Education| ಕೊರೋನಾ ದುಗುಡದಿಂದ ಹೊರಬಂದ ಮಕ್ಕಳು: ಶಾಲೆಗಳಲ್ಲಿ ಕೇಳ್ತಿದೆ ಚಿಲಿಪಿಲಿ ಕಲರವ

Kannadaprabha News   | Asianet News
Published : Nov 14, 2021, 08:29 AM IST
Education| ಕೊರೋನಾ ದುಗುಡದಿಂದ ಹೊರಬಂದ ಮಕ್ಕಳು: ಶಾಲೆಗಳಲ್ಲಿ ಕೇಳ್ತಿದೆ ಚಿಲಿಪಿಲಿ ಕಲರವ

ಸಾರಾಂಶ

*  ಕೊರೋನಾ ಕಾಲದ ದಿನಗಳ ಮೆಲುಕು ಹಾಕುತ್ತಿರುವ ಮಕ್ಕಳು  *  ಕೋವಿಡ್‌ನಿಂದ ಎಲ್ಲವೂ ಮಿಸ್‌ *  ಕೊರೋನಾದಿಂದ ಶಿಕ್ಷಣದಲ್ಲಿ ಸಾಕಷ್ಟು ತೊಂದರೆ 

ಉತ್ತರಕನ್ನಡ(ನ.14):  ಕೋವಿಡ್‌(Covid19) ಮಂಕಿನಿಂದ ಹೊರಬಂದು ಶಾಲೆಯ ಹಾದಿ ಹಿಡಿದಿರುವ ಮಕ್ಕಳಲ್ಲಿ(Childrens) ಈಗ ಶಾಲೆ ಆರಂಭ ಹೊಸ ಉತ್ಸಾಹ ಮೂಡಿಸಿದೆ.  ಇಚ್ಟು ದಿನ ಮುಚ್ಚಿದ್ದ ಶಾಲೆಗಳು ಈಗ ತೆರೆದುಕೊಂಡಿದ್ದು, ಮಕ್ಕಳು ಸಹ ಶಾಲೆಗಳತ್ತ ಹೆಜ್ಜೆ ಹಾಕಿ ಸ್ವಚ್ಛಂದದ ಹಕ್ಕಿಗಳಂತೆ ವ್ಯಾಸಂಗದತ್ತ ಗಮನಹರಿಸಿದ್ದು, ಕೊರೋನಾ ಕಾಲದ ದಿನಗಳ ಮೆಲುಕು ಹಾಕುತ್ತಿದ್ದಾರೆ. 

ಸ​ರ್ಕಾರ ಮಕ್ಕಳಿಗೆ ಲಸಿಕೆ ತರಿಸಿ ಧೈರ್ಯ ತುಂಬಲಿ

ಭಟ್ಕಳ(Bhatkal): ಮೊದಮೊದಲು ಕೊರೋನಾ(Coronavirus) ಬಗ್ಗೆ ಯಾರಿಗೂ ಹೆಚ್ಚಿನ ಅರಿವಿರಲಿಲ್ಲ. ಯಾವಾಗ ಇಡೀ ದೇಶವೇ(India) ಲಾಕ್‌ಡೌನ್‌(Lockdown) ಆಯಿತೋ ಆಗ ಈ ಮಾರಕ ಸೋಂಕಿನ ಬಗ್ಗೆ ಎಲ್ಲರಲ್ಲೂ ಹೆಚ್ಚಿನ ಭಯ, ಆತಂಕಕ್ಕೆ ಕಾರಣವಾಯಿತು. ಎಷ್ಟೋ ಜನರು ಸೋಂಕಿನಿಂದ ಬಳಲಿದರು. ಎಷ್ಟೋ ಜನರು ಸೋಂಕಿಗೆ ಬಲಿಯಾದರು. ಶಾಲೆಗಳೂ(Schools) ಬಂದ್‌ ಆದವು. ವಿದ್ಯಾ​ರ್ಥಿ​ಗಳು(Students) ಪರೀಕ್ಷೆ(Examination) ಬರೆ​ಯದೇ ಪಾಸ್‌ ಆದರು.

ಸೋಂಕು ಕಡಿಮೆಯಾದ ಹಿನ್ನೆಲೆಯಲ್ಲಿ ಮತ್ತೆ ಶಾಲೆಯನ್ನು ಇದೀಗ ಪುನರಾರಂಭಿಸಲಾಗಿದೆ. ಆನ್‌ಲೈನ್‌ ತರಗತಿಗಿಂತ(Online Class) ಶಾಲೆಗೆ ಹೋಗಿ ತರಗತಿಯಲ್ಲಿ ಕುಳಿತು ಕಲಿತರೆ ಹೆಚ್ಚು ಪರಿಣಾಮಕಾರಿ. ಎಸ್ಸೆಸ್ಸೆಲ್ಸಿ(SSLC) ಪರೀಕ್ಷೆಗೆ ಹೆಚ್ಚಿನ ಮಹತ್ವ ಇರುವುದರಿಂದ ತರಗತಿಯಲ್ಲಿ ಶಿಕ್ಷಣ(Education) ಪಡೆಯುವುದೇ ಉತ್ತಮ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ನೆಟ್‌ವರ್ಕ್(Network) ಇಲ್ಲದೇ ಆನ್‌ಲೈನ್‌ ತರಗತಿಗೆ ಪರದಾಡಿದ್ದು, ಎಷ್ಟೋ ವಿದ್ಯಾರ್ಥಿಗಳು ಸಂಬಂಧಿಕರ ಮನೆಯೋ, ಗುಡ್ಡದಲ್ಲೋ ಹೋಗಿ ಕುಳಿತು ಪಾಠ ಕೇಳಿದ್ದಾರೆ. ಮಕ್ಕಳಂತೆ ಶಿಕ್ಷಕರೂ(Teachers) ಕೊರೋನಾದಿಂದಾಗಿ ನಾನಾ ರೀತಿಯ ಸಂಕಷ್ಟ ಎದುರಿಸಿದ್ದಾರೆ. ಕಳೆದ ಎರಡು ವರ್ಷಗಳಿಂದ ಕೊರೋನಾ ಭಯದಿಂದಲೇ ಇರುವಂತಾಗಿದೆ. ಇದು ವಿದ್ಯಾರ್ಥಿಗಳು, ಶಿಕ್ಷಣದ ಮೇಲೆ ಸಾಕಷ್ಟು ಪರಿಣಾಮ ಬೀರಿದೆ. ಮೊದಲು ಶಾಲೆಯಲ್ಲಿ ಶಿಕ್ಷಣದ ಜೊತೆಗೆ ಕ್ರೀಡೆ(Sports), ಪ್ರತಿಭಾ ಕಾರಂಜಿ ಸೇರಿದಂತೆ ಪಠ್ಯೇತರ ಚಟುವಟಿಕೆ(Extracurricular Activity) ನಡೆಸಲಾಗುತ್ತಿತ್ತು. ಆದರೆ ಕೊರೋನಾದಿಂದಾಗಿ ಕಳೆದ ಎರಡು ವರ್ಷಗಳಿಂದ ಎಲ್ಲವೂ ನಿಂತಿದೆ.

Hubballi| ಕನ್ನಡಪ್ರಭ ಚಿತ್ರಕಲಾ ಸ್ಪರ್ಧೆಗೆ ಭರ್ಜರಿ ಸ್ಪಂದನೆ

ಸೋಂಕು ಕಡಿಮೆಯಾದರೆ ಮತ್ತೆ ಎಲ್ಲವೂ ಮೊದಲಿನಂತೆ ಆದೀತು ಎನ್ನುವ ವಿಶ್ವಾಸ ಇದೆ. ಎಲ್ಲೆಡೆ ಶಾಲಾರಂಭಗೊಂಡಿರುವುದರಿಂದ ನಮ್ಮಂತಹ ವಿದ್ಯಾರ್ಥಿಗಳಲ್ಲಿ ಕೊರೋನಾ ಭಯ ಇದ್ದೇ ಇದೆ. ಆದರೆ ಏನು ಮಾಡುವುದು? ಕೊರೋನಾದೊಂದಿಗೆ ನಾವು ಜೀವನ ನಡೆಸಬೇಕಾದ ಅನಿವಾರ್ಯತೆ ಇದೆ. ಶಾಲೆಗಳಲ್ಲಿ ಸಾಕಷ್ಟುಮುಂಜಾಗ್ರತಾ ಕ್ರಮ ಕೈಗೊಂಡರೂ ಸ​ರ್ಕಾರ ಆಗಾಗ ಮಕ್ಕಳಿಗೆ ಆರೋಗ್ಯ ತಪಾಸಣೆ ಸಹಿತ ಕೊರೋನಾ ಲಸಿಕೆ ತರಿಸಿ ಮಕ್ಕಳಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕು. ಮೂರನೇ ಅಲೆಯ ಭಯ ಇರುವುದರಿಂದ ಕೊರೋನಾ ನಿಯಮ ಕಟ್ಟುನಿಟ್ಟಾಗಿ ಪಾಲಿಸಲು ಸರ್ಕಾರ(Government of Karnataka) ಮುಂದಾಗಬೇಕು ಅಂತ ಎಸ್ಸೆಸ್ಸೆಲ್ಸಿ ಭಟ್ಕಳ ಮಾರುಕೇರಿ ಎಸ್‌ಪಿ ಹೈಸ್ಕೂಲ್‌ ಪ್ರಶಾಂತ ಹೆಬ್ಬಾರ ತಿಳಿಸಿದ್ದಾರೆ. 

ಕೊರೋನಾ ಸಮಯ ಗೃಹ ಬಂಧನದಲ್ಲಿದ್ದ ಅನುಭವ

ನೆಟವರ್ಕ್‌ಗಾಗಿ ಮೂರು ಕಿ.ಮೀ. ದೂರ ಪ್ರತೀ ದಿನ ಹೋಗಬೇಕಾಗಿತ್ತು. ಅಂತೂ ಇಂತೂ ಹೇಗೋ ಮಾಡಿ ನೆಟ್ಕವರ್ಕ್ ಸಿಕ್ಕ ಬಳಿಕ ವಿಡಿಯೋ ಡೌನಲೋಡ್‌ ಮಾಡಿಕೊಂಡು ಮನೆಗೆ ಬಂದು ಪಾಠ ಕೇಳುತ್ತಿದ್ದೆ. ಇದು ದಿನ ನಿತ್ಯದ ಕಾಯಕವಾಗಿತ್ತು. ಮೂರೂರಿನ ಪ್ರಗತಿ ವಿದ್ಯಾಲಯದಲ್ಲಿ 10ನೇ ತರಗತಿ ಕಲಿಯುತ್ತಿದ್ದೆ. ಮನೆ ಯಾಣದ ಸಮೀಪದ ಬೆಳ್ಳಂಗಿಯಲ್ಲಿದೆ.

ಕೊರೋನಾ ಮಾರಿಯಿಂದಾಗಿ ಮನೆಯಲ್ಲೇ ಕುಳಿತುಕೊಳ್ಳುವಂತಾಯಿತು. ನಂತರ ಆನ್‌ಲೈನ್‌ ಕ್ಲಾಸ್‌ ಶುರುವಾಯಿತು. ಆದರೆ ಮನೆಯ ಸಮೀಪದಲ್ಲೆಲ್ಲೂ ನೆಟ್‌ವರ್ಕ್ ಇಲ್ಲ. ತಂದೆ ಒಂದು ಮೊಬೈಲ್‌(Mobile) ಕೈಗಿತ್ತರು. ನಂತರ ನೆಟ್‌ವರ್ಕ್‌ಗಾಗಿ ಅಲೆದಾಟ ಶುರುವಾಯಿತು. ಅಂತೂ 3 ಕಿ.ಮೀ. ದೂರದ ಆನೆಗುಂದಿ ಸಮೀಪದ ಯಾಣ ಕ್ರಾಸ್‌ನಲ್ಲಿ ನೆಟ್‌ವರ್ಕ್ ಅಲ್ಪಸ್ವಲ್ಪ ಸಿಗುವುದು ಖಾತ್ರಿಯಾಯಿತು. ಪ್ರತಿ ದಿನ ಬೆಳಗ್ಗೆ ಹಾಗೂ ಸಂಜೆ ಎರಡು ಬಾರಿ ಯಾಣ ಕ್ರಾಸ್‌ಗೆ ಹೋಗಿ ರಸ್ತೆಯ ಪಕ್ಕದ ಕಾಡಿನಲ್ಲಿ ಕುಳಿತುಕೊಂಡು ಗಂಟೆಗಳ ಕಾಲ ಪ್ರಯತ್ನಿಸಿ ವಿಡಿಯೋ ಡೌನ್‌ಲೋಡ್‌ ಮಾಡಿ ಮನೆಗೆ ಬಂದು ಪಾಠ ಕೇಳುತ್ತಿದ್ದೆ.

ಆದರೆ ಇದಾವುದೂ ಶಾಲೆಗೆ ಹೋದಂತೆ ಆಗುತ್ತಿರಲಿಲ್ಲ. ಕ್ಲಾಸಿನಲ್ಲಿ ಕುಳಿತು ಪಾಠ ಕೇಳಿದಷ್ಟುಮನವರಿಕೆ ವಿಡಿಯೋದಿಂದ ಆಗುತ್ತಿರಲಿಲ್ಲ. ಜತೆಗೆ ಫ್ರೆಂಡ್ಸ್‌ ಒಟ್ಟಿಗೆ ಹರಟೆ, ಆಟ, ಅವರೊಂದಿಗೆ ಸ್ಕೂಲಿಗೆ ಹೋಗಿ ಬರುವುದು ಆ ಲೈಫೇ ಬೇರೆ. ಅದೆಲ್ಲವನ್ನೂ ಕಳೆದುಕೊಳ್ಳುವಂತಾಯಿತು. ಜತೆಗೆ ಕೊರೋನಾಕ್ಕೆ ಹೆದರಿ ಮನೆಗೂ ಯಾರೂ ಬರುತ್ತಿರಲಿಲ್ಲ. ನಾನೂ ಬೇರೆಯವರ ಮನೆಗೆ ಹೋಗುವಂತಿಲ್ಲ. ಗೃಹಬಂಧನದಲ್ಲಿದ್ದಂತೆ ಆಯಿತು. ಎಸ್ಸೆ​ಸ್ಸೆಲ್ಸಿ ಆಗಿದ್ದರಿಂದ ತುಂಬಾ ಆತಂಕಕ್ಕೂ ಕಾರಣವಾಗಿತ್ತು. ಅಂತೂ ರಿಸಲ್ಟ್‌ ಬಂದಾಗ ಶೇ. 96 ಅಂಕಗಳಿಸಿದ್ದು ಸ್ವಲ್ಪ ನಿಟ್ಟುಸಿರುಬಿಡುವಂತಾಯಿತು. ಈಗ ಪಿಯುಸಿಗೆ ಹೋಗುತ್ತಿದ್ದಂತೆ ತರಗತಿಗಳು ಆರಂಭವಾಗಿವೆ. ಹಿಂದಿನ ವಿದ್ಯಾರ್ಥಿ ಬದುಕಿಗೆ ಮರಳಿದಂತಾಗಿದೆ. ಆದರೆ ಪಿಯುಸಿಗೆ ಬೇರೆ ಕಾಲೇಜಿಗೆ ಬಂದಿದ್ದರಿಂದ ಹಿಂದಿನ ಫ್ರೆಂಡ್ಸ್‌ಗಳೆಲ್ಲ ಸಿಗದಂತಾಗಿದೆ ಎಂದು ಮಣಿಶಂಕರ ಭಟ್‌ ಬೆಳ್ಳಂಗಿ ಕುಮಟಾ ಹೇಳಿದ್ದಾರೆ. 

Education| ಕಳೆದ ವರ್ಷದ ಖಾಸಗಿ ಶಾಲಾ ಶುಲ್ಕ 15% ಕಡಿತ

ಕೊರೋನಾ ತುಂಬಾ ಅನ್ಯಾಯ ಮಾಡಿದೆ

ನಾನು ಉನ್ನತ ಶಿಕ್ಷಣ(Higher Education) ಪಡೆಯುವ ಆಸೆ ಹೊಂದಿದ್ದೇನೆ. ಆದರೆ ಕೊರೋನಾ ನಮ್ಮಂತವರಿಗೆ ತುಂಬಾ ಅನ್ಯಾಯ ಮಾಡಿದೆ. ಕೊರೋನಾ ಆರಂಭವಾಗಿ ಲಾಕ್‌ಡೌನ್‌ ಆಗುತ್ತಿದ್ದಂತೆ ಶಾಲೆಯನ್ನು ಬಿಡುವಂತಾಯಿತು. ಎಷ್ಟೇ ಅಂದ್ರೂ ಆನ್‌ಲೈನ್‌ ಕ್ಲಾಸ್‌ಗಳು ಶಾಲೆಗೆ ಹೋಗಿ ತರಗತಿಯಲ್ಲಿ ಕುಳಿತು ಕಲಿತಂತೆ ಆಗುವುದೇ ಇಲ್ಲ. ನಮ್ಮ ಗೆಳತಿಯರ ನಡುವೆ ಕುಳಿತು ಅವರೊಂದಿಗೆ ಆಟವಾಡುತ್ತ ಪಾಠ ಕೇಳುವುದೇ ಬೇರೆ ಅನುಭವ ಕೊಡುತ್ತದೆ. ಶಾಲೆಯಿಂದ ಹೊರಗಡೆ ಇದ್ದುದರಿಂದ ನನ್ನ ವಿದ್ಯಾಭ್ಯಾಸಕ್ಕೆ ತೊಡಕು ಉಂಟಾಯಿತು. ಎಷ್ಟೋ ವಿಷಯಗಳನ್ನು ಕಲಿಯಲು ಸಾಧ್ಯವಾಗಲಿಲ್ಲ. ಶಾಲೆಗೆ ಹೋದ್ರೆ ಕೇವಲ ಪಠ್ಯ ಪುಸ್ತಕ ಮಾತ್ರ ಅಲ್ಲ. ಸಾಮಾಜಿಕ, ಧಾರ್ಮಿಕ, ರಾಜಕೀಯ ಹೀಗೆ ಎಷ್ಟೋ ವಿಷಯಗಳ ಬಗ್ಗೆ ನಮಗೆ ಮಾಹಿತಿ ಸಿಗುತ್ತಿತ್ತು. ಅವೆಲ್ಲವುಗಳಿಂದ ವಂಚಿತರಾಗುವಂತಾಯಿತು.

ನಾವು ಸಿದ್ದಿ ಜನಾಂಗದವರು. ನಮ್ಮ ಹಿರಿಯರು ಶಿಕ್ಷಣದಿಂದ ವಂಚಿತರಾಗಿದ್ದರು. ಆದರೂ ಅವರು ನಮ್ಮನ್ನೆಲ್ಲ ಓದಿಸಲು ತುಂಬಾ ಕಷ್ಟಪಡುತ್ತಿದ್ದಾರೆ. ನಮಗೆ ಓದುವ ಅವಕಾಶ ದೊರಕಿಸಿಕೊಟ್ಟಿದ್ದಕ್ಕೆ ಅವರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ.

ಕೊರೋನಾದಿಂದ ಶಿಕ್ಷಣದಲ್ಲಿ ಸಾಕಷ್ಟು ತೊಂದರೆ ಅನುಭವಿಸಿದ್ದೇನೆ. ಶಿಕ್ಷಕರ ಮುತುವರ್ಜಿ ಇದ್ದರೂ, ನಮಗೆ ಅಭ್ಯಾಸ ಮಾಡುವ ಪ್ರೇರಣೆ ಬರುತ್ತಿರಲಿಲ್ಲ. ಸುಮಾರು ಒಂದೂವರೆ ವರ್ಷ ಕಾಲ ಶಿಕ್ಷಣಕ್ಕೆ ಸಮಸ್ಯೆ ಉಂಟಾಯಿತು. ಈಗ ಬದಲಾದ ವ್ಯವಸ್ಥೆ ಸಂತಸ ತಂದಿದೆ. ಉತ್ತಮ ಸಾಧನೆ ಮಾಡುವ ವಿಶ್ವಾಸ ಹೊಂದಿದ್ದೇನೆ. ಶಾಲೆಗೆ ಹೋಗಲು ಈಗ ಖುಷಿಯಾಗುತ್ತಿದೆ. ಹಾಗಂತ ಕೊರೋನಾ ಆತಂಕ ಸಂಪೂರ್ಣ ನಿವಾರಣೆಯಾಗಿಲ್ಲ. ಆದರೆ ಮೊದಲಿನಷ್ಟುಭಯ ಇಲ್ಲ. ಇನ್ನು ಎಲ್ಲವೂ ಮಾಮೂಲಿಯಂತೆ ಆಗುತ್ತದೆ ಎಂಬ ವಿಶ್ವಾಸ ಇದೆ ಅಂತ ಮಂಜುಳಾ ಸಿದ್ದಿ ಯಲ್ಲಾಪುರ, 10 ನೇ ತರಗತಿ, ವಿಶ್ವದರ್ಶನ ಕನ್ನಡ ಮಾಧ್ಯಮ ಪ್ರೌಢಶಾಲೆ ತಿಳಿಸಿದ್ದಾಳೆ. 

ಕೊರೋ​ನಾ​ದಿಂದ ಬ​ಹ​ಳ ಮಿಸ್‌ ಆದ​ವು

ಕೋವಿಡ್‌ 19 ಎನ್ನುವ ಸಾಂಕ್ರಾಮಿಕ ಕಾಯಿಲೆ ಬಾಧಿಸಿದಾಗ ಶಾಲೆ ಸ್ಥಗಿತಗೊಂಡು ನಾವು ಸರಿ ಸುಮಾರು 2 ವರ್ಷ ಮನೆಯಲ್ಲಿಯೇ ಕಾಲ ಕಳೆಯಬೇಕಾಯಿತು. ಶಾಲೆಗೆ ಹೋಗದೆ ಮನೆಯಲ್ಲಿ ಉಳಿದರೆ ಎಷ್ಟೆಲ್ಲ ಸಮಸ್ಯೆಗಳು ಆಗುತ್ತವೆ ಎನ್ನುವುದಕ್ಕೆ ಕೊರೋನಾ ಸಾಕ್ಷಿಯಾಯಿತು.

ನಾನು 5ನೇ ತರಗತಿ ಪಾಸಾಗಿ 6ನೇ ತರಗತಿಯ ಪರೀಕ್ಷೆ ಬರೆಯುತ್ತಿರುವಾಗ ಲಾಕ್‌ಡೌನ್‌, ಶಾಲೆಗಳಿಗೆ ವಿದ್ಯಾರ್ಥಿಗಳು ಬರಬಾರದೆಂದು ಸರ್ಕಾರ ಆದೇಶ ಮಾಡಿತು. ನಮ್ಮ ಶಿಕ್ಷಕರು ಕೋವಿಡ್‌ ಮಧ್ಯೆ ಆನ್ಲೆ ೖನ್‌ ಶಿಕ್ಷಣದಲ್ಲಿ ನಮಗೆ ಉತ್ತಮವಾಗಿಯೇ ಪಾಠ ಮಾಡುತ್ತಿದ್ದರು. ಪರೀಕ್ಷೆಗಳನ್ನು ಮಾಡುತ್ತಿದ್ದರು. ಆದರೆ ನಾವು ಮನೆಯಲ್ಲಿ ಕುಳಿತು ಶಿಕ್ಷಣ ಕಲಿಯುವುದಕ್ಕೂ ಶಾಲೆಯಲ್ಲಿ ಶಿಕ್ಷಕರ ಮುಂದೆ ವಿದ್ಯಾರ್ಥಿಗಳೊಂದಿಗೆ ಶಿಕ್ಷಣ ಕಲಿಯುವುದಕ್ಕೂ ಬಹಳ ವ್ಯತ್ಯಾಸವಿದೆ ಎನ್ನುವುದು ನನ್ನ ಭಾವನೆ.

ಎನ್ಇಪಿ ಜಾರಿಯಿಂದ ಅಗ್ರಸ್ಥಾನಕ್ಕೆ ಭಾರತ : ಅಶ್ವತ್ಥನಾರಾಯಣ

ಶಾಲೆಯಲ್ಲಿ ಪಾಠ, ಜೊತೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ವ್ಯಾಯಾಮ, ಚಿಕ್ಕಪುಟ್ಟ ಸ್ಪರ್ಧೆಗಳು ಸಹಪಾಠಿಗಳು ಇವೆಲ್ಲವನ್ನು ಕೆಲಕಾಲ ನಾವು ಕಳೆದುಕೊಂಡಿದ್ದೇವೆ ಎನ್ನುವಂತಿತ್ತು ಪರಿಸ್ಥಿತಿ. ಮನೆಯಲ್ಲಿ ಪಾಲಕರು ಪ್ರೀತಿ ಮಾಡಿದರೂ ಒಂದು ಕಡೆ ಶಾಲೆ ಇಲ್ಲ. ಇನ್ನೊಂದು ಕಡೆ ನೀವು ಓದುವುದಿಲ್ಲ ಎಂದು ಬೇಸರಿಸುತ್ತಿದ್ದರು. ಆದರೆ ಓದುವುದಾದರೂ ಏನನ್ನು ಎನ್ನಿಸುತ್ತಿತ್ತು. ಸಂಬಂಧಿಗಳ ಮನೆಗೆ ಹೋಗೋಣ ಎಂದರೆ ಅಲ್ಲಿಯೂ ವಯೋವೃದ್ಧರು ಇರುವುದರಿಂದ ಎಲ್ಲಿ ಅವರಿಗೆ ತೊಂದರೆಯಾಗುತ್ತದೋ? ಎಂದು ಭಯವಾಗಿ ಅಲ್ಲಿಗೂ ಹೋಗಲಾಗುತ್ತಿರಲಿಲ್ಲ.

ಕೋವಿಡ್‌ ಎಲ್ಲ ಕಡೆಯಲ್ಲಿ ಇರುವುದರಿಂದ ಹೊರಗೆ ಹೋಗಬೇಡಿ ಎಂದು ಪಾಲಕರು ತಿಳಿಸಿದ್ದರು. ಗೆಳತಿಯರೊಂದಿಗೆ ಆಟವಾಡಲು ಹೋಗಲು ಹೆದರಿಕೆಯಾಗಿ ಯಾರಾದರೂ ಹೊರಗಿನವರು ಬಂದರೆ ಇವರಿಗೆ ಕೋವಿಡ್‌ ಬಂದಿರಬಹುದೇ ಎನ್ನಿಸುತಿತ್ತು.

ಆದರೆ ಈಗ ನಮ್ಮ ಶಾಲೆ ಆರಂಭವಾಗಿದೆ. ಪಾಠಗಳು ನಡೆಯುತ್ತಿವೆ. ಇಂತಹ ಖಾಯಿಲೆಗಳು ಬಾರದಿರಲಿ ಎಂದು ಪ್ರಾರ್ಥಿಸಿಕೊಳ್ಳುತ್ತೇನೆ. ರಾಷ್ಟ್ರೀಯ ಹಬ್ಬಗಳಲ್ಲಿ, ನೃತ್ಯ ಹಾಡು ಇನ್ನಿತರೆ ಸಮಾರಂಭಗಳಲ್ಲಿ ಪಾಲ್ಗೊಳ್ಳಲು ಆಗುತ್ತಿರಲಿಲ್ಲ. ಈಗ ಶಾಲೆ ಆರಂಭವಾಗಿದೆ. ಬಹಳ ನೆಮ್ಮದಿ ಇದೆ ಅಂತ ಅಂಕೋಲಾದ  ನಿರ್ಮಲ ಹೃದಯ ಆಂಗ್ಲ ಮಾಧ್ಯಮ ಶಾಲೆ ಅಂಕೋಲಾದ 7ನೇ ತರಗತಿ ವಿದ್ಯಾರ್ಥಿನಿ ಶಕ್ತಿ ಕಾರೇಬೈಲ್‌ ಹೇಳಿದ್ದಾಳೆ. 
 

PREV
Read more Articles on
click me!

Recommended Stories

1ನೇ ತರಗತಿ ದಾಖಲಾತಿಗೆ 6 ವರ್ಷ ಕಡ್ಡಾಯ, ಇಂಗ್ಲೀಷ್ ಶಾಲೆಗಳ ಪೋಷಕರಿಂದ ಸಡಿಲಿಕೆಗೆ ಮನವಿ
SSLCಗೆ ಶೇ.33 ಪಾಸಿಂಗ್ ಮಾರ್ಕ್ಸ್ ಸಮರ್ಥಿಸಿ ಕೊಳ್ಳುತ್ತಲೇ ರಾಜ್ಯ ಪೊಲಿಟಿಕ್ಸ್ ಅಪ್ಟೇಡ್ ಕೊಟ್ಟ ಮಧು ಬಂಗಾರಪ್ಪ