Latest Videos

ಬೆಂಗಳೂರು: ಬೈಕ್‌ ಬಿಟ್ಟು ಬಂದಿದ್ದಕ್ಕೆ ಮಗನನ್ನೇ ಕೊಂದ ತಂದೆ..!

By Kannadaprabha NewsFirst Published Jun 11, 2024, 8:39 AM IST
Highlights

ಅಂಜನ್ ಕುಮಾರ್  ಕೊಲೆಯಾದ ಮಗ. ವೆಂಕಟೇಶ್ ಆರೋಪಿ. ಆರೋಪಿಯನ್ನು ಅನ್ನಪೂರ್ಣೇಶ್ವರಿನಗರ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.

ಬೆಂಗಳೂರು(ಜೂ.11):  ದ್ವಿಚಕ್ರ ವಾಹನ ಎಲ್ಲೋ ಬಿಟ್ಟು ಮನೆಗೆ ಬಂದಿದ್ದ ವಿಚಾರಕ್ಕೆ ಅಪ್ಪ-ಮಗನ ನಡುವೆ ಜಗಳ ನಡೆದು, ತಂದೆ ಚಾಕುವಿನಿಂದ ಮಗನ ಎದೆಗೆ ಇರಿದು ಹತ್ಯೆ ಮಾಡಿರುವ ಘಟನೆ 'ಡಿ' ಗ್ರೂಪ್‌ ಲೇಔಟ್‌ನ ಮುದ್ದಿನಪಾಳ್ಯದಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ.

ಅಂಜನ್ ಕುಮಾರ್ (27) ಕೊಲೆಯಾದ ಮಗ. ವೆಂಕಟೇಶ್ (57) ಆರೋಪಿ. ಆರೋಪಿಯನ್ನು ಅನ್ನಪೂರ್ಣೇಶ್ವರಿನಗರ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.

ಬೆಂಗಳೂರು: ಚೀಟಿ ಹಣಕ್ಕಾಗಿ ಸ್ನೇಹಿತನನ್ನು ತುಂಡು ತುಂಡಾಗಿ ಕತ್ತರಿಸಿ ರಾಜಕಾಲುವೆಗೆ ಎಸೆದ ನರಹಂತಕ

ಏನಿದು ಘಟನೆ?: 

ವೆಂಕಟೇಶ್ ತನ್ನ ಕುಟುಂಬದ ಜೊತೆಗೆ ಮುದ್ದಿನಪಾಳ್ಯದಲ್ಲಿ ನೆಲೆಸಿದ್ದು, ರಿಯಲ್ ಎಸ್ಟೇಟ್ ಟ್ರೋಕ‌ರ್ ಕೆಲಸ ಮಾಡು ತ್ತಿದ್ದರು. ಇವರ ಮಗಳು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಅಂಜನ್ ಕುಮಾರ್ ಪಿಯುಸಿ ವ್ಯಾಸಂಗವನ್ನು ಮೊಟಕು ಗೊಳಿಸಿದ್ದು ಮನೆಯಲ್ಲಿಯೇ ಇರುತ್ತಿದ್ದನು. ಭಾನುವಾರ ಸಂಜೆ ವೆಂಕಟೇಶ್, ಮಗಳ ದ್ವಿಚಕ್ರ ವಾಹನವನ್ನು ತೆಗೆದುಕೊಂಡು ಹೊರಗೆ ಹೋಗಿದ್ದು, ರಾತ್ರಿ ಮನೆಗೆ ಬಂದಾಗ ದ್ವಿಚಕ್ರ ವಾಹನ ತಂದಿರಲಿಲ್ಲ.

ಕಾಪಾಡಿ, ಕಾಪಾಡಿ ಅಂತ ಬೇಡಿಕೊಂಡ್ರೂ ಯಾರೂ ಬರಲಿಲ್ಲ; ನಡುರಸ್ತೆಯಲ್ಲಿ ಹೆಣವಾದ ಬ್ಯಾಂಕ್ ಮಹಿಳಾ ಉದ್ಯೋಗಿ 

ಹೆಲ್ಮೆಟ್‌ನಿಂದ ಹಲ್ಲೆ ಮಾಡಿದ್ದಕ್ಕೆ ಚಾಕು ಇರಿದ: 

ಬೈಕ್ ವಿಚಾರವಾಗಿ ಸೋಮವಾರ ಬೆಳಗ್ಗೆ ಅಂಜನ್ ಕುಮಾರ್, ತಂದೆ ವೆಂಕಟೇಶ್‌ನನ್ನು ಪ್ರಶ್ನೆ ಮಾಡಿದ್ದಾನೆ. ಆಗ ವೆಂಕಟೇಶ್ ಎಲ್ಲೋ ನಿಲ್ಲಿಸಿದ್ದೇನೆ. ಈಗ ತರುತ್ತೇನೆ ಎಂದು ಹೇಳಿದ್ದಾರೆ. ಈ ವಿಚಾರಕ್ಕೆ ಅಪ್ಪ- ಮಗನ ನಡುವೆ ಮಾತಿಗೆ ಮಾತು ಬೆಳೆದು. ಕೋಪಗೊಂಡ ಅಂಜನ್ ಕುಮಾರ್ ಹೆಲೈಟ್ ನಿಂದ ತಂದೆ ಮೇಲೆ ಹಲ್ಲೆ ಮಾಡಿದ್ದಾನೆ. ಇದರಿಂದ ಕೋಪೋದ್ರಿಕ್ತರಾದ ವೆಂಕಟೇಶ್, ಅಡುಗೆ ಮನೆಗೆ ತೆರಳಿ ಚಾಕು ತಂದು ಮಗನ ಎಡಭಾಗದ ಎದೆಗೆ ಇರಿದಿದ್ದಾರೆ. ಈ ವೇಳೆ ಅಂಜನ್ ಕುಮಾ‌ರ್ ತೀವ್ರ ರಕ್ತಸ್ರಾವವಾಗಿ ಕುಸಿದು ಬಿದ್ದಿದ್ದಾನೆ. ಕೂಡಲೇ ಆತನನ್ನು ಆಸ್ಪತ್ರೆಗೆ ಕರೆದೊಯುವಾಗ ಮಾರ್ಗ ಮಧ್ಯೆಯೇ ಕೊನೆಯುಸಿರೆಳೆದಿದ್ದಾನೆ.

ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ, ಆರೋಪಿ ವೆಂಕಟೇಶ್‌ನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಅನ್ನಪೂರ್ಣೇಶ್ವರಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

click me!