ಮಾತೃತ್ವ- ಗುರುತ್ವದ ಸಂಗಮದಿಂದ ಲೋಕಕಲ್ಯಾಣ: ರಾಘವೇಶ್ವರ ಶ್ರೀ

By Kannadaprabha NewsFirst Published Dec 3, 2022, 8:06 AM IST
Highlights

ಮಾತೃತ್ವ ಹಾಗೂ ಗುರುತ್ವದ ಸಮಾಗಮದಿಂದಷ್ಟೇ ಲೋಕ ಕಲ್ಯಾಣ ಸಾಧ್ಯ ಎಂದು ಹೊಸನಗರ ರಾಮಚಂದ್ರಾಪುರ ಮಠಾಧೀಶ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದ್ದಾರೆ.

ಕೊಲ್ಲೂರು (ಡಿ.3) : ಮಾತೃತ್ವ ಹಾಗೂ ಗುರುತ್ವದ ಸಮಾಗಮದಿಂದಷ್ಟೇ ಲೋಕ ಕಲ್ಯಾಣ ಸಾಧ್ಯ ಎಂದು ಹೊಸನಗರ ರಾಮಚಂದ್ರಾಪುರ ಮಠಾಧೀಶ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದ್ದಾರೆ. ಕೊಲ್ಲೂರು ಕ್ಷೇತ್ರದ ಪ್ರಧಾನ ಅರ್ಚಕ ಶ್ರೀಧರ ಅಡಿಗ ಅವರ ನಿವಾಸದಲ್ಲಿ ನಡೆದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಂದ್ರ ಭಾರತೀ ಮಹಾಸ್ವಾಮೀಜಿಯವರ ಆರಾಧನಾ ಮಹೋತ್ಸವ ಮತ್ತು ಪಾಂಡಿತ್ಯ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.

ಗುರುವಿಗೆ ಅಳಿವಿಲ್ಲ. ಗುರು ತ್ರಿಮೂರ್ತಿ ಸ್ವರೂಪ ಎಂದು ನಾವು ಕಾಣಬೇಕು. ತ್ರಿಮೂರ್ತಿಗೂ ಅತೀತವಾದ, ಸೃಷ್ಟಿ- ಸ್ಥಿತಿಗಳನ್ನು ಮೀರಿ ನಿಂತ ಗುರುತ್ವ ಶಕ್ತಿ ಗುರು. ಅವರ ನಿರಂತರ ಶಕ್ತಿಸ್ವರೂಪವನ್ನು ನೆನಪಿಸಿಕೊಳ್ಳುವ ದಿನವೇ ಆರಾಧನೆ. ಲೌಕಿಕವಾಗಿ ಮಾಡುವ ಶ್ರಾದ್ಧಕಿಂತ ಆರಾಧನೆ ಭಿನ್ನ. ಗುರುವಿನ ನಿತ್ಯ ಶಾಶ್ವತತ್ವವನ್ನು ಪರಿಭಾವಿಸುವ ದಿನ ಎಂದು ಬಣ್ಣಿಸಿದರು.

ಕಾಸರಗೋಡಿನ ಸ್ಥಿತಿ ದಕ್ಷಿಣ ಕನ್ನಡಕ್ಕೂ ಬರಬಹುದು: ರಾಘವೇಶ್ವರ ಶ್ರೀ

ಗುರುವಿನ ಅನುಷ್ಠಾನ, ವಿದ್ಯೆ, ವೇದ, ತತ್ವ, ಶಾಸ್ತ್ರವನ್ನು ಕರೆದು ಗೌರವಿಸುವುದು ಆರಾಧನೆಯ ವಿಶೇಷ. ವೇದಮೂರ್ತಿಗಳು ವಿಶ್ವಮೂರ್ತಿಗಳ ಸ್ವರೂಪ. ಎಲ್ಲ ದೇವತೆಗಳು ಅಲ್ಲಿರುತ್ತಾರೆ ಎಂಬ ನಂಬಿಕೆಯಿಂದ ಅವರನ್ನು ಪೂಜಿಸಿ ಗೌರವಿಸಲಾಗಿದೆ. ಪಾಂಡಿತ್ಯದ ಪುರಸ್ಕಾರದ ಮೂಲಕ ಗುರುಗಳನ್ನು ನೆನಪಿಸಲಾಗಿದೆ ಎಂದರು. ವಾರಣಾಸಿ ರಾಮಕೃಷ್ಣ ಭಟ್‌ ಅವರಿಗೆ ಶ್ರೀ ರಾಘವೇಂದ್ರ ಭಾರತೀ ಪಾಂಡಿತ್ಯ ಪುರಸ್ಕಾರ ನೀಡಿ ಗೌರವಿಸಲಾಯಿತು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ರಾಮಕೃಷ್ಣ ಭಟ್ಟ, ಪುರಸ್ಕಾರ ಆಧುನಿಕ ಕಾಲಘಟ್ಟದಲ್ಲಿ ಸಾಮಾನ್ಯ. ಆದರೆ ಇಂದಿನ ಅನುಗ್ರಹಪೂರ್ವಕ ಪುರಸ್ಕಾರ ಜೀವಮಾನದ ಅವಿಸ್ಮರಣೀಯ ಘಟನೆ ಎಂದರು. ವಿಶ್ವೇಶ್ವರ ಅಡಿಗ ದಂಪತಿ ಸಭಾಪೂಜೆ ನೆರವೇರಿಸಿದರು. ಕೊಲ್ಲೂರು ಕ್ಷೇತ್ರದ ಪ್ರಧಾನ ಅರ್ಚಕ ಶ್ರೀಧರ ಅಡಿಗ ಮಾತನಾಡಿದರು. ರಾಘವೇಶ್ವರ ಶ್ರೀಗಳು ಸಂಕಲ್ಪಿಸಿದ ಪಂಚಕೋಟಿ ಪಂಚಾಕ್ಷರಿ ಜಪದ ರುದ್ರಾಕ್ಷಿ ಮಾಲೆಗಳನ್ನು ಲೋಕಾರ್ಪಣೆ ಮಾಡಲಾಯಿತು. ಶೋಭಕೃತ್‌ ನಾಮ ಸಂವತ್ಸರದ ಧಾರ್ಮಿಕ ಪಂಚಾಂಗವನ್ನು ಶ್ರೀಗಳು ಈ ಸಂದರ್ಭದಲ್ಲಿ ಲೋಕಾರ್ಪಣೆ ಮಾಡಿದರು.

Uttara Kannada: ಸದ್ಯದಲ್ಲೇ ಪರಂಪರಾ ವಿಶ್ವವಿದ್ಯಾನಿಲಯ ಸ್ಥಾಪನೆ: ರಾಘವೇಶ್ವರ ಶ್ರೀ

ಮಿತ್ತೂರು ಕೇಶವ ಭಟ್‌, ಶ್ರೀಮಠದ ಲೋಕಸಂಪರ್ಕಾಧಿಕಾರಿ ಹರಿಪ್ರಸಾದ್‌ ಪೆರಿಯಾಪು ಪ್ರಾಸ್ತಾವಿಕವಾಗಿ ಮಾತನಾಡಿದರು. ದಾ.ನ.ಶ್ರೀನಿವಾಸ ಭಟ್‌ ಪ್ರಶಸ್ತಿಪತ್ರ ವಾಚಿಸಿದರು. ಹವ್ಯಕ ಮಹಾಮಂಡಲ ಅಧ್ಯಕ್ಷ ಆರ್‌.ಎಸ್‌.ಹೆಗಡೆ ಹರಗಿ, ಪ್ರಧಾನ ಕಾರ್ಯದರ್ಶಿ ಪಿದಮಲೆ ನಾಗರಾಜ ಭಟ್‌, ಉಪಾಧ್ಯಕ್ಷೆ ಶೈಲಜಾ ಭಟ್‌, ಮಾತೃತ್ವಮ್‌ ಅಧ್ಯಕ್ಷೆ ಈಶ್ವರಿ ಬೇರ್ಕಡವು ಮತ್ತಿತರರು ಉಪಸ್ಥಿತರಿದ್ದರು.

click me!