ಇಲ್ಲೊಂದು ಕಡೆ ವ್ಯಕ್ತಿಯೊಬ್ಬ ಎಲ್ಲರಂತೆ ಯುವತಿಯೊಬ್ಬಳನ್ನು  ಮದ್ವೆಯಾಗಿದ್ದ. ಮದುವೆಯ ನಂತರ ದಂಪತಿಗೆ ಮಗುವೂ ಆಗಿದೆ. ಇದಾದ ಒಂದು ವರ್ಷದ ನಂತರ ಈ ಖತರ್ನಾಕ್ ಕಿಲಾಡಿ ಮನೆಯಿಂದಲೇ ನಾಪತ್ತೆಯಾಗಿದ್ದ ಈಗ ಮತ್ತೊಬ್ಬ ಮಹಿಳೆ ಜೊತೆ ಇನ್ಸ್ಟಾಗ್ರಾಮ್ ರೀಲ್ಸ್‌ನಲ್ಲಿ ಆತ ಕಾಣಿಸಿಕೊಂಡಿದ್ದಾನೆ.

ಮದ್ವೆಯಾಗಿ ಒಂದೇ ವರ್ಷಕ್ಕೆ ಮಗು ಕೊಟ್ಟು ನಾಪತ್ತೆಯಾದ ಗಂಡ

Add Asianetnews Kannada as a Preferred SourcegooglePreferred

ಪ್ರಪಂಚದಲ್ಲಿ ಎಂತೆಂಥಾ ಜನಗಳಿರ್ತಾರೆ ನೋಡಿ. ಇಂತಹವರನ್ನು ನೋಡಿಯೇ ಇಂದಿನ ಯುವ ಸಮೂಹ ಮದ್ವೆ ಆಗೋದಿಕೆ ಹೆದರ್ತಿದೆ. ಇಲ್ಲೊಂದು ಕಡೆ ವ್ಯಕ್ತಿಯೊಬ್ಬ ಎಲ್ಲರಂತೆ ಯುವತಿಯೊಬ್ಬಳನ್ನು ಎಲ್ಲಾ ಶಾಸ್ತ್ರ ಸಂಪ್ರದಾಯ ಬದ್ಧವಾಗಿ ಮದ್ವೆಯಾಗಿದ್ದಾನೆ. ಮದುವೆಯ ನಂತರ ದಂಪತಿಗೆ ಮಗುವೂ ಆಗಿದೆ. ಇದಾದ ಒಂದು ವರ್ಷದ ನಂತರ ಈ ಖತರ್ನಾಕ್ ಕಿಲಾಡಿ ಮನೆಯಿಂದಲೇ ನಾಪತ್ತೆಯಾಗಿದ್ದ. ಘಟನೆಯ ಬಗ್ಗೆ ಹೆಂಡತಿ ಪೊಲೀಸರಿಗೂ ದೂರು ನೀಡಿದ್ದರು. ಪೊಲೀಸರು ಮಾಮೂಲಿನಂತೆ ಕೆಲ ದಿನ ಹುಡುಕುವಂತೆ ಮಾಡಿ ಸುಮ್ಮನಾಗಿದ್ದರು. ಆದರೆ ಈಗ ಆ ಕಾಣೆಯಾಗಿದ್ದ ವ್ಯಕ್ತಿ ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್‌ವೊಂದರಲ್ಲಿ ಮತ್ತೊಬ್ಬ ಯುವತಿ ಜೊತೆ ಪತ್ತೆಯಾಗಿದ್ದು, ಇದನ್ನು ನೋಡಿ ಪತ್ನಿಗೆ ಆಘಾತವಾಗಿದೆ. ಉತ್ತರ ಪ್ರದೇಶದಲ್ಲಿ ಈ ವಿಚಿತ್ರ ಘಟನೆ ನಡೆದಿದೆ.

ಇನ್ಸ್ಟಾಗ್ರಾಮ್ ರೀಲ್ಸ್‌ನಲ್ಲಿ ಮತ್ತೊಬ್ಬ ಮಹಿಳೆಯ ಜೊತೆ ಪತ್ತೆ

2017ರಲ್ಲಿ ಉತ್ತರ ಪ್ರದೇಶ ಮುರ್ರಾನಗರದ ನಿವಾಸಿ ಶೀಲು ಎಂಬ ಮಹಿಳೆಯ ಜೊತೆ ಹರ್ದೋಯಿ ಜಿಲ್ಲೆಯ ಅತಮೌ ಗ್ರಾಮದ ಜೀತೇಂದ್ರ ಕುಮಾರ್ ಎಂಬಾತನ ಮದ್ವೆ ನಡೆದಿತ್ತು. ಮದ್ವೆಯಾದ ನಂತರ ದಂಪತಿಗೆ ಮಗೂವೂ ಆಗಿತ್ತು. ಇದಾದ ನಂತರ 2018ರಲ್ಲಿ ಅಂದರೆ ಕೇವಲ ಒಂದು ವರ್ಷದಲ್ಲೇ ಆತ ಪತ್ನಿ ಮಗುವನ್ನು ಬಿಟ್ಟು ನಾಪತ್ತೆಯಾಗಿದ್ದ. ಆದರೆ ಈಗ ಆತ ಇನ್ಸ್ಟಾಗ್ರಾಮ್‌ ರೀಲ್ಸ್‌ನಲ್ಲಿ ಮತ್ತೊಬ್ಬ ಮಹಿಳೆಯ ಜೊತೆ ಕಾಣಿಸಿಕೊಂಡಿದ್ದು, ಇದನ್ನು ನೋಡಿದ ಹೆಂಡ್ತಿಗೆ ಶಾಕ್‌ ಆಗಿದೆ.

ಬೇರೆ ಯುವತಿಯ ಜೊತೆ ಮದ್ವೆಯಾಗಿ ಆಕೆಯ ಜೊತೆ ವಾಸಿಸುತ್ತಿರುವ ಪತಿ:

ಗಂಡ ನಾಪತ್ತೆಯಾದ ನಂತರ ಶೀಲು ಪೊಲೀಸರಿಗೂ ದೂರು ನೀಡಿದ್ದು, ಎಲ್ಲಾ ಕಡೆ ಹುಡುಕಾಟ ನಡೆಸಿದ್ದಾಳೆ. ಆದರೆ ಆತ ಸಿಕ್ಕಿರಲಿಲ್ಲ, ಇತ್ತ ಜೀತೇಂದ್ರ ಕುಮಾರ್‌ನ ಕುಟುಂಬದವರು ಆತನ್ನು ಶೀಲುವಿನ ಕುಟುಂಬದವರೇ ಆತನ ನಾಪತ್ತೆಗೆ ಕಾರಣವಾಗಿದ್ದಾರೆ ಎಂದು ಆರೋಪಿಸಿದ್ದರು. ಗಂಡನ ನಾಪತ್ತೆಯ ನಂತರ ಶೀಲು ತನ್ನ ಪುಟ್ಟ ಮಗುವನ್ನು ಕರೆದುಕೊಂಡು ತನ್ನ ತಾಯಿಯ ಮನೆಯಲ್ಲಿ ವಾಸ ಮಾಡುತ್ತಿದ್ದಳು. ಈ ಮಧ್ಯೆ ಆಕೆಯ ಗಂಡ ಲೂಧಿಯಾನದಲ್ಲಿ ಬೇರೊಬ್ಬ ಮಹಿಳೆಯ ಜೊತೆ ರೀಲ್ಸ್‌ನಲ್ಲಿ ಇರುವುದನ್ನು ಪತ್ನಿ ಗುರುತಿಸಿದ್ದು, ಮತ್ತೆ ಪೊಲೀಸರಿಗೆ ದೂರು ನೀಡಿದ್ದಾರೆ.

ನನ್ನ ಪತಿ ಮರು ಮದುವೆಯಾಗಿದ್ದು, ಬೇರೆ ಮಹಿಳೆಯ ಜೊತೆ ವಾಸ ಮಾಡ್ತಿದ್ದಾರೆ. ಈ ವಿಚಾರ ಆತನ ಕುಟುಂಬದವರಿಗೂ ತಿಳಿದಿತ್ತು. ಆದರೆ ಅವರು ಈ ವಿಚಾರವನ್ನು ಎಲ್ಲೂ ಬಿಟ್ಟು ಕೊಟ್ಟಿಲ್ಲ, ನಾನು 2017 ರಲ್ಲಿ ಎಲ್ಲಾ ವಿಧಿವಿಧಾನಗಳು ಮತ್ತು ಪದ್ಧತಿಗಳ ಪ್ರಕಾರ ವಿವಾಹವಾದೆ. ನನಗೆ ಒಬ್ಬ ಮಗನಿದ್ದಾನೆ, ನನ್ನ ಪತಿ ನಾಪತ್ತೆಯಾದ ನಂತರ ಆತನ ಕುಟುಂಬದವರು ಎಫ್ಐಆರ್ ದಾಖಲಿಸಿದರು. ಆದರೆ ಅದರ ಬಗ್ಗೆ ನಮ್ಮ ಮನೆಯವರಿಗಾಗಲಿ ನಮ್ಮ ಕುಟುಂಬದವರಿಗಾಗಿಲಿ ತಿಳಿದಿರಲಿಲ್ಲ, ಆದರೆ ಈಗ ಆತನನ್ನು ನಾನು ಮತ್ತೊಂದು ಮಹಿಳೆಯ ಜೊತೆ ರೀಲ್ಸ್‌ನಲ್ಲಿ ನೋಡಿದ್ದೇನೆ. ಅವನು ಆಕೆಯನ್ನು ಮದ್ವೆಯೂ ಆಗಿದ್ದಾನೆ.

ಶೀಲುವಿನ ಕುಟುಂಬದವರ ವಿರುದ್ಧವೇ ಕೊಲೆ ಆರೋಪ ಮಾಡಿದ್ದ ಜೀತೇಂದ್ರನ ಕುಟುಂಬದವರು:

ಅತ್ತ ಅವರ ಕುಟುಂಬದವರು ಅವರ ಮಗನನ್ನು ನಮ್ಮ ಮನೆಯವರು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಆದರೆ ನಿಜ ಎಂದರೆ ಅವನ ಕುಟುಂಬದವರೇ ಸೇರಿ ಪಿತೂರಿ ಮಾಡಿದ್ದಾರೆ. ಅವರು ನನ್ನೊಂದಿಗೆ ಆಟವಾಡಿದರು ಹಾಗೂ ಈಗಲೂ ಅವರು ನನ್ನ ದಾರಿತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಶೀಲು ದೂರಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಎಎಸ್‌ಪಿ ನೃಪೇಂದ್ರ ಕುಮಾರ್ ಅವರು ಪ್ರತಿಕ್ರಿಯಿಸಿದ್ದು, ಜೀತೇಂದ್ರಕುಮಾರ್ ಅವರು ವಿವಾಹವಾದರು. ಮದುವೆಯಾದ ಒಂದು ವರ್ಷದ ನಂತರ, ಅವರು ಯಾರಿಗೂ ತಿಳಿಸದೆ ಮನೆಯಿಂದ ಹೊರಟುಹೋದರು ನಂತರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಯಿತು ಎಂದು ಹೇಳಿದ್ದಾರೆ.

ಈಗ ವೀಡಿಯೊಗಳ ಮೂಲಕ ತನ್ನ ಪತಿ ಜೀವಂತವಾಗಿದ್ದಾನೆ ಎಂದು ಶೀಲು ದೃಢಪಡಿಸಿದ ನಂತರ ಶೀಲು ಅವರು ಇತ್ತೀಚೆಗೆ ಸ್ಯಾಂಡಿಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಲ್ಲಿಯೇ ಜಿತೇಂದ್ರ ಕುಮಾರ್‌ ಕಾಣೆಯಾದ ಬಗ್ಗೆ ಮೂಲ ದೂರು ದಾಖಲಾಗಿತ್ತು ಎಂದು ಅವರು ಹೇಳಿದರು. ತನಿಖೆ ನಡೆಯುತ್ತಿದೆ ಮತ್ತು ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

ಇದನ್ನೂ ಓದಿ: ನೋ ಹೆಲ್ಮೆಟ್ ನೋ ಪೆಟ್ರೋಲ್ ಎಂದ ಬಂಕ್ ಸಿಬ್ಬಂದಿಗೆ ಗುಂಡಿಕ್ಕಿದ ಬೈಕ್ ಸವಾರರು

ಇದನ್ನೂ ಓದಿ: ಹೇಮಾವತಿ ನದಿಯ ನೀರಿನ ಮಟ್ಟ ಹಠಾತ್ ಏರಿಕೆ: ಮೇಯಲು ಬಿಟ್ಟ ಹಸುಗಳ ಸೊಂಟಕ್ಕೆ ಬೆಲ್ಟ್ ಕಟ್ಟಿ ಏರ್‌ಲಿಫ್ಟ್

Scroll to load tweet…