
ನವದೆಹಲಿ (ಜು.09): ಕಳೆದ ಎರಡು ದಶಕಗಳಲ್ಲಿ ಮಾವೋವಾದಿ ಹಿಂಸಾಚಾರಕ್ಕೆ ಬಲಿಯಾದವರ ಸಂಖ್ಯೆ ಸುಮಾರು 12 ಸಾವಿರಕ್ಕಿಂತಲೂ ಹೆಚ್ಚು ಎಂದು ಗೃಹ ಇಲಾಖೆಯ ಅಂಕಿ ಅಂಶಗಳು ಹೇಳಿದೆ. ಬಲಿಯಾದವರ ಪೈಕಿ ಸುಮಾರು 2700 ಮಂದಿ ಭದ್ರತಾ ಪಡೆಯ ಸಿಬ್ಬಂದಿಗಳು ಎಂದು ವರದಿಯಲ್ಲಿ ಹೇಳಲಾಗಿದೆ.
ಬಲಿಯಾದ 9300 ಜನರಲ್ಲಿ ಹೆಚ್ಚಿನವರನ್ನು ‘ಪೊಲೀಸ್ ಮಾಹಿತಿದಾರ’ರೆಂದು ನಕ್ಸಲರು ಹತ್ಯೆಗೈದಿದ್ದರೆ, ಕೆಲ ಅಮಾಯಕರು ಭದ್ರತಾಪಡೆ-ನಕ್ಸಲರ ನಡುವೆ ನಡೆದಿರುವ ಗುಂಡಿನ ಚಕಮಕಿಯಲ್ಲಿ ಜೀವ ಕಳೆದುಕೊಂಡಿದ್ದಾರೆ.
ಕಳೆದ 3 ವರ್ಷಗಳಲ್ಲಿ ಮಾವೋ ಹಿಂಸಾಚಾರದ ಘಟನೆಗಳು ಶೇ. 25ರಷ್ಟು ಇಳಿಮುಖವಾಗಿದೆ ಎಂದು ವರದಿ ಹೇಳಿದೆ. ಮೇ 2011-ಏಪ್ರಿಲ್ 2014 ಅವಧಿಗೆ ಹೋಲಿಸಿದಾಗ ಮೇ 2014-ಏಪ್ರಿಲ್ 2017ವರೆಗೆ ಭದ್ರತಾಪಡೆಗಳ ಸಿಬ್ಬಂದಿಗಳ ಹತ್ಯೆಯಲ್ಲೂ ಶೇ. 42ರಷ್ಟು ಇಳಿಮುಖವಾಗಿದೆ ಎಂದು ಹೇಳಲಾಗಿದೆ.
ಹತ್ಯೆಯಾಗಿರುವ ನಕ್ಸಲರ ಪ್ರಮಾಣವು ಶೇ. 65ರಷ್ಟು ಏರಿದ್ದರೆ, ಶರಣಾಗತಿಯಾದವರ ಪ್ರಮಾಣ ಶೇ. 185ರಷ್ಟು ಏರಿದೆ. 10 ರಾಜ್ಯಗಳ 68 ಜಿಲ್ಲೆಗಳಲ್ಲಿ ನಕ್ಸಲರು ಸಕ್ರಿಯರಾಗಿದ್ದರೂ, ಅವರ ಶೇ. 90ರಷ್ಟು ಚಟುವಟಿಕೆಗಳೀಗ ಕೇವಲ 35 ಜಿಲ್ಲೆಗಳಿಗೆ ಸೀಮಿತವಾಗಿವೆ ಎಂದು ಹೇಳಲಾಗಿದೆ.
ನಕ್ಸಲ್ ಹಿಂಸಾಚಾರವನ್ನು ತಡೆಯಲು ಮೋದಿ ಆಡಳಿತವು ಆದಿವಾಸಿ ಹಾಗೂ ಬುಡಕಟ್ಟು ಸಮುದಾಯದವರ ಸುರಕ್ಷತೆ, ಅಭಿವೃದ್ಧಿ ಹಾಗೂ ಹಕ್ಕುಗಳನ್ನು ಗಮನದಲ್ಲಿಟ್ಟುಕೊಂಡು ರಾಷ್ಟ್ರೀಯ ನೀತಿ ಹಾಗೂ ಕಾರ್ಯಸೂಚಿಯೊಂದನ್ನು ರೂಪಿಸಿತ್ತು.
ಆ ಯೋಜನೆಯ ಪ್ರಕಾರ ಕಳೆದ 3 ವರ್ಷಗಳಲ್ಲಿ ನಕ್ಷಲ್ ಪೀಡಿತ ಪ್ರದೇಶಗಳಲ್ಲಿ 307 ಪೊಲೀಸ್ ಠಾಣೆಗಳನ್ನು ನಿರ್ಮಿಸಲಾಗಿದೆ. ಬಹಳ ದುರ್ಗಮ ಪ್ರದೇಶಗಳಲ್ಲೂ 1391 ಕಿ.ಮೀ ರಸ್ತೆ ನಿರ್ಮಾಣ ಮಾಡಲಾಗಿದೆ. 9 ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ರೂ. 11, 725 ಕೋಟಿ ವೆಚ್ಚದಲ್ಲಿ 5412 ಕಿ. ಮಿ. ರಸ್ತೆ ನಿರ್ಮಾಣಕ್ಕೆ ಈಗಾಗಲೇ ಮಂಜೂರಾತಿ ನೀಡಲಾಗಿದೆ.
ಫೋನ್ ಸಂಪರ್ಕವನ್ನು ಹೆಚ್ಚಿಸುವ ನಿಟ್ಟಿನಲ್ಲಿ ದೂರದೂರದ ಪ್ರದೇಶಗಳಲ್ಲಿ 2187 ಮೊಬೈಲ್ ಟವರ್’ಗಳನ್ನು ನಿರ್ಮಿಸಲಾಗಿದೆ. ಇನ್ನೂ 2882 ಟವರ್’ಗಳನ್ನು ಹಾಕುವ ಕೆಲಸ ಪ್ರಗತಿಯಲ್ಲಿದೆ.
ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಒಟ್ಟು 358 ಬ್ಯಾಂಕ್ ಬ್ರಾಂಚ್’ಗಳನ್ನು ಆರಂಭಿಸಲಾಗಿದೆ, ಹಾಗೂ 752 ಏಟಿಎಂಗಳನ್ನು ತೆರಯಲಾಗಿದೆ. 789 ಅಂಚೆ ಕಛೇರಿಗಳನ್ನು ಸರ್ಕಾರವು ಮಂಜೂರು ಮಾಡಿದೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.