ಮೈಸೂರು ದಸರಾ ಗಜಪಡೆ ಜೊತೆ ರೀಲ್ಸ್ ರಾಣಿ ಕೃತಿ: ಅರಣ್ಯ ಅಧಿಕಾರಿಗಳೇ ಆ ರಾತ್ರಿ ನಡೆದಿದ್ದೇನು?
ಸಾಮಾಜಿಕ ಜಾಲತಾಣದಲ್ಲಿ ಖ್ಯಾತವಾಗಿರುವ ಕೃತಿ ಎ.ಕೆ. ಎಂಬ ಯುವತಿ, ಮೈಸೂರು ದಸರಾ ಆನೆಗಳ ಬಳಿ ರಾತ್ರಿ ವೇಳೆ ನಿಯಮ ಉಲ್ಲಂಘಿಸಿ ಫೋಟೋಶೂಟ್ ನಡೆಸಿ ವಿವಾದ ಸೃಷ್ಟಿಸಿದ್ದಾರೆ. ಅರಣ್ಯ ಇಲಾಖೆಯ ನಿರ್ಲಕ್ಷ್ಯದ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಮೈಸೂರು (ಸೆ.19): ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಗಜಪಡೆಗಳೊಂದಿಗೆ ರೀಲ್ಸ್ ಮಾಡಿಕೊಂಡು ವಿವಾದ ಸೃಷ್ಟಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ರಾಣಿಯೆಂದು ಖ್ಯಾತಿ ಪಡೆದಿರುವ ಕೃತಿ ಎ.ಕೆ. ಎಂಬ ಯುವತಿ, ದಸರಾ ಆನೆಗಳ ವಾಸ್ತವ್ಯದ ಸ್ಥಳದಲ್ಲಿ ರಾತ್ರಿ ವೇಳೆ ಫೋಟೋಶೂಟ್ ನಡೆಸಿರುವುದು ಅರಣ್ಯ ಇಲಾಖೆಯ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಈ ಘಟನೆ ಅರಣ್ಯ ಇಲಾಖೆಯ ಅಧಿಕಾರಿಗಳು ಪ್ರಭಾವಿಗಳ ಮುಂದೆ ಮಂಡಿಯೂರಿರುವರೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ. ರಾತ್ರೋ ರಾತ್ರಿ ವೇಳೆ ಕಾರಿನಲ್ಲಿ ಕುಟುಂಬದೊಂದಿಗೆ ಬರುವ ಯುವತಿ ಫ್ಯಾಮಿಲಿ ಸಮೇತವಾಗಿ ಬಂದು ಆನೆಗಳನ್ನು ಹಿಡಿದು, ಅವುಗಳ ಜೊತೆಗೆ ತರಹೇವಾರಿ ರೀಲ್ಸ್ ಮಾಡಿಕೊಂಡು ಹೋಗಿದ್ದಾರೆ.
ಆದರೆ, ಸಾಮಾನ್ಯ ಸಾರ್ವಜನಿಕರಿಗೆ ಆನೆಗಳ ಬಳಿ ಹೋಗುವುದಕ್ಕೂ ಪ್ರವೇಶ ನಿಷೇಧಿಸಲಾಗಿರುತ್ತದೆ. ಆದರೆ, ಇಲ್ಲಿ ಈ ಯುವತಿ ರೀಲ್ಸ್ ಮಾಡಿಕೊಂಡು ಹೋಗಲು ಅನುಮತಿ ಕೊಟ್ಟಿದ್ದು ಹೇಗೆ ಎಂಬ ವಿಚಾರ ಚರ್ಚೆ ಆಗುತ್ತಿದೆ.
ರೀಲ್ಸ್ ಹುಚ್ಚಿಗೆ ನಿಯಮಗಳ ಉಲ್ಲಂಘನೆ:
ಸಾಮಾನ್ಯವಾಗಿ ದಸರಾ ಆನೆಗಳು ವಾಸ್ತವ್ಯ ಹೂಡಿರುವ ಅರಮನೆ ಆವರಣಕ್ಕೆ ರಾತ್ರಿ ವೇಳೆ ಯಾರಿಗೂ ಪ್ರವೇಶವಿಲ್ಲ. ಅರಣ್ಯ ಇಲಾಖೆಯ ಸಿಬ್ಬಂದಿಯ ಕಟ್ಟುನಿಟ್ಟಿನ ಕಾವಲಿನಲ್ಲಿರುವ ಆನೆಗಳನ್ನು ನೋಡಲು ಜನಸಾಮಾನ್ಯರಿಗೆ ನಿರ್ಬಂಧವಿದೆ.
ಆದರೆ, ಕೃತಿ ಎ.ಕೆ. ಹಾಗೂ ಆಕೆಯ ಸ್ನೇಹಿತರು ಎರಡು ಕಾರುಗಳಲ್ಲಿ ಕರಿಕಲ್ಲುತೊಟ್ಟಿ ಮಾರ್ಗವಾಗಿ ಅರಮನೆ ಆವರಣಕ್ಕೆ ಪ್ರವೇಶ ಪಡೆದಿದ್ದಾರೆ. ನಂತರ ಯಾವುದೇ ಅರಣ್ಯ ಸಿಬ್ಬಂದಿಯ ಅನುಮತಿಯಿಲ್ಲದೆ ಆನೆಗಳಿರುವ ಸ್ಥಳಕ್ಕೆ ತೆರಳಿ ಫೋಟೋಶೂಟ್ ನಡೆಸಿದ್ದಾರೆ.
ಫ್ಲಾಷ್ ಲೈಟ್ನಿಂದ ತತ್ತರಿಸಿದ ಆನೆಗಳು:
ಸುಮಾರು 55 ಸೆಕೆಂಡುಗಳಿರುವ ಈ ವಿಡಿಯೋದಲ್ಲಿ, ಕೃತಿ ಎ.ಕೆ. ಮತ್ತು ಆಕೆಯ ತಂಡ ಫ್ಲಾಷ್ ಲೈಟ್ಗಳನ್ನು ಬಳಸಿ ಫೋಟೋಶೂಟ್ ಮಾಡಿಸಿಕೊಂಡಿರುವುದು ಸ್ಪಷ್ಟವಾಗಿದೆ. ಕಾಡು ಪ್ರಾಣಿಗಳ ಮುಂದೆ ಫ್ಲಾಷ್ ಲೈಟ್ ಬಳಸುವುದು ಅವುಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇದರಿಂದಾಗಿ ಪ್ರಾಣಿಗಳು ಬೆಚ್ಚಿಬೀಳುವ ಸಾಧ್ಯತೆಗಳಿವೆ.
ಎರಡು ವರ್ಷಗಳ ಹಿಂದೆ ಇದೇ ರೀತಿ ಯೂಟ್ಯೂಬರ್ ಒಬ್ಬರು ಪ್ಲಾಷ್ ಲೈಟ್ ಬಳಸಿದ್ದರಿಂದ ಅಂಬಾರಿ ಆನೆ ಬೆಚ್ಚಿಬಿದ್ದ ಘಟನೆ ನಡೆದಿತ್ತು. ಆದರೂ, ಅರಣ್ಯ ಇಲಾಖೆ ಈ ಕುರಿತು ಯಾವುದೇ ಕ್ರಮ ಕೈಗೊಂಡಿಲ್ಲ.
ಅರಣ್ಯ ಇಲಾಖೆಯ ನಡೆಯ ಬಗ್ಗೆ ಅನುಮಾನ:
ದಸರಾ ಗಜಪಡೆಗಳ ತರಬೇತಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಅತ್ಯಂತ ಕಟ್ಟುನಿಟ್ಟಾಗಿ ನಿಭಾಯಿಸುತ್ತಾರೆ. ಆನೆಗಳ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಲು ಹಗಲು-ರಾತ್ರಿ ಶ್ರಮಿಸುತ್ತಾರೆ. ಆದರೆ, ಇಂತಹ ಗಂಭೀರ ವಿಷಯದಲ್ಲಿ ರೀಲ್ಸ್ ರಾಣಿಯರ ಮುಂದೆ ಮಂಡಿಯೂರಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
'ಜನಸಾಮಾನ್ಯರಿಗೆ ಒಂದು ನ್ಯಾಯ, ಪ್ರಭಾವಿಗಳಿಗೆ ಒಂದು ನ್ಯಾಯವೇ?' ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಕೂಡಲೇ ಅರಣ್ಯ ಇಲಾಖೆ ಈ ಕುರಿತು ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ:
ಕೃತಿ ಎ.ಕೆ. ಈ ವಿಡಿಯೋವನ್ನು ತನ್ನ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಹಂಚಿಕೊಂಡ ನಂತರ ಅದು ವೈರಲ್ ಆಗಿದ್ದು, ನೆಟ್ಟಿಗರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆನೆಗಳ ಬಳಿ ಅಷ್ಟು ಹತ್ತಿರ ಹೋಗಿ, ಅವುಗಳನ್ನು ತಬ್ಬಿಕೊಂಡು ಫೋಟೋಶೂಟ್ ಮಾಡಿಸಿಕೊಂಡಿರುವುದು ಅರಣ್ಯ ಇಲಾಖೆಯ ಭದ್ರತಾ ಲೋಪವನ್ನು ಎತ್ತಿ ತೋರಿಸಿದೆ. ಈ ಕುರಿತು ಅರಣ್ಯ ಇಲಾಖೆ ಶೀಘ್ರವೇ ಸ್ಪಷ್ಟನೆ ನೀಡುವ ಅಗತ್ಯವಿದೆ.