7ನೇ ಕ್ಲಾಸ್​​ನಲ್ಲೇ ಅಮ್ಮನಿಗೆ ಸೀರೆ ಗಿಫ್ಟ್ ಕೊಟ್ಟಿದ್ದ ಕಿಚ್ಚ ಸುದೀಪ್

Oct 23, 2024, 4:18 PM IST

ತನ್ನ ಪಾಲಿನ ಅಸಲಿ ಶಕ್ತಿಯಾಗಿದ್ದ ತಾಯಿಯನ್ನ ಕಳೆದುಕೊಂಡಿರೋ ಕಿಚ್ಚ ಸುದೀಪ್, ಸದ್ಯ ತಾಯಿಯ ಅಂತಿಮ ವಿಧಿ ವಿಧಾನಗಳನ್ನ ಕ್ರಮಬದ್ಧವಾಗಿ ಮಾಡ್ತಾ ಇದ್ದಾರೆ. ಕಾವೇರಿ ನದಿಯಲ್ಲಿ ಅಮ್ಮನ ಅಸ್ಥಿ ವಿಸರ್ಜನೆ ಮಾಡಿರೋ ಸುದೀಪ್, ಅಮ್ಮನ ಆತ್ಮಕ್ಕೆ ಶಾಂತಿ ಸಿಗಲಿ ಅಂತ ಪ್ರಾರ್ಥಿಸಿದ್ದಾರೆ. ಅಮ್ಮ ಅಂದ್ರೆ ಎಲ್ಲರ ಪಾಲಿಗೂ ವಿಶೇಷವೇ,, ಸುದೀಪ್ ಪಾಲಿಗಂತೂ ಅಮ್ಮ ಅಂದ್ರೆ ಜೀವಕ್ಕಿಂತ ಹೆಚ್ಚು. ಕಿಚ್ಚ ಸುದೀಪ್ ತಮ್ಮ ತಾಯಿ ಸರೋಜಮ್ಮನವರನ್ನ ಕಳೆದುಕೊಂಡು ಇಂದಿಗೆ ಮೂರು ದಿನ. ತಾಯಿ ಅಗಲಿದಾಗಿನಿಂದಲೂ ಅವರ ಪಾರ್ಥೀವ ಶರೀರದ ಬಳಿಯೇ ಕುಳಿತಿದ್ದ ಸುದೀಪ್ , ಮತ್ತೆ ಅಮ್ಮನನ್ನ ನೋಡೋದಕ್ಕೆ ಆಗದು ಅನ್ನುವಂತೆ ಕಣ್ಣಲ್ಲಿ ಕಣ್ಣಿಟ್ಟು ನೋಡ್ತಾ ಕುಳಿತಿದ್ರು. ಭಾನುವಾರ ಸಂಜೆ ಕಣ್ಣೀರಧಾರೆ ಸುರಿಸುತ್ತಲೇ ವಿಲ್ಸನ್ ಗಾರ್ಡನ್ ಚಿತಾಗಾರದಲ್ಲಿ ತಾಯಿಗೆ ಅಂತಿಮ ಸಂಸ್ಕಾರ ನೆರವೇರಿಸಿದ್ರು. 

ಇದೀಗ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಗೋಸಾಯಿಘಾಟ್ ಬಳಿಯ ಕಾವೇರಿ ನದಿಯಲ್ಲಿ ತಾಯಿಯ ಅಸ್ಥಿಯನ್ನ ವಿಸರ್ಜನೆ ಮಾಡಿದ್ದಾರೆ ಸುದೀಪ್. ಕಿಚ್ಚನ ಕುಟುಂಬದವರು ಮಾತ್ರ ಭಾಗಿಯಾಗಿದ್ದ ಈ ಕಾರ್ಯದಲ್ಲಿ ಅಸ್ತಿಗೆ  ಪುರುಷ ಸೂಕ್ತ, ನಾರಾಯಣ ಸೂಕ್ತ, ಪಂಚಸೂಕ್ತಗಳಿಂದ  ರುದ್ರಾಭಿಷೇಕ ಮಾಡಿಸಿ, ಬಳಿಕ ಕಾವೇರಿ ನದಿಯಲ್ಲಿ ವಿಸರ್ಜನೆ ಮಾಡಲಾಗಿದೆ. ಎಲ್ಲ ವಿಧಿ ವಿಧಾನಗಳನ್ನ ಪೂರೈಸಿ ಅಮ್ಮನಿಗೆ ಮುಕ್ತಿ ಸಿಗಲಿ ಅಂತ ಪ್ರಾರ್ಥನೆ ಮಾಡಿದ್ದಾರೆ ಸುದೀಪ್. ಸಾಮಾನ್ಯವಾಗಿ ಕಲಾವಿದರು ಸಿನಿಮಾಗಳಲ್ಲಿ ಇಂಥಾ ಅಂತಿಮ ವಿಧಿ ವಿಧಾನದ ಎಷ್ಟೋ ದೃಶ್ಯಗಳಲ್ಲಿ ನಟನೆ ಮಾಡಿರ್ತಾರೆ. ಆದ್ರೆ ನಿಜ ಬದುಕಲ್ಲಿ ಇಂಥ ಸನ್ನಿವೇಶ ಎದುರಿಸೋದು ಅಷ್ಟು ಸುಲಭ ಅಲ್ಲ. ಅಂತೆಯೇ ಕಿಚ್ಚ ಕೂಡ ಈ ಸಮಯದಲ್ಲಿ ಭಾವುಕರಾಗಿ ಕಣ್ಣೀರು ಸುರಿಸಿದ್ದಾರೆ. 

ಹೌದು ಸುದೀಪ್​ಗೆ ಅಮ್ಮ ಅಂದ್ರೆ ಬೆಟ್ಟದಷ್ಟು ಪ್ರೀತಿ. ಚಿಕ್ಕ ವಯಸ್ಸಿಂದಲೂ ಅಮ್ಮನ ಜೊತೆಗೆ ವಿಶೇಷ ಬಾಂಡಿಂಗ್. ಚಿಕ್ಕವನಿದ್ದಾಗಲೇ ಅಮ್ಮನಿಗೆ ಒಳ್ಳೋಳ್ಳೆ ಬಟ್ಟೆ, ಒಡವೆ ಕೊಡಿಸಬೇಕು ಅಂದುಕೊಳ್ತಾ ಇದ್ರಂತೆ ಸುದೀಪ್. 7ನೇ ಕ್ಲಾಸ್ ಓದ್ತಾ ಇದ್ದಾಗ ಶಾಲೆಯಿಂದ ಆಗ್ರಾಕ್ಕೆ ಪ್ರವಾಸಕ್ಕೆ ಕರೆದುಕೊಂಡು ಹೋದಾಗ, ತನ್ನ ಪಾಕೆಟ್ ಮನಿಯಲ್ಲಿ ಉಳಿಸಿದ ಹಣ ದಿಂದ ಸುದೀಪ್ ಒಂದು ಸೀರೆ ಕೊಂಡು ತಂದಿದ್ರಂತೆ. ಮಗನ ಈ ಗಿಫ್ಟ್ ಕಂಡು ಭಾವುಕರಾಗಿದ್ದ ಸರೋಜಮ್ಮ ಕೊನೆಯವರೆಗೂ ಆ ಸೀರೆಯನ್ನ ಜೊತೆಗೆ ಇಟ್ಟುಕೊಂಡಿದ್ರು. ಇನ್ನೂ ಸುದೀಪ್ ಇಷ್ಟು ದೊಡ್ಡ ಯಶಸ್ಸು ಕಾಣೋದ್ರ ಹಿಂದೆ  ಅವರ ತಾಯಿಯ ಕೊಡುಗೆ ತುಂಬಾ ಇದೆ. 

ಸುದೀಪ್ ಆರಂಭಿಕ ದಿನಗಳಲ್ಲಿ ಸಿನಿಮಾಗಳಲ್ಲಿ ಯಶಸ್ಸು ಸಿಗದೇ ಸೋತು ಕೂತಾಗ, ಬೆನ್ನು ತಟ್ಟಿ ಪ್ರೋತ್ಸಾಹಿಸಿದವರು ಸರೋಜಮ್ಮ. ಸುದೀಪ್ ನಿರ್ದೇಶಕನಾಗೋದಕ್ಕೂ ಅಮ್ಮ ಕೊಟ್ಟ ಬೆಂಬಲವೇ ಕಾರಣ. ಸರೋಜಮ್ಮ ಆಸ್ಪತ್ರೆ ಸೇರಿದ ಹೊತ್ತಲ್ಲಿ ಸುದೀಪ್ ಬಿಗ್ ಬಾಸ್ ಶೂಟಿಂಗ್​ನಲ್ಲಿದ್ರು. ಕರ್ತವ್ಯವೇ ಮುಖ್ಯ ಅಂತ ಹೇಳಿದ ಅಮ್ಮನ ಮಾತಿನಂತೆ ಶೂಟಿಂಗ್ ಮುಗಿಸಿಯೇ ಅಮ್ಮನನ್ನ ನೋಡೋದಕ್ಕೆ ಬಂದ್ರು. ಆದ್ರೆ ಅಷ್ಟೊತ್ತಲ್ಲಿ ಅಮ್ಮ ಪ್ರಜ್ಞೆ ಕಳೆದುಕೊಂಡು ಸಾವು ಬದುಕಿನ ಮಧ್ಯೆ ಹೋರಾಡ್ತಾ ಇದ್ರು. ಕೊನೆಗೂ ಸುದೀಪ್​ಗೆ ಅಮ್ಮನನ್ನ ಮಾತನಾಡಿಸೋಕೆ ಆಗಲೇ ಇಲ್ಲ. ಈಗಲೂ ಆ ನೋವು ಸುದೀಪ್​ನ ಕಾಡ್ತಾ ಇದೆ. ನೆನೆಪಿಗೆ ಬಂದಾಗಲೆಲ್ಲಾ ಕಿಚ್ಚನ ಕಣ್ಣಲ್ಲಿ ಕಣ್ಣೀರಧಾರೆ ಹರೀತಾ ಇದೆ.