ಸಂತ, ಸ್ವಾಮೀಜಿ, ಶ್ರೀ ಶ್ರೀ ಶ್ರೀ ತುಮಕೂರು ಸಿದ್ದಗಂಗಾ ಶಿವಕುಮಾರ ಗುರು ಕೈವಲ್ಯ

By Web DeskFirst Published Jan 21, 2019, 7:39 AM IST
Highlights

ಶತಾಯುಷಿ, ನಡೆದಾಡುವ ದೇವರೆಂದೇ ಕರೆಯಲ್ಪಡುತ್ತಿದ್ದ ತುಮಕೂರು ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ 111 ವರ್ಷಗಳ ಸುದೀರ್ಘ ಪ್ರಯಾಣವನ್ನು ಮುಗಿಸಿದ್ದಾರೆ.

ತುಮಕೂರು[ಜ.16]: ವರ್ಷದ ಅಂತ್ಯಕ್ಕೆ ಮತ್ತೊಂದು ಅರಗಿಸಿಕೊಳ್ಳಲಾಗದ ಸುದ್ದಿ ಬಂದೆರಗಿದೆ. ತುಮಕೂರಿನ ಸಿದ್ಧಗಂಗಾ ಸ್ವಾಮೀಜಿ ಸಾಧನೆಗಳ ಭಂಡಾರವನ್ನು ನಮ್ಮೆಲ್ಲರಿಗೆ ಬಿಟ್ಟು ಅಗಲಿದ್ದಾರೆ. 111 ವರ್ಷ ವಯಸ್ಸಾದರೂ ಚಟುವಟಿಕೆಯಿಂದಲೇ ಇದ್ದ ಸ್ವಾಮೀಜಿ ನಮ್ಮೊಂದಿಗೆ ಇಲ್ಲ ಎಂಬುದನ್ನು ಸದ್ಯಕ್ಕೆ, ಸುಲಭಕ್ಕೆ ಅರಗಿಸಿಕೊಳ್ಳಲು ಸಾಧ್ಯವೇ ಇಲ್ಲ.

1 ಏಪ್ರಿಲ್ 1907 ರಲ್ಲಿ ಮಾಗಡಿ ತಾಲೂಕಿನ ವೀರಾಪುರ ಜನಿಸಿದ್ದ ಸ್ವಾಮೀಜಿ ಅವರಿಗೆ ಇಡೀ ಪ್ರಪಂಚದಾದ್ಯಂತ ಭಕ್ತರಿದ್ದಾರೆ. ಖುದ್ದು ಪ್ರಧಾನ ಮಂತ್ರಿ, ರಾಷ್ಟ್ರಪತಿಗಳ ಆದಿಯಾಗಿ ಎಲ್ಲರೂ ಶ್ರೀಗಳು ಇದ್ದಲ್ಲಿಗೆ ಬಂದು ದರ್ಶನ ಪಡೆದುಕೊಂಡು ಹೋದ ಅದೆಷ್ಟೋ ಉದಾಹರಣೆಗಳಿವೆ.

ಕರ್ನಾಟಕ ರತ್ನ ಡಾ. ಶ್ರೀ.ಶಿವಕುಮಾರ ಸ್ವಾಮೀಜಿಗಳನ್ನು ನಡೆದಾಡುವ ದೇವರು ಎಂದೇ ಎಲ್ಲರೂ ಸಂಬೋಧಿಸುತ್ತಾರೆ. ಅವರ ಸಾಧನೆ ಮತ್ತು ಕೊಡುಗೆಯನ್ನು ಅಕ್ಷರಗಳ ಮುಖೇನ ಕಟ್ಟಿಕೊಡುವುದು ಅಸಾಧ್ಯ, ಅಕ್ಷರ ಮತ್ತು ಅನ್ನ ದಾಸೋಹದ ಮೂಲಕ ಲಕ್ಷಾಂತರ ವಿದ್ಯಾರ್ಥಿಗಳ ಬಾಳಲ್ಲಿ ಹೊಸ ಬೆಳಕನ್ನು ಮೂಡಿಸಿದ ಸೂರ್ಯ ನಮ್ಮನ್ನೆಲ್ಲ ಅಗಲಿದ್ದಾರೆ.

ಚೆನ್ನೈನಲ್ಲಿ ಚಿಕಿತ್ಸೆ: ಕೆಲ ದಿನಗಳ ಹಿಂದಷ್ಟೇ ಪಿತ್ತಕೋಶ ಮತ್ತು ಯಕೃತ್ತಿನ ಸೋಂಕು ಕಾಣಿಸಿಕೊಂಡಿದ್ದ ಶ್ರೀಗಳನ್ನು ಚೆನ್ನೈನ ರೆಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. 13 ದಿನಗಳ ಕಾಲ ಚಿಕಿತ್ಸೆ ಪಡೆದುಕೊಂಡ ಸ್ವಾಮೀಜಿ ಮಠಕ್ಕೆ ಹಿಂದಿರುಗಿ ತಮ್ಮ ಎಂದಿನ ಪೂಜಾ ಕೈಂಕರ್ಯದಲ್ಲಿ ತೊಡಗಿಕೊಂಡಿದ್ದರು. ರೆಲಾ ಆಸ್ಪತ್ರೆಯಲ್ಲಿದ್ದಾಗ ಶ್ರೀಗಳ ಒತ್ತಾಯದ ಮೇರೆಗೆ ಐಸಿಯುನಲ್ಲೇ ಅವರಿಗೆ ಇಷ್ಟಲಿಂಗ ಪೂಜೆ ನೆರವೇರಿಸಲು ಅವಕಾಶ ಕಲ್ಪಿಸಲಾಗಿತ್ತು. ಶ್ರೀಗಳಿಗೆ ವಿಶ್ರಾಂತಿ ಅಗತ್ಯ ಇದ್ದ ಕಾರಣ ಡಿಸ್ಚಾರ್ಜ್ 2 ವಾರ ಕಾಲ ಭಕ್ತರಿಗೆ ದರ್ಶನ ಸಾಧ್ಯವಿಲ್ಲ ಎಂದು ಹೇಳಲಾಗಿತ್ತು.

ಇದಾದ ಕೆಲ ದಿನಗಳಲ್ಲೇ ಶ್ರೀಗಳ ಶ್ವಾಸಕೋಶದಲ್ಲಿ ಮತ್ತೆ ನೀರು ತುಂಬಿಕೊಂಡು ಸೋಂಕು ತಗುಲಿತ್ತು. ಹೀಗಾಗಿ ಅವರನ್ನು ತುಮಕೂರಿನ ಸಿದ್ಧಗಂಗಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಮುಂದುವರೆಸಲಾಗಿತ್ತು. ಶ್ರೀಗಳ ತಪಾಸಣೆ ನಡೆಸಿದ್ದ ವೈದ್ಯರು ಆರಂಭದಲ್ಲಿ ಶ್ವಾಸಕೋಶದಲ್ಲಿ ತುಂಬಿಕೊಳ್ಳುತ್ತಿದ್ದ ನೀರು ಹೊಟ್ಟೆಗೂ ವ್ಯಾಪಿಸಲಾರಂಭಿಸಿದೆ ಚಿಕಿತ್ಸೆ ನೀಡಿದರೂ ನಿರಿಕ್ಷಿತ ಮಟ್ಟದಲ್ಲಿ ಚೇತರಿಕೆ ಕಾಣುತ್ತಿಲ್ಲ, ಶ್ರೀಗಳಿಗೆ ಉಸಿರಾಡಲೂ ಕಷ್ಟವಾಗುತ್ತಿರುವುದರಿಂದ ವೆಂಟಿಲೇಟರ್‌ನಲ್ಲಿಡಲಾಗಿದೆ ಎಂದು ವೈದ್ಯರು ತಿಳಿಸಿದ್ದರು.

ಆದರೆ ಶುಕ್ರವಾರದಿಂದ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆಯಾಗಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದರು. ಇದು ಬವೈದ್ಯ ಲೋಕವನ್ನೇ ಅಚ್ಚರಿಗೊಳಪಡಿಸಿತ್ತು. ಭಕ್ತ ವರ್ಗಕ್ಕೂ ನೆಮ್ಮದಿ ನೀಡಿತ್ತು. ಶ್ರೀಗಳ ದೇಹ ಚಿಕಿತ್ಸೆಗೆ ಸ್ಪಂದಿಸದೆ, ಅವರು ಲಿಂಗೈಕ್ಯರಾಗಿದ್ದಾರೆ. ಶ್ರೀಗಳ ಅಗಲುವಿಕೆಯಿಂದ ಭಕ್ತಗಣದಲ್ಲಿ ಶೋಕ ಮಡುಗಟ್ಟಿದೆ.

click me!