ಆಗಸ್ಟ್ 22 ರಂದು ಬಕ್ರೀದ್ ಹಬ್ಬ ಆಚರಣೆ ಮಾಡುತ್ತಿದ್ದು ಈ ನಿಟ್ಟಿನಲ್ಲಿ ಸಾರ್ವಜನಿಕವಾಗಿ ಪ್ರಾಣಿ ಹತ್ಯೆ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕಠಿಣ ಆದೇಶ ಜಾರಿ ಮಾಡಿದ್ದಾರೆ.
ಲಕ್ನೋ : ಆಗಸ್ಟ್ 22 ರಂದು ಬಕ್ರೀದ್ ಹಬ್ಬ ಆಚರಣೆ ಮಾಡಲಾಗುತ್ತಿದ್ದು ಈ ನಿಟ್ಟಿನಲ್ಲಿ ಸಾರ್ವಜನಿಕವಾಗಿ ಪ್ರಾಣಿಗಳ ಹತ್ಯೆ ಮಾಡಬಾರದು ಎಂದು ಯೋಗಿ ಆದಿತ್ಯನಾಥ್ ಸರ್ಕಾರ ಕಠಿಣ ಆದೇಶವೊಂದನ್ನು ಜಾರಿ ಮಾಡಿದೆ.
ಈ ಬಗ್ಗೆ ಪೊಲೀಸ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶವನ್ನು ನೀಡಿದೆ. ಎಲ್ಲಿಯೂ ಕೂಡ ರಕ್ತದ ಕೋಡಿ ಹರಿಯದಂತೆ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದಾರೆ.
ವಿಡಿಯೋ ಕಾನ್ಫರೆನ್ಸ್ ಮಾಡುವ ಮೂಲಕ ಈ ಬಗ್ಗೆ ಯೋಗಿ ಸರ್ಕಾರ ಈ ಸೂಚನೆ ನೀಡಿದ್ದು, ಸಾರ್ವಜನಿಕವಾಗಿ ಪ್ರಾಣಿ ವಧೆ ಮಾಡುವುದು ಕೆಲ ಧರ್ಮಗಳ ನಂಬಿಕೆಗಳಿಗೆ ನೋವುಂಟು ಮಾಡಿದಂತಾಗುತ್ತದೆ. ಹಬ್ಬದ ಹೆಸರಿನಲ್ಲಿ ಪ್ರಾಣಿ ಹತ್ಯೆಯೂ ಕೂಡ ಸೂಕ್ತವಲ್ಲ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿಗಳ ಆದೇಶದಂತೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳೊಂದಿಗೂ ಕೂಡ ಸಭೆ ನಡೆಸಲಾಗಿದೆ ಎಂದು ಮುಜಾಫರ್ ನಗರ್ ಜಿಲ್ಲಾ ಮ್ಯಾಜಿಸ್ಟ್ರೇಟ್ ರಾಜೀವ್ ಶರ್ಮಾ ಹೇಳಿದ್ದಾರೆ.
ಅಲ್ಲದೇ ಈ ರೀತಿ ಸಾರ್ವಜನಿಕವಾಗಿ ಪ್ರಾಣಿ ವಧೆ ಮಾಡುತ್ತಿರುವುದು ಕಂಡು ಬಂದಲ್ಲಿ ಕಠಿಣ ಕ್ರಮ ಕೈಗೊಳ್ಳಲು ಕೂಡ ಮುಖ್ಯಮಂತ್ರಿಗಳು ಆದೇಶ ನೀಡಿದ್ದಾರೆ ಎಂದು ಹೇಳಿದ್ದಾರೆ.