ಮದುವೆ ಅಂದ್ರೆ ಸುಮ್ಮನೇನಾ? ಟೊಮ್ಯಾಟೋದಲ್ಲೂ ಹೊಡ್ಸಿಕೊಳ್ಳಬೇಕು, ನಾಯಿನೂ ಕಟ್ಕೋಬೇಕು!

By Suvarna NewsFirst Published Jun 28, 2020, 4:46 PM IST
Highlights

ಮದುವೆ ಶಾಸ್ತ್ರ ಅಂದ್ರೆ ಕೆಲವರಿಗೆ ಚಳಿ-ಜ್ವರ ಬರುತ್ತೆ. ಭಾರತದ ಮದುವೆ ಅಂದ್ರೇನೆ ಹಾಗೇ. ಶಾಸ್ತ್ರ, ಸಂಪ್ರದಾಯಗಳು. ಇವುಗಳಲ್ಲೂ ಕೆಲವಂತೂ ಚಿತ್ರ-ವಿಚಿತ್ರವಾಗಿದ್ದು, ಕೇಳೋದಕ್ಕೂ, ನೋಡೋದಕ್ಕೂ ಮಜಾವಾಗಿರುತ್ತವೆ.

ಮದುವೆ ಸ್ವರ್ಗದಲ್ಲಿ ನಿಶ್ಚಯವಾಗುತ್ತಂತೆ. ಆದ್ರೆ ಭಾರತದಲ್ಲಿ ವಿವಾಹಕ್ಕಾಗಿಯೇ ಕೆಲವರು ಸ್ವರ್ಗವನ್ನೇ ಧರೆಗಿಳಿಸುತ್ತಾರೆ. ನಿಜ, ಭಾರತದಲ್ಲಿ ನಡೆಯುವ ಮದುವೆಗಳಲ್ಲಿರುವಷ್ಟು ಶ್ರೀಮಂತಿಕೆ, ವೈವಿಧ್ಯತೆ ಜಗತ್ತಿನ ಬೇರೆ ಯಾವ ರಾಷ್ಟ್ರಗಳಲ್ಲೂ ಕಾಣಸಿಗದು. ಇದೇ ಕಾರಣಕ್ಕೆ ವಿದೇಶಿಯರು ಕೂಡ ಭಾರತದಲ್ಲಿ ನಡೆಯುವ ಮದುವೆ ನೋಡಲು ಹಾತೊರೆಯೋದು. ಜೊತೆಗೆ  ಭಾರತೀಯ ಮದುವೆ ಶಾಸ್ತ್ರಕ್ಕೆ ಮನಸೋತು ಇಲ್ಲಿನ ಸಂಪ್ರದಾಯಕ್ಕನುಗುಣವಾಗಿ ಹಸೆಮಣೆಯೇರೋದು. ಭಾರತದಲ್ಲಿ ಮದುವೆ ಅಂದ್ರೇನೆ ಹಬ್ಬ. ಇಲ್ಲಿನ ಮದುವೆಗಳಲ್ಲಿನ ಕೆಲವು ಶಾಸ್ತ್ರಗಳು ಆಸಕ್ತಿಕರ ಮಾತ್ರವಲ್ಲ, ಅಷ್ಟೇ ವಿಚಿತ್ರ ಕೂಡ! ಅಂಥ ಕೆಲವು ಇಂಟ್ರೆಸ್ಟಿಂಗ್ ಆಚರಣೆಗಳ ಮಾಹಿತಿ ಇಲ್ಲಿದೆ.

ತಿರಸ್ಕಾರದ ನೋವು ಬೆಂಬಿಡದೆ ಕಾಡುತ್ತಿದೆಯಾ?

ವರನಿಗೆ ಟೊಮ್ಯಾಟೋ ಪೆಟ್ಟು!
ಮದುವೆ ಮನೆಗೆ ಆಗಮಿಸುವ ವರನಿಗೆ ಗುಲಾಬಿ ಅಥವಾ ಮಲ್ಲಿಗೆ ಹೂಗಳ ಸುರಿಮಳೆಗೈದು ಸ್ವಾಗತಿಸೋದು ಕಾಮನ್. ಆದ್ರೆ ಉತ್ತರ ಪ್ರದೇಶದ ಬುಡಕಟ್ಟು ಜನಾಂಗವೊಂದರಲ್ಲಿ ನಡೆಯುವ ಮದುವೆಗೆ ವರನಿಗೆ ಟೊಮ್ಯಾಟೋ ಹಣ್ಣುಗಳನ್ನು ಎಸೆದು ಸ್ವಾಗತ ಕೋರಲಾಗುತ್ತೆ! ಈ ರೀತಿ ವಿಚಿತ್ರ ಸಂಪ್ರದಾಯದಿಂದ ಪ್ರಾರಂಭಗೊಳ್ಳುವ ಸಂಬಂಧದಲ್ಲಿ ಪತಿ-ಪತ್ನಿ ನಡುವೆ ಭವಿಷ್ಯದಲ್ಲಿ ಗಾಢ ಪ್ರೀತಿಯೊಂದು ಚಿಗುರೊಡೆಯುತ್ತದೆ ಎಂಬುದು ಆ ಬುಡಕಟ್ಟು ಜನರ ತಲಾತಲಾಂತರದ ನಂಬಿಕೆ.

ಮಕ್ಕಳ ಮದುವೆಗೆ ಅಮ್ಮನಿಗೇ ಆಹ್ವಾನವಿಲ್ಲ
ಮಕ್ಕಳ ಮದುವೆ ಕಣ್ತುಂಬಿಕೊಳ್ಳಬೇಕು ಎಂಬುದು ಎಲ್ಲ ತಾಯಂದಿರ ಹೆಬ್ಬಯಕೆ. ಆದ್ರೆ ಬೆಂಗಾಲಿ ಸಾಂಪ್ರದಾಯಿಕ ಮದುವೆಯಲ್ಲಿ ವರ ಹಾಗೂ ವಧುವಿನ ತಾಯಿ ಪಾಲ್ಗೊಳ್ಳುವಂತಿಲ್ಲ. ಮದುವೆಯಲ್ಲಿ ತಾಯಿ ಭಾಗವಹಿಸೋದ್ರಿಂದ ಮಕ್ಕಳ ದಾಂಪತ್ಯ ಬದುಕು ಚೆನ್ನಾಗಿರೋದಿಲ್ಲ ಎಂಬ ನಂಬಿಕೆ ಪಶ್ಚಿಮ ಬಂಗಾಳದ ಜನರಲ್ಲಿದೆ. ಇದೇ ಕಾರಣಕ್ಕೆ ಮಕ್ಕಳ ಮದುವೆ ಕಾರ್ಯಕ್ರಮಕ್ಕೆ ತಾಯಿಗೇ ಪ್ರವೇಶ ನಿರ್ಬಂಧ!

ಅತ್ತೆ-ಮಾವನನ್ನು ಡೀಲ್ ಮಾಡೋದ ಕಲಿತರೆ ಬದುಕು ಬಿಂದಾಸ್!

ಮೀನಿನ ಒಪ್ಪಿಗೆ ಅಗತ್ಯ
ಮಣಿಪುರದಲ್ಲಿ ವಿವಾಹದ ದಿನ ವಿಶಿಷ್ಟವಾದ ಒಂದು ಆಚರಣೆಯಿದೆ. ಅದೇನಂದ್ರೆ ವರ ಮತ್ತು ವಧು ಕೊಳದಲ್ಲಿ ತಲಾ ಒಂದು ಮೀನು ಬಿಡಬೇಕು. ಈ ಮೀನುಗಳು ನೀರಿನಲ್ಲಿ ಒಟ್ಟಾಗಿ ಸಾಗಿದ್ರೆ ಜೀವನದುದ್ದಕ್ಕೂ ನವ ವಧುವರರು ಜೊತೆಯಾಗಿರುತ್ತಾರೆ ಎಂಬುದು ನಂಬಿಕೆ. ವಿವಾಹವಾದವರು ಮುಂದೆ ಒಟ್ಟಾಗಿ ಸಾಗುತ್ತಾರೋ ಇಲ್ಲ ಕವಲುದಾರಿ ಹಿಡಿಯುತ್ತಾರೋ ಗೊತ್ತಿಲ್ಲ. ಆದ್ರೆ ಮದುವೆ ದಿನ ಕೊಳಕ್ಕೆ ಬಿಟ್ಟ ಮೀನುಗಳು ಒಟ್ಟಿಗೆ ಸಾಗಿದ್ರೆ ಮೀನು ಬಿಟ್ಟವರಿಗೂ, ಬಿಡುವಂತೆ ಹೇಳಿದವರಿಗೂ ಖುಷಿ ಆಗೋದಂತೂ ನಿಜ.

ಕಾಲು ತೊಳೆದ ಹಾಲು ಕುಡಿಯೋದು
ನಡೆದಾಡುವ ಜಾಗದಲ್ಲಿ ತಿಂಡಿ ಬಿದ್ರೆ ಅದನ್ನು ಎತ್ತಿ ಬಾಯಿಗೆ ಹಾಕೊಳ್ಳದೆ ಡಸ್ಟ್‍ಬಿನ್‍ಗೆ ಎಸೆಯುತ್ತೇವೆ. ಕಾರಣ ಕಾಲಿನ ಮೂಲಕ ಕೀಟಾಣುಗಳು ನೆಲ ಸೇರುತ್ತವೆ ಎಂದು. ಪಾದಗÀಳನ್ನು ಅದೆಷ್ಟೇ ಕ್ಲೀನಾಗಿ ತೊಳೆದ್ರು ಕಾಲಡಿಗೆ ಸಿಕ್ಕ ವಸ್ತು ಅಪವಿತ್ರವಾಯಿತೆಂದೇ ಭಾವಿಸುತ್ತೇವೆ. ಹೀಗಿರುವಾಗ ನಿಮ್ಮ ಪಾದಗಳನ್ನು ಹಾಲಿನಿಂದ ತೊಳೆದು ಅದನ್ನು ಕುಡಿಯುವಂತೆ ಹೇಳಿದ್ರೆ ಏನ್ ಮಾಡ್ತೀರಾ? ಕುಡಿತ್ತೀರೋ, ಬಿಡುತ್ತೀರೋ ಗೊತ್ತಿಲ್ಲ, ಆದ್ರೆ ಒಂದು ಕ್ಷಣ ಗಲಿಬಿಲಿಗೊಳ್ಳುವುದಂತೂ ಪಕ್ಕಾ. ಆದ್ರೆ ಗುಜರಾತ್‍ನಲ್ಲಿ ಮದುವೆ ದಿನ ವಧುವಿನ ತಂದೆ-ತಾಯಿ ವರನ ಪಾದಗಳನ್ನು ಹಾಲು ಹಾಗೂ ಜೇನಿನಿಂದ ತೊಳೆಯುತ್ತಾರೆ. ಮಧುಪರ್ಕ ಎನ್ನುವ ಪಾದ ತೊಳೆದ ಈ ಹಾಲನ್ನು ವರ ಕುಡಿಯಬೇಕು. ಮದುವೆಯಾದ ಮೇಲೆ ಬದುಕಿನಲ್ಲಿ ಇಂಥ ಇಷ್ಟವಿಲ್ಲದ ಅನೇಕ ಕೆಲಸಗಳನ್ನು ಮಾಡಬೇಕಾಗುತ್ತದೆ ಎಂಬುದು ಈ ಆಚರಣೆಯ ಸೂಚನೆಯಾಗಿರಬಹುದು!

ನಾಯಿ ಜೊತೆ ಮದುವೆ
ಭಾರತದ ಕೆಲವು ಭಾಗಗಳಲ್ಲಿ ಹೆಣ್ಣು ನಾಯಿ ಅಥವಾ ಮರದೊಂದಿಗೆ ಮದುವೆ ಮಾಡಿಕೊಂಡ ಬಳಿಕವಷ್ಟೇ ಪುರುಷನೊಂದಿಗೆ ವಿವಾಹವಾಗಬಹುದು. ಈ ರೀತಿ ಮಾಡದಿದ್ರೆ ಮದುವೆ ಬಳಿಕ ಪತಿ ಅಥವಾ ಪತ್ನಿ ಸಾಯುತ್ತಾರೆ ಎಂಬ ಮೂಢನಂಬಿಕೆ ಕೆಲವು ಬುಡಕಟ್ಟು ಜನಾಂಗದಲ್ಲಿದೆ.

ತಂಗಿಯಿಂದ ಮಾತ್ರ ಇವನ್ನೆಲ್ಲ ಕಲಿಯೋಕೆ ಸಾಧ್ಯ!

ವಧುವಿಗೆ ಅಜ್ಞಾತವಾಸ
ಕೆಲವು ಆದಿವಾಸಿ ಸಮುದಾಯಗಳಲ್ಲಿ ಮದುವೆಯಾದ ಬಳಿಕ ಹೆಣ್ಣನ್ನು ಆಕೆಯ ಪತಿಯೊಂದಿಗೆ ಅಜ್ಞಾತ ಸ್ಥಳದಲ್ಲಿ ಒಂದು ವರ್ಷಗಳ ಕಾಲ ಇರಿಸಲಾಗುತ್ತದೆ. ಈ ಅವಧಿಯಲ್ಲಿ ಆಕೆಯನ್ನು ಯಾರೊಂದಿಗೂ ಬೆರೆಯಲು ಬಿಡೋದಿಲ್ಲ. ಒಂದು ವರ್ಷಗಳ ಬಳಿಕ ಗ್ರಾಮದ ಹಿರಿಯರು ಈ ಮದುವೆಯನ್ನು ಊರ್ಜಿತಗೊಳಿಸುತ್ತಾರೆ. ಆ ಬಳಿಕ ಅದ್ದೂರಿ ಕಾರ್ಯಕ್ರಮ ಆಯೋಜಿಸಿ ವಿವಾಹದ ಸಂಭ್ರಮವನ್ನು ಹಂಚಿಕೊಳ್ಳುತ್ತಾರೆ.

ಹಾರ ಹಾಕಿದ್ರೆ ಮದುವೆ ಮುಗಿಯಿತು
ಮದುವೆ ಅಂದ್ರೆ ಅದೆಷ್ಟು ಸಂಪ್ರದಾಯಗಳು, ವಿಧಿ ವಿಧಾನಗಳು. ಆದ್ರೆ ಅಸ್ಸಾಂನ ರಭಾ ಬುಡಕಟ್ಟು ಜನಾಂಗದಲ್ಲಿ ವಧು-ವರರು ಹಾರ ಬದಲಾಯಿಸಿಕೊಂಡ್ರೆ ಸಾಕು, ಮದುವೆ ಮುಗಿದಂತೆ. ಬಹುಶಃ ಇದು ಭಾರತದ ಅತ್ಯಂತ ಸರಳ ವಿವಾಹವಾಗಿರಬಹುದು. 

click me!