‘ತಂಬಾಕಿನಿಂದ ಮಾಡಿದ್ದಲ್ಲ, ಅದು ಆಯುರ್ವೇದಿಕ್ ಬೀಡಿ: ಅಭಿಮಾನಿಗಳಿಗೆ ತಿಳಿ ಹೇಳಿದ ಮಹೇಶ್ ಬಾಬು

Jan 18, 2024, 12:25 PM IST

ತೆಲುಗು ಚಿತ್ರರಂಗದ ಖ್ಯಾತ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ ಮತ್ತು ಟಾಲಿವುಡ್ ಸೂಪರ್‌ಸ್ಟಾರ್ ಮಹೇಶ್ ಬಾಬು ಅಭಿನಯದ 'ಗುಂಟೂರು ಖಾರಂ' ಚಿತ್ರ ಜನವರಿ 12 ರಂದು ರಿಲೀಸ್‌ ಆಯಿತು. ಈಗಾಗಲೇ ಈ ಸಿನಿಮಾ 94 ಕೋಟಿ ರೂ. ಗಳಿಕೆ ಕಂಡಿದೆ. ಇದೀಗ ಚಿತ್ರದ ಕುರಿತು ಮಾತನಾಡುವಾಗ ಮಹೇಶ್‌ ಬಾಬು ನೀಡಿದ ಹೇಳಿಕೆ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ‘ಗುಂಟೂರ್ ಖಾರ’ ಚಿತ್ರದಲ್ಲಿ ನಟ ಮಹೇಶ್ ಬಾಬು ರೌಡಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದುದ್ದಕ್ಕೂ ಬೀಡಿ ಸೇದಿದ್ದು ದೊಡ್ಡ ವಿವಾದವಾಗಿತ್ತು. ಈ ಕುರಿತು ಕೇಳಿ ಬಂದ ಪ್ರಶ್ನೆಗಳಿಗೆ ಇತ್ತೀಚಿನ ಸಂದರ್ಶನವೊಂದರಲ್ಲಿ ಅವರು ಸ್ಪಷ್ಟನೆ ನೀಡಿದ್ದು, ತಾವು ಸೇದಿದ್ದ ಬೀಡಿ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಗುಂಟೂರು ಖಾರಂನಲ್ಲಿ ನಾನು ಬಳಸುತ್ತಿದ್ದ ಬೀಡಿ ಸಾಮಾನ್ಯ ಬೀಡಿ ಅಲ್ಲ, ಅದು ದಾಲ್ಚಿನ್ನಿ ಎಲೆಯಿಂದ ಮಾಡಿದ ಆಯುರ್ವೇದ ಬೀಡಿ, ಚಿತ್ರೀಕರಣ ಪ್ರಾರಂಭವಾದಾಗ, ನನಗೆ ಮೊದಲ ಬಾರಿಗೆ ಮೂಲ ಬೀಡಿಯನ್ನು ನೀಡಲಾಯಿತು, ಅದನ್ನು ಬಳಸಿದ ತಕ್ಷಣ ನನಗೆ ತಲೆನೋವು ಬಂತು. ಈ ವಿಚಾರ ನಿರ್ದೇಶಕರಿಗೂ ತಿಳಿಯಿತು ಎಂದರು.