ಆಳುವ ವರ್ಗಕ್ಕೆ 'ಮಣ್ಣಿನ ಮಕ್ಕಳ' ಎಚ್ಚರಿಕೆ: ತಾವೇ ಹೂಳೆತ್ತಲು ಮುಂದಾದ ರೈತರು, ಟ್ರಾಕ್ಟರ್ ಚಲಾಯಿಸುತ್ತಿದ್ದಾರೆ ಮಠಾಧೀಶರು!

By Suvarna Web DeskFirst Published May 19, 2017, 9:19 AM IST
Highlights

ತುಂಗಭದ್ರಾ ಜಲಾಶಯದಲ್ಲಿ ಹೂಳು ತುಂಬಿ ನೀರು ಸಂಗ್ರಹಣ ಸಾಮರ್ಥ್ಯ ಕಡಿಮೆಯಾಗಿದೆ ಅಂತಾ ರೈತರು ಪದೇ ಪದೇ ಸರ್ಕಾರದ ಗಮನಕ್ಕೆ ತರುತ್ತಲೇ ಇದ್ದರು. ಆದರೆ ಸರ್ಕಾರಗಳು ಮಾತ್ರ ಯಾವುದೇ ರೀತಿಯಿಂದ ಸ್ಪಂದಿಸಲಿಲ್ಲ, ಹಾಗಾಗಿ ಇದೀಗ ರೈತರೇ ಹೂಳು ತೆಗೆಯುವ ಕಾರ್ಯಕ್ಕೆ ಟೊಂಕ ಕಟ್ಟಿ ನಿಂತಿದ್ದಾರೆ. ಸರ್ಕಾರದಿಂದ ಆಗದ ಕೆಲಸವನ್ನು ತಾನೇ ಮಾಡುವುದರ ಮೂಲಕ ಸೆಡ್ಡು ಹೊಡೆದು, ಆಳುವ ವರ್ಗಕ್ಕೆ ಎಚ್ಚರಿಕೆ ನೀಡಲು ಮುಂದಾಗಿದ್ದಾರೆ.

ಬಳ್ಳಾರಿ(ಮೇ.19): ತುಂಗಭದ್ರಾ ಜಲಾಶಯದಲ್ಲಿ ಹೂಳು ತುಂಬಿ ನೀರು ಸಂಗ್ರಹಣ ಸಾಮರ್ಥ್ಯ ಕಡಿಮೆಯಾಗಿದೆ ಅಂತಾ ರೈತರು ಪದೇ ಪದೇ ಸರ್ಕಾರದ ಗಮನಕ್ಕೆ ತರುತ್ತಲೇ ಇದ್ದರು. ಆದರೆ ಸರ್ಕಾರಗಳು ಮಾತ್ರ ಯಾವುದೇ ರೀತಿಯಿಂದ ಸ್ಪಂದಿಸಲಿಲ್ಲ, ಹಾಗಾಗಿ ಇದೀಗ ರೈತರೇ ಹೂಳು ತೆಗೆಯುವ ಕಾರ್ಯಕ್ಕೆ ಟೊಂಕ ಕಟ್ಟಿ ನಿಂತಿದ್ದಾರೆ. ಸರ್ಕಾರದಿಂದ ಆಗದ ಕೆಲಸವನ್ನು ತಾನೇ ಮಾಡುವುದರ ಮೂಲಕ ಸೆಡ್ಡು ಹೊಡೆದು, ಆಳುವ ವರ್ಗಕ್ಕೆ ಎಚ್ಚರಿಕೆ ನೀಡಲು ಮುಂದಾಗಿದ್ದಾರೆ.

ಸ್ವಂತ ಖರ್ಚಿನಲ್ಲೇ ಹೂಳು ತೆಗೆಯಲು ಮುಂದಾದ ರೈತರು

ಸಾಲು ಸಾಲಾಗಿ ನಿಂತಿರುವ ಟ್ರಾಕ್ಟರ್'ಗಳು, ಜಲಾಶಯದ ಹೂಳು ಬಗೆಯುತ್ತಿರುವ ಜೆಸಿಬಿ ಯಂತ್ರಗಳು, ಸ್ವಂತ ಖರ್ಚಿನಲ್ಲೇ ಹೂಳು ತೆಗೆಯಲು ಮುಂದಾದ ರೈತರು, ಸ್ವತಃ ತಾವೇ ಟ್ರಾಕ್ಟರ್ ಚಾಲನೆ ಮಾಡುತ್ತಿರುವ ಮಠಾಧೀಶರು.ಈ ದೃಶ್ಯ ಕಂಡು ಬಂದಿದ್ದು ಬಳ್ಳಾರಿ ಜಿಲ್ಲೆಯ ಹೊಸಪೇಟೆಯ ತುಂಗಭದ್ರಾ ಜಲಾಶಯದಲ್ಲಿ.

ತುಂಗಭದ್ರ ಜಲಾಶಯ 133  ಟಿಎಂಸಿ ನೀರಿನ ಸಂಗ್ರಹ ಸಾಮರ್ಥ್ಯ ಹೊಂದಿದೆ. ಆದರೆ ಈ ಸುಮಾರು  ಡ್ಯಾಂ ನಲ್ಲಿ 37 ಟಿಎಂಸಿಯಷ್ಟು ಹೂಳೇ ತುಂಬಿದೆ. ಈ ಬಗ್ಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಸರ್ಕಾರ ನಿರ್ಲಕ್ಷ ಧೋರಣೆ ತಳೆದಿದೆ. ಹಾಗಾಗಿ ಜಲಾಶಯದ ಹಿಂಭಾಗದ ಪ್ರದೇಶದಲ್ಲಿ ಜಿಲ್ಲೆಯ ನೂರಾರು ರೈತರು ಸ್ವಂತ ಖರ್ಚಿನಲ್ಲಿ ಹೂಳು ತೆಗೆಯಲು ಮುಂದಾಗಿದ್ದಾರೆ. ಮಠಾಧೀಶರೇ ಟ್ರಾಕ್ಟರ್ ಚಲಾಯಿಸುವುದರ ಮೂಲಕ ಹೂಳು ತೆಗೆಯುವ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.  

ವಿವಿಧ ಮಠಾಧೀಶರ ಸಂಪೂರ್ಣ ಬೆಂಬಲ: 63 ವರ್ಷಗಳಲ್ಲಿ ರೈತರಿಂದ ಮೊದಲ ಪ್ರಯತ್ನ

ಜಲಾಶಯ ನಿರ್ಮಾಣಗೊಂಡು 63 ವರ್ಷ ಕಳೆದಿದೆ. ವರ್ಷದಿಂದ ವರ್ಷಕ್ಕೆ ಯಥೇಚ್ಛವಾಗಿ ಹೂಳು ಸೇರಿಕೊಂಡಿದೆ. ಇದೀಗ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ನಿಟ್ಟಿನಲ್ಲಿ ಹೂಳಿನ ಜಾತ್ರೆ ಹೆಸರಿನಲ್ಲಿ ಹೂಳು ತೆಗೆಯಲು ಮುಂದಾಗಿದ್ದಾರೆ.ಜಲಾಶಯ ನಿರ್ಮಾಣದ ನಂತರ 63 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲಬಾರಿಗೆ ರೈತರಿಂದ ಹೂಳು ತೆಗೆಯುವ ಪ್ರಯತ್ನ ನಡೆಯುತ್ತಿದೆ.ಇದಕ್ಕೆ ಕೊಟ್ಟೂರಿನ ಚಾನೆಕೋಟೆ ಶ್ರೀಗಳು, ಕಮ್ಮರ್ಚೇಡು ಮಠದ ಕಲ್ಯಾಣ ಶ್ರೀಗಳು, ಬುಕ್ಕಸಾಗರದ ಶ್ರೀಗಳು  ಸೇರಿದಂತೆ ಮಠಾಧೀಶರ ಪರಿಷತ್ ಕೂಡ ಬೆಂಬಲ ನೀಡಿದೆ. ಜತೆಗೆ  ನೂರಾರು ರೈತ ಮುಖಂಡರು ಭಾಗಿಯಾಗಿದ್ದಾರೆ. ಇದಕ್ಕಾಗಿ 10  ಜೆ.ಸಿ.ಬಿ. 50 ಕ್ಕೂ ಹೆಚ್ಚು ಟ್ರಾಕ್ಟರ್'ಗಳು ಹೂಳು ತೆಗೆಯುವ ಕಾರ್ಯಕ್ಕೆ ಬಳಕೆ ಮಾಡಿಕೊಳ್ಳಲಾಗಿದೆ.

3 ಜಲಾಶಯಗಳ ಅಭಿವೃದ್ಧಿಗೆಂದು ಸರ್ಕಾರಗಳು ಸಾಕಷ್ಟು ಅನುದಾನ ಮೀಸಲಿಟ್ಟರೂ, ತುಂಗಭದ್ರಾ ಜಲಾಶಯದ ಹೂಳು ಮಾತ್ರ ದಶಕಗಳಿಂದ ಹೆಚ್ಚಾಗುತ್ತಲೇ ಇದೆ. ಇದರಿಂದಾಗಿ ವರ್ಷದಿಂದ ವರ್ಷಕ್ಕೆ ನೀರಿನ ಸಾಮರ್ಥ್ಯವೂ ಕಡಿಮೆಯಾಗುತ್ತಿದೆ. ಹೂಳೆತ್ತಲು ಪ್ರತೀ ಸರ್ಕಾರಗಳಿಗೆ ಮಾಡುವ ಮನವಿಗಳಿಗೆ ಯಾವುದೇ ಮನ್ನಣೆ ಸಿಗುತ್ತಿಲ್ಲ. ರೈತರ ಕೂಗು ಸರ್ಕಾರಗಳಿಗೆ ಕೇಳಿಸುತ್ತಿಲ್ಲ. ಹಾಗಾಗಿ ಸಾಂಕೇತಿಕವಾಗಿ 7  ದಿನಗಳ ಕಾಲ ಹೂಳು ತೆಗೆಯಯವ ಕೆಲಸ ನಡೆಯುತ್ತಿದೆ. ಇದಕ್ಕೂ ಸರಕಾರ ಸ್ಪಂದಿಸದೆ ಹೋದರೆ ಮುಂದಿನ ಜನವರಿಯಲ್ಲಿ , ಆಂಧ್ರದ ರೈತರೊಂದಿಗೆ ಜಂಟಿಯಾಗಿ ಬೃಹತ್ ಹೋರಾಟಕ್ಕೆ ಮುಂದಾಗುವ ಎಚ್ಚರಿಕೆಯನ್ನು ರೈತ ಸಂಘದ ಮುಖಂಡರು ನೀಡಿದ್ದಾರೆ.

click me!