ಬುರುಡೆ ಗ್ಯಾಂಗ್ನ ಮಾಸ್ಕ್ಮ್ಯಾನ್ ಚಿನ್ನಯ್ಯನನ್ನು ಎಸ್ಐಟಿ ಪೊಲೀಸರು ಬಂಧಿಸಿದ್ದಾರೆ. ಆತನನ್ನು ಬೆಳ್ತಂಗಡಿ ನ್ಯಾಯಾಲಯ 10 ದಿನಗಳ ಕಾಲ ಎಸ್ಐಟಿ ಕಸ್ಟಡಿಗೆ ನೀಡಿದೆ.
ಮಾಸ್ಕ್ ಹಾಕೋಂಡು ಅನಾಮಿಕನ ವೇಷದಲ್ಲಿ ತಿರುಗಾಡುತ್ತಿದ್ದ ಬುರುಡೆ ಗ್ಯಾಂಗ್ನ ಪ್ರಮುಖ ಸದಸ್ಯ ಚಿನ್ನಯ್ಯನನ್ನು 10 ದಿನಗಳ ಎಸ್ಐಟಿ ಕಸ್ಟಡಿಗೆ ನೀಡಲಾಗಿದೆ. ಮಾಸ್ಕ್ ಮ್ಯಾನ್ ಅಲಿಯಾಸ್ ಚಿನ್ನಯ್ಯನನ್ನು ಬೆಳ್ತಂಗಡಿ ನ್ಯಾಯಾಲಯವೂ 10 ದಿನಗಳ ಕಾಲ ವಿಚಾರಣೆಗಾಗಿ ಎಸ್ಐಟಿ ವಶಕ್ಕೆ ನೀಡಿದೆ. ಇಂದು ಮುಂಜಾನೆಯಷ್ಟೇ ಮಾಸ್ಕ್ ಮ್ಯಾನ್ ಚಿನ್ನಯ್ಯನನ್ನು ಎಸ್ಐಟಿ ಪೊಲೀಸರು ಬಂಧಿಸಿ ಬೆಳ್ತಂಗಡಿ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿದ್ದರು. ಇದಾದ ನಂತರ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಈಗ ನ್ಯಾಯಾಲಯವೂ ಆತನನ್ನು ಸೆಪ್ಟೆಂಬರ್ 3ರವರೆಗೆ ಎಸ್ಐಟಿ ವಶಕ್ಕೆ ನೀಡಿದೆ.
ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿದ್ದೇನೆ ಎಂದು ಹೇಳಿಕೆ ನೀಡಿದ್ದ ಮಾಸ್ಕ್ ಮ್ಯಾನ್ ಮಂಡ್ಯ ಮೂಲದ ಚಿನ್ನಯ್ಯನನ್ನು ಇಂದು ಪೊಲೀಸರು ವಿಚಾರಣೆ ನಂತರ ಬಂಧಿಸಿದ್ದರು. ಸಾಕ್ಷಿ ಸಂರಕ್ಷಣಾ ಕಾಯ್ದೆ ರದ್ದುಗೊಂಡ ಬಳಿಕ ಚಿನ್ನಯ್ಯನ ಹೇಳಿಕೆ ಸುಳ್ಳು ಎಂದು ಸಾಬೀತಾದ ನಂತರ ಎಸ್ಐಟಿ ಮಾಸ್ಕ್ಮ್ಯಾನ್ ಚಿನ್ನಯ್ಯನನ್ನು ಬಂಧಿಸಿತ್ತು. ಇದರ ಜೊತೆ ಈ ಬುರುಡೆ ಗ್ಯಾಂಗ್ನ ಮತ್ತೊಬ್ಬ ಸದಸ್ಯ ಗಿರೀಶ್ ಮಟ್ಟಣ್ಣನವರ್ ವಿರುದ್ಧ ಕರ್ತವ್ಯಕ್ಕೆ ಅಡ್ಡಿ ಪ್ರಕರಣವನ್ನು ಪೊಲೀಸರು ದಾಖಲಿಸಿದ್ದರು.
ಧರ್ಮಸ್ಥಳದ ಪ್ರಕರಣದಲ್ಲಿ ದೂರುದಾರನಾಗಿದ್ದ ಸಿ.ಎನ್. ಚಿನ್ನಯ್ಯ ಅಲಿಯಾಸ್ ಚೆನ್ನ ಇದೀಗ ಆರೋಪಿಯಾಗಿ ಪರಿವರ್ತನೆಯಾಗಿದ್ದು, ಎಸ್ಐಟಿ ತಂಡದಿಂದ ಬಂಧಿಸಲ್ಪಟ್ಟಿದ್ದಾನೆ. ನಿನ್ನೆ ಮಧ್ಯಾಹ್ನವೇ ಮಂಗಳೂರಿನ ಸಕ್ರಮ ಪ್ರಾಧಿಕಾರಕ್ಕೆ (Competent Authority) ಮನವಿ ಸಲ್ಲಿಸಿದ ಎಸ್ಐಟಿ, ಚಿನ್ನಯ್ಯನಿಗೆ ನೀಡಲಾಗಿದ್ದ ಸಾಕ್ಷಿ ಸಂರಕ್ಷಣಾ ಕಾಯ್ದೆಯಡಿ (Witness Protection Scheme) ಭದ್ರತೆಯನ್ನು ಹಿಂತೆಗೆದುಕೊಳ್ಳುವಂತೆ ಕೋರಿತ್ತು. ಎಸ್ಐಟಿ ಸಲ್ಲಿಸಿದ ಮನವಿಯಲ್ಲಿ ಕೆಲವು ಮಹತ್ವದ ಸಾಕ್ಷ್ಯಗಳನ್ನು ನೀಡಲಾಗಿತ್ತು, ಇದು ಚಿನ್ನಯ್ಯ ನೀಡಿದ ಹೇಳಿಕೆಗಳು ಸುಳ್ಳು ಎಂದು ಸಾಬೀತುಪಡಿಸಿದವು. ಈ ಸಾಕ್ಷ್ಯಗಳ ಆಧಾರದ ಮೇಲೆ, ಸಕ್ರಮ ಪ್ರಾಧಿಕಾರವು ಆತನ ಸಾಕ್ಷಿ ಸಂರಕ್ಷಣೆಯನ್ನು ರದ್ದುಗೊಳಿಸಿದೆ. ಈ ಕ್ರಮದ ಬೆನ್ನಲ್ಲೇ, ಎಸ್ಐಟಿ ಆತನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದೆ. ಆರಂಭದಲ್ಲಿ ಸಾಕ್ಷಿಯಾಗಿದ್ದ ವ್ಯಕ್ತಿ ಈಗ ಆರೋಪಿಯ ಸ್ಥಾನಕ್ಕೆ ಬಂದು ನಿಂತಿದ್ದು, ಇದು ತನಿಖೆಯ ದಿಕ್ಕಿನಲ್ಲಿ ಮಹತ್ವದ ತಿರುವನ್ನು ತಂದಿದೆ.
ಧರ್ಮಸ್ಥಳದ ಕೇಸಿನಲ್ಲಿ ನಾನೊಬ್ಬ ಸಾಕ್ಷಿದಾರ ಎಂದು ಸಾಕ್ಷಿ ಸಂರಕ್ಷಣಾ ಕಾಯ್ದೆಯಡಿ ಪೊಲೀಸರಿಂದ ರಕ್ಷಣೆ ಪಡೆದುಕೊಂಡಿದ್ದ ಅನಾಮಿಕನನ್ನು ಪೊಲೀಸರು ಬಂಧನ ಮಾಡದೇ, ವಶಕ್ಕೂ ಪಡೆಯದೇ ಸ್ವತಂತರವಾಗಿ ಬಿಟ್ಟಿದ್ದರು. ಆದರೆ ಆತ 17 ಗುಂಡಿ ತೆಗೆಸಿದರು ಏನೂ ಸಿಗದೇ ಇರುವುದು ಜೊತೆಗೆ ಆತನ ಹೇಳಿಕೆಗಳಲ್ಲಿ ಗೊಂದಲ ಇರುವುದು ಎಲ್ಲವೂ ತನಿಖೆ ವೇಳೆ ಕಂಡು ಬಂದ ಹಿನ್ನೆಲೆ ಚುರುಕಾದ ಎಸ್ಐಟಿ ಅಧಿಕಾರಿಗಳು ಆತನಿಗೆ ನೀಡಲಾಗಿದ್ದ ಸಾಕ್ಷಿ ಸಂರಕ್ಷಣಾ ಕಾಯ್ದೆಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿ ರದ್ದುಗೊಳಿಸಿದರು ಇದಾದ ಬೆನ್ನಲ್ಲಿಯೇ ಮುಸುಕುಧಾರಿ ಅನಾಮಿಕನನ್ನು ಬಂಧನ ಮಾಡಲಾಗಿತ್ತು. ಇದಾದ ನಂತರ ಆತನ ಹೆಸರು ಸಿ.ಎನ್. ಚಿನ್ನಯ್ಯ ಅಲಿಯಾಸ್ ಚೆನ್ನ ಎಂದೂ ಆತನ ಮೂಲವನ್ನು ರಿವೀಲ್ ಮಾಡಿತ್ತು.
ಚಿನ್ನಯ್ಯನ ಫೋಟೋವನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ರಿವೀಲ್ ಮಾಡಿದೆ. ಇದೇ ಫೋಟೋವನ್ನು ಚಿನ್ನಯ್ಯ ಸ್ವತಃ ಧರ್ಮಸ್ಥಳದಲ್ಲಿ ತೆಗೆಸಿಕೊಂಡಿದ್ದನು. ಜೂನ್ ತಿಂಗಳಿಂದ ಎಸ್ಐಟಿ ಮುಂದೆ ಮಾಸ್ಕ್ ಹಾಕಿಕೊಂಡು ಓಡಾಡುತ್ತಿದ್ದ ವ್ಯಕ್ತಿ ಈತನೇ ಆಗಿದ್ದಾನೆ. ಕಳೆದ 14 ವರ್ಷಗಳ ಹಿಂದೆ ಧರ್ಮಸ್ಥಳದಲ್ಲಿ ಸ್ವಚ್ಛತಾ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ವೇಳೆ ತೆಗೆಸಿಕೊಂಡಿದ್ದ ಫೋಟೋ ಇದಾಗಿದೆ.
ಇದನ್ನೂ ಓದಿ: ತಾನು ತಂದ ಬುರುಡೆ ಬಗ್ಗೆ ಮಾಹಿತಿ ನೀಡದ ಚಿನ್ನಯ್ಯ, ಆಮಿಷಗಳಿಗೆ ಒಳಗಾಗಿ ಮುಸುಕು ಧರಿಸಿ ಸುಳ್ಳು ಹೇಳಿದ!
ಇದನ್ನೂ ಓದಿ: ಅನಾಮಿಕ ಮುಸುಕುಧಾರಿ ಚಿನ್ನಯ್ಯನ ಅಸಲಿ ಮುಖ ರಿವೀಲ್: 17 ಗುಂಡಿ ಅಗೆಸಿದ ಮಾಸ್ಕ್ ಮ್ಯಾನ್!
