ಕಾರಿನಲ್ಲಿ ಮಗನನ್ನು ಕೂಡಿಸಿ ಪತ್ನಿ ಕೊಂದ ಟೆಕ್ಕಿ!| ಬಳಿಕ ಕೋಲ್ಕತಾಗೆ ತೆರಳಿ ಅತ್ತೆಯ ಹತ್ಯೆ| ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದ| 67 ಪುಟಗಳ ಆತ್ಮಹತ್ಯೆ ಪತ್ರ!
ಬೆಂಗಳೂರು(ಜೂ.24): ತನ್ನ 10 ವರ್ಷದ ಪುತ್ರನನ್ನು ಕಾರಿನಲ್ಲಿ ಕೂರಿಸಿ ಬಂದು ಪತ್ನಿಯನ್ನು ಹತ್ಯೆಗೈದು ಕೊಲ್ಕತಾಗೆ ಸಾಫ್ಟ್ವೇರ್ ಉದ್ಯೋಗಿ ತೆರಳಿದ್ದ ಎಂಬ ಸಂಗತಿ ಬೆಳಕಿಗೆ ಬಂದಿದೆ.
ಮಹದೇವಪುರ ಸಮೀಪದ ಮೆಟ್ರೋ ಪೊಲಿಸ್ ಅಪಾರ್ಟ್ಮೆಂಟ್ನಲ್ಲಿ ನೆಲೆಸಿದ್ದ ಪತ್ನಿ ಶಿಲ್ಪಾ (40) ಅವರನ್ನು ಶನಿವಾರ ಹತ್ಯೆಗೈದಿದ್ದ ಸಾಫ್ಟ್ವೇರ್ ಅಮಿತ್ ಅಗರ್ವಾಲ್, ಬಳಿಕ ಕೋಲ್ಕತಾಗೆ ತೆರಳಿ ಸೋಮವಾರ ತನ್ನ ಅತ್ತೆ ಲಲಿತಾ ಅವರನ್ನು ಗುಂಡಿಟ್ಟು ಕೊಂದು ಆತ್ಮಹತ್ಯೆ ಶರಣಾಗಿದ್ದ.
ಈ ಘಟನೆ ಸಂಬಂಧ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ವೈಟ್ಫೀಲ್ಡ್ ಡಿಸಿಪಿ ಎಂ.ಎನ್.ಅನುಚೇತ್ ಅವರು, 15 ವರ್ಷಗಳ ಹಿಂದೆ ಪಶ್ಚಿಮ ಬಂಗಾಳ ಮೂಲದ ಶಿಲ್ಪಾ ಮತ್ತು ಆರೋಪಿ ಅಮಿತ್ ವಿವಾಹವಾಗಿದ್ದರು. ಈ ದಂಪತಿಗೆ 10 ವರ್ಷದ ಪುತ್ರನಿದ್ದಾನೆ ಎಂದರು.
ಪತಿ ಪ್ರತ್ಯೇಕವಾಗಿದ್ದು, ಪುತ್ರನ ಜತೆಗೆ ಶಿಲ್ಪಾ ನೆಲೆಸಿದ್ದರು. ಭಾನುವಾರ ರಾತ್ರಿ ಪತ್ನಿ ಮನೆಗೆ ಬಂದಿರುವ ಅಮಿತ್, ರಾತ್ರಿ 10ರಲ್ಲಿ ಮಗನನ್ನು ಕರೆತಂದು ಕಾರಿನಲ್ಲಿ ಕೂರಿಸಿದ್ದಾನೆ. ಆನಂತರ ಫ್ಲ್ಯಾಟ್ಗೆ ತೆರಳಿ ಹೊರ ನಡೆದಿದ್ದಾನೆ. ಈ ಅವಧಿಯಲ್ಲಿ ಶಿಲ್ಪಾ ಅವರನ್ನು ಹತ್ಯೆ ನಡೆದಿರುವ ಬಗ್ಗೆ ಅನುಮಾನಗಳಿವೆ ಎಂದು ಡಿಸಿಪಿ ಹೇಳಿದ್ದಾರೆ.
ಬೆಂಗಳೂರಲ್ಲಿ ಪತ್ನಿ, ಕೋಲ್ಕತಾದಲ್ಲಿ ಅತ್ತೆ ಕೊಂದು ಆತ್ಮಹತ್ಯೆ ಮಾಡಿಕೊಂಡ!
ಅಪಾರ್ಟ್ಮೆಂಟ್ಗೆ ಅಮಿತ್ ಬಂದು ಹೋಗಿರುವ ದೃಶ್ಯಾವಳಿಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸಿಕ್ಕಿವೆ. ಕೋವಿಡ್-19 ಪರೀಕ್ಷೆ ನಡೆಸಿ ಆ ನಂತರ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಅನಂತರ ಮೃತರ ಕುಟುಂಬದವರಿಗೆ ಪಾರ್ಥಿವ ಶರೀರವನ್ನು ಹಸ್ತಾಂತರ ಮಾಡಲಾಗುತ್ತದೆ. ಈ ಬಗ್ಗೆ ಹೆಚ್ಚಿನ ತನಿಖೆ ಕೈಗೊಳ್ಳುವ ಸಲುವಾಗಿ ಕೋಲ್ಕತಾಗೆ ವಿಶೇಷ ತಂಡ ತೆರಳಲಿದೆ ಎಂದು ಡಿಸಿಪಿ ಅನುಚೇತ್ ಮಾಹಿತಿ ನೀಡಿದ್ದಾರೆ.
67 ಪುಟಗಳ ಆತ್ಮಹತ್ಯೆ ಪತ್ರ!
ಎರಡು ಕೊಲೆ ಮಾಡಿ, ಆತ್ಮಹತ್ಯೆಗೆ ಶರಣಾಗುವ ಮುನ್ನ ಅಮಿತ್ ಅಗರ್ವಾಲ್ 67 ಪುಟಗಳ ಆತ್ಮಹತ್ಯೆ ಪತ್ರವನ್ನು ಬರೆದಿದ್ದ. ಒಂದು ಪುಟ ಮಾತ್ರ ಕೈಬರಹದಲ್ಲಿದ್ದರೆ, ಉಳಿದ 66 ಪುಟಗಳನ್ನು ಟೈಪ್ ಮಾಡಲಾಗಿತ್ತು.
ಅಕ್ಕನಿಗೆ ಹೆಚ್ಚಿನ ಬೆಲೆಯ ಮೊಬೈಲ್ ಕೊಡಿಸಿದಕ್ಕೆ ತಮ್ಮ ಆತ್ಮಹತ್ಯೆ
ಭಾಮೈದನ ಹತ್ಯೆಗೂ ಸ್ಕೆಚ್
ಅತ್ತೆ, ಮಾವ ಮಾತ್ರವಲ್ಲದೇ ಪತ್ನಿಯ ಸೋದರನನ್ನೂ ಕೊಲೆ ಮಾಡಲು ಅಮಿತ್ ಉದ್ದೇಶಿಸಿದ್ದ. ಗುರುಗ್ರಾಮದಲ್ಲಿ ನೆಲೆಸಿರುವ ಭಾಮೈದನಿಗೆ ಕೋಲ್ಕತಾಗೆ ಬರುವಂತೆ ಸೂಚಿಸಿದ್ದ. ಆತ ಬಾರದ ಕಾರಣ ಸಾವಿನಿಂದ ಪಾರಾಗಿದ್ದಾರೆ. ಮತ್ತೊಂದೆಡೆ ಮಾವನಿಗೂ ಅಮಿತ್ ಗುಂಡು ಹಾರಿಸಿದ್ದ. ಅವರು ಸ್ವಲ್ಪದರಲ್ಲೇ ತಪ್ಪಿಸಿಕೊಂಡು ಬಾಗಿಲು ಹಾಕಿಕೊಂಡರು ಎಂದು ಕೋಲ್ಕತಾ ಪೊಲೀಸರು ತಿಳಿಸಿದ್ದಾರೆ.