ಜಮ್ಮು ಕಾಶ್ಮೀರದ ಕುಲ್ಗಾಮ್ನಲ್ಲಿ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಓರ್ವ ಉಗ್ರನನ್ನು ಹತ್ಯೆ ಮಾಡಲಾಗಿದೆ. ಈ ಎನ್ಕೌಂಟರ್ನಲ್ಲಿ ಓರ್ವ ಭಾರತೀಯ ಸೇನಾಧಿಕಾರಿ ಗಾಯಗೊಂಡಿದ್ದಾರೆ. ಕಾರ್ಯಾಚರಣೆ ಇನ್ನೂ ಮುಂದುವರೆದಿದೆ.
ಜಮ್ಮು ಕಾಶ್ಮೀರದಲ್ಲಿ ಉಗ್ರರು ಮತ್ತೆ ಬಾಲಬಿಚ್ಚಿದ್ದು, ಇಂದು ಭಾರತೀಯ ಸೇನೆ ಕೂಂಬಿಂಗ್ ಕಾರ್ಯಾಚರಣೆಯ ವೇಳೆ ಉಗ್ರರು ಭದ್ರತಾ ಪಡೆಯ ಮೇಲೆ ಗುಂಡು ಹಾರಿಸಿದ್ದಾರೆ. ಜಮ್ಮು ಕಾಶ್ಮೀರದ ಕುಲ್ಗಾಮ್ನಲ್ಲಿ ಇಂದು ಮುಂಜಾನೆ ಈ ಘಟನೆ ನಡೆದಿದೆ. ಭದ್ರತಾಪಡೆ ಹಾಗೂ ಭಯೋತ್ಪಾದಕರ ಮಧ್ಯೆ ಗುಂಡಿನ ಚಕಮಕಿ ನಡೆದಿದೆ.
ಶೋಧ ಕಾರ್ಯದ ವೇಳೆ ಯೋಧರತ್ತ ಗುಂಡು ಹಾರಿಸಿದ ಉಗ್ರರು:
ಜಮ್ಮು ಮತ್ತು ಕಾಶ್ಮೀರ ಪೊಲೀಸರ ಪ್ರಕಾರ, ಕುಲ್ಗಾಮ್ನ ಗುಡ್ಡಾರ್ ಕಾಡಿನಲ್ಲಿ ಉಗ್ರರಿರುವ ಬಗ್ಗೆ ಭಾರತೀಯ ಸೇನೆ, ಸಿಆರ್ಪಿಎಫ್ ಮತ್ತು ಸ್ಥಳೀಯ ಪೊಲೀಸರ ಜಂಟಿ ತಂಡಕ್ಕೆ ನಿರ್ದಿಷ್ಟ ಮಾಹಿತಿ ದೊರೆತ ಹಿನ್ನೆಲೆ ಉಗ್ರರಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾಗ ಯೋಧರ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ.
ಗುಂಡಿನ ದಾಳಿಯ ನಂತರ ಎನ್ಕೌಂಟರ್ ಆಗಿ ಬದಲಾದ ಶೋಧ ಕಾರ್ಯಾಚರಣೆ:
ನಿರ್ದಿಷ್ಟ ಗುಪ್ತಚರ ಮಾಹಿತಿಯ ಆಧಾರದ ಮೇಲೆ, ಕುಲ್ಗಾಮ್ನ ಗುಡ್ಡಾರ್ ಕಾಡಿನಲ್ಲಿ ಎನ್ಕೌಂಟರ್ ಪ್ರಾರಂಭವಾಗಿದೆ. ಜಮ್ಮು ಹಾಗೂ ಕಾಶ್ಮೀರ ಪೊಲೀಸ್, ಸೇನೆ ಮತ್ತು ಸಿಆರ್ಪಿಎಫ್ನ ಎಸ್ಒಜಿ ಈ ಕಾರ್ಯಾಚರಣೆಯಲ್ಲಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ಬರಬೇಕಿದೆ ಎಂದು ಕಾಶ್ಮೀರ ವಲಯ ಪೊಲೀಸರು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಭದ್ರತಾ ಪಡೆಗಳಿರುವ ಜಾಗದ ಮೇಲೆ ಭಯೋತ್ಪಾದಕರು ಗುಂಡು ಹಾರಿಸಿದ ನಂತರ ಶೋಧ ಕಾರ್ಯಾಚರಣೆ ಎನ್ಕೌಂಟರ್ ಆಗಿ ಬದಲಾಯಿತು ಎಂದು ಭದ್ರತಾ ಪಡೆ ಅಧಿಕಾರಿಗಳು ತಿಳಿಸಿದ್ದಾರೆ.
ಇತ್ತೀಚೆಗೆ ಬಂದ ಮಾಹಿತಿಯ ಪ್ರಕಾರ ಈ ಎನ್ಕೌಂಟರ್ನಲ್ಲಿ ಭದ್ರತಾ ಪಡೆಗಳು ಓರ್ವ ಉಗ್ರನ ಹೆಡೆಮುರಿ ಕಟ್ಟಿದ್ದಾರೆ ಎಂದು ವರದಿಯಾಗಿದೆ. ಈ ಘಟನೆಯಲ್ಲಿ ಭಾರತೀಯ ಸೇನೆಯ ಜೂನಿಯರ್ ಕಮೀಷನ್ಡ್ ಅಧಿಕಾರಿಯೂ ಗಾಯಗೊಂಡಿದ್ದಾರೆ. ಕಾರ್ಯಾಚರಣೆ ಮುಂದುವರೆದಿದೆ ಎಂದು ಸೇನೆಯ ಚೀನಾರ್ ಕಾರ್ಪ್ ಮಾಹಿತಿ ನೀಡಿದೆ.
ಇದನ್ನೂ ಓದಿ: ಪೊಲೀಸರ ಕಂಡು ಹಾಸಿಗೆ ಕೆಳಗೆ ಅಡಗಿದ್ದ ಸಮಾಜವಾದಿ ನಾಯಕನ ಸೆರೆ: ವೀಡಿಯೋ ವೈರಲ್
ಇದನ್ನೂ ಓದಿ: ತನ್ನೆದುರು ನಿಂತ ಫಾರೆಸ್ಟ್ ಆಫೀಸರ್ಗೆ ಲುಕ್ ಕೊಟ್ಟ ಕಾಡಾನೆ: ವೀಡಿಯೋ ಭಾರಿ ವೈರಲ್
