ಪ್ರಯೋಗಾಲಯದಲ್ಲಿ ಪ್ರಾಣಿ ಹತ್ಯೆ ನಿಷೇಧಿಸಿ ಪದವಿ ಪೂರ್ವ ಇಲಾಖೆ ಸುತ್ತೋಲೆ ಹೊರಡಿಸಿದೆ. ಸುತ್ತೋಲೆಯಲ್ಲಿ ಪಿಯುಸಿ ತರಗತಿಗಳಲ್ಲಿ ವಿಜ್ಞಾನ ವಿದ್ಯಾರ್ಥಿಗಳಿಗೆ ಜೀರ್ಣಾಂಗ ವ್ಯವಸ್ಥೆ, ರಕ್ತಪರಿಚಲನೆ, ದೇಹಾಂಗ ಅಧ್ಯಯನ ಸಂದರ್ಭದಲ್ಲಿ ಕಪ್ಪೆ, ಮೀನು ಸೇರಿದಂತೆ ಯಾವುದೇ ಪ್ರಾಣಿ- ಜಂತುಗಳನ್ನು ಬಳಸುವಂತಿಲ್ಲ ಎಂದು ಹೇಳಿದೆ.
ಬೆಂಗಳೂರು[ನ.10]: ಪ್ರಾಣಿಗಳು ಹಾಗೂ ಜೀವಜಂತುಗಳನ್ನು ಮುಂದಿನ ಪೀಳಿಗೆಯವರಿಗೂ ಉಳಿಸುವುದು ಮತ್ತು ಭೂ ತಾಪಮಾನ ತಡೆಗಟ್ಟುವ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಪದವಿ ಪೂರ್ವ ಕಾಲೇಜುಗಳ ಪ್ರಯೋಗಾಲಯದಲ್ಲಿ ಹಾಗೂ ವಿದ್ಯಾರ್ಥಿಗಳಿಗೆ ನೀಡುವ ತರಬೇತಿಗಳಲ್ಲಿ ಪ್ರಾಣಿಗಳನ್ನು ಬಳಸದಂತೆ ಪದವಿ ಪೂರ್ವ ಶಿಕ್ಷಣ ಇಲಾಖೆಯು ಸುತ್ತೋಲೆ ಹೊರಡಿಸಿದೆ.
ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಸಂದರ್ಭದಲ್ಲಿ ಆಧುನಿಕ ಮಾದರಿಗಳನ್ನು ಬಳಸುವ ಮೂಲಕ ಪ್ರಾಣಿಗಳನ್ನು ರಕ್ಷಿಸಬೇಕಿದೆ. ಜೀವ ವೈವಿಧ್ಯತೆಗಳನ್ನು ಸಂರಕ್ಷಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಈ ಮೂಲಕ ವಿನೂತನ ಪ್ರಯೋಗಗಳನ್ನು ಪರಿಣಾಮಕಾರಿಯಾಗಿ ಬೋಧನೆ ಮಾಡಬೇಕಿದೆ. ಈ ಕಾರ್ಯಕ್ಕೆ ರಾಜ್ಯ ಎಲ್ಲ ಕಾಲೇಜುಗಳ ಅಧ್ಯಾಪಕ ವೃಂದ ಕೈಜೋಡಿಸಬೇಕು ಎಂದು ಸೂಚನೆ ನೀಡಿದೆ.
ಪಿಯುಸಿ ತರಗತಿಗಳಲ್ಲಿ ವಿಜ್ಞಾನ ವಿದ್ಯಾರ್ಥಿಗಳಿಗೆ ಜೀರ್ಣಾಂಗ ವ್ಯವಸ್ಥೆ, ರಕ್ತಪರಿಚಲನೆ, ದೇಹಾಂಗ ಅಧ್ಯಯನ ಸಂದರ್ಭದಲ್ಲಿ ಕಪ್ಪೆ, ಮೀನು ಸೇರಿದಂತೆ ಯಾವುದೇ ಪ್ರಾಣಿ- ಜಂತುಗಳನ್ನು ಬಳಸುವಂತಿಲ್ಲ ಎಂದು ಹೇಳಿದೆ.
ಪೀಪಲ್ ಫಾರ್ ದಿ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್ (ಪೇಟಾ) ಸಂಸ್ಥೆ ಸಲಹೆಗಾರ ಮುಂಬೈನ ಡಾ.ರೋಹಿತ್ ಭಾಟಿಯಾ ಕಳೆದ ಆಗಸ್ಟ್ನಲ್ಲಿ ಇಲಾಖೆಗೆ ಪತ್ರ ಬರೆದಿದ್ದರು. ಶಾಲಾ ಕಲಿಕೆಯ ವನ್ಯ ಜೀವ ಸಂರಕ್ಷಣಾ ಕಾಯ್ದೆ- 1972ರ ಪ್ರಕಾರ ಉಭಯ ಚರಗಳು ಹಾಗೂ ಕೆಲವು ಕೀಟಗಳನ್ನು ಕೊಲ್ಲುವಂತಿಲ್ಲ ಎಂದು ಮನವಿ ಮಾಡಿದ್ದರು. ಈ ಕಾಯ್ದೆ ಅನ್ವಯ ಪದವಿ ಪೂರ್ವ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.