Indian Foods: ಈ ಭಾರತೀಯ ಆಹಾರಗಳು ಡಯಾಬಿಟೀಸ್, ಹೃದಯ ಸಮಸ್ಯೆ ತರುತ್ತೆ.. ತಿನ್ನೋ ಮೊದಲು ಯೋಚಿಸಿ
ನಾವು ಪ್ರತಿದಿನ ನಮ್ಮ ಆಹಾರಗಳಲ್ಲಿ ಸೇವಿಸುವಂತಹ ಹಪ್ಪಳ, ಸಮೋಸ, ಜಿಲೇಬಿಯಂತಹ ಸಾಮಾನ್ಯ ಆಹಾರಗಳು ಸಹ ನಮಗೆ ಡಯಾಬಿಟೀಸ್, ಹೃದಯ ಸಮಸ್ಯೆ ತರುತ್ತೆ ಗೊತ್ತಾ? ತಿನ್ನುವ ಮುನ್ನ ಯೋಚನೆ ಮಾಡಿ.

ಊಟದ ಜೊತೆಗಿನ ಹಪ್ಪಳ, ಚಹಾ ತಿನ್ನುವಾಗ ಒಂದು ಹಿಡಿ ಭುಜಿಯಾ, ಅಥವಾ ಚಟ್ನಿಯೊಂದಿಗೆ ಗರಿಗರಿಯಾದ ಸಮೋಸಾ, ಈ ಸಣ್ಣ ತಿಂಡಿಗಳು ಸಾಮಾನ್ಯವಾಗಿ ಹಾನಿಕಾರಕವಲ್ಲ ಎಂದು ಜನ ಭಾವಿಸುತ್ತಾರೆ. ನಮ್ಮಲ್ಲಿ ಹಲವರಿಗೆ, ಅವು ಕೇವಲ ತಿಂಡಿಗಳಲ್ಲ, ಬದಲಾಗಿ ನಮ್ಮ ದೈನಂದಿನ ದಿನಚರಿಯ ಭಾಗವಾಗಿದೆ. ಆದರೆ ನಾವು ಹೆಚ್ಚಾಗಿ ಎಂಜಾಯ್ ಮಾಡುವ ಆಹಾರಗಳು ಮಧುಮೇಹ (diabetes) ಹೃದಯ ಕಾಯಿಲೆ, ಬೊಜ್ಜು ಮತ್ತು ಕ್ಯಾನ್ಸರ್ನಂತಹ ಪ್ರಮುಖ ಆರೋಗ್ಯ ಅಪಾಯಗಳಿಗೆ ಮೌನವಾಗಿ ಕೊಡುಗೆ ನೀಡುತ್ತಿವೆ ಅನ್ನೋದು ನಿಮಗೆ ಗೊತ್ತಿದೆ. ಇಲ್ಲಿದೆ ಅಂತಹ ತಿನಿಸುಗಳ ಲಿಸ್ಟ್.
ಸಮೋಸಾ
ಚಿನ್ನದ ಬಣ್ಣದ, ಗರಿಗರಿಯಾದ ಸಮೋಸಾಗಳನ್ನು ಬೇಡ ಅನ್ನೋದೆ ಕಷ್ಟ, ಆದರೆ ಅವುಗಳ ಸಂಸ್ಕರಿಸಿದ ಹಿಟ್ಟಿನ ಹೊರಪದರ ಮತ್ತು ಡೀಪ್ ಫ್ರೈ ಮಾಡಿರುವ ಈ ಸಮೋಸ ಹೃದಯಕ್ಕೆ ಅಪಾಯಕಾರಿ ಆಯ್ಕೆಯಾಗಿದೆ. ಪಿಷ್ಟ ಮತ್ತು ಅನಾರೋಗ್ಯಕರ ಕೊಬ್ಬಿನಿಂದ ತುಂಬಿರುವ ಸಮೋಸಾಗಳು ಬೊಜ್ಜು, ಜೀರ್ಣಕಾರಿ ಸಮಸ್ಯೆಗಳು (digestion problem) ಮತ್ತು ಹೃದಯರಕ್ತನಾಳದ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತವೆ.
ಜಿಲೇಬಿ
ಜಿಲೇಬಿಯನ್ನು ತುಂಬಾನೆ ರುಚಿಕರವಾದ ಸಿಹಿತಿನಿಸು ಎನ್ನಲಾಗುತ್ತೆ, ಇದನ್ನು ಡೀಪ್-ಫ್ರೈ ಮಾಡಿ ಸಕ್ಕರೆ ಪಾಕದಲ್ಲಿ ಮುಳುಗಿಸಲಾಗುತ್ತದೆ. ಹೆಚ್ಚಿನ ಸಕ್ಕರೆ ಮತ್ತು ಟ್ರಾನ್ಸ್-ಕೊಬ್ಬಿನ ಅಂಶವು ಇದನ್ನು ಬೊಜ್ಜು, ಇನ್ಸುಲಿನ್ ಪ್ರತಿರೋಧ ಮತ್ತು ಟೈಪ್ 2 ಮಧುಮೇಹಕ್ಕೆ (type 2 diabetes) ನೇರ ಕಾರಣವನ್ನಾಗಿಸುತ್ತೆ. ಇದನ್ನು ಹೆಚ್ಚಾಗಿ ತಿನ್ನುವುದು ಕೊಬ್ಬಿನ ಪಿತ್ತಜನಕಾಂಗದ (fatty liver) ಕಾಯಿಲೆಗೆ ಕಾರಣವಾಗಬಹುದು.
ಹಪ್ಪಳ
ಹಲವು ಭಾರತೀಯ ಊಟದ ಮೇಜುಗಳಲ್ಲಿ ಹಪ್ಪಳ ಮುಖ್ಯವಾದ ಆಹಾರವಾಗಿದೆ, ಆದರೆ ಇದು ನಿಮ್ಮ ಆರೋಗ್ಯಕ್ಕೆ ಅತ್ಯಂತ ಕೆಟ್ಟ ಆಹಾರಗಳಲ್ಲಿ ಒಂದಾಗಿದೆ. ಸೋಡಿಯಂ ಅಧಿಕವಾಗಿದ್ದು , ಡೀಪ್ ಫ್ರೈ ಮಾಡಿದ ಹಪ್ಪಳವು ರಕ್ತದೊತ್ತಡದ ಮಟ್ಟವನ್ನು (blood pressure level) ಹೆಚ್ಚಿಸುತ್ತದೆ ಮತ್ತು ನಿಮ್ಮ ಹೃದಯದ ಮೇಲೆ ಹೆಚ್ಚುವರಿ ಒತ್ತಡವನ್ನುಂಟು ಮಾಡುತ್ತದೆ. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ಅಧಿಕ ರಕ್ತದೊತ್ತಡ ಮತ್ತು ಹೃದಯರಕ್ತನಾಳದ ಕಾಯಿಲೆಯ ಅಪಾಯವನ್ನು ಹೆಚ್ಚಿಸುತ್ತದೆ.
ಭುಜಿಯಾ
ಆ ಗರಿಗರಿಯಾದ ಭುಜಿಯಾ ಪ್ಯಾಕೆಟ್ ಚಹಾ ಸಮಯದಲ್ಲಿ ತಿನ್ನಲು ಸೂಕ್ತವಾದ ತಿಂಡಿಯಂತೆ ಕಾಣಿಸಬಹುದು, ಆದರೆ ಇದು ಎಣ್ಣೆ, ಸಂಸ್ಕರಿಸಿದ ಹಿಟ್ಟು ಮತ್ತು ಉಪ್ಪಿನಿಂದ ತುಂಬಿರುತ್ತದೆ. ನಿಯಮಿತ ಸೇವನೆಯು ತೂಕ ಹೆಚ್ಚಾಗುವುದು ಮತ್ತು ಕೊಲೆಸ್ಟ್ರಾಲ್ ಅಸಮತೋಲನವನ್ನು ಉತ್ತೇಜಿಸುವುದಲ್ಲದೆ, ಹೆಚ್ಚಿನ ಗ್ಲೈಸೆಮಿಕ್ ಅಂಶದಿಂದಾಗಿ ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ.
ಸುಪಾರಿ
ಊಟದ ನಂತರ ಸುಪಾರಿ ಸಾಮಾನ್ಯವಾಗಿ ಅಗಿಯುತ್ತಾರೆ ಜನ, ಆದರೆ ಅದು ಸುರಕ್ಷಿತವಲ್ಲ. ಪೌಷ್ಟಿಕತಜ್ಞರು ವೀಳ್ಯದೆಲೆ ಕ್ಯಾನ್ಸರ್ ಕಾರಕ ಗುಣಗಳನ್ನು ಹೊಂದಿದ್ದು, ಬಾಯಿಯ ಕ್ಯಾನ್ಸರ್ ಮತ್ತು ಒಸಡು ಕಾಯಿಲೆಗಳಿಗೆ ಸಂಬಂಧಿಸಿದೆ ಎಂದು ಎಚ್ಚರಿಸುತ್ತಾರೆ. ನಿಯಮಿತವಾಗಿ ಅಗಿಯುವುದರಿಂದ ಜೀರ್ಣಕ್ರಿಯೆಯ (digestion) ಮೇಲೆ ಪರಿಣಾಮ ಬೀರುತ್ತದೆ ಮತ್ತು ಚಯಾಪಚಯ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತದೆ.