ಬೆಂಗಳೂರು ಮಿಷನ್‌-2022: 'ಬೆಂದ’ಕಾಳೂರಿಗೆ ನವಚೈತನ್ಯ

First Published Dec 18, 2020, 7:59 AM IST

ಬೆಂಗಳೂರು(ಡಿ.18): ನಗರದ ಅಭಿವೃದ್ಧಿಗಾಗಿ ರೂಪಿಸಿರುವ ಬೆಂಗಳೂರು ಮಿಷನ್‌-2022 ಕಾರ್ಯಯೋಜನೆಯ ನೀಲಿನಕ್ಷೆಯಲ್ಲಿ ಸುಗಮ ಸಂಚಾರ, ಸ್ವಚ್ಛ ಬೆಂಗಳೂರು, ಹಸಿರು ಬೆಂಗಳೂರು ಮತ್ತು ಜನಸಂಪರ್ಕ ಆದ್ಯತೆ ನೀಡಿ ಬೆಂಗಳೂರು ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ. ಭವಿಷ್ಯದಲ್ಲಿ ಬೆಂಗಳೂರು ಹೇಗಿರಬೇಕು ಎಂದು ರೂಪಿಸಿರುವ ನೀಲನಕ್ಷೆಯ ಬಗ್ಗೆ ಬಿಬಿಎಂಪಿ ವಿಶೇಷ ಅಧಿಕಾರಿ ಗೌರವ ಗುಪ್ತಾ ಅವರು ವಿಸ್ತೃತವಾಗಿ ವಿವರಿಸಿದ್ದು ಹೀಗೆ...

ಬೆಂಗಳೂರು ನಗರದ ವ್ಯಾಪ್ತಿ ಹೆಚ್ಚಾಗುತ್ತಿದ್ದು, ವಾಹನ ದಟ್ಟಣೆಯೂ ಹೆಚ್ಚಿದೆ. ಸಂಚಾರ ದಟ್ಟಣೆ ಬೆಂಗಳೂರಿಗರು ಎದುರಿಸುತ್ತಿರುವ ದೊಡ್ಡ ಸವಾಲಾಗಿದೆ. ಸಾರ್ವಜನಿಕ ಸಾರಿಗೆ ಬಳಕೆಗೆ ಉತ್ತೇಜನ ನೀಡಲು ಆದ್ಯತೆ ನೀಡಲಾಗಿದೆ. ಅತ್ಯುತ್ತಮ ರಸ್ತೆಗಳ ಅಭಿವೃದ್ಧಿ ಮತ್ತು ಸಂಚಾರ ವ್ಯವಸ್ಥೆಯಲ್ಲಿ ತಂತ್ರಜ್ಞಾನದ ಬಳಕೆಯ ಮೂಲಕ ಮುಂದಿನ ದಿನದಲ್ಲಿ ಸುಗಮ ಸಂಚಾರ ವ್ಯವಸ್ಥೆ ರೂಪಿಸಲು ಉದ್ದೇಶಿಸಲಾಗಿದೆ. 12 ಅತಿ ದಟ್ಟಣೆಯ ರಸ್ತೆಗಳನ್ನು ಗುರುತಿಸಿ ಒಟ್ಟು 190 ಕಿ.ಮೀ.ಉದ್ದದ ರಸ್ತೆಗಳನ್ನು ಮೇಲ್ದರ್ಜೆಗೇರಿಸಿ, ಅತ್ಯುತ್ತಮ ನಿರ್ವಹಣೆ ಮಾಡುವ ಯೋಜನೆಯನ್ನು ಕರ್ನಾಟಕ ರಸ್ತೆ ಅಭಿವೃದ್ಧಿ ಮೂಲಕ ಮೂಲಕ ತ್ವರಿತವಾಗಿ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ.
undefined
ಸ್ಮಾರ್ಟ್‌ ಸಿಟಿ ಯೋಜನೆಯಡಿ ರಸ್ತೆ ನಿರ್ಮಾಣ ಕಾರ್ಯ ಶೀಘ್ರ ಪೂರ್ಣಗೊಳಿಸುವುದು, ಬೆಂಗಳೂರು ನಗರದಲ್ಲಿ ವಾರ್ಷಿಕ ನಿರ್ವಹಣಾ ಒಪ್ಪಂದದ ಮೂಲಕ ಸುಮಾರು 400 ಕಿ.ಮೀ.ಉದ್ದದ ಪ್ರಮುಖ ಸಂಪರ್ಕ ರಸ್ತೆಗಳ ಅತ್ಯುತ್ತಮ ನಿರ್ವಹಣೆ. ರಸ್ತೆ ಸುರಕ್ಷತಾ ಪರಿಕರಗಳನ್ನು ಅಳವಡಿಸುವ ಮೂಲಕ ಪ್ರಯಾಣಿಕರ ಸುರಕ್ಷತೆಯನ್ನು ಖಾತರಿ ಪಡಿಸುವುದು ಮತ್ತು ಸಮನ್ವಯ ಹೊಂದಿದ ಸಿಗ್ನಲ್‌ ದೀಪಗಳ ಅಳವಡಿಕೆ, ವಿದ್ಯುತ್‌ ಚಾಲಿತ ಸಮೂಹ ಸಾರಿಗೆ ವ್ಯವಸ್ಥೆಗಳಿಗೆ ಉತ್ತೇಜನ ನೀಡಲು ಬೆಂಗಳೂರು ಮಿಷನ್‌ನಲ್ಲಿ ಆದ್ಯತೆ ನೀಡಲಾಗಿದೆ.
undefined
ಉಪ ನಗರ ರೈಲು ಯೋಜನೆಯಡಿ 1745 ಕೋಟಿ ರು. ವೆಚ್ಚದಲ್ಲಿ ಬೈಯಪ್ಪನಹಳ್ಳಿ- ಹೊಸೂರು ಮತ್ತು ಯಶವಂತಪುರ-ಚನ್ನಸಂದ್ರ ಟ್ರಾಕ್‌ ಡಬ್ಲಿಂಗ್‌ ಕಾಮಗಾರಿ ಪ್ರಗತಿಯಲ್ಲಿದೆ. ಅಲ್ಲದೇ, ಕೇಂದ್ರ ಸರ್ಕಾರವು 15,767 ಕೋಟಿ ರು. ವೆಚ್ಚದಲ್ಲಿ ನಾಲ್ಕು ಕಾರಿಡಾರ್‌ಗಳ ಕಾಮಗಾರಿಗಳಿಗೆ ಮಂಜೂರಾತಿ ನೀಡಿದೆ. ಒಟ್ಟು 148 ಕಿ.ಮೀ. ಉದ್ದದ ಉಪನಗರ ರೈಲು ಯೋಜನೆಯು ಆರು ವರ್ಷದಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ.
undefined
ಬೆಂಗಳೂರು ಎದುರಿಸುತ್ತಿರುವ ಸವಾಲುಗಳಲ್ಲಿ ವ್ಯವಸ್ಥಿತ ತ್ಯಾಜ್ಯ ನಿರ್ವಹಣೆಯೂ ಒಂದು. ತ್ಯಾಜ್ಯ ವಿಂಗಡಣೆ, ವೈಜ್ಞಾನಿಕ ನಿರ್ವಹಣೆಗೆ ರಾಜ್ಯ ಸರ್ಕಾರವು ಒತ್ತು ನೀಡಿದೆ. 1.2 ಕೋಟಿಗೂ ಹೆಚ್ಚು ಜನಸಂಖ್ಯೆ ಇದ್ದು, ಪ್ರತಿದಿನ ಸುಮಾರು 5800 ಮೆಟ್ರಿಕ್‌ ಟನ್‌ ತ್ಯಾಜ್ಯ ಉತ್ಪತ್ತಿ ಆಗುತ್ತಿದೆ. ಪರಿಣಾಮಕಾರಿಯಾಗಿ ತ್ಯಾಜ್ಯ ನಿರ್ವಹಣೆ ಮಾಡಲು ಇದಕ್ಕೆ ವ್ಯವಸ್ಥಿತ ರೂಪ ನೀಡಲು ಉದ್ದೇಶಿಸಲಾಗಿದೆ. ತಂತ್ರಜ್ಞಾನ ನೆರವಿನಿಂದ ಘನತ್ಯಾಜ್ಯ ಸಂಗ್ರಹ ಮತ್ತು ಸಾಗಾಣಿಕೆಯನ್ನು ನಿರ್ವಹಿಸುವುದು ಹಾಗೂ ನಿಗಾ ವಹಿಸುವುದು. ಅಲ್ಲದೇ, ವ್ಯವಸ್ಥೆಯ ಮೇಲೆ ಹೆಚ್ಚಿನ ನಿಗಾವಹಿಸಲು ಜಿಪಿಎಸ್‌ ಅಳವಡಿಕೆಗೆ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಿದೆ.
undefined
ವೈಜ್ಞಾನಿಕ ತ್ಯಾಜ್ಯ ವಿಲೇವಾರಿಗೆ ಸಮುದಾಯದ ಸಹಯೋಗ, ಸಹಭಾಗಿತ್ವ ಅತ್ಯಂತ ಪ್ರಮುಖವಾದುದು. ಈ ಹಿನ್ನೆಲೆಯಲ್ಲಿ ‘ನನ್ನ ಕಸ ನನ್ನ ಜವಾಬ್ದಾರಿ’ ಎಂಬ ತತ್ವವನ್ನು ಪ್ರತಿಯೊಬ್ಬ ನಾಗರಿಕನೂ ಅಳವಡಿಸಿಕೊಳ್ಳಬೇಕಾದದ್ದು ಅತಿ ಅಗತ್ಯವಾಗಿದೆ. ಇದಕ್ಕಾಗಿ ಸಮುದಾಯದಲ್ಲಿ ಹಂತದಲ್ಲಿ ತರಬೇತಿಗಳನ್ನು ಏರ್ಪಡಿಸಲಾಗುವುದು. ಪ್ರತಿ ವಲಯದಲ್ಲಿ ಗೊಬ್ಬರ ತಯಾರಿಕೆ ಮತ್ತು ಶೂನ್ಯ ತ್ಯಾಜ್ಯ ಮನೆಗಳ ಕುರಿತಂತೆ ಸಮುದಾಯಕ್ಕೆ ಮಾಹಿತಿ ಮತ್ತು ಮಾರ್ಗದರ್ಶನ ನೀಡಲು ಕಲಿಕಾ ಕೇಂದ್ರಗಳ ಸ್ಥಾಪನೆ, ಸ್ಥಳೀಯವಾಗಿಯೇ ಗೊಬ್ಬರ ಖರೀದಿ ಕೇಂದ್ರಗಳನ್ನು ಸ್ಥಾಪಿಸುವ ಮೂಲಕ ಮನೆಯಲ್ಲಿಯೇ ಹಸಿ ತ್ಯಾಜ್ಯ ಸಂಸ್ಕರಣೆಯನ್ನು ಪ್ರೋತ್ಸಾಹಿಸಲಾಗುವುದು.
undefined
ಬೆಂಗಳೂರು ನಗರ ಉದ್ಯಾನಗಳ ನಗರ ಎಂಬ ಹೆಗ್ಗಳಿಕೆಯನ್ನು ಮುಡಿಗೇರಿಸಿಕೊಂಡಿದೆ. ಲಾಲ್‌ಬಾಗ್‌, ಕಬ್ಬನ್‌ ಪಾರ್ಕ್ನಂತಹ ಸುಂದರ ಉದ್ಯಾನಗಳು, ನೂರಾರು ಕೆರೆಗಳು, ಬೆಂಗಳೂರು ನಗರದ ಸೌಂದರ್ಯವನ್ನು ಹೆಚ್ಚಿಸಿದ್ದವು. ಆದರೆ, ಕಳೆದ 2 ದಶಕಗಳಲ್ಲಿ ನಗರದ ಅತಿ ವೇಗದ ಬೆಳವಣಿಗೆಯಿಂದಾಗಿ ನಗರದ ಹಸಿರು ಹೊದಿಕೆ ಮತ್ತು ಜಲಮೂಲಗಳಿಗೆ ಕುಂದುಂಟಾಗಿದೆ. ಉದ್ಯಾನಗಳು ಮತ್ತು ಕೆರೆಗಳ ಪುನರುಜ್ಜೀವನದ ಮೂಲಕ ಉದ್ಯಾನನಗರಿಯ ಹೆಮ್ಮೆಯನ್ನು ಬೆಂಗಳೂರಿಗೆ ಮರಳಿಸುವುದು ಸರ್ಕಾರದ ಉದ್ದೇಶವಾಗಿದೆ.
undefined
ನಗರದ ಹೊರವಲಯದಲ್ಲಿ 400 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಎರಡು ಬೃಹತ್‌ ವೃಕ್ಷೋದ್ಯಾನಗಳ ಅಭಿವೃದ್ಧಿಗೊಳಿಸಲಾಗುವುದು. ನಗರದ ತುರಹಳ್ಳಿ, ಜೆ.ಪಿ.ನಗರ, ಕಾಡುಗೋಡಿ ಮತ್ತು ಮತ್ತಿಕೆರೆಯ ಕಿರು ಅರಣ್ಯಗಳನ್ನು ಜನಪ್ರಿಯಗೊಳಿಸುವುದಕ್ಕೆ ಒತ್ತು ನೀಡಲಾಗಿದೆ. ನಗರದಲ್ಲಿ ಹಸಿರು ಹೊದಿಕೆ ವಿಸ್ತರಿಸುವ ನಿಟ್ಟಿನಲ್ಲಿ ಮೈಸೂರು ಲ್ಯಾಂಫ್ಸ್‌ ಮತ್ತು ಎನ್‌ಜಿಇಎಫ್‌ನಂತಹ ಸಾರ್ವಜನಿಕ ಉದ್ದಿಮೆಗಳ ಜಾಗದಲ್ಲಿ ಉದ್ಯಾನವನಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಸರ್ಕಾರಿ ಕಟ್ಟಡಗಳನ್ನು ನಿರ್ಮಿಸುವಾಗ ಸಾಧ್ಯವಿರುವ ಕಡೆಯಲ್ಲಿ ಹಸಿರು ಕಟ್ಟಡಗಳನ್ನು ನಿರ್ಮಿಸಲು ಆದ್ಯತೆ ನೀಡಲಾಗುವುದು. ಖಾಸಗಿಯವರು ಸಹ ಹಸಿರು ಕಟ್ಟಡಗಳ ನಿರ್ಮಾಣಕ್ಕೆ ಆದ್ಯತೆ ನೀಡುವುದಕ್ಕೆ ಪ್ರೋತ್ಸಾಹ ನೀಡಲಾಗುವುದು.
undefined
ದಿನೇ ದಿನೆ ಬೆಳೆಯುತ್ತಿರುವ ನಗರದಲ್ಲಿ ನಾಗರಿಕರೊಂದಿಗೆ ನಿರಂತರ ಸಂವಹನ ನಡೆಸಲು, ನಾಗರಿಕ ಸೇವೆಗಳನ್ನು ಒದಗಿಸಲು ಮತ್ತು ಸಾರ್ವಜನಿಕ ಕುಂದುಕೊರತೆ ನಿವಾರಿಸಲು ಸರ್ಕಾರವು ಪರಿಣಾಮಕಾರಿ ಡಿಜಿಟಲ್‌ ವೇದಿಕೆ ನಿರ್ಮಿಸುವ ಗುರಿಯನ್ನು ಹೊಂದಿದೆ. ನಾಗರಿಕರೊಂದಿಗೆ ಸ್ಥಳೀಯ ಆಡಳಿತ ಸಂಸ್ಥೆಯ ಸಂಪರ್ಕ, ಬಾಂಧವ್ಯವೂ ಉತ್ತಮವಾಗಿರಬೇಕು. ಬಿಬಿಎಂಪಿ ಮತ್ತು ಇತರ ಪ್ರಮುಖ ಇಲಾಖೆಗಳು ಜನರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಿ ಬಗೆಹರಿಸಬೇಕು.
undefined
ಜನರ ದೈನಂದಿನ ಬದುಕಿಗೆ ಅಗತ್ಯ ಸೇವಾ ಸೌಲಭ್ಯಗಳಾದ ಖಾತಾ, ತೆರಿಗೆ ಪಾವತಿ, ಜನನ ಮತ್ತು ಮರಣ ಪ್ರಮಾಣಪತ್ರ ವಿತರಣೆ, ವ್ಯಾಪಾರ ಪರವಾನಗಿ ಮುಂತಾದ ನಾಗರಿಕ ಸೇವೆಗಳು ಏಕೀಕೃತ ಡಿಜಿಟಲ್‌ ವೇದಿಕೆಯಲ್ಲಿ ಪಡೆಯಲು ಅನುವು ಮಾಡಿಕೊಡುವುದು. ಆಸ್ತಿ ನೋಂದಣಿಗೆ ಆನ್‌ಲೈನ್‌ ಮೂಲಕ ಸಮಯ ನಿಗದಿ ಪಡಿಸುವುದರೊಂದಿಗೆ ಯಾವ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಬೇಕಾದರೂ ನೋಂದಾಯಿಸಿಕೊಳ್ಳಬಹುದಾಗಿದೆ.
undefined
click me!