಹೇಳುವ ಮಾತಿಗೆ ಒಂದು ಅಥೆಂಟಿಸಿಟಿ ಇದೆ. ಇತ್ತೀಚೆಗೆ ಬಾಲಿವುಡ್‌ ಉದಯೋನ್ಮುಖ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಖಿನ್ನತೆಗೆ ಬಲಿಯಾದರು, ಒಬ್ಬರೇ ಇದ್ದು ಆತ್ಮಹತ್ಯೆ ಮಾಡಿಕೊಂಡರು. ಈ ಹಿನ್ನೆಲೆಯಲ್ಲಿ ದೀಪಿಕಾ ಒಂದಷ್ಟು ಮಾತುಗಳನ್ನು ಖಿನ್ನತೆಯ ಬಗ್ಗೆ ತಮ್ಮ ಸೋಶಿಯಲ್‌ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. 

ಜಗತ್ತಿನಲ್ಲಿ ಪ್ರತಿ ನಲುವತ್ತು ನಿಮಿಷಕ್ಕೆ ಒಬ್ಬ ವ್ಯಕ್ತಿ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ/ಳೆ. ಹಾಗಿದ್ದರೆ ಜಗತ್ತಿನಾದ್ಯಂತ ಹೇಳಲಾಗದ ವಿಷಾದ, ಖಿನ್ನತೆ, ಯಾತನೆಗಳಿಂದ ನರಳುತ್ತಿರುವವರ ಸಂಖ್ಯೆ ಎಷ್ಟಿರಬಹುದು ನೀವೇ ಊಹಿಸಿಕೊಳ್ಳಿ. ಐದು ಮಂದಿ ಭಾರತೀಯರಲ್ಲಿ ಒಬ್ಬರು ಈ ಖಿನ್ನತೆ ಎಂಬ ಖೂಳ ರೋಗದಿಂದ ಜೀವಮಾನದಲ್ಲಿ ಒಮ್ಮೆಯಾದರೂ ನರಳುತ್ತಾರೆ. ಆತ್ಮಹತ್ಯೆ ಮಾಡಿಕೊಂಡವರು ಅವರ ಸ್ವಂತ ಬುದ್ಧಿಯಿಂದ ಮಾಡಿಕೊಳ್ಳುವುದಿಲ್ಲ. ಬದಲಾಗಿ ಖಿನ್ನತೆ ಅವರನ್ನು ಹಾಗೆ ಮಾಡಿಸುತ್ತದೆ. 

ಖಿನ್ನತೆ ಇಂದು ಒಂದು ಸಾಂಕ್ರಾಮಿಕ ಕಾಯಿಲೆಯಾಗಿ ಬೆಳೆಯುತ್ತಿದೆ. ಅದು ಯಾವ ಪ್ರಮಾಣದಲ್ಲಿ ಬೆಳೆಯುತ್ತಿದೆ ಎಂದು ಊಹಿಸಲೂ ಆಗದು. ಆದರೆ ಇದಕ್ಕೆ ಚಿಕಿತ್ಸೆಯಿದೆ. ಆದರೆ ನಮ್ಮ ಸಮಾಜದಲ್ಲಿ ಏನಾಗಿದೆ ಎಂದರೆ, ಅದೊಂದು ಚಿಕಿತ್ಸೆ ಮಾಡಬಹುದಾದ ಕಾಯಿಲೆ ಎಂಬ ಅರಿವೇ ಇಲ್ಲ. ಎಲ್ಲವನ್ನೂ ಹುಚ್ಚು, ಮರುಳು ಅಥವಾ ಮಾನಸಿಕ ರೋಗಗಳ ಪಟ್ಟಿಗೆ ಸೇರಿಸಿ ಸುಮ್ಮನಾಗುತ್ತಾರೆ. ಮಾನಸಿಕ ರೋಗಿಗಳ ಬಗ್ಗೆ ನಮ್ಮಲ್ಲಿ ಒಂದು ಸೋಶಿಯಲ್‌ ಸ್ಟಿಗ್ಮಾ ಅಥವಾ ಅಸ್ಪೃಶ್ಯತೆಯನ್ನೂ ಆಚರಿಸಲಾಗ್ತಾ ಇದೆ. ಹೀಗಾಗಿ ಇದರಿಂದ ನರಳುವವರು ಈ ಕಾಯಿಲೆಯನ್ನು ತಮ್ಮೊಳಗೇ ಬಚ್ಚಿಟ್ಟುಕೊಂಡು, ಮುಕ್ತವಾಗಿ ನೆರವು ಕೇಳುವ ಬದಲು ಹಿಂಜರಿಯುತ್ತಾರೆ.

ಕೆಲವೊಮ್ಮೆ ಜಗತ್ತಿನ ಜನರ ದೃಷ್ಟಿಯಲ್ಲಿ ಆಸ್ತಿ ಅಂತಸ್ತು ಅಧಿಕಾರ ಹಣ ಎಲ್ಲವನ್ನೂ ಹೊಂದಿದ್ದವರು ಕೂಡ ಡಿಪ್ರೆಶನ್‌ಗೆ ತುತ್ತಾಗುತ್ತಾರೆ. ಯಾಕೆ ಅವರಿಗೆ ಹಾಗಾಗುತ್ತದೆ? ಈ ಪ್ರಶ್ನೆಯನ್ನು ಯಾರೂ ಕೇಳಿಕೊಳ್ಳುವುದೇ ಇಲ್ಲ. ಎಲ್ಲ ಇದ್ದರೂ ಯಾಕೆ ಹಾಗಾಗುತ್ತದೆ. ಅಂದರೆ, ಈ ಕಾಯಿಲೆ ಅಂಥ ಯಾವ ಭೇದವನ್ನೂ ಮಾಡುವುದೇ ಇಲ್ಲ. ಇತರ ಎಲ್ಲ ಕಾಯಿಲೆಗಳ ಹಾಗೆಯೇ ಅದೂ ಕೂಡ. ಈ ಕಾಯಿಲೆಯ ಮೇಲೆ ನಮಗೆ ಹಿಡಿತವಿದೆ ಅಂದುಕೊಂಡಿರುತ್ತೇವೆ. ಆದರೆ ನಿಜಕ್ಕೂ ನಿಯಂತ್ರಣ ಇರುವುದಿಲ್ಲ. 

ಮಂಜು ಕವಿದ ಮೆದುಳಿಗೇನು ಮೆಡಿಸಿನ್? ...

ಈ ಕಾಯಿಲೆ ನಿಧಾನವಾಗ ನಿಮ್ಮ ಬದುಕಿನೊಳಗೆ ನುಸುಳುತ್ತದೆ. ನಿಮ್ಮ ಬದುಕಿನ ಡ್ರೈವಿಂಗ್ ಸೀಟಿನಲ್ಲಿ ಕುಳಿತುಕೊಳ್ಳುತ್ತದೆ, ನೀವು ಎಲ್ಲಿ ಹೋಗಬೇಕು, ಏನು ತಿನ್ನಬೇಕು ಎಂಬುದನ್ನೆಲ್ಲ ಅದುವೇ ನಿರ್ಧರಿಸುತ್ತದೆ. ಖಿನ್ನತೆಯನ್ನು ಹೊಂದಿರುವವರಿಗೆ ಅದರಿಂಧ ಹೊರಬರುವಂತೆ ಉಪದೇಶ ನೀಡುವುದೆಂದರೆ, ಕಾಲು ಮುರಿದವರಿಗೆ ನಡೆಯಿರಿ ಎಂದು ಉಪದೇಶ ನೀಡಿದ ಹಾಗೇನೇ. 

10 ನಿಮಿಷ ಸೂರ್ಯ ನಮಸ್ಕಾರದಿಂದ ಕೊರೋನಾ ಕಾಲದ ಟೆನ್ಷನ್‌ ಕಡಿಮೆ! 

ಈ ಕಾಯಿಲೆಯ ವಿರುದ್ಧ ಹೋರಾಡುವುದು ಎಂದರೆ ಎಲ್ಲರೂ ಜೊತೆಯಾಗಿ ಹೋರಾಡುವುದು. ರೋಗಿಯೊಡನೆ ಇತರರೂ ಅದರಲ್ಲಿ ಪಾಲ್ಗೊಳ್ಳಬೇಕು. ಇನ್ನೊಮ್ಮೆ ನಿಮ್ಮ ಮಿತ್ರರ ಅಥವಾ ಬಂಧುಗಳ ಫ್ಯಾಮಿಲಿಯಲ್ಲಿ ಎಲ್ಲವೂ ಸರಿಯಿಲ್ಲ ಅನಿಸಿದರೆ, ಏನಾಗಿದೆ ಎಂದು ಕೇಳಿ. ನಿಮ್ಮ ಮುಕ್ತ ನೆರವಿನ ಹಸ್ತವನ್ನು ಚಾಚಿ. ಕೆಲವೊಮ್ಮೆ ಅದು ಅವರಿಗೆ ಕಿರಿಕಿರಿಯನ್ನೂ ಉಂಟು ಮಾಡಬಹುದು. ಆದರೂ ಹಿಂಜರಿಯಬೇಡಿ. ಅವರು ನಿಮ್ಮ ಸಹಾಯವನ್ನು ಕೇಳಿ ಪಡೆಯುವ ಕಾಲವೂ ಬರಬಹುದು. ಯಾಕೆಂದರೆ ಅವರು ಸಹಾಯಕ್ಕಾಗಿ ಕಾತರಿಸುತ್ತಾ ಇರುತ್ತಾರೆ. ಅಂಥ ಹೊತ್ತಿನಲ್ಲಿ ನೀವು ಅವರ ಬಳಿ ಇಲ್ಲ ಅಂತ ಆಗಬಾರದು. ಒಂದು ಕರುಣೆಯ, ಪ್ರೀತಿಯ ಸಹಾಯ ಒಬ್ಬರ ಜೀವನ್ನೇ ಉಳಿಸಬಹುದು, ಯಾರಿಗೆ ಗೊತ್ತು?

ಕೊರೋನಾ ರೋಗಿಗಳಿಗೆ ಮನೆಯಲ್ಲೇ ಚಿಕಿತ್ಸೆ ಕೊಡಿಸೋದು ಹೇಗೆ ? ...
 

click me!