ಅಂಕೋಲಾ ಯುವತಿ ಹತ್ಯೆ​ಗೆ WhatsApp ಸ್ಟೇಟಸ್‌ ಕಾರ​ಣ

By Kannadaprabha NewsFirst Published Oct 29, 2021, 10:19 AM IST
Highlights

*   ಹುಟ್ಟುಹಬ್ಬದ ಕಾಣಿ​ಕೆ​ಯನ್ನೇ ನಿಶ್ಚಿ​ತಾರ್ಥ ಎಂದು ಭಾವಿ​ಸಿದ ಭಗ್ನ ಪ್ರೇಮಿ
*  ದೀಪಾವಳಿಗೆ ಊರಿಗೆ ಹೋಗಲು ಬಸ್‌ ಟಿಕೆಟ್‌ ಬುಕ್‌ ಮಾಡಿದ್ದ ಯುವತಿ
*   ಯುವತಿಯ ಕತ್ತು ಹಿಸುಕಿ ಹತ್ಯೆಗೈದಿದ್ದ ಆರೋಪಿ 

ರಾಘುಕಾಕರಮಠ

ಅಂಕೋಲಾ(ಅ.29):  ಬುಧವಾರ ಬೆಂಗಳೂರಿನಲ್ಲಿ(Bengaluru) ನಿಗೂಢವಾಗಿ ಕೊಲೆಗೀಡಾಗಿದ್ದ ಅಂಕೋಲಾ ಮೂಲದ ಯುವತಿ ಉಷಾ ಸುಕ್ರು ಗೌಡ ಸಾವಿನ ನಿಖರ ಕಾರಣ ತಿಳಿದು ಬಂದಿದ್ದು, ಹುಟ್ಟು ಹಬ್ಬದ ಸಂದರ್ಭದಲ್ಲಿ ಧರಿಸಿದ್ದ ಉಂಗುರವನ್ನು ವ್ಯಾಟ್ಸ್‌​ಆ್ಯಪ್‌ ಸ್ಟೇಟಸ್‌ಗೆ ಹಾಕಿಕೊಂಡಿದ್ದನ್ನೇ ನಿಶ್ಚಿತಾರ್ಥದ ಉಂಗುರ ಎಂದು ತಪ್ಪಾಗಿ ತಿಳಿದು ಭಗ್ನಪ್ರೇಮಿ ಅವಳನ್ನು ಹತ್ಯೆಗೈದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬುದು ಪೊಲೀಸರ ತನಿಖೆ ವೇಳೆ ಬಹಿರಂಗಗೊಂಡಿದೆ.

ಅಂಕೋಲಾ(Ankola) ಮೂಲದ ಉಷಾ ಸುಕ್ರುಗೌಡ (24) ಬುಧವಾರ ಮುಂಜಾನೆ ತನ್ನ ಮನೆಯಲ್ಲಿಯೇ ಹತ್ಯೆಗೀಡಾಗಿದ್ದಳು(Murder). ಅವಳ ಪ್ರಿಯಕರ ಎನ್ನಲಾದ ತಮಿಳುನಾಡಿನ(Tamil Nadu) ಕೃಷ್ಣಗಿರಿ ಮೂಲದ ಗೋಪಾಲಕೃಷ್ಣ (38) ಎಂಬಾತನೂ ಸಹ ಅವರ ಮನೆಯಿಂದ ಸುಮಾರು 10 ಕಿ.ಮೀ. ದೂರದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು ಹಲವು ಸಂದೇಹಗಳಿಗೆ ಕಾರಣವಾಗಿತ್ತು.

ಉಷಾ ಗೌಡ 2 ವರ್ಷದ ಹಿಂದೆ ವಿಜಯಪುರದಲ್ಲಿ(Vijayapura) ಗೌರವ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದಳು. ಈ ವೇಳೆ ಶಿಕ್ಷಣ ಸಂಸ್ಥೆಯ ಮುಖಸ್ಥನ ಜೊತೆ ಆತ್ಮೀಯ ಸಂಬಂಧ ಹೊಂದಿದ್ದಳೆನ್ನಲಾಗಿದೆ. ಕೊರೋನಾದಿಂದ(Coronavirus) ಶಾಲೆ ಸ್ಥಗಿತಗೊಂಡಾಗ ಬೆಂಗಳೂರಿಗೆ ಬಂದು ಬೇರೆ ಕೆಲಸಕ್ಕೆ ಸೇರಿಕೊಂಡಿದ್ದಳು. ಅ. 24ರಂದು ಯುವತಿ ಉಷಾಗೌಡ ತನ್ನ 24ನೇ ವರ್ಷದ ಹುಟ್ಟುಹಬ್ಬ(Birthday) ಆಚರಿಸಿಕೊಂಡಿದ್ದಳು. ಈ ಕಾರ್ಯಕ್ರಮಕ್ಕೆ ಗೌರವ ಶಿಕ್ಷಕಿಯಾಗಿ(Teacher) ಕಾರ್ಯನಿರ್ವಹಿಸುತ್ತಿದ್ದಾಗ ಪರಿಚಿತನಾದ ವಿಜಯಪುರ ಮೂಲದ ವ್ಯಕ್ತಿಯು ಬಂದಿದ್ದ. ಆತ ಆತ್ಮೀಯತೆಯಿಂದ ಚಿನ್ನದ ಉಂಗುರವನ್ನು ಉಷಾ ಗೌಡಗೆ ತೊಡಿಸಿದ್ದ ಎನ್ನಲಾಗಿದೆ.

ಹೊಸಕೋಟೆ: ಪ್ರೇಯಸಿ ಹತ್ಯೆಗೈದು ಆತ್ಮಹತ್ಯೆಗೆ ಶರಣಾದ ಪ್ರಿಯಕರ, ಕಾರಣ?

ವಾಟ್ಸ್‌ಆ್ಯಪ್‌ ಸ್ಟೇಟಸ್‌ಗೆ?

ಉಂಗುರ ತೊಡಿಸುವಿಕೆಯ ಫೋಟೋ ಉಷಾ ಗೌಡ ತನ್ನ ವಾಟ್ಸ್‌ಆ್ಯಪ್‌ ಸ್ಟೇಟಸ್‌ನಲ್ಲಿ ಹಾಕಿಕೊಂಡಿದ್ದಳು. ಇದನ್ನೇ ತಪ್ಪಾಗಿ ತಿಳಿದ ಗೋಪಾಲಕೃಷ್ಣ ಅವಳು ಬೇರೊಬ್ಬ ಯುವಕನ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾಳೆ ಎಂದು ತಪ್ಪಾಗಿ ತಿಳಿದುಕೊಂಡಿದ್ದಾನೆ. ಇದಲ್ಲದೇ ದೀಪಾವಳಿಗೆ ಊರಿಗೆ ಹೋಗಲು ಅವಳು ಬಸ್‌ ಟಿಕೆಟ್‌ ಬುಕ್‌ ಮಾಡಿದ ವಿಚಾರವೂ ಆತನಿಗೆ ತಿಳಿದಿತ್ತು. ಇವಳು ಇನ್ನು ನನಗೆ ಸಿಗೋದಿಲ್ಲ. ನಿಶ್ಚಿತಾರ್ಥ ಮಾಡಿಕೊಂಡಿದ್ದಾಳೆ. ಊರಿಗೆ ಹೋದವಳು ಮತ್ತೆ ಬರಲಾರಳು ಎಂದು ತಿಳಿದು ಅವಳನ್ನು ಕತ್ತು ಹಿಸುಕಿ ಹತ್ಯೆಗೈದು, ತಾನೂ 10 ಕಿ.ಮೀ. ದೂರ ತೆರಳಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸ್‌ ತನಿಖೆಯಲ್ಲಿ ತಿಳಿದು ಬಂದಿದೆ.

ಮೃತ ಗೋಪಾಲಕೃಷ್ಣನ (ಸಿಡಿಆರ್‌) ಕಾಲ್‌ ರೆಕಾರ್ಡನ್ನು ಪೊಲೀಸರು ಪರಿಶೀಲನೆ ನಡೆಸಿದ್ದರು. ಗೋಪಾಲಕೃಷ್ಣ ಆತ್ಮ​ಹ​ತ್ಯೆಗೂ ಮುನ್ನ ತನ್ನ ಸ್ನೇಹಿತನಿಗೆ ಕರೆ ಮಾಡಿ ಸುದೀರ್ಘವಾಗಿ ಮಾತನಾಡಿದ್ದ. ಸ್ನೇಹಿತನನ್ನು ವಿಚಾರಣೆಗೆ ಒಳಪಡಿಸಿದಾಗ ಗೋಪಾಲಕೃಷ್ಣ, ಉಷಾ ಗೌಡಳ ವಾಟ್ಸ್‌​ಆ್ಯಪ್‌(WhatsApp) ಸ್ಟೇಟ​ಸ್‌​ನಲ್ಲಿ(Status) ಉಂಗುರ ತೊಡಿಸಿದ್ದ ಫೋಟೋ ನೋಡಿ ಬಹಳ ವಿಚಲಿತನಾಗಿದ್ದ. ಅವಳ ನಿಶ್ಚಿತಾರ್ಥವಾಗಿದೆ. ಅವಳ ಬಳಿ ಹೋಗಿ ಆಗಿರುವ ನಿಶ್ಚಿತಾರ್ಥ(Engagement) ರದ್ದುಪಡಿಸಿ, ನನ್ನೊಂದಿಗೆ ಜೀವನ ಸಾಗಿಸುವಂತೆ ಕೇಳಿಕೊಳ್ಳುತ್ತೇನೆ ಎಂದು ಹೇಳಿದ್ದ. ಆದರೆ ಬೆಳಗ್ಗೆ ನೋಡಿದರೆ ಆತ ಮೃತಪಟ್ಟಿರುವ(Death) ವಿಷಯ ಗೊತ್ತಾಗಿದೆ ಎಂದು ಪೊಲೀಸರ ಎದುರು ಹೇಳಿಕೊಂಡಿದ್ದಾನೆ.

ಉಷಾಳ ಮರಣೋತ್ತರ ಪರೀಕ್ಷೆಯ(Post Mortem) ಬಳಿಕ ಗುರುವಾರ ಮಧ್ಯಾಹ್ನ ಕುಟುಂಬಸ್ಥರು ಬೆಂಗಳೂರಿನಿಂದ ತೆರಳಿದ್ದಾರೆ. ಶುಕ್ರವಾರ ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ(Funeral) ನಡೆಯಲಿದೆ.

ಸಿಪಿಐ ಜಯರಾಜ್‌ ಕಳಕಳಿ:

ಮೃತ ಯುವತಿಯ ಕುಟುಂಬದವರು ಮುಗ್ಧ ಹಾಗೂ ಬಡವರು. ಬೆಂಗಳೂರಿನಲ್ಲಿ ಮಗಳು ಮೃತಪಟ್ಟಿದ್ದಾಳೆ ಎಂಬ ಆಘಾತಕಾರಿ ವಿಷಯದಿಂದ ಇವರಿಗೆ ಏನು ಮಾಡಬೇಕು? ಎಂದು ತೋಚದಿದ್ದಾಗ ಅವರ ನೆರವಿಗೆ ಬಂದವರು ಸಿಐಡಿ ಇನ್ಸ್‌ಪೆ​ಕ್ಟರ್‌ ಎಚ್‌. ಜಯರಾಜ್‌. ಈ ಹಿಂದೆ ಅಂಕೋಲಾ ಠಾಣೆಯಲ್ಲಿ ಪಿಎಸ್‌ಐ ಆಗಿ ಕಾರ್ಯ ನಿರ್ವಹಿಸಿದ್ದ ಅವರು, ಮೃತ ಕುಟುಂಬದವರಿಗೆ ಪ್ರತಿಯೊಂದು ಹಂತದಲ್ಲೂ ಸ್ಪಂದಿಸಿ ಮಾನವೀಯ ಕಳಕಳಿ ಮೆರೆದಿದ್ದಾರೆ.
 

click me!