
ಉದಯ್'ಪುರ: ಪಡಿತರ ಅಂಗಡಿಯಲ್ಲಿ ಅಗತ್ಯವಸ್ತು ಖರೀದಿಗೆ ಸರದಿ ನಿಲ್ಲುವುದು ಹೊಸದೇನಲ್ಲ. ಆದರೆ ರಾಜಸ್ಥಾನದಲ್ಲಿ ಪಡಿತರ ಪಡೆಯಲು ಗ್ರಾಮಸ್ತರು ಮರ ಹತ್ತಲೇಬೇಕು! ನಿಜ. ಇಂಥ ಅಚ್ಚರಿಯ ಪ್ರಕರಣ ರಾಜಸ್ಥಾನದ ಗ್ರಾಮೀಣ ಪ್ರದೇಶಗಳಿಂದ ವರದಿಯಾಗಿದೆ. ಇಲ್ಲಿನ ವಯಸ್ಸು, ಲಿಂಗಭೇದ ಮರೆತು ಎಲ್ಲರೂ ಮರ ಹತ್ತಿ ಬಯೋಮೆಟ್ರಿಕ್ ನೀಡಿದರಷ್ಟೇ ಪಡಿತರ ಸಿಗೋದು.
ಇದಕ್ಕೆಲ್ಲಾ ಕಾರಣವಾಗಿರೋದು ರಾಜ್ಯ ಸರ್ಕಾರ ಪಡಿತರ ವ್ಯವಸ್ಥೆಯನ್ನು ಡಿಜಿಟಲೀಕರಣಗೊಳಿಸಿರುವುದು. ಪಡಿತರ ವ್ಯವಸ್ಥೆಯಲ್ಲಿನ ಸೋರಿಕೆ ತಡೆಯುವ ಸದುದ್ದೇಶದಿಂದ ರಾಜಸ್ಥಾನ ಸರ್ಕಾರ ಬಯೋಮೆಟ್ರಿಕ್ ವ್ಯವಸ್ಥೆ ಜಾರಿಗೆ ತಂದಿದೆ. ಆದರೆ, ಗ್ರಾಮಗಳಲ್ಲಿ ಇಂಟರ್ನೆಟ್ ಸಂಪರ್ಕ ಸುಲಭವಾಗಿ ಸಿಗದ ಕಾರಣ, ಈ ಯೋಜನೆ ರಾಜ್ಯದ ಗ್ರಾಮೀಣ ಜನತೆಗೆ ವರವಾಗಿ ಪರಿಣಮಿಸುವ ಬದಲು ಪಡಬಾರದ ಕಷ್ಟಅನುಭವಿಸುವಂತೆ ಮಾಡಿದೆ.
ಏನಾಗಿದೆ?: ರಾಜಸ್ಥಾನದ ಉದಯಪುರ್ ಜಿಲ್ಲೆಯ ಹಿಂದುಳಿದ ಗ್ರಾಮವೆನಿಸಿರುವ ಕೊಟ್ರಾ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ಇಂಟರ್ನೆಟ್ ಸಂಪರ್ಕ ಅಷ್ಟುಸುಲಭವಾಗಿ ಸಿಗದು. ಒಂದಿಷ್ಟುಎತ್ತರದ ಪ್ರದೇಶದಲ್ಲಷ್ಟೇ ಅಂತರ್ಜಾಲ ಸಂಪರ್ಕ ಸಿಗುತ್ತದೆ. ಹೀಗಾಗಿ ಪಡಿತರದ ಅಂಗಡಿಯವ ತನ್ನ ಬಯೋಮೆಟ್ರಿಕ್ ಮೆಷಿನ್ ಇಟ್ಟು ಮರ ಏರಿ ಕೂರುತ್ತಾನೆ. ಕಾರಣ, ಸ್ವಲ್ಪ ಎತ್ತರದ ಪ್ರದೇಶದಲ್ಲಿ ನೆಟ್ ಸಂಪರ್ಕ ಸಿಗುತ್ತದೆ. ಈ ಮರದ ಕೆಳಗೆ ಒಂದು ಏಣಿ ಇಡಲಾಗಿರುತ್ತದೆ. ಪಡಿತರ ಬೇಕಾದವರು ಸರದಿಯಲ್ಲಿ ಬಂದು ಮರ ಹತ್ತಬೇಕು.
ಬಳಿಕ ಮರದ ಮೇಲೆ ಇರುವ ಬಯೋಮೆಟ್ರಿಕ್ ಮೆಷಿನ್ನಲ್ಲಿ ಕೈಬೆರಳು ಇಡಬೇಕು. ನಂತರ ಅಲ್ಲಿಂದ ಒಂದು ಕಿ.ಮೀ ದೂರದಲ್ಲಿರುವ ಪಡಿತರ ಅಂಗಡಿಗೆ ತೆರಳಿ ಅಲ್ಲಿ ಅಗತ್ಯ ವಸ್ತುಗಳನ್ನು ಪಡೆದುಕೊಳ್ಳಬೇಕು. ಅದೃಷ್ಟವಿದ್ದರೆ ಜನ ಮರ ಏರಿದಾಗ ನೆಟ್ ಸಂಪರ್ಕ ಸಿಗುತ್ತದೆ. ಇಲ್ಲದೇ ಹೋದಲ್ಲಿ ಸಂಪರ್ಕ ಸಾಧ್ಯವಾಗುವವರೆಗೂ ಮರದ ಮೇಲೆ ಅಥವಾ ಬಳಿಯೇ ಕಾದು ಕೂರಬೇಕು. ಕೊಟ್ರಾದಲ್ಲಿರುವ 76 ಪಡಿತರ ಕೇಂದ್ರಗಳ ಪೈಕಿ 13 ಕಡೆಗಳಲ್ಲಿ ತೀರಾ ದುರ್ಬಲ ಇಂಟರ್ನೆಟ್ ಸಂಪರ್ಕವಿದೆ. ಈ ಸ್ಥಳಗಳಲ್ಲಿ ಪಡಿತರ ವಿತರಕರು ಪಿಒಎಸ್ ಯಂತ್ರಕ್ಕೆ ಇಂಟರ್ನೆಟ್ ಸಂಪರ್ಕ ಪಡೆಯಲು ಮರದ ಮೇಲೆ ಏರಿ ಕುಳಿತುಕೊಳ್ಳಬೇಕು. ಹಲ ತಾಂಡಾಗಳಲ್ಲಿ ಜನರು ಪಡಿತರದಲ್ಲಿ ಸಕ್ಕರೆ ಮತ್ತು ಸೀಮೆಣ್ಣೆ ಪಡೆಯಲು ತಮ್ಮ ಬಯೊಮೆಟ್ರಿಕ್ ಪರಿಶೀಲನೆಗೆ ಗಂಟೆಗಟ್ಟಲೆ ಕಾಯಬೇಕಿದೆ. ಇಲ್ಲಿನ ಹೆಚ್ಚಿನ ಮನೆಗಳಿಗೆ ವಿದ್ಯುತ್ ಸಂಪರ್ಕವೇ ಇಲ್ಲ. ಸರಿಯಾದ ರಸ್ತೆ ಮತ್ತು ಸೂಕ್ತ ಆರೋಗ್ಯ ಕೇಂದ್ರಗಳೂ ಇಲ್ಲ. ಪಡಿತರ ಅಂಗಡಿಗೆ ಹೋಗಬೇಕಾದರೆ ಮೈಲಿಗಟ್ಟೆದೂರ ನಡೆದು ಹೋಗಬೇಕು. ಹಿಂದುಳಿದ ಪ್ರದೇಶವಾಗಿರುವ ಕಾರಣಕ್ಕೆ ಕೋಟ್ರಾಕ್ಕೆ ಹೋಗುವುದೆಂದರೆ ಶಿಕ್ಷೆ ಎಂದೇ ಅಧಿಕಾರಿಗಳು ಭಾವಿಸಿದ್ದಾರೆ. ಇಲ್ಲಿನ ಯುವಜನರು ಕೆಲಸಕ್ಕಾಗಿ ಬೇರೆ ಕಡೆಗೆ ವಲಸೆ ಹೋಗಿದ್ದಾರೆ. ಹೀಗಾಗಿ ವಯಸ್ಸಾದವರು ಮತ್ತು ಮಕ್ಕಳು ಮಾತ್ರವೇ ತಾಂಡಾಗಳಲ್ಲಿ ಉಳಿದುಕೊಂ ಡಿದ್ದಾರೆ. ಈಗ ಪಡಿತರಕ್ಕೂ ಬಯೋಮೆಟ್ರಿಕ್ ನೀಡಬೇಕಾಗಿ ಬಂದಿರುವುದ ಭಾರಿ ಕಷ್ಟವಾಗಿದೆ.
(epaper.kannadaprabha.in)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.