ನಟಿ ಸೌಂದರ್ಯ (Soundarya) ಅವರಂತೆಯೇ ವಿಮಾನ ದುರಂತದಲ್ಲಿ ಮರಣ ಹೊಂದಿದ ಬಾಲಿವುಡ್ ನಟಿಯ ಜೀವನದ ಕಥೆಯಿದು. ಜೋಧ್ಪುರದ ಮಹಾರಾಜ ಹನ್ವಂತ್ ಸಿಂಗ್ ಅವರನ್ನು ವಿವಾಹವಾಗಿ ಮಹಾರಾಣಿಯಾದ ಆಕೆಯ ಸಾವು ಅಪಘಾತವೋ ಅಥವಾ ಕೊಲೆಯೋ ಎಂಬುದು ಇನ್ನೂ ನಿಗೂಢವಾಗಿದೆ.
ನಟಿ ಸೌಂದರ್ಯ (Soundarya) ಮತ್ತು ಆಕೆಯ ದುರಂತ ವಿಮಾನ ಅಪಘಾತದ ಬಗ್ಗೆ ನಮಗೆ ನಿಮಗೆಲ್ಲ ಗೊತ್ತಿದೆ. ಇನ್ನೂ ಸಾಕಷ್ಟು ಕಾಲ ಮಿಂಚಬಹುದಾಗಿದ್ದ ಈಕೆ ಹೆಲಿಕಾಪ್ಟರ್ ಆಕಾಶದಲ್ಲೇ ಹೊತ್ತಿ ಉರಿದು ಬೂದಿಯಾದಳು. ಇದೇ ಥರ ಬಾಲಿವುಡ್ನ ಒಬ್ಬಳು ಹೀರೋಯಿನ್ ಕಥೆ ಕೂಡ ಇದೆ.
2001ರಲ್ಲಿ ಶ್ಯಾಮ್ ಬೆನಗಲ್ ಬಿಡುಗಡೆ ಮಾಡಿದ ಜುಬೇದಾ ಚಿತ್ರವು ಶೀಘ್ರದಲ್ಲೇ ಕಲ್ಟ್ ಕ್ಲಾಸಿಕ್ ಆಯಿತು. ಕರಿಷ್ಮಾ ಕಪೂರ್, ರೇಖಾ, ಮನೋಜ್ ಬಾಜಪೇಯಿ ಮತ್ತು ಸುರೇಖಾ ಸಿಕ್ರಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡರು. ಆ ಚಿತ್ರ ಬಾಲಿವುಡ್ ನಟಿ ಜುಬೇದಾ ಬೇಗಂ ಅವರ ನಿಜ ಜೀವನದ ಕತೆಯನ್ನು ಆಧರಿಸಿತ್ತು. ಚಿತ್ರಕಥೆಯನ್ನು ಜುಬೇದಾ ಅವರ ಮಗ, ಪತ್ರಕರ್ತ ಖಾಲಿದ್ ಮೊಹಮ್ಮದ್ ಬರೆದಿದ್ದರು. ಪ್ರೇಮ, ಭಗ್ನ ಹೃದಯ, ಕೌಟುಂಬಿಕ ಘರ್ಷಣೆ, ನಿಗೂಢ ದುರಂತ ಮತ್ತು ದಶಕಗಳ ನಂತರವೂ ಕಾಡುತ್ತಿರುವ ರಹಸ್ಯಗಳೆಲ್ಲ ಹೆಣೆದುಕೊಂಡಿರುವ ಗ್ಲಾಮರ್ ಕಥೆ ಆಕೆಯದು.
ಜುಬೇದಾ ಬೇಗಂ 1950ರ ದಶಕದ ಪ್ರಸಿದ್ಧ ನಟಿ. ಆದರೆ ಅವರ ಜೀವನ ಜನವರಿ 26, 1952 ರಂದು ಜೋಧ್ಪುರದ ತನ್ನ ಪತಿ ಮಹಾರಾಜ ಹನ್ವಂತ್ ಸಿಂಗ್ ಅವರೊಂದಿಗೆ ವಿಮಾನ ಅಪಘಾತದಲ್ಲಿ ನಿಧನರಾದಾಗ ಹಠಾತ್ತನೆ ಕೊನೆಗೊಂಡಿತು. ಮೇಲ್ನೋಟಕ್ಕೆ ಇದು ಅಪಘಾತವೆಂದೇ ತಿಳಿಯಲಾಗಿದೆ. ಆದರೆ ಇದರ ಹಿಂದೆ ಯಾರದೋ ಪಿತೂರಿ ಇದೆ ಎಂಬ ಮಾತು ಅಂದಿನಿಂದಲೂ ಇದೆ. ಆಕೆ ಜೋಧ್ಪುರದ ಉಮೈದ್ ಭವನ ಅರಮನೆಯ ಮಹಾರಾಣಿಯಾಗಿದ್ದವಳು. ಇಂದಿಗೂ ಆಕೆಯ ಅತೃಪ್ತ ಆತ್ಮ ಆ ಅರಮನೆಯಲ್ಲಿ ಕೋಣೆಗಳಲ್ಲಿ ಓಡಾಡುತ್ತಿದೆ ಎಂದು ಸ್ಥಳೀಯರು ಹೇಳುತ್ತಾರೆ. ರಾತ್ರಿ ಅಲ್ಲಿ ಆಕೆಯ ಧ್ವನಿ, ಮಾತು ಕೇಳಿಸುತ್ತವಂತೆ.
ಶ್ರೀಮಂತ ಮತ್ತು ಪ್ರಭಾವಶಾಲಿ ಮುಸ್ಲಿಂ ಕುಟುಂಬದಲ್ಲಿ ಜನಿಸಿದ ಜುಬೇದಾ ಕಲಾತ್ಮಕ ವಾತಾವರಣದಲ್ಲಿ ಬೆಳೆದರು. ಆದರೆ ಅವರ ತಂದೆ, ಯಶಸ್ವಿ ಉದ್ಯಮಿ ಖಾಸಿಂ ಭಾಯ್ ಮೆಹ್ತಾ ಅವರಿಂದ ಸಿನಿಮಾ ಸೇರಲು ಕಠಿಣ ವಿರೋಧ ಎದುರಿಸಿದರು. ಇದು ಕುಟುಂಬದೊಳಗೆ ದೊಡ್ಡ ಬಿರುಕುಗಳನ್ನು ಉಂಟುಮಾಡಿತು. ವರದಿಗಳ ಪ್ರಕಾರ, ಒಮ್ಮೆ ಗೀತಾ ಬಾಲಿಯೊಂದಿಗೆ ಉಷಾ ಕಿರಣ್ ಚಿತ್ರಕ್ಕೆ ಅವರನ್ನು ಆಯ್ಕೆ ಮಾಡಲಾಗಿತ್ತು. ಆದರೆ ಆ ಯೋಜನೆ ಕಾರ್ಯರೂಪಕ್ಕೆ ಬರಲಿಲ್ಲ. ದಂತಕಥೆಯ ಪ್ರಕಾರ, ಆಕೆಯ ತಂದೆ ಪಿಸ್ತೂಲ್ ಹಿಡಿದು ಬೆದರಿಸಿದ್ದರಿಂದ ಚಿತ್ರೀಕರಣವನ್ನು ರದ್ದುಗೊಳಿಸಬೇಕಾಯಿತು.
ಮುಂದೆ ತಂದೆ ತಮ್ಮ ಕುಟುಂಬ ಸ್ನೇಹಿತನ ಮಗನೊಂದಿಗೆ ಜುಬೇದಾಳ ಮದುವೆಯನ್ನು ಏರ್ಪಡಿಸಿದರು. ಈ ದಾಂಪತ್ಯದಲ್ಲಿ ಮಗ ಖಾಲಿದ್ ಮೊಹಮ್ಮದ್ ಜನಿಸಿದ. ಆದರೆ ಈ ದಾಂಪತ್ಯ ವಿಚ್ಛೇದನದಲ್ಲಿ ಕೊನೆಗೊಂಡಿತು. ಮುಂದೆ ಆಕೆ ಮಹಾರಾಜ ಹನ್ವಂತ್ ಸಿಂಗ್ ಅವರೊಂದಿಗೆ ಮದುವೆಯಾದಳು. ಅವರಗೂ ಅದು ಎರಡನೇ ವಿವಾಹ. ಇದು ಜುಬೇದಾ ಅವರನ್ನು ಜೋಧಪುರ ರಾಜಮನೆತನಕ್ಕೆ ಕರೆತಂದಿತು. ಆದರೆ ಅಲ್ಲಿನವರು ಸುಲಭವಾಗಿ ಸ್ವೀಕರಿಸಲಿಲ್ಲ. ಕಾರಣ ಆಕೆ ಮುಸ್ಲಿಂ ಮಹಿಳೆಯಾಗಿದ್ದರಿಂದ. ಆಕೆ 1950 ರಲ್ಲಿ ಹಿಂದೂ ಧರ್ಮಕ್ಕೆ ಮತಾಂತರಗೊಂಡು ವಿದ್ಯಾ ರಾಣಿ ಎಂಬ ಹೆಸರನ್ನು ಸ್ವೀಕರಿಸಲು ಅವರನ್ನು ಒತ್ತಾಯಿಸಲಾಯಿತು. ಆದರೂ ರಾಜಮನೆತನ ಆಕೆಯನ್ನು ಅಪ್ಪಿಕೊಳ್ಳಲು ವಿರೋಧಿಸಿತು.
ಮಹಾರಾಜರು ಅಂತಿಮವಾಗಿ ಉಮೈದ್ ಭವನವನ್ನು ತೊರೆದು ಮೆಹ್ರಾನ್ಗಢ ಕೋಟೆಯಲ್ಲಿ ಜುಬೇದಾ ಅವರೊಂದಿಗೆ ವಾಸಿಸಿದರು. ಅವರ ಸಂಬಂಧ ಆತ್ಮೀಯವಾಗಿತ್ತು. ಆದರೆ ಅಲ್ಪಕಾಲಿಕವಾಗಿತ್ತು. 1952ರಲ್ಲಿ ನಡೆದ ವಿಮಾನ ಅಪಘಾತದಲ್ಲಿ ಇಬ್ಬರೂ ಸಾವನ್ನಪ್ಪಿದರು.
ದುಃಖ ಅಲ್ಲಿಗೆ ನಿಲ್ಲಲಿಲ್ಲ. ವರ್ಷಗಳ ನಂತರ, ಅವರಿಬ್ಬರ ಮಗ ರಾವ್ ರಾಜಾ ಹುಕುಮ್ ಸಿಂಗ್ ಕೂಡ, 1981ರಲ್ಲಿ ಭೀಕರ ಅಂತ್ಯವನ್ನು ಕಂಡರು. ಅವರ ದೇಹವು ಕ್ರೂರವಾಗಿ ವಿರೂಪಗೊಂಡು, ಕತ್ತರಿಸಿದ ತಲೆಯನ್ನು ಜೋಧಪುರದ ಬೀದಿಯಲ್ಲಿ ಎಸೆಯಲಾಯಿತು. ಅವರ ಹಿಂಸಾತ್ಮಕ ಸಾವು ಜುಬೇದಾ ಅವರ ಈಗಾಗಲೇ ದುರಂತ ಪರಂಪರೆಗೆ ಮತ್ತೊಂದು ಕರಾಳ ಅಧ್ಯಾಯವನ್ನು ಸೇರಿಸಿತು. ಇದು ಕೂಡ ಇನ್ನೂ ಬಗೆಹರಿಯದೆ ಇರುವ ಪ್ರಕರಣವಾಗಿದೆ. ಹೀಗಾಗಿ, ಜುಬೇದಾ ಅವರ ಸಾವು ಕೂಡ ಆಸ್ತಿಗಾಗಿ ಸಂಭವಿಸಿದ ಕೊಲೆ ಇರಬಹುದು ಎಂದು ಹಲವರು ಶಂಕಿಸಿದ್ದಾರೆ. ಆದರೆ ಇದರ ಬಗ್ಗೆ ತನಿಖೆಯೇನೂ ಆಗಲಿಲ್ಲ.
