ಧರ್ಮಸ್ಥಳದಲ್ಲಿ ಶವಗಳನ್ನು ಹೂತಿದ್ದೇನೆ ಎಂದು ಸುಳ್ಳು ದೂರು ನೀಡಿದ್ದ ಅನಾಮಿಕ ವ್ಯಕ್ತಿಯನ್ನು ಬಂಧಿಸಲಾಗಿದೆ. ಸಾಕ್ಷಿ ಸಂರಕ್ಷಣಾ ಕಾಯ್ದೆ ರದ್ದಾದ ಬಳಿಕ ಬಂಧನಕ್ಕೊಳಗಾದ ಈತನ ಫೋಟೋ ಇದೀಗ ಬಹಿರಂಗವಾಗಿದೆ. ಚಿನ್ನಯ್ಯ ಎಂಬಾತನೇ ಮುಸುಕುಧಾರಿ ಎಂದು ತಿಳಿದುಬಂದಿದೆ.

ಬೆಂಗಳೂರು/ ದಕ್ಷಿಣ ಕನ್ನಡ (ಆ.23): ಧರ್ಮಸ್ಥಳದಲ್ಲಿ ಶವಗಳನ್ನು ಹೂತಿದ್ದೇನೆ ಎಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದೂರು ನೀಡಿ, ಎಸ್‌ಐಟಿ ತಂಡ ಮುಂದೆ 17 ಸ್ಥಳಗಳನ್ನು ತೋರಿಸಿ ಗುಂಡಿ ಅಗೆಸಿದ ಅನಾಮಿಕನ ದೂರು ಸುಳ್ಳೆಂದು ಅನುಮಾನ ಬಂದ ಬೆನ್ನಲ್ಲಿಯೇ ಬಂಧನ ಮಾಡಿದ್ದಾರೆ. ಇದರ ಬೆನ್ನಲ್ಲಿಯೇ ಮುಸುಕುಧಾರಿ ಅನಾಮಿಕ ಫೋಟೋ ರಿವೀಲ್ ಆಗಿದೆ.

Add Asianetnews Kannada as a Preferred SourcegooglePreferred

ಧರ್ಮಸ್ಥಳದ ಕೇಸಿನಲ್ಲಿ ನಾನೊಬ್ಬ ಸಾಕ್ಷಿದಾರ ಎಂದು ಸಾಕ್ಷಿ ಸಂರಕ್ಷಣಾ ಕಾಯ್ದೆಯಡಿ ಪೊಲೀಸರಿಂದ ರಕ್ಷಣೆ ಪಡೆದುಕೊಂಡಿದ್ದ ಅನಾಮಿಕನನ್ನು ಪೊಲೀಸರು ಬಂಧನ ಮಾಡದೇ, ವಶಕ್ಕೂ ಪಡೆಯದೇ ಆತನನ್ನು ಸ್ವತಂತರವಾಗಿ ಬಿಟ್ಟಿದ್ದರು. ಆದರೆ, ಆತನಿಗೆ ನೀಡಲಾಗಿದ್ದ ಸಾಕ್ಷಿ ಸಂರಕ್ಷಣಾ ಕಾಯ್ದೆಯನ್ನು ರದ್ದುಗೊಳಿಸಿದ ಬೆನ್ನಲ್ಲಿಯೇ ಮುಸುಕುದಾರಿ ಅನಾಮಿಕನನ್ನು ಬಂಧನ ಮಾಡಲಾಗಿತ್ತು. ಇದಾದ ನಂತರ ಆತನ ಹೆಸರು ಸಿ.ಎನ್. ಚಿನ್ನಯ್ಯ ಅಲಿಯಾಸ್ ಚೆನ್ನ ಎಂದೂ ಆತನ ಮೂಲವನ್ನು ರಿವೀಲ್ ಮಾಡಿತ್ತು.

ಇದೀಗ ಚಿನ್ನಯ್ಯನ ಫೋಟೋವನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ರಿವೀಲ್ ಮಾಡಿದೆ. ಇಲ್ಲಿದ್ದಾನೆ ನೋಡಿ, ಈತನೇ ಮಾಸ್ಕ್ ಮ್ಯಾನ್ ಚಿನ್ನಯ್ಯ. ಇದೇ ಫೋಟೋವನ್ನು ಚಿನ್ನಯ್ಯ ಸ್ವತಃ ಧರ್ಮಸ್ಥಳದಲ್ಲಿ ತೆಗೆಸಿಕೊಂಡಿದ್ದನು. ಜೂನ್ ತಿಂಗಳಿಂದ ಎಸ್‌ಐಟಿ ಮುಂದೆ ಮಾಸ್ಕ್ ಹಾಕಿಕೊಂಡು ಓಡಾಡುತ್ತಿದ್ದ ವ್ಯಕ್ತಿ ಈತನೇ ಆಗಿದ್ದಾನೆ. ಕಳೆದ 14 ವರ್ಷಗಳ ಹಿಂದೆ ಧರ್ಮಸ್ಥಳದಲ್ಲಿ ಸ್ವಚ್ಛತಾ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ವೇಳೆ ತೆಗೆಸಿಕೊಂಡಿದ್ದ ಫೋಟೋ ಇದಾಗಿದೆ. 

ಕೆಲವೇ ಕ್ಷಣಗಳಲ್ಲಿ ಮಾಸ್ಕ್ ತೆಗೆಯಲಿದೆ ಎಸ್‌ಐಟಿ:

ಎಸ್‌ಐಟಿಯಿಂದ ಅನಾಮಿಕ ದೂರುದಾರನ ಮಂಡ್ಯ ಮೂಲದ ಚಿನ್ನಯ್ಯನನ್ನು ಬಂಧಿಸಿ ಆತನ ಮೂಲ ಬಹಿರಂಗ ಮಾಡಿದ್ದರೂ, ಆತನ ಮುಖಕ್ಕೆ ಹಾಕಿರುವ ಮಾಸ್ಕ್ ಅನ್ನು ಇನ್ನೂ ತೆರವು ಮಾಡಿಲ್ಲ. ಇದೀಗ ಬಂಧನದ ನಂತರ ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಯಲ್ಲಿ ಆರೋಗ್ಯ ಪರೀಕ್ಷೆಯನ್ನು ಮಾಡಿಸಲಾಗಿತ್ತು. ಇದಾದ ನಂತರ ಕೋರ್ಟ್ ಮುಂದೆ ಹಾಜರುಪಡಿಸಲಾಗುತ್ತಿದೆ. ಈ ವೇಳೆ ಎಸ್‌ಐಟಿ ಅಧಿಕಾರಿಗಳು ಈತನನ್ನು ವಿಚಾರಣೆ ಮಾಡುವುದಕ್ಕೆ ವಶಕ್ಕೆ ಕೇಳುವ ಸಾಧ್ಯತೆಯಿದೆ.

ತಪ್ಪೊಪ್ಪಿಗೆ ಹೇಳಿಕೆ ಕೊಟ್ಟಿದ್ದನಾ ಅನಾಮಿಕ:

ತಾನು ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿದ್ದಾಗಿ ಹೇಳಿಕೆ ನೀಡಿದ, ತಾನೊಬ್ಬ ಸಾಕ್ಷೀದಾರ ಎಂದು ಹೇಳಿಕೊಂಡಿದ್ದ ಅನಾಮಿಕ ತೆಗೆದುಕೊಂಡು ಬಂದಿದ್ದ ಬುರುಡೆಯ ಮೂಲವನ್ನು ಕೆದಕಿದಾಗ ಎಲ್ಲಿಯದ್ದು ಎಂದು ಹೇಳಲಾಗಿಲ್ಲ. ಹೀಗಾಗಿ, ಆತನನ್ನು ಮತ್ತಷ್ಟು ವಿಚಾರಣೆ ಮಾಡಿದಾಗ, ತಾನು ಹೇಳಿದ್ದೆಲ್ಲವೂ ಸುಳ್ಳು ಎಂದು ತಪ್ಪೊಪ್ಪಿಗೆ ಹೇಳಿಕೆ ನೀಡಿದಂತಿದೆ. ಈ ಹಿನ್ನೆಲೆಯಲ್ಲಿ ದೂರುದಾರನ ವಿರುದ್ಧ ಸುಳ್ಳು ಆರೋಪ ಸೇರಿದಂತೆ ವಿವಿಧ ಪ್ರಕರಣ ದಾಖಲಿಸಿ, ಸಾಕ್ಷಿ ಸಂರಕ್ಷಣಾ ಕಾಯ್ದೆಯಡಿ ನೀಡಲಾಗಿದ್ದ ರಕ್ಷಣೆ ರದ್ದುಗೊಳಿಸಿದ ನಂತರ ಎಸ್‌ಐಟಿ ಬಂಧನ ಮಾಡಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಈ ಬಗ್ಗೆ ಎಸ್‌ಐಟಿ ಆಧಿಕೃತ ಮಾಹಿತಿ ನೀಡಬೇಕಿದೆ.