ಹಾಸನ: ಸೈನಿಕ ರಾಕೇಶ್ ತಾಯಿ ಹತ್ಯೆ ಕೇಸ್‌, ಚಿನ್ನಾಭರಣಕ್ಕಾಗಿ ಕೊಂದಿದ್ದ ಹಂತಕ ಅರೆಸ್ಟ್‌

By Girish GoudarFirst Published Sep 22, 2022, 12:51 PM IST
Highlights

ಮಹಿಳೆ ಮೈ ಮೇಲಿದ್ದ ಒಡವೆಗಾಗಿ ಕೊಲೆ ಮಾಡಿ ಜೋಳದ ಹೊಲದಲ್ಲಿ ಬಿಸಾಡಿದ್ದ ಆರೋಪಿ ಬಂಧನ  

ಹಾಸನ(ಸೆ.22):  ಹಾಸನದ ಸೈನಿಕ ರಾಕೇಶ್ ತಾಯಿ ನಿಗೂಢ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ತಿಂಗಳ ಬಳಿಕ ಪತ್ತೆಯಾಗಿದ್ದ ಮೃತದೇಹದ ಸುಳಿವು ಹಿಡಿದ ಪೊಲೀಸರು ಪ್ರಕರಣವನ್ನ ಬೇಧಿಸಿದ್ದಾರೆ. ಮಹಿಳೆ ಮೈ ಮೇಲಿದ್ದ ಒಡವೆಗಾಗಿ ಕೊಲೆ ಮಾಡಿ ಜೋಳದ ಹೊಲದಲ್ಲಿ ಬಿಸಾಡಿದ್ದ ಆರೋಪಿಯನ್ನ ಬಂಧಿಸಲಾಗಿದೆ. ನಾರಾಯಣಪುರ ಗ್ರಾಮದ ಮಧುರಾಜ್ ಬಂಧಿತ ಆರೋಪಿಯಾಗಿದ್ದಾನೆ. 

ಹಾಸನ ತಾಲೂಕಿನ ನಾರಾಯಣಪುರ ಗ್ರಾಮದ ಸೈನಿಕ ರಾಕೇಶ್ ತಾಯಿ ರತ್ಮಮ್ಮ ಜು. 20 ರಿಂದ ಕಾಣೆಯಾಗಿದ್ದರು. ದನ ಮೇಯಿಸಲು ಹೋಗಿ ಕಾಣೆಯಾಗಿದ್ದ ರತ್ಮಮ್ಮ ಮೃತದೇಹ ಸೆ. 12 ರಂದು ಪತ್ತೆಯಾಗಿತ್ತು. ನಾರಾಯಣಪುರ ಗ್ರಾಮದ ಜಗದೀಶ್ ಜೋಳದ ಹೊಲದ ಮಧ್ಯೆ ಅಸ್ತಿ ಪಂಜರವೊಂದು ಸಿಕ್ಕಿತ್ತು. ಸಂಪೂರ್ಣ ದೇಹ ಕೊಳೆತು ಮೂಳೆಗಳು ಮಾತ್ರ ಪತ್ತೆಯಾಗಿದ್ದವು. ಅಸ್ತಿಪಂಜರದ ಜೊತೆಗಿದ್ದ ಬಟ್ಟೆಗಳ ಮಾಹಿತಿ ಆದರಿಸಿ ಅದು ರತ್ಮಮ್ಮನ ಕಳೆಬರ ಅಂತ ಕುಟುಂಬ ಸದಸ್ಯರು ಗುರುತು ಹಿಡಿದಿದ್ದರು. 

ಪತ್ನಿಯನ್ನು ಕೊಲೆಗೈದ ಪತಿ, ಅಪ್ಪನ ಅನೈತಿಕ ಸಂಬಂಧ ಬಿಟ್ಟಿಟ್ಟ ಮಗಳು

ಪ್ರಕರಣದ ತನಿಖೆ ಬೆನ್ನುಬಿದ್ದ ಪೊಲೀಸರು ಕುಟುಂಬ ಸದಸ್ಯರ ಆರೋಪ ಆಧರಿಸಿ ಎ. ಗುಡುಗನಹಳ್ಲಿಯ ಮಹೇಶ್ ನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಆದರೆ ಊರಿನಲ್ಲಿ ಇದ್ದುಕೊಂಡೇ ತನ್ನ ಮೇಲೆ ಅನುಮಾನ ಬಾರದಂತೆ ತಂತ್ರ ಹೆಣೆದಿದ್ದ ಹಂತಕ ಕಡೆಗೂ ಸೆರೆಯಾಗಿದ್ದಾನೆ. 

ಚಿನ್ನಾಭರಣಕ್ಕಾಗಿ ಮಹಿಳೆ ಕೊಂದು ಒಡವೆ ದೋಚಿದ್ದ ಹಂತಕ

ಕೊಲೆ ಆರೋಪ‌ ತನ್ನ ಮೇಲೆ ಬಾರದಂತೆ ಮಹೇಶ್ ವಿರುದ್ಧ ವದಂತಿ ಹರಿಬಿಟ್ಟು ಪಾತಕಿ ಆರಾಮಾಗಿದ್ದ, ಮಧುರಾಜ್ ವದಂತಿಯಿಂದ ರತ್ನಮ್ಮ ಕುಟುಂಬ ಮಹೇಶ್ ವಿರುದ್ಧವೇ ಆರೋಪ ಮಾಡಿದ್ದರು. ಆದರೆ ಪೊಲೀಸರ ಚಾಣಾಕ್ಷತನದಿಂದ ಕೊಲೆ ಕೇಸ್ ಬಯಲಲಾಗಿದೆ. 

ಮಹಿಳೆ ಕೊಂದು ಚಿನ್ನ ದೋಚಿ ಒಡವೆ ಅಡವಿಟ್ಟಿದ್ದ ಹಂತಕ ಮಧುರಾಜ್‌ನನ್ನ ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಸೈನಿಕ ರಾಕೇಶ್ ತಾಯಿ ರತ್ಮಮ್ಮ ನಾಪತ್ತೆ ಕೇಸ್ ಎರಡು ತಿಂಗಳ ಬಳಿಕ ಬಯಲಾಗಿದೆ. ಈ ಸಂಬಂಧ ಶಾಂತಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸಿಪಿಐ ಸುರೇಶ್ ನೇತೃತ್ವದ ತನಿಖಾ ತಂಡ ಕೊಲೆ ಕೇಸ್ ಬಯಲು ಮಾಡಿದೆ. 
 

click me!