ಪುಲ್ವಾಮಾ ದಾಳಿ ಸಂಭ್ರಮಿಸುತ್ತಿರುವ ಪಾಕಿಸ್ತಾನ ಮಾಧ್ಯಮಗಳು| ಉಗ್ರರನ್ನು ಸ್ವಾತಂತ್ರ್ಯ ಹೋರಾಟಗಾರರು ಎಂದು ಕರೆದ ನಿಕೃಷ್ಟ ಮಾಧ್ಯಮಗಳು| ದಾಳಿಯನ್ನು ‘ಕಾಶ್ಮೀರ ಸ್ವಾತಂತ್ರ್ಯ ಹೋರಾಟಗಾರರ ದಿಟ್ಟ ಹೆಜ್ಜೆ’ ಎಂದು ಬಣ್ಣಿಸಿದ ಪಾಕಿ ಮಿಡಿಯಾ|
ನವದೆಹಲಿ(ಫೆ.17): ದೇಶ, ಭಾಷೆ, ಗಡಿ ವಿಚಾರದಲ್ಲಿ ಮಾಧ್ಯಮಗಳೂ ಕೂಡ ತನ್ನದೇ ಭಾದ್ಯತೆಗಳಿಗೆ ಒಳಪಟ್ಟಿರುತ್ತವೆ ಎಂಬುದು ನಿಜ. ಇದನ್ನು ಯಾವುದೇ ಮಾಧ್ಯಮ ಕೂಡ ಅಲ್ಲಗಳೆಯುವುದಿಲ್ಲ. ತನ್ನ ದೇಶವನ್ನು ಬಿಟ್ಟು ಮತ್ತೊಂದು ದೇಶದ ಪರ ವಹಿಸಲು ಮಾಧ್ಯಮಗಳಿಗೂ ಸಾಧ್ಯವಿಲ್ಲ.
ಆದರೆ ಕಣ್ಣ ಮುಂದೆ ನಡೆದ ಭೀಕರತೆಯನ್ನು ಖಂಡಿಸದೇ, ಅದನ್ನು ವಿಜೃಂಭಿಸುತ್ತಿರುವ ಪಾಕಿಸ್ತಾನ ಮಾಧ್ಯಮಗಳು ಮಾತ್ರ ಪತ್ರಿಕಾಧರ್ಮಕ್ಕೆ ಮಸಿ ಬಳಿದಿದೆ. ವೀರ ಯೋಧರ ಸಾವನ್ನು ಬಹುದೊಡ್ಡ ಗೆಲುವಂತೆ ಬಿಂಬಿಸಿ ನ್ಯಾಯದ ಪರ ಪತ್ರಿಕೆ ಎಂಬ ಸಿದ್ಧಾಂತವನ್ನು ಮರೆತಿದೆ. ಇಂತಹ ವಿಕೃತ ಮಾಧ್ಯಮ ಸಿದ್ಧಾಂತಕ್ಕೆ ಧಿಕ್ಕಾರವಿರಲಿ.
ಪುಲ್ವಾಮಾ ಭಯೋತ್ಪಾದಕ ದಾಳಿಯಿಂದಾಗಿ ಇಡೀ ಭಾರತ ಆಕ್ರೋಶದ ಬೇಗುದಿಯಲ್ಲಿ ಕುದಿಯುತ್ತಿದೆ. ಭಯೋತ್ಪಾದನೆ ವಿರೋಧಿ ಹೋರಾಟದಲ್ಲಿ ನಾವು ಭಾರತದೊಂದಿಗೆ ಇರುವುದಾಗಿ ವಿಶ್ವದ ಬಹುತೇಕ ರಾಷ್ಟ್ರಗಳು ಘೋಷಿಸಿವೆ.
ಈ ಮಧ್ಯೆ ಪುಲ್ವಾಮಾ ದಾಳಿಯನ್ನು ಪಾಕಿಸ್ತಾನದ ಮಾಧ್ಯಮಗಳು ಸಂಭ್ರಮಿಸುತ್ತಿದ್ದು, ಭಯೋತ್ಪಾದಕ ದಾಳಿಯನ್ನು ‘ಕಾಶ್ಮೀರ ಸ್ವಾತಂತ್ರ್ಯ ಹೋರಾಟಗಾರರ ದಿಟ್ಟ ಹೆಜ್ಜೆ’ ಎಂದು ಬಣ್ಣಿಸಿವೆ.
ಪಾಕ್ ಪ್ರಮುಖ ಪತ್ರಿಕೆಗಳಾದ The Nation, Dwan ಸೇರಿದಂತೆ ಎಲ್ಲಾ ಪತ್ರಿಕೆಗಳೂ ಕಾಶ್ಮೀರ ಭಯೋತ್ಪಾದಕರನ್ನು ಸ್ವಾತಂತ್ರ್ಯ ಹೋರಾಟಗಾರರು ಎಂದು ಕರೆದಿವೆ. ಅಲ್ಲದೇ ಪಾಕ್ ದೃಶ್ಯ ಮಾಧ್ಯಮಗಳೂ ಕೂಡ ದಾಳಿಯನ್ನು ಸಂಭ್ರಮಿಸಿ ದಿನದ 24 ಗಂಟೆ ಅರಚುತ್ತಿವೆ.