ಸತ್ತಿರುವುದಾಗಿ ಘೋಷಿಸಿದ ವೈದ್ಯರು: 35 ನಿಮಿಷ ನಿರಂತರ ಸಿಪಿಆರ್ ಮಾಡಿ ಪತ್ನಿಯ ಬದುಕಿಸಿದ ಪತಿ..

Published : Mar 09, 2026, 02:11 PM IST

ಕೋಮಲ್ ಜಮಾವಲ್ ಎಂಬ ಮಹಿಳೆ ಗ್ವಿಲೆನ್-ಬಾರ್ ಸಿಂಡ್ರೋಮ್‌ನಿಂದಾಗಿ ವೈದ್ಯರಿಂದ ಮೃತಪಟ್ಟಿದ್ದಾರೆಂದು ಘೋಷಿಸಲ್ಪಟ್ಟರು. ಆದರೆ, ಅವರ ಪತಿ 35 ನಿಮಿಷಗಳ ಕಾಲ ಸಿಪಿಆರ್ ಮಾಡಿ ಅವರನ್ನು ಬದುಕಿಸಿದ್ದು, ಕುಟುಂಬದ ಬೆಂಬಲದಿಂದ ಚೇತರಿಸಿಕೊಂಡ ತಮ್ಮ ಸ್ಪೂರ್ತಿದಾಯಕ ಕತೆಯನ್ನು ಅವರು ಹಂಚಿಕೊಂಡಿದ್ದಾರೆ.

PREV
16
ಕಷ್ಟದಲ್ಲಿದ್ದವರಿಗೆ ಸ್ಪೂರ್ತಿ ತುಂಬುವ ಕಹಾನಿ

ಜೀವನದಲ್ಲಿ ಒಬ್ಬೊಬ್ಬರದ್ದು ಒಂದೊಂದು ಕತೆ ಕೆಲವರು ಸೋತು ಸೋತು ಗೆದ್ದವರು. ಇನ್ನು ಕೆಲವರು ಗೆದ್ದು ಸೋತವರು, ಮತ್ತೆ ಕೆಲವರು ಸತ್ತು ಬದುಕಿದವರು. ಏನೇ ಆದರೂ ಬದುಕಿನಲ್ಲಿ ಸೋಲಬಾರದು ಎಂದು ದೃಢಸಂಕಲ್ಪ ಮಾಡಿ ಗೆದ್ದವರದ್ದು ಇನ್ನೊಂದು ಕತೆ ಇಂತಹ ಸ್ಫೂರ್ತಿ ತುಂಬಿದ ಕತೆಗಳನ್ನು officialhumansofbombay ಇನ್ಸ್ಟಾಗ್ರಾಮ್ ಪೇಜ್ ಆಗಾಗ ತನ್ನ ಸೋಶಿಯಲ್‌ ಮೀಡಿಯಾ ಇನ್ಸ್ಟಾಗ್ರಾಮ್‌ನಲ್ಲಿ ಆಗಾಗ ಹಂಚಿಕೊಳ್ಳುತ್ತಿರುತ್ತದೆ. ಇಲ್ಲಿ ಹಲವರು ಬದುಕಿಗಾಗಿ ಹೋರಾಡಿದ ಕತೆಗಳಿವೆ. ತಮ್ಮವರೇ ತಮಗೆ ಮೋಸ ವಂಚನೆ ಮಾಡಿದಾಗ ಉಂಟಾದ ಮಾನಸಿಕ ಆಘಾತವನ್ನು ಮೆಟ್ಟಿ ನಿಂತು ಎಲ್ಲವನ್ನೂ ಮೀರಿ ಗೆದ್ದು ಬಂದವರ ಸಾಹಸಕತೆ ಇದೆ. ಹಾಗೆಯೇ ಎಲ್ಲಾ ಕಳೆದುಕೊಂಡಾಗಲೂ ತಮ್ಮನ್ನು ಸೋಲುವುದಕ್ಕೆ ಬಿಡದೇ ತಮಗೆ ಧೈರ್ಯವಾಗಿ ನಿಂತು ಬೆನ್ನುಲುಬಾದ ಕುಟುಂಬಗಳ ಕತೆಯೂ ಇಲ್ಲಿದೆ.

26
ಸಾವು ಗೆದ್ದು ಬಂದ ಕತೆ ಹಂಚಿಕೊಂಡ ಮಹಿಳೆ

ಅದೇ ರೀತಿ ಇಲ್ಲೊಬ್ಬರು ತಮ್ಮ ಬದುಕಿನಲ್ಲಾದ ಏಳು ಬೀಳಿನ ಕತೆಯನ್ನು ಹಂಚಿಕೊಂಡಿದ್ದು, ಅವರ ಕತೆ ಈಗ ವೈರಲ್ ಆಗಿದೆ. ಕೋಮಲ್ ಜಮಾವಲ್ ಎಂಬುವವರು humansofbombay ಜೊತೆ ತಮ್ಮ ಕತೆಯನ್ನು ಹಂಚಿಕೊಂಡಿದ್ದಾರೆ. ಅವರ ಮಾತಿನಲ್ಲೇ ಅವರ ಕತೆ ಕೇಳುವುದಾದರೆ...

33 ನೇ ವಯಸ್ಸಿನಲ್ಲಿ, ನಾನು ಸತ್ತಿದ್ದೇನೆ ಎಂದು ವೈದ್ಯರು ಘೋಷಿಸಿದರು, ಆದರೆ ನನ್ನ ಪತಿ ಅದನ್ನು ಒಪ್ಪಿಕೊಂಡು ನನ್ನ ಬಿಟ್ಟುಕೊಡಲು ನಿರಾಕರಿಸಿದರು. ಮುಂದೆ ಅವರು ಮಾಡಿದ್ದು ಎಲ್ಲರನ್ನೂ ಆಘಾತಗೊಳಿಸಿದ್ದು, ಮಾತ್ರವಲ್ಲ ಅದು ನನಗೆ ಬದುಕಲು ಎರಡನೇ ಅವಕಾಶವನ್ನು ನೀಡಿತು.

36
ದೀಢಿರ್ ಕಾಣಿಸಿಕೊಂಡ ಆರೋಗ್ಯ ಸಮಸ್ಯೆ

ಅದು ಮಾರ್ಚ್ 2012 ನಾನು ಕುಟುಂಬದ ಕಾರ್ಯಕ್ರಮವೊಂದರಿಂದ ಹಿಂತಿರುಗಿದ್ದೆ, ಮತ್ತು ಆಗಷ್ಟೇ ನನ್ನ ಕಾಲುಗಳು ನೋಯುತ್ತಿರಲು ಶುರುವಾಯ್ತು. ನಾನು ಅದನ್ನುಸುಸ್ತಾಗಿರುವ ಕಾರಣಕ್ಕೆ ಎಂದು ಭಾವಿಸಿ ಅದನ್ನು ನಿರ್ಲಕ್ಷಿಸಿದೆ. ಆದರೆ ಮರುದಿನ ಬೆಳಗ್ಗೆ, ನನ್ನ ಎಡಗಾಲು ತುಂಬಾ ಭಾರವಾಗಿತ್ತು, ಬಹುತೇಕ ಭಾರದಿಂದ ಬೀಳುತ್ತೇನೋ ಎಂದು ನನಗೆ ಅನಿಸುತ್ತಿತ್ತು. ನಾನು ಕೆಲವು ನೋವು ನಿವಾರಕ ಮಾತ್ರೆಗಳನ್ನು ತೆಗೆದುಕೊಂಡು ಸುಮ್ಮನಾದೆ. ಆದರೆ ಎರಡು ದಿನಗಳ ನಂತರ, ನಾನು ಬೆಳಗ್ಗೆ 6:00 ಗಂಟೆಗೆ ಎಚ್ಚರವಾದಾಗ ನನ್ನ ಪಾದಗಳು ನೆಲವನ್ನು ಮುಟ್ಟುತ್ತಿದ್ದಂತೆ, ನಾನು ಕುಸಿದು ಬಿದ್ದೆ. ನನ್ನ ಕಾಲುಗಳಲ್ಲಿ ಯಾವುದೇ ತೂಕವಿರಲಿಲ್ಲ. ನಾನು ಭಯಭೀತಳಾಗಿ ಅಳುತ್ತಿದ್ದೆ. ನನ್ನ ಪತಿ ಧಾವಿಸಿ ಬಂದು, ನಮ್ಮ ಕುಟುಂಬವನ್ನು ಒಟ್ಟುಗೂಡಿಸಿ, ಜಮ್ಮುವಿನ ಆಸ್ಪತ್ರೆಗೆ ನನ್ನನ್ನು ಕರೆದೊಯ್ದರು.

46
ಸತ್ತಿದ್ದಾಳೆ ಎಂದು ಘೋಷಿಸಿದ ಆಸ್ಪತ್ರೆ

ಐದು ದಿನಗಳ ನಂತರ ಮತ್ತು ಹಲವು ಪರೀಕ್ಷೆಗಳ ನಂತರ, ವೈದ್ಯರು ಅದು ಜಿಬಿಎಸ್ ಎಂದು ದೃಢಪಡಿಸಿದರು. ಚಿಕಿತ್ಸೆಯ ಸಮಯದಲ್ಲಿ ನಿಜವಾದ ದುಃಸ್ವಪ್ನ ಪ್ರಾರಂಭವಾಯಿತು. ಮುಂದಿನ ಐದು ದಿನಗಳಲ್ಲಿ ನನಗೆ ಐದು ಚುಚ್ಚುಮದ್ದುಗಳನ್ನು ನೀಡಬೇಕಾಗಿತ್ತು, ಆದರೆ ಆಸ್ಪತ್ರೆಯ ಸಿಬ್ಬಂದಿ 24 ಗಂಟೆಗಳ ಒಳಗೆ ನನ್ನ ರಕ್ತನಾಳಗಳಿಗೆ ನಿರಂತರ ಇಂಜೆಕ್ಷನ್ ನೀಡಿದರು. ನನ್ನ ದೇಹವು ತೀವ್ರತೆಯನ್ನು ನಿಭಾಯಿಸಲು ಸಾಧ್ಯವಾಗಲಿಲ್ಲ. ನಾನು ಸತತ ಹೃದಯಾಘಾತವನ್ನು ಅನುಭವಿಸಿದೆ ಮತ್ತು ವೈದ್ಯರು ನಾನು ಮೃತಪಟ್ಟಿದ್ದೇನೆ ಎಂದು ಘೋಷಿಸಿದರು. ವೈದ್ಯರು ಕತೆ ಮುಗಿಯಿತು ಎಂದು ನನ್ನ ಕುಟುಂಬಕ್ಕೆ ಹೇಳಿ ನನ್ನನ್ನು ಮನೆಗೆ ಕರೆದುಕೊಂಡು ಹೋಗುವುದಂತೆ ಹೇಳಿದರು. ಆದರೆ ನನ್ನ ಪತಿ ಇದನ್ನು ಒಪ್ಪಲು ನಿರಾಕರಿಸಿದರು.

ಇದನ್ನೂ ಓದಿ: ನನ್ನ ಬ್ರೇಕಪ್‌ಗೆ ಇವರೇ ಕಾರಣ : ಅವಳಿ ಸೋದರಿಗೆ 40 ಬಾರಿ ಇರಿದು ಕೊಂದ ಟೆಕ್ಕಿ, ತಾಯಿ ಮೇಲೂ ಹಲ್ಲೆ

56
35 ನಿಮಿಷ ಸಿಪಿಆರ್ ಮಾಡಿ ಪತ್ನಿಗೆ ಮರುಜೀವ ನೀಡಿದ ಪತಿ

35 ನಿಮಿಷಗಳ ಕಾಲ, ಅವರು ವೈದ್ಯಕೀಯ ತರ್ಕವನ್ನು ಧಿಕ್ಕರಿಸುವಂತೆ ಹತಾಶೆಯಿಂದಲೇ ನನಗೆ CPR ಮಾಡಿದರು, ಅಂತಿಮವಾಗಿ ನನ್ನ ಹೃದಯ ಮತ್ತೆ ಜೀವಂತವಾಯಿತು. ಆಸ್ಪತ್ರೆಯವರು ಆಘಾತದಲ್ಲಿದ್ದರು. ನನ್ನನ್ನು ತಕ್ಷಣ ಲುಧಿಯಾನಕ್ಕೆ ಸ್ಥಳಾಂತರಿಸಲಾಯಿತು ಮತ್ತು ಹತ್ತು ದಿನಗಳವರೆಗೆ ವೆಂಟಿಲೇಟರ್‌ನಲ್ಲಿ ಇರಿಸಲಾಯಿತು. ನಾನು ಡಿಸ್ಚಾರ್ಜ್ ಆದ ನಂತರ ನಿಜವಾದ ಸವಾಲು ಪ್ರಾರಂಭವಾಯಿತು. ನಾನು ಕಟ್ಟುನಿಟ್ಟಿನ ಬೆಡ್ ರೆಸ್ಟ್‌ನಲ್ಲಿದ್ದೆ. ನನ್ನ ಕಾಲುಗಳು ಸಂಪೂರ್ಣವಾಗಿ ಮರಗಟ್ಟಿದ್ದವು. ನನ್ನ ಮಕ್ಕಳು ಕೇವಲ 7 ಮತ್ತು 10 ವರ್ಷ ವಯಸ್ಸಿನವರಾಗಿದ್ದರು, ಮತ್ತು ನಾನು ನಿರಂತರವಾಗಿ ಅವರ ಊಟ ತಿಂಡಿ ಓದು ಬರಹ ಇವೆಲ್ಲಾ ಹೇಗೆ ಮಾಡಿಕೊಳ್ಳುತ್ತಾರೆ ಎಂದು ಚಿಂತಿಸುತ್ತಿದೆ. ಆದರೆ ನನ್ನ ಕುಟುಂಬವು ಗೋಡೆಯಂತೆ ನನ್ನ ಹಿಂದೆ ನಿಂತಿತು. ನನ್ನ ಮಕ್ಕಳು ಹಲ್ಲುಜ್ಜಲು ನನಗೆ ಸಹಾಯ ಮಾಡಿದರು. ನನ್ನ ಗಂಡ ನನ್ನನ್ನು ನೋಡಿಕೊಳ್ಳಲು ಮೂರು ತಿಂಗಳು ರಜೆ ತೆಗೆದುಕೊಂಡರು, ನನ್ನನ್ನು ಸ್ನಾನ ಮಾಡಿಸುವುದರಿಂದ ಹಿಡಿದು ನನ್ನ ಫಿಸಿಯೋಥೆರಪಿ ವ್ಯವಸ್ಥೆ ಮಾಡುವವರೆಗೆ, ಅವರು ಎಲ್ಲವನ್ನೂ ಮಾಡಿದರು. ನನ್ನ ಕಾಲು ಶಕ್ತಿಹೀನವಾಗಿದ್ದಾಗ ನನ್ನ ಇಡೀ ಕುಟುಂಬವು ನನ್ನ ಕಾಲುಗಳಾದವು.

ಇದನ್ನೂ ಓದಿ: ತನ್ನ ಅಜ್ಜಿಯ ವಯಸ್ಸಿನ ಅಭಿಮಾನಿಯನ್ನು ಭೇಟಿ ಮಾಡಿದ ರಕ್ಷಿತಾ

66
ಕಷ್ಟಕಾಲದಲ್ಲಿ ತನ್ನ ಬೆನ್ನೆಲುಬಾಗಿ ನಿಂತ ಕುಟುಂಬ

ಅಂದಿನಿಂದ ಇಂದಿಗೆ 14 ವರ್ಷಗಳು ಕಳೆದಿವೆ. ನನಗೆ ಈಗ 47 ವರ್ಷ. ಹಲವು ವರ್ಷಗಳ ಚಿಕಿತ್ಸೆಯ ನಂತರ, ನಾನು ಕೋಲು ಇಲ್ಲದೆ ನಡೆಯಬಹುದು ಎಂಬುದು ಖಚಿತವಾಯ್ತು. ಜೊತೆಗೆ ನನ್ನ ಕುಟುಂಬವನ್ನು ನಾನು ನೋಡಿಕೊಳ್ಳಬಹುದು. ನನ್ನ ಕಾಲು ಇನ್ನೂ ದುರ್ಬಲವಾಗಿದೆ ನಾನು ಹೋರಾಡಿದ ಯುದ್ಧದ ಬಗ್ಗೆ ಅವು ನನಗೆ ನೆನಪಿಸುತ್ತಿವೆ. ಮೊದಲಿನಂತೆ ನಡೆಯುವುದಕ್ಕೆ ಆಗುತ್ತಿಲ್ಲ ಎಂದು ದುಃಖವಿದೆಯೇ ಎಂದು ಜನರು ನನ್ನ ಕೇಳಿದಾಗ ನಾನು ನಗುತ್ತೇನೆ. ಒಮ್ಮೆ ನಾನು ಸತ್ತಿದ್ದೇನೆ ಎಂದು ಘೋಷಿಸಲಾಯಿತು. ಆದರೆ ಇಂದು, ನನ್ನ ಮಕ್ಕಳು ಬೆಳೆಯುವುದನ್ನು ನಾನು ನೋಡುತ್ತಿದ್ದೇನೆ. ನನಗೆ ಪರಿಪೂರ್ಣತೆಯ ಅಗತ್ಯವಿಲ್ಲ; ನನ್ನನ್ನು ಎಂದಿಗೂ ಬಿಟ್ಟುಕೊಡದ ಜೀವನ ಮತ್ತು ಕುಟುಂಬ ನನಗಿದೆ ಎಂದು ಅವರು ಹೇಳಿಕೊಂಡಿದ್ದು, ಕಷ್ಟಕಾಲದಲ್ಲಿ ತನ್ನ ಬೆನ್ನೆಲುಬಾಗಿ ನಿಂತ ತನ್ನ ಕುಟುಂಬವನ್ನು ಶ್ಲಾಘಿಸಿದ್ದಾರೆ.

ಇವರ ಕತೆ ಇಂಟರ್‌ನೆಟ್‌ನಲ್ಲಿ ಸಖತ್ ವೈರಲ್ ಆಗಿದ್ದು,  ಕೇವಲ ಸಾವಿತ್ರಿ ಮಾತ್ರವಲ್ಲ, ಸತ್ಯವಾನ್ ಕೂಡ ಇರ್ತಾರೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಜೊತೆಗೆ ಅವರ ಬೆನ್ನಿಗೆ ನಿಂತ ಕುಟುಂಬ ಹಾಗೂ ಪತಿಯನ್ನು ಶ್ಲಾಘಿಸಿದ್ದಾರೆ.

ಅಂದಹಾಗೆ ಇವರಿಗೆ ಬಂದ GBS ಎಂದರೆ ಗ್ವಿಲೆನ್-ಬಾರ್ ಸಿಂಡ್ರೋಮ್, ಇದು ಅಪರೂಪದ, ಗಂಭೀರವಾದ ಕಾಯಿಲೆಯಾಗಿದ್ದು, ಇದರಲ್ಲಿ ರೋಗನಿರೋಧಕ ವ್ಯವಸ್ಥೆಯು ಬಾಹ್ಯ ನರಗಳ ಮೇಲೆ ದಾಳಿ ಮಾಡುತ್ತದೆ, ಇದು ಹೆಚ್ಚಾಗಿ ವೈರಲ್ ಅಥವಾ ಬ್ಯಾಕ್ಟೀರಿಯಾದ ಸೋಂಕಿನ ನಂತರ ಸಂಭವಿಸುತ್ತದೆ. ಇದು ತ್ವರಿತ ಸ್ನಾಯು ದೌರ್ಬಲ್ಯ, ಜುಮ್ಮೆನಿಸುವಿಕೆ ಮತ್ತು ಸಂಭಾವ್ಯ ಪಾರ್ಶ್ವವಾಯುವಿಗೆ ಕಾರಣವಾಗುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories