Town Municipal Council Election : ಡಿಕೆ ಸುರೇಶ್- ಎಚ್‌ಡಿಕೆ ಅಖಾಡಕ್ಕೆ - ಪ್ರಭಾವಿಗಳ ಫೈಟ್

Kannadaprabha News   | Asianet News
Published : Dec 26, 2021, 03:52 PM IST
Town Municipal Council Election :  ಡಿಕೆ ಸುರೇಶ್- ಎಚ್‌ಡಿಕೆ ಅಖಾಡಕ್ಕೆ - ಪ್ರಭಾವಿಗಳ ಫೈಟ್

ಸಾರಾಂಶ

 ಬಿಡದಿ ಪುರಸಭೆ : ರಂಗೇರಿದ ಚುನಾವಣಾ ಕಣ ಕಾಂಗ್ರೆಸ್‌ಗೆ ಛಲ, ಜೆಡಿ​ಎಸ್‌ಗೆ ಪ್ರತಿಷ್ಠೆ - ಅಧಿಕ ವಾಡ್‌ ರ್‍ಗಳಲ್ಲಿ ಕೈ - ದಳದ ನೇರ ಪೈಪೋಟಿ ಕೆಲ ಅಭ್ಯರ್ಥಿಗಳಿಂದ ಒಂದೋಟಿಗೆ 5ರಿಂದ 20 ಸಾವಿರ!  

ವರದಿ : ಎಂ.ಅಫ್ರೋಜ್ ಖಾನ್‌

 ರಾಮನಗರ (ಡಿ.26):  ಕೈಗಾರಿಕೆ ಕೇಂದ್ರವಾಗಿ ಗುರುತಿಸಿಕೊಂಡು ಎರ​ಡನೇ ಚುನಾವಣೆ ((Election) ಎದುರಿಸುತ್ತಿರುವ ಬಿಡದಿ (Bidadi) ಪುರಸಭೆಯಲ್ಲಿ ಅಧಿಕಾರದ ಗದ್ದುಗೆ ಹಿಡಿಯಲು ಕಾಂಗ್ರೆಸ್‌ (Congress) ಮತ್ತು ಜೆಡಿಎಸ್‌ (JDS) ನಡೆಸುತ್ತಿರುವ ತೀವ್ರ ಪೈಪೋಟಿಯಿಂದಾಗಿ ಚುನಾವಣಾ (Election) ಕಣ ರಂಗೇರಿದೆ. ಪುರಸಭೆ ಚುನಾವಣೆಯ ಮತದಾನಕ್ಕೆ ಇನ್ನು ಎರಡು ದಿನ ಬಾಕಿ ಇರುವಂತೆಯೇ ಕಾಂಗ್ರೆಸ್‌ (Congress) ನಾಯಕ ಸಂಸದ ಡಿ.ಕೆ.​ಸು​ರೇಶ್‌ (DK Suresh) ಹಾಗೂ ಜೆಡಿಎಸ್‌ (JDS)  ನಾಯಕ ಮಾಜಿ ಸಿಎಂ ಕುಮಾ​ರ​ಸ್ವಾ​ಮಿ​ರ​ವರು ವಾರ್ಡ್‌ವಾರು ಅಭ್ಯರ್ಥಿಗಳೊಂದಿಗೆ ಬಿರುಸಿನ ಪ್ರಚಾರ ನಡೆಸಿ ಮುಗಿ​ಸಿ​ದ್ದಾರೆ.

ಕುಮಾ​ರ​ಸ್ವಾಮಿ (Kumaraswamy) ಹಾಗೂ ಡಿ.ಕೆ.​ಸು​ರೇಶ್‌ (DK Suresh) ಆಗ​ಮ​ನಕ್ಕೂ ಮುನ್ನ ಚುನಾ​ವಣೆ (Election) ಬಿರುಸು ಪಡೆ​ದಿ​ರ​ಲಿಲ್ಲ. ಇಬ್ಬರು ನಾಯ​ಕರು ಅಖಾಡ ಪ್ರವೇ​ಶಿ​ಸು​ತ್ತಿ​ದ್ದಂತೆ ಚುನಾ​ವಣಾ ಕಣ ರಂಗೇ​ರಿತು. ಮುಂಬ​ರುವ ಮಾಗಡಿ ವಿಧಾ​ನ​ಸಭಾ ಚುನಾ​ವಣಾ (Assembly Election) ದೃಷ್ಟಿ​ಯಿಂದ ಈ ಚುನಾ​ವಣೆ ಶಾಸಕ ಎ.ಮಂಜು​ನಾಥ್‌ (A Manjunath) ಹಾಗೂ ಮಾಜಿ ಶಾಸಕ ಬಾಲ​ಕೃ​ಷ್ಣ (Balakrishna) ಅವ​ರಿಗೆ ಪ್ರತಿಷ್ಠೆ ತಂದೊ​ಡ್ಡಿ​ದೆ.

ಪುರ​ಸ​ಭೆ​ಯನ್ನು ವಶ ಪಡಿ​ಸಿ​ಕೊ​ಳ್ಳಲು ಹಾಲಿ ಮತ್ತು ಮಾಜಿ ಶಾಸ​ಕರು ರಣ​ತಂತ್ರ​ಗ​ಳನ್ನು ಹೆಣೆ​ಯು​ತ್ತಿ​ದ್ದಾರೆ. ಪುರ​ಸಭೆ ಆಡ​ಳಿತ ತಮ್ಮ ಕೈಯ​ಲ್ಲಿ​ದ್ದರೆ ತಮ್ಮ ಪ್ರಭಾವ ಹೆಚ್ಚಿ​ಸಿ​ಕೊ​ಳ್ಳ​ಬ​ಹು​ದೆಂಬ ರಾಜ​ಕೀಯ (Politics) ಲೆಕ್ಕಾ​ಚಾ​ರ​ದಲ್ಲಿ ಮುಳು​ಗಿ​ರುವ ಇಬ್ಬರು ನಾಯ​ಕರು, ವೈಯ​ಕ್ತಿಕ ಚಾರಿ​ತ್ರ​ವ​ಧೆಗೂ ಮುಂದಾ​ಗಿ​ದ್ದಾರೆ.

ಜೆಡಿ​ಎಸ್‌ ಛಲ, ಕಾಂಗ್ರೆಸ್‌ಗೆ ಪ್ರತಿಷ್ಠೆ:  ಬಿಡದಿ ಗ್ರಾಪಂ ಆಗಿದ್ದಾಗ ಜೆಡಿಎಸ್‌ (JDS) ಬೆಂಬಲಿತ ಸದಸ್ಯರು ಅಧಿಕ ಸಂಖ್ಯೆಯಲ್ಲಿದ್ದರು. ಗ್ರಾಪಂನಿಂದ ಮೇಲ್ದರ್ಜೆಗೇರಿದ ನಂತ​ರ ನಡೆದ ಪುರಸಭೆಯ ಮೊದಲ ಚುನಾ​ವ​ಣೆ​ಯಲ್ಲೂ ಜೆಡಿ​ಎಸ್‌ ಹೆಚ್ಚಿನ ಸ್ಥಾನ​ಗ​ಳಲ್ಲಿ ಗೆದ್ದು ಅಧಿಪತ್ಯ ಸ್ಥಾಪಿಸಿತ್ತು. ಈಗ ಜೆಡಿಎಸ್‌ ಹೆಚ್ಚಿನ ಸ್ಥಾನಗಳಲ್ಲಿ ಜಯಭೇರಿ ಬಾರಿಸುವ ಒತ್ತಡದಲ್ಲಿದೆ. ಹೀಗಾಗಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಶಾಸಕ ಮಂಜು​ನಾಥ್‌ ರವರು ಎಲ್ಲಾ ಸ್ಥಾನಗಳಲ್ಲಿಯೂ ಗೆಲವು ಸಾಧಿಸುವ ಛಲಕ್ಕೆ ಬಿದ್ದಿದ್ದಾರೆ.

ಜಿಲ್ಲೆಯ ಸ್ಥಳೀಯ ಸಂಸ್ಥೆ ಹಾಗೂ ವಿಧಾ​ನ ಪರಿ​ಷತ್‌ ಚುನಾವಣೆಯಲ್ಲಿ (MLC Election) ಪ್ರಚಂಡ ಗೆಲವು ಸಾಧಿಸುತ್ತಾ ಬಂದಿರುವ ಕಾಂಗ್ರೆಸ್‌ ಪಕ್ಷಕ್ಕೂ ಪ್ರಸ್ತುತ ಚುನಾವಣೆ ಪ್ರತಿಷ್ಠೆಯಾಗಿದೆ. ಸಂಸದರು ಹಾಗೂ ವಿಧಾನ ಪರಿಷತ್‌ ಸದಸ್ಯರಿಗೆ ಪುರಸಭೆಯಲ್ಲಿ ಅಧಿಕಾರ ಹಿಡಿಯುವುದು ಸವಾಲಾಗಿದೆ. ಹೀಗಾಗಿ ಶತಾಯ ಗತಾಯ ಚುನಾವಣೆಯಲ್ಲಿ ಗೆಲವು ಸಾಧಿಸಲು ತೀವ್ರ ಕಸರತ್ತು ನಡೆಸುತ್ತಿದ್ದಾರೆ.

ಪುರಸಭೆಯ 23 ವಾರ್ಡ್‌ಗಳಲ್ಲಿಯೂ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸ್ಪರ್ಧೆ ಮಾಡಿದ್ದರೆ, ಆಡ​ಳಿತ ರೂಢ ಬಿಜೆಪಿ ಕೇವಲ 12 ಸ್ಥಾನಗಳಲ್ಲಿ ಮಾತ್ರ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಜಿಲ್ಲೆಯಲ್ಲಿ ಕಮಲ ಅರಳಿಸುವ ಹುಮ್ಮಸ್ಸಿನಲ್ಲಿ ಮುಖಂಡರು ಇದ್ದಾರೆ.

ಜಿದ್ದಾಜಿದ್ದಿನ ಚುನಾವಣೆ:  ಪುರಸಭೆ ಚುನಾವಣೆ ಭಾರೀ ಜಿದ್ದಾಜಿದ್ದಿನಿಂದ ಕೂಡಿದ್ದು, ಪ್ರಮುಖ ಮುಖಂಡರ ನಡುವಿನ ಕಾಳಗ ಎಂದು ಬಿಂಬಿತವಾಗಿದೆ. ಬಹುತೇಕ ವಾರ್ಡ್‌ಗಳಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮಧ್ಯೆ ನೇರ ಪೈಪೋಟಿ ಏರ್ಪಟ್ಟಿದೆ. ಪುರಸಭೆಯ 23 ವಾರ್ಡ್‌ಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಒಟ್ಟು 68 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇದ​ರಲ್ಲಿ ಕಳೆದ ಬಾರಿ ಸದ​ಸ್ಯ​ರಾ​ಗಿ​ದ್ದ​ವರು ಬೇರೆ ವಾರ್ಡು​ಗ​ಳಿಂದ ಸ್ಪರ್ಧಿ​ಸಿ ಮತ್ತೊಮ್ಮೆ ಅದೃಷ್ಟಪರೀ​ಕ್ಷೆಗೆ ಮುಂದಾ​ಗಿ​ದ್ದಾ​ರೆ.

ಮತದಾರರನ್ನು ಓಲೈಸಿಕೊಳ್ಳಲು ಸಾಕಷ್ಟುಕಸರತ್ತು ನಡೆಸುತ್ತಿರುವ ಅಭ್ಯ​ರ್ಥಿ​ಗಳು, ಸೋಮವಾರ ಮತದಾನಕ್ಕೆ ಕಾಯುತ್ತಿದ್ದಾರೆ. ಆದರೆ, ಮತದಾರ ಪ್ರಭು ಪುರಸಭೆಯ ಪಾರುಪಾತ್ಯವನ್ನು ಯಾರ ಮುಡಿಗೆ ಹಾಕುತ್ತಾನೆ ಎಂಬುದನ್ನು ತಿಳಿಯಲು ಫಲಿತಾಂಶದ ದಿನದವರೆಗೂ ಕಾಯಲೇಬೇಕು.

ಒಂದೋಟಿಗೆ 5 ರಿಂದ 20 ಸಾವಿರ !

ಬಿಡದಿ ಪುರಸಭೆ ಚುನಾವಣೆಯಲ್ಲಿ ಅಭ್ಯರ್ಥಿಗಳು ಹಣದ ಹೊಳೆ ಹರಿಸಲು ಮುಂದಾಗಿದ್ದಾರೆ. ಆರ್ಥಿಕವಾಗಿ ಬಲಿಷ್ಠವಾಗಿರುವ ಕೆಲ ಅಭ್ಯರ್ಥಿಗಳು ಒಂದು ಮತಕ್ಕೆ ಕನಿಷ್ಠ 5 ರಿಂದ 20 ಸಾವಿರ ರುಪಾಯಿಗಳನ್ನು ನೀಡಲು ಮುಂದಾಗಿದ್ದಾರೆ.  ಒಂದೇ ಮನೆಯಲ್ಲಿ ಮಹಿಳೆ ಸೇರಿ ನಾಲ್ಕೈದು ವೋಟ್‌ ಗಳಿದ್ದರೆ 25 ಸಾವಿರ ರುಪಾಯಿ ಕ್ಯಾಶ್‌ ಜತೆಗೆ ಸೀರೆ ಅಥವಾ ಮೂಗುತಿ. ಆನಂತರ ವೀಳ್ಯದೆಲೆ ಮೇಲೆ ಆಣೆ ಪ್ರಮಾಣ ಮಾಡಿಸಿಕೊಳ್ಳಲಾಗುತ್ತಿದೆ.

ಅಲ್ಲದೆ, ಮತದಾರರಿಗೆ ನಾನಾ ಬಗೆಯ ಉಡುಗೊರೆಗಳನ್ನು ನೀಡಿ ತಮ್ಮತ್ತ ಸೆಳೆಯಲು ಅಭ್ಯರ್ಥಿಗಳು ತಯಾರಿ ನಡೆಸಿದ್ದಾರೆ. ಮತದಾರರಿಗೆ ಹಂಚುವ ಸಲುವಾಗಿಯೇ ಹೋಲ್‌ಸೆಲ್‌ ದರದಲ್ಲಿ ಖರೀದಿಸಿರುವ ಸಾವಿರಾರು ಸೀರೆ, ಮೂಗುತಿ ಹಾಗೂ ವಾಚ್‌ಗಳು ಬೆಂಬಲಿಗರ ಮನೆಯಲ್ಲಿ ಭದ್ರವಾಗಿ ದಾಸ್ತಾನಾಗಿವೆ.

ಅಭ್ಯರ್ಥಿಗಳ ಬೆಂಬಲಿಗರು ಉಡುಗೊರೆಗಳನ್ನು ಮತದಾರನ ಕೈಗೆ ತಲುಪಿಸಲು ಸೂಕ್ತ ಸಮಯಕ್ಕಾಗಿ ಕಾದು ಕುಳಿತಿದ್ದಾರೆ. ಮತದಾನದ ಹಿಂದಿನ ದಿನ ರಾತ್ರಿ ಹಣ ಹಾಗೂ ಉಡುಗೊರೆಗಳನ್ನು ಮತದಾರನ ಮನೆ ಬಾಗಿಲಿಗೆ ತಲುಪಿಸಲು ಸಹ ಕೆಲ ಅಭ್ಯರ್ಥಿಗಳು ಸಿದ್ಧತೆ ನಡೆಸಿದ್ದಾರೆ.

ಬಿಡದಿ ಪುರಸಭೆ ಚುನಾವಣೆ - 25 ಮತ ಕೇಂದ್ರಗಳು

ಬಿಡದಿ ಪುರಸಭೆಯ ಪ್ರಥಮ ಚುನಾವಣೆಯ ಬಹಿರಂಗ ಪ್ರಚಾರ ಮುಕ್ತಾಯಗೊಂಡಿದೆ. ಪುರಸಭೆಯ 23 ವಾರ್ಡ್‌ಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಒಟ್ಟು 68 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಭಾನುವಾರು ಒಟ್ಟು 23 ವಾರ್ಡ್‌ಗಳಿಗೆ 25 ಮತ ಕೇಂದ್ರಗಳನ್ನು ತೆರೆಯಲಾಗುತ್ತಿದ್ದು, ಡಿ.27ರಂದು ಬೆಳಿಗ್ಗೆ 7ರಿಂದ ಸಂಜೆ 5 ಗಂಟೆಗೆವರೆಗೆ ಮತದಾನ ನಡೆಯಲಿದೆ.

ಒಟ್ಟು 25 ಮತ ಕೇಂದ್ರಗಳಲ್ಲಿ 10 ಸೂಕ್ಷ್ಮ, 15 ಅತಿ ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಿದ್ದು, ಪ್ರತಿ ಮತಗಟ್ಟೆಗೆ 3 ಚುನಾವಣೆ ಸಿಬ್ಬಂದಿಯಂತೆ ಒಟ್ಟು 100 ಸಿಬ್ಬಂದಿಯನ್ನು ಕರ್ತವ್ಯಕ್ಕೆ ಬಳಕೆ ಮಾಡಿಕೊಳ್ಳಲಾಗುತ್ತಿದೆ.

ಮಸ್ಟರಿಂಗ್‌ ಕೇಂದ್ರ: ಬಿಡದಿಯ ಕೇತಿಗಾನಹಳ್ಳಿಯ ರಸ್ತೆಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮತಯಂತ್ರಗಳ ಮಸ್ಟರಿಂಗ್‌ ಮತ್ತು ಡಿಮಸ್ಟರಿಂಗ್‌ ಕೇಂದ್ರವನ್ನು ತೆರೆಯಲಾಗಿದ್ದು, ಡಿ.30ರಂದು ಮತ ಎಣಿಕೆ ಕಾರ್ಯ ನಡೆಯಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
ಹಿಂದೂಗಳು ಒಂದಾಗದಿದ್ರೆ ದೇಶ, ಸಂವಿಧಾನ ಉಳಿಯಲ್ಲ: ಶಾಸಕ ಬಸನಗೌಡ ಪಾಟೀಲ ಯತ್ನಾಳ