ಶ್ರೀರಾಮುಲುರನ್ನು ಬಿಜೆಪಿ ದೂರ ಇಟ್ಟಿದ್ಯಾಕೆ?

By Web DeskFirst Published Jan 15, 2019, 1:15 PM IST
Highlights

ಮೂರು ಪಕ್ಷಗಳಿಗೂ ಆಪರೇಶನ್ ಭೀತಿ ಶಾಸಕರ ಮೇಲೆ ಗುಮಾನಿ | ಜೋರಾಗಿದೆ ಸಂ'ಕ್ರಾಂತಿ' ಸಮರ | ಆಪರೇಶನ್ ಬಿಜೆಪಿಯಿಂದ ಶ್ರೀರಾಮುಲು ದೂರ 

ಬೆಂಗಳೂರು (ಜ.15): ಒಂದು ಕಡೆ ಬಿಜೆಪಿ ನಾಯಕರು ಜಾರಕಿಹೊಳಿ ಬ್ರದರ್ಸ್‌ ಜೊತೆ ಸೇರಿಕೊಂಡು ಕಾಂಗ್ರೆಸ್‌ ಶಾಸಕರನ್ನು ಸೆಳೆಯಲು ಪ್ರಯತ್ನ ನಡೆಸಿದ್ದರೆ, ಇನ್ನೊಂದು ಕಡೆ ರಾಜ್ಯ ಕಾಂಗ್ರೆಸ್‌ ನಾಯಕರು 4ರಿಂದ 5 ಬಿಜೆಪಿ ಶಾಸಕರನ್ನು ಸೆಳೆಯಲು ಗಾಳ ಹಾಕಿದ್ದೇವೆ ಎಂದು ದಿಲ್ಲಿ ನಾಯಕರ ಎದುರು ಹೇಳಿಕೊಂಡಿದ್ದಾರೆ.

ಬಿಜೆಪಿ ನಾಯಕರಿಗೂ ತಿಳಿಯುತ್ತಿಲ್ಲ ಆಪರೇಷನ್‌ ರಹಸ್ಯ!

ಯಾರು ಆ ಬಿಜೆಪಿ ಶಾಸಕರು ಎಂದು ಸ್ವಲ್ಪ ಅಗೆಯಲು ಹೊರಟರೆ ಶಿವನಗೌಡ ನಾಯಕ, ಸೋಮಶೇಖರ್‌ ರೆಡ್ಡಿ, ಪೂರ್ಣಿಮಾ ಶ್ರೀನಿವಾಸ್‌ ಅವರ ಹೆಸರುಗಳು ಕಿವಿಗೆ ಬೀಳುತ್ತವೆ. ಇದಕ್ಕಾಗಿಯೇ ದಿಲ್ಲಿಗೆ ಬರುವ ಮೊದಲು ಈ ಎಲ್ಲರನ್ನೂ ಕರೆಸಿ ಯಡಿಯೂರಪ್ಪನವರು ಆಣೆ ಪ್ರಮಾಣ ಮಾಡಿಸಿ ಕಳಿಸಿದ್ದಾರೆ.

ಸಂಸದ ಬಿ.ವಿ.ನಾಯಕರನ್ನು ಕರೆದುಕೊಂಡು ಬಂದರೆ ನನಗೆ ಉಳಿಯುವುದು ಕಷ್ಟವಾಗುತ್ತದೆ ಎಂದು ಶಿವನಗೌಡರು ಯಡಿಯೂರಪ್ಪಗೆ ಹೇಳಿದ್ದು, ಸೋಮಶೇಖರ್‌ ರೆಡ್ಡಿ, ಡಿ ಕೆ ಶಿವಕುಮಾರ್‌ ಜೊತೆ ಆತ್ಮೀಯ ಎನ್ನುವ ಕಾರಣಕ್ಕೆ ಗುಸು ಗುಸು ಇದೆ. ಆದರೆ ನಾನು ಎಲ್ಲಿಗೂ ಹೋಗೋಲ್ಲ ಎಂದು ಯಡಿಯೂರಪ್ಪನವರಿಗೆ ಹೇಳಿದ್ದಾರೆ.

ತನ್ನ ಪಕ್ಷದ ನಾಯಕರಿಂದಲೇ ಅಂತರ ಕಾಯ್ದುಕೊಂಡ 'ಟ್ರಬಲ್ ಶೂಟರ್' ಡಿಕೆಶಿ!

ಆದರೆ ಇವತ್ತಿನ ವ್ಯವಸ್ಥೆಯಲ್ಲಿ ಯಾರ ಮೇಲೆ ಯಾರಿಗೂ ನಂಬಿಕೆ ಇಲ್ಲ. ಹೀಗಾಗಿ ಸಂಚಲನ ಆರಂಭವಾಗುವ ಮುಂಚೆಯೇ ಬಿಜೆಪಿ ನಾಯಕರನ್ನು ರೆಸಾರ್ಟ್‌ಗೆ ಕಳುಹಿಸಲಾಗಿದೆ. ರಾಜಕಾರಣಿಗಳ ಮನೆ ಕಲ್ಲಿನದ್ದಲ್ಲ ಪಕ್ಕಾ ಗಾಜಿನದು ಅಲ್ಲವೇ. ನಾಲ್ಕು ಕಲ್ಲು ಹೊಡೆಯುವಾಗ ಒಂದು ಕಲ್ಲು ಆ ಕಡೆಯಿಂದ ಬಿದ್ದರೂ ಸಾಕು ಮನೆ ಮಟ್ಯಾಶ್‌.

ರಾಮುಲು ದೂರ ದೂರ

6 ತಿಂಗಳ ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಶಾಸಕರನ್ನು ಸೆಳೆಯುವ ಜವಾಬ್ದಾರಿ ವಹಿಸಿಕೊಂಡು ಓಡಾಡಿದ್ದ ಶ್ರೀರಾಮುಲು ತಮ್ಮದೇ ಕುಲಬಾಂಧವರಾದ ಜಾರಕಿಹೊಳಿ ಮತ್ತು ಯಡಿಯೂರಪ್ಪ ಒಟ್ಟಾಗಿ ಬರುವಾಗ ಮಾತ್ರ ದೂರವಿದ್ದಾರೆ. ಇದಕ್ಕೆ ಮುಖ್ಯ ಕಾರಣ ಬಳ್ಳಾರಿ ಶಾಸಕ ಬಿ.ನಾಗೇಂದ್ರ ಸೇರಿದಂತೆ ಅಕ್ಕಪಕ್ಕದ ಜಿಲ್ಲೆಗಳ ಶಾಸಕರು ರಾಮುಲು ಜೊತೆ ನಾವು ಮಾತನಾಡೋದಿಲ್ಲ ಎಂದಿದ್ದು. ಹೀಗಾಗಿ ರಾಮುಲು ಅವರನ್ನು ಅನಿವಾರ್ಯವಾಗಿ ಮಾತುಕತೆಯಿಂದ ದೂರ ಇಡಲಾಯಿತು ಎನ್ನುತ್ತಿವೆ ಬಿಜೆಪಿ ಮೂಲಗಳು. ಕಳೆದ 4 ದಿನಗಳಿಂದ ಬಿಜೆಪಿ ಸಭೆಗಳಲ್ಲಿ ಪಾಲ್ಗೊಳ್ಳುತ್ತಿದ್ದರೂ ರಾಮುಲು ಮುಖದಲ್ಲಿ ಮಾತ್ರ ಉತ್ಸಾಹವಿಲ್ಲ. ‘ಯಾಕ್ರೀ ಹೀಗೆ’ ಎಂದು ಕೇಳಿದರೆ ರಾಮುಲು ಕೈಮುಗಿಯುತ್ತಾರೆಯೇ ಹೊರತು ಏನೂ ಉತ್ತರ ಕೊಡುವುದಿಲ್ಲ. ಅವರಿಗೂ ಈಗ ರಾಜಕೀಯ ಅನಿವಾರ್ಯತೆ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ರಾಜಕಾರಣದ ಸುದ್ದಿಗಾಗಿ ಇಂಡಿಯಾ ಗೇಟ್  ಕ್ಲಿಕ್ ಮಾಡಿ 

click me!