ಸಿನಿಮಾಗಳಲ್ಲಿ ನೋಡುವಂಥಾ ದೃಶ್ಯವೊಂದು ಆಂಧ್ರಪ್ರದೇಶದಲ್ಲಿ ನಿಜವಾಗಿಯೂ ನಡೆದಿದೆ. ಹಿರಿಯರು ನಿಶ್ಚಯಿಸಿದ ಮದುವೆಗೆ ಒಪ್ಪಿಕೊಂಡಿದ್ದ ವಧು, ತಾಳಿ ಕಟ್ಟುವ ಕೊನೇ ಕ್ಷಣದಲ್ಲಿ ಪ್ರಿಯಕರನ ಜೊತೆ ಹೋಗಲು ನಿರ್ಧರಿಸಿದಳು. ಮದುವೆ ಮಂಟಪದಲ್ಲಿ ನಡೆದ ಈ ಘಟನೆ ಎಲ್ಲರನ್ನೂ ಬೆಚ್ಚಿಬೀಳಿಸಿದೆ.
ಮದುವೆ ಮಂಟಪದಲ್ಲಿ ಮಂಗಳವಾದ್ಯ ಮೊಳಗುತ್ತಿತ್ತು. ಪುರೋಹಿತರು ಮಂತ್ರ ಪಠಿಸುತ್ತಿದ್ದರೆ, ನೆಂಟರಿಷ್ಟರು ಖುಷಿಯಿಂದ ಮದುವೆ ನೋಡುತ್ತಿದ್ದರು. ಮುಹೂರ್ತ ಸಮೀಪಿಸುತ್ತಿದ್ದಂತೆ ವಧು-ವರರಿಗೆ ಜೀರಿಗೆ-ಬೆಲ್ಲ ಶಾಸ್ತ್ರವೂ ಮುಗಿದಿತ್ತು. ಇನ್ನೇನು ತಾಳಿ ಕಟ್ಟುವ ಶುಭಗಳಿಗೆ ಬಂದೇ ಬಿಟ್ಟಿತು ಎಂದು ಎಲ್ಲರೂ ಕಾಯುತ್ತಿದ್ದರು. ಆಗ ನಡೆದ ಒಂದು ಘಟನೆ ಅಲ್ಲಿನ ವಾತಾವರಣವನ್ನೇ ಬದಲಿಸಿಬಿಟ್ಟಿತು.
26
ಮದುವೆಗೆ ಎಂಟ್ರಿಕೊಟ್ಟ ಪ್ರಿಯಕರ
ತಾಳಿ ಕಟ್ಟುವ ಸಮಯ ಹತ್ತಿರವಾಗುತ್ತಿದ್ದಂತೆ, ಓರ್ವ ಯುವಕ ಆತುರವಾಗಿ ಮದುವೆ ಮಂಟಪಕ್ಕೆ ಬಂದ. ಅವನನ್ನು ನೋಡಿದ ಕೂಡಲೇ ವಧು ಆಶ್ಚರ್ಯದಿಂದ ಪ್ರತಿಕ್ರಿಯಿಸಿದಳು. ಮದುವೆ ಮಂಟಪದಲ್ಲಿ ಕುಳಿತಿದ್ದ ಆಕೆ, ಒಮ್ಮೆಗೇ ಎದ್ದು ಮಂಟಪದಿಂದ ಕೆಳಗಿಳಿದಳು. 'ಬಂದ್ಯಾ...' ಎನ್ನುತ್ತಾ ಆ ಯುವಕನ ಬಳಿ ಹೋಗಿ ನಿಂತಳು. ಈ ದೃಶ್ಯದಿಂದ ಅಲ್ಲಿದ್ದವರೆಲ್ಲರೂ ಕ್ಷಣಕಾಲ ದಂಗಾದರು. ವರ ಹಾಗೂ ಆತನ ಕುಟುಂಬದವರು ಸಂಪೂರ್ಣ ಆಘಾತಕ್ಕೊಳಗಾದರು.
36
ಅಸಲಿ ವಿಚಾರ ಬಾಯ್ಬಿಟ್ಟ ವಧು
ವಧುವಿನ ಈ ನಡೆಯನ್ನು ನೋಡಿ ಸಂಬಂಧಿಕರು ತಕ್ಷಣ ಆಕೆಯನ್ನು ಪ್ರಶ್ನಿಸಿದರು. ಆಗ ಆಕೆ ಅಸಲಿ ವಿಷಯವನ್ನು ಬಾಯ್ಬಿಟ್ಟಳು. 'ಈ ಯುವಕ ನಮ್ಮೂರಿನವನು. ನಾವಿಬ್ಬರೂ ಪ್ರೀತಿಸುತ್ತಿದ್ದೇವೆ. ನನಗೆ ಈ ಮದುವೆ ಇಷ್ಟವಿಲ್ಲ' ಎಂದು ಸ್ಪಷ್ಟವಾಗಿ ಹೇಳಿದಳು. ಇದರಿಂದ ಅಲ್ಲಿದ್ದವರೆಲ್ಲರೂ ದಿಗ್ಭ್ರಮೆಗೊಂಡರು. ಈ ಘಟನೆ ಎನ್ಟಿಆರ್ ಜಿಲ್ಲೆಯ ಮೈಲವರಂ ಕ್ಷೇತ್ರದಲ್ಲಿ ನಡೆದಿದೆ
ವಧುವಿನ ಮಾತು ಕೇಳಿದ ವರನ ಕಡೆಯವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಕೊನೇ ಕ್ಷಣದಲ್ಲಿ ಬಂದು ಮದುವೆ ನಿಲ್ಲಿಸಿದ ಯುವಕನ ಮೇಲೆ ಕೆಲವರು ಹಲ್ಲೆಗೂ ಯತ್ನಿಸಿದರು. ಇದರಿಂದಾಗಿ ಅಲ್ಲಿನ ಪರಿಸ್ಥಿತಿ ಉದ್ವಿಗ್ನಗೊಂಡಿತು. ವಿಷಯ ತಿಳಿದ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು. ಆದರೆ, ಈ ಗದ್ದಲದಿಂದಾಗಿ ಮದುವೆ ಕಾರ್ಯಕ್ರಮ ಅಲ್ಲಲ್ಲೇ ನಿಂತುಹೋಯಿತು.
56
ನೋವು ತೋಡಿಕೊಂಡ ವರನ ಕಡೆಯವರು
ಈ ಘಟನೆಯಿಂದ ವರನ ಪೋಷಕರು ತಮ್ಮ ನೋವನ್ನು ತೋಡಿಕೊಂಡರು. 'ನಮಗೆ ಇರೋದು ಒಬ್ಬನೇ ಮಗ. ಅವನ ಮದುವೆಯನ್ನು ಅದ್ದೂರಿಯಾಗಿ ಮಾಡಲು ಸಾಕಷ್ಟು ಸಿದ್ಧತೆ ಮಾಡಿಕೊಂಡಿದ್ದೆವು. ಎಲ್ಲಾ ಸಂಬಂಧಿಕರನ್ನು ಕರೆದಿದ್ದೆವು. ಸುಮಾರು 20 ಲಕ್ಷ ರೂಪಾಯಿ ಖರ್ಚು ಮಾಡಿದ್ದೇವೆ. ಭರ್ಜರಿ ಊಟದ ವ್ಯವಸ್ಥೆ ಮಾಡಿದ್ದೆವು. ಸಾವಿರಾರು ಮಂದಿ ಈಗಾಗಲೇ ಊಟ ಮಾಡಿದ್ದಾರೆ. ಇಷ್ಟೆಲ್ಲಾ ಆದ ಮೇಲೆ ಮದುವೆ ನಿಂತುಹೋದಿದ್ದರಿಂದ ಎಲ್ಲರ ಮುಂದೆ ನಮ್ಮ ಮರ್ಯಾದೆ ಹೋಯಿತು' ಎಂದು ಅವರು ಅಳಲು ತೋಡಿಕೊಂಡರು.
66
ಗ್ರಾಮದ ಹಿರಿಯರ ಪಂಚಾಯ್ತಿಯಿಂದ ಪರಿಹಾರ*
ಈ ಘಟನೆಯ ನಂತರ, ಎರಡೂ ಕುಟುಂಬಗಳು ಗ್ರಾಮದ ಹಿರಿಯರ ಸಮ್ಮುಖದಲ್ಲಿ ಸಭೆ ಸೇರಿವೆ. ಶನಿವಾರ ನಡೆದ ಪಂಚಾಯ್ತಿಯಲ್ಲಿ ವಿಷಯವನ್ನು ಚರ್ಚಿಸಿ ಸಮಸ್ಯೆಯನ್ನು ಬಗೆಹರಿಸಿಕೊಂಡಿದ್ದಾರೆ. ಆದರೆ, ಮದುವೆ ಮಂಟಪದಲ್ಲಿ ನಡೆದ ಈ ಅನಿರೀಕ್ಷಿತ ಘಟನೆ ಸ್ಥಳೀಯವಾಗಿ ದೊಡ್ಡ ಚರ್ಚೆಯ ವಿಷಯವಾಗಿದೆ. ಪ್ರೀತಿ, ಕುಟುಂಬದ ನಿರ್ಧಾರ ಮತ್ತು ಸಾಮಾಜಿಕ ಒತ್ತಡಗಳ ನಡುವಿನ ಸಂಘರ್ಷಕ್ಕೆ ಈ ಘಟನೆ ಒಂದು ಉದಾಹರಣೆಯಾಗಿ ನಿಂತಿದೆ.
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.