
ಡೆಹ್ರಾಡೂನ್: ಕಳಪೆ ಗುಣಮಟ್ಟದ ಸಿಹಿ ಉತ್ಪನ್ನ ಮಾರಾಟ ಮಾಡಿದ ಪ್ರಕರಣದಲ್ಲಿ ಬಾಬಾ ರಾಮ್ದೇವ್ ನೇತೃತ್ವದ ಪತಂಜಲಿ ಸಂಸ್ಥೆಯ ಹಿರಿಯ ಅಧಿಕಾರಿ, ಉತ್ಪನ್ನದ ಹಂಚಿಕೆದಾರ ಮತ್ತು ಉತ್ಪನ್ನ ಮಾರಾಟ ಮಾಡಿದ ಅಂಗಡಿ ಮಾಲೀಕಗೆ ಉತ್ತರಾಖಂಡದ ನ್ಯಾಯಾಲಯ ತಲಾ 6 ತಿಂಗಳ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿ ಆದೇಶ ಹೊರಡಿಸಿದೆ.ಇತ್ತೀಚೆಗಷ್ಟೇ ಉತ್ತರಾಖಂಡ ಸರ್ಕಾರ ಪತಂಜಲಿ ಆಯುರ್ವೇದ ಕಂಪನಿಯ 14 ಉತ್ಪನ್ನಗಳ ಉತ್ಪಾದನೆಯ ಲೈಸೆನ್ಸ್ ರದ್ದು ಮಾಡಿತ್ತು. ಅದರ ಬೆನ್ನಲ್ಲೇ ಕಂಪನಿಗೆ ಹಳೆಯ ಪ್ರಕರಣವೊಂದರಲ್ಲಿ ಭಾರೀ ಆಘಾತ ಎದುರಾಗಿದೆ.
ಪ್ರಕರಣದ ಹಿನ್ನೆಲೆ:
ರಾಜ್ಯದ ಪಿತೋರ್ಗಢದ ಲೀಲಾ ಧರ್ ಪಾಠಕ್ ಎಂಬುವವರ ಮಳಿಗೆಯಲ್ಲಿ ಪತಂಜಲಿ ಸಂಸ್ಥೆಯ ಪತಂಜಲಿ ನವರತ್ನ ಎಲಾಚಿ ಸೋನ್ಪಾಪ್ಡಿ ಮಾರಾಟಕ್ಕಿಡಲಾಗಿತ್ತು. ಇದರ ಗುಣಮಟ್ಟದ ಬಗ್ಗೆ ಆಹಾರ ಸುರಕ್ಷತಾ ಪರೀಕ್ಷಕರು ಅನುಮಾನ ವ್ಯಕ್ತಪಡಿಸಿ ಪ್ರಯೋಗಾಲಯಕ್ಕೆ ಕಳುಹಿಸಿದ್ದರು. ಪ್ರಯೋಗಾಲಯದ ವರದಿಯಲ್ಲಿ ಸಿಹಿ ಉತ್ಪನ್ನವು ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾಗಿತ್ತು.ಈ ಕುರಿತು ಪ್ರಕರಣ ದಾಖಲಾಗಿ, ವಿಚಾರಣೆ ನಡೆದು ಇದೀಗ ಪಿತೋರ್ಗಢದ ನ್ಯಾಯಾಲಯ ತೀರ್ಪು ನೀಡಿದೆ. ಅದರನ್ವಯ, ಸಿಹಿ ಉತ್ಪನ್ನ ಮಾರಾಟ ಮಾಡಿದ ಲೀಲಾ ಧರ್ ಪಾಠಕ್, ಉತ್ಪನ್ನದ ಹಂಚಿಕೆದಾರ ಅಜಯ್ ಜೋಷಿ ಮತ್ತು ಪತಂಜಲಿಯ ಅಸಿಸ್ಟೆಂಟ್ ಮ್ಯಾನೇಜರ್ ಅಭಿಷೇಕ್ ಕುಮಾರ್ಗೆ ಕ್ರಮವಾಗಿ 5000 ರು., 10000 ರು. ಮತ್ತು 25000 ರು. ದಂಡ ವಿಧಿಸಿದೆ. ಅಲ್ಲದೆ ಎಲ್ಲರಿಗೂ ತಲಾ 6 ತಿಂಗಳು ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಒಳ್ಳೆಯ ಹೆಸರಿದೆ, ಸರಿಯಾಗಿ ಬಳಸಿ: ರಾಮದೇವ್ಗೆ ಸುಪ್ರೀಂ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ