ವರ್ಷವೊಂದರಲ್ಲಿ ಆತ್ಮಹತ್ಯೆಗೆ ಶರಣಾದ ಅನ್ನದಾತರ ಲೆಕ್ಕ; ಆತಂಕ ತಂದ ಅಂಕಿ ಅಂಶ

Jan 13, 2020, 9:00 PM IST

ನವದೆಹಲಿ[ಜ. 13]  ರಾಷ್ಟ್ರೀಯ ಅಪರಾಧ ದಾಖಲೆಗಳ ವಿಭಾಗ 2018ನೇ ವರ್ಷದ ಅಪಘಾತ ಹಾಗೂ ಆತ್ಮಹತ್ಯೆಯಿಂದ ಮೃತಪಟ್ಟವರ ಕುರಿತ ಅಂಕಿಅಂಶಗಳನ್ನು  ಬಿಡುಗಡೆ ಮಾಡಿದೆ. ಈ ವರದಿಯನ್ವಯ 10,349 ರೈತರು ಹಾಗೂ ಕೃಷಿ ಕಾರ್ಮಿಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂಬ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ.

2018ರಲ್ಲಿ ಆತ್ಮಹತ್ಯೆಗೆ ಶರಣಾದ ರೈತರ ಸಂಖ್ಯೆಯಲ್ಲಿ ಕೊಂಚ ಇಳಿಕೆಯಾಗಿದೆ. 2016ರಲ್ಲಿ ಬರೋಬ್ಬರಿ 11,376 ಮಂದಿ ಆತ್ಮಹತ್ಯೆಗೆ ಶರಣಾಗಿದ್ದರು ಎಂಬುವುದು ಉಲ್ಲೇಖನೀಯ. ಇನ್ನು ದೇಶದಲ್ಲಿ ನಡೆದ ಒಟ್ಟು 134,516 ಆತ್ಮಹತ್ಯೆ ಪ್ರಕರಣಗಳಲ್ಲಿ ಶೇ. 7.7ರಷ್ಟು ಮಂದಿ ಕೃಷಿ ಕಾರ್ಮಿಕರಾಗಿದ್ದಾರೆ.

ಕೈಕೊಟ್ಟ ಹೆಂಡತಿ; ಸೆಲ್ಫಿ ಮಾಡಿಕೊಂಡೇ ಆತ್ಮಹತ್ಯೆ ಯತ್ನ

ಇನ್ನು 2018ರಲ್ಲಿ ಆತ್ಮಹತ್ಯೆ ಮಾಡಿಕೊಂಡ ಒಟ್ಟು 5,763 ಮಂದಿ ರೈತರಲ್ಲಿ 5,457 ಮಂದಿ ಪುರುಷರಾಗಿದ್ದರೆ,  306 ಮಂದಿ ಮಹಿಳೆಯರು. ಮತ್ತೊಂದೆಡೆ ಇದೇ ಸಾಲಿನಲ್ಲಿ ಆತ್ಮಹತ್ಯೆಗೆ ಶರಣಾದ ಒಟ್ಟು 4,586 ಕೃಷಿ ಕಾರ್ಮಿಕರ ಪೈಕಿ 4,071 ಪುರುಷರು ಹಾಗೂ 515 ಮಂದಿ ಮಹಿಳೆಯರು ಎಂಬುವುದು ಉಲ್ಲೇಖನೀಯ.

2018ರಲ್ಲಿ ದೇಶದಾದ್ಯಂತ ಒಟ್ಟು 1,34,516 ಆತ್ಮಹತ್ಯೆ ಪ್ರಕರಣಗಳು ವರದಿಯಾಗಿದ್ದವು. 2017ಕ್ಕೆ ಹೋಲಿಸಿದರೆ ಶೇ. 3.6ರಷ್ಟು ಏರಿಕೆಯಾಗಿದ್ದು, ಕಳೆದ ವರ್ಷ ಒಟ್ಟು 1,29,887 ಆತ್ಮಹತ್ಯೆ ಪ್ರಕರಣಗಳು ದಾಖಲಾಗಿದ್ದವು.

ವರದಿಯನ್ವಯ ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು, ಅಂದರೆ 17,972 ಆತ್ಮಹತ್ಯೆ ಪ್ರಕರಣಗಳು ದಾಖಲಾಗಿದ್ದರೆ, ತಮಿಳು ನಾಡಿನಲ್ಲಿ 13,896 ಮಂದಿ ಸೂಸೈಡ್ ಮಾಡಿಕೊಂಡಿದ್ದಾರೆ. ಪಶ್ಚಿಮ ಬಂಗಾಳದಲ್ಲಿ 13,255, ಮಧ್ಯಪ್ರದೇಶ 11,775 ಹಾಗೂ ಕರ್ನಾಟಕದಲ್ಲಿ 11,561 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.