ಉದ್ಯೋಗ ಸೃಷ್ಟಿಸುವಲ್ಲಿ ಕೇಂದ್ರ ಸರ್ಕಾರ ವಿಫಲ: ಶಾಸಕ ರಾಘವೇಂದ್ರ ಹಿಟ್ನಾಳ ಕಿಡಿ

By Kannadaprabha NewsFirst Published Jul 11, 2023, 11:05 PM IST
Highlights

ದೇಶದಲ್ಲಿ ಅಚ್ಛೇ ದಿನ ಬರಲಿದೆ ಎಂಬ ಪ್ರಧಾನಿ ಮೋದಿ ಮಾತುಗಳು ಕೇವಲ ಭಾಷಣಕ್ಕೆ ಸಿಮೀತ. ಉದ್ಯೋಗ ಸೃಷ್ಟಿ, ರೈತರ ಸಮಸ್ಯೆಗೆ ಪರಿಹಾರ ಕಲ್ಪಿಸುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಆರೋಪಿಸಿದರು.

ಕೊಪ್ಪಳ (ಜು.11) ದೇಶದಲ್ಲಿ ಅಚ್ಛೇ ದಿನ ಬರಲಿದೆ ಎಂಬ ಪ್ರಧಾನಿ ಮೋದಿ ಮಾತುಗಳು ಕೇವಲ ಭಾಷಣಕ್ಕೆ ಸಿಮೀತ. ಉದ್ಯೋಗ ಸೃಷ್ಟಿ, ರೈತರ ಸಮಸ್ಯೆಗೆ ಪರಿಹಾರ ಕಲ್ಪಿಸುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಆರೋಪಿಸಿದರು.

ತಾಲೂಕಿನ ಹಿರೇಸಿಂದೋಗಿ ಜಿಪಂ ವ್ಯಾಪ್ತಿಯ ಕಾತರಕಿ-ಗುಡ್ಲಾನೂರು, ಬೇಳೂರು, ಡಂಬ್ರಳ್ಳಿ, ಬೂದಿಹಾಳ, ಬಿಸರಳ್ಳಿ, ಬಿಕನಳ್ಳಿ, ಮೈನಳ್ಳಿ, ಹಂದ್ರಾಳ, ಹಣವಾಳ ಹಾಗೂ ವದಗನಾಳ ಗ್ರಾಮಗಳಲ್ಲಿ ಸೋಮವಾರ ಹಮ್ಮಿಕೊಂಡ ಕೃತಜ್ಞತಾ ಹಾಗೂ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

 

'ಅಕ್ಕಿ ಕೊಡದವರು ನಾವು ರೊಕ್ಕ ಕೊಡುವುದನ್ನು ಏಕೆ ಪ್ರಶ್ನಿಸ್ತಾರೆ ?' ಬಿಜೆಪಿ ವಿರುದ್ಧ ಶಾಸಕ ಹಿಟ್ನಾಳ್ ಕಿಡಿ

ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಪ್ರಧಾನಿ ನರೇಂದ್ರ ಮೋದಿ(Narendra Modi) ನೇತೃತ್ವದ ಕೇಂದ್ರ ಸರ್ಕಾರದ ಕೊಡುಗೆ ಶೂನ್ಯ. ಮೋದಿ ಅಧಿಕಾರಕ್ಕೆ ಬಂದಾಗ ಪ್ರತಿವರ್ಷ 2 ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿದ್ದರೂ ಈವರೆಗೂ ಶೇ.1ರಷ್ಟುಭರವಸೆ ಈಡೇರಿಲ್ಲ. ರೈತರ ಹಿತಕ್ಕಿಂತ ಕಾರ್ಪೊರೇಟ್‌ ಸಂಸ್ಥೆಗಳ ಮಾಲೀಕರ ಹಿತವೇ ಮೋದಿಯವರಿಗೆ ಮುಖ್ಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜನಪರ ಯೋಜನೆ ಜಾರಿ:

ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಯೋಜನೆ ತಲುಪಬೇಕು ಎಂಬ ಉದ್ದೇಶದಿಂದ ಅನೇಕ ಜನಪ್ರಿಯ ಯೋಜನೆಗಳನ್ನು ಜಾರಿಗೊಳಿಸಿದ ಕೀರ್ತಿ ಸಿದ್ದರಾಮಯ್ಯನವರಿಗೆ ಸಲ್ಲುತ್ತದೆ. ಶಕ್ತಿ ಯೋಜನೆಯಿಂದ ದೇವಸ್ಥಾನಕ್ಕೆ ದೇಣಿಗೆ ಹರಿದುಬರುತ್ತಿದೆ. ಪ್ರವಾಸಕ್ಕೂ ಉತ್ತೇಜನ ಸಿಕ್ಕಂತಾಗಿದೆ. ಆದರೆ, ಬಿಜೆಪಿಯವರು ಮಾತ್ರ ಶಕ್ತಿ ಯೋಜನೆ ಬಗ್ಗೆ ಅಪಹಾಸ್ಯ ಮಾಡುತ್ತಿದ್ದಾರೆ. ಇವರಿಗೆ ನಮ್ಮ ಸರ್ಕಾರದ ಬಗ್ಗೆ ಮಾತನಾಡುವ, ಪ್ರಶ್ನಿಸುವ ಯಾವ ನೈತಿಕತೆ ಇಲ್ಲ ಎಂದರು.

2013ರಲ್ಲಿ ಸಿದ್ದರಾಮಯ್ಯನವರು 165 ಆಶ್ವಾಸನೆಗಳ ಪೈಕಿ ಬಹುತೇಕ ಯೋಜನೆ ಜಾರಿಗೊಳಿಸಿ, ಪ್ರತಿ ಕುಟುಂಬಕ್ಕೂ ಸರ್ಕಾರದ ಸೌಲಭ್ಯ ಕಲ್ಪಿಸಿದ್ದಾರೆ. ಅನ್ನಭಾಗ್ಯ ಯೋಜನೆ ಜಾರಿಗೆ ಬಂದು 10 ವರ್ಷ ಪೂರೈಸಿದ್ದು, ಸಿದ್ದರಾಮಯ್ಯನವರ ಜನಪ್ರಿಯ ಯೋಜನೆ ಸದಾಕಾಲ ಅಚ್ಚಳಿಯದೇ ಜನಮಾನಸದಲ್ಲಿ ಉಳಿಯಲಿದೆ. ನಮ್ಮದು ನುಡಿದಂತೆ ನಡೆದ ಸರ್ಕಾರ. ರಾಜ್ಯದ ಜನತೆಗೆ ನೀಡಿದ ಎಲ್ಲ ಐದು ಗ್ಯಾರಂಟಿಗಳನ್ನು ಐದು ವರ್ಷವೂ ಈಡೇರಿಸುತ್ತೇವೆ. ಜನತೆಗೆ ಸುಳ್ಳು, ಮೋಸ ಮಾಡುವ ಜಾಯಾಮಾನ ನಮ್ಮದಲ್ಲ. ಅದು ಏನಿದ್ದರೂ ಬಿಜೆಪಿ ನಾಯಕರದ್ದು ಎಂದರು.

ಕಾಂಗ್ರೆಸ್‌ಗೆ ಮತ ನೀಡಿ; ಹಿಟ್ನಾಳ್ ಪರ ಅಜರುದ್ದೀನ್‌ ಭರ್ಜರಿ ಬ್ಯಾಟಿಂಗ್‌!

ಈ ಸಂದರ್ಭದಲ್ಲಿ ಜಿಪಂ ಮಾಜಿ ಅಧ್ಯಕ್ಷ ಎಸ್‌.ಬಿ. ನಾಗರಳ್ಳಿ, ಮುಖಂಡ ಎಚ್‌.ಎಲ…. ಹಿರೇಗೌಡ್ರು, ಗ್ರಾಮೀಣ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕೃಷ್ಣರಡ್ಡಿ ಗಲಬಿ, ಜಿಲ್ಲಾ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಕೃಷ್ಣ ಇಟ್ಟಂಗಿ, ಎಸ್ಸಿ ಘಟಕದ ಜಿಲ್ಲಾಧ್ಯಕ್ಷ ಗಾಳೆಪ್ಪ ಪೂಜಾರ, ತಾಪಂ ಮಾಜಿ ಅಧ್ಯಕ್ಷ ಎನ್‌. ಬಾಲಚಂದ್ರ, ವೆಂಕನಗೌಡ್ರು ಹಿರೇಗೌಡ್ರು, ಕೇಶವ ರೆಡ್ಡಿ, ವಿರೂಪಾಕ್ಷಗೌಡ ಬಿಸರಳ್ಳಿ, ಶಿವಣ್ಣ ಹಂದ್ರಾಳ, ಹನುಮೇಶ ಹೊಸಳ್ಳಿ, ಹನುಮಂತ ಹಳ್ಳಿಕೇರಿ, ಆನಂದ ಕಿನ್ನಾಳ, ಪ್ರಕಾಶ ಕಿನ್ನಾಳ, ಶ್ರೀಧರ ಬೂದಿಹಾಳ, ನಗರಸಭೆಯ ಸದಸ್ಯ, ವರುಣ್‌ ಕುಮಾರ, ಅಕ್ಬರ್‌ ಪಲ್ಟನ್‌, ತಾಪಂ ಇಒ ದುಂಡೇಶ್‌ ತುರಾದಿ ಸೇರಿದಂತೆ ಮತ್ತಿತರರಿದ್ದರು.

click me!