
ಹಾವೇರಿ(ಏ.30): ಈ ಚುನಾವಣೆ ಬಸವರಾಜ ಬೊಮ್ಮಾಯಿಗಾಗಿ ಅಲ್ಲ. ಈ ಚುನಾವಣೆ ಭವ್ಯ ಭಾರತದ ನಿರ್ಮಾಣಕ್ಕಾಗಿ ಮೋದಿಜಿಯವರಿಗೆ ಬೆಂಬಲಿಸುವ ಚುನಾವಣೆಯಾಗಿದೆ. ನಿಮಗೆ ಅಕ್ಕಿ ಸಿಕ್ಕಿಲ್ಲವಾ?, ಆಯುಷ್ಮಾನ್ ಭಾರತ ಆರೋಗ್ಯ ಯೋಜನೆ ಕೊಟ್ಟಿಲ್ಲವಾ? ಎಲ್ಲರ ಏಳಿಗೆ ಯೋಚಿಸಿದವರು ಮೋದಿಯವರು. ಭಾರತ 5 ನೇ ಬಲಿಷ್ಠ ಅರ್ಥ ವ್ಯವಸ್ಥೆಯನ್ನಾಗಿ ಮಾಡಿಲ್ಲವಾ?. ಪ್ರವಾಹದ ಸಂದರ್ಭಗಳಲ್ಲಿ ಮೋದಿ ನಿಮಗೆ ಮನೆ ಕಟ್ಟಿಸಿದ್ದಾರೆ. ಕಾಂಗ್ರೆಸ್ ಅಂದರೆ ಕಮಿಷನ್ ಅಂತ ಅರ್ಥ, ಭ್ರಷ್ಟಾಚಾರ ಅಂತ ಅರ್ಥ ಎಂದು ಕಾಂಗ್ರೆಸ್ ವಿರುದ್ಧ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ ನಡ್ಡಾ ವಾಗ್ದಾಳಿ ನಡೆಸಿದ್ದಾರೆ.
ಇಂದು(ಮಂಗಳವಾರ) ಹಾವೇರಿ ಜಿಲ್ಲೆಯ ಬ್ಯಾಡಗಿ ಪಟ್ಟಣದಲ್ಲಿ ನಡೆದ ರೋಡ್ ಶೋದಲ್ಲಿ ಭಾಗವಹಿಸಿ ಮಾತನಾಡಿದ ಜೆ.ಪಿ ನಡ್ಡಾ ಅವರು, ಸಿದ್ದರಾಮಯ್ಯ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರಾ?. ಭ್ರಷ್ಟಾಚಾರಿಗಳನ್ನು ಉಳಿಸಿಕೊಳ್ಳೋದಷ್ಟೆ ಕಾಂಗ್ರೆಸ್ ಕೆಲಸವಾಗಿದೆ. ಈಗ ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರ ನಡೆದಿಲ್ಲವಾ?. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಚಿದಂಬರಂ ಬೇಲ್ ಮೇಲೆ ಇದ್ದರಾ ಇಲ್ಲವಾ?. ಡಿಸಿಎಂ ಡಿ.ಕೆ.ಶಿವಕುಮಾರ್ ಬೇಲ್ ಮೇಲೆ ಇಲ್ಲವಾ?. ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಜೈಲಿನಲ್ಲಿ ಇಲ್ಲವಾ?. ತಮಿಳುನಾಡಿನ ಮಂತ್ರಿ ಜೈಲಿನಲ್ಲಿ ಇಲ್ಲವಾ?. ಎಲ್ಲಾ ಬೇಲ್ ಹಾಗೂ ಜೈಲಿನಲ್ಲಿದ್ದಾರೆ. ಇಂಥವರು ಅಧಿಕಾರಕ್ಕೆ ಬರಬೇಕಾ?. 400 ಕ್ಕಿಂತ ಹೆಚ್ಚು ಸೀಟು ನಾವು ಗೆಲ್ಲಬೇಕಿದೆ ಎಂದು ವಿಪಕ್ಷಗಳ ವಿರುದ್ಧ ನಡ್ಡಾ ಹರಿಹಾಯ್ದಿದ್ದಾರೆ.
ಕೇಂದ್ರ ಸರ್ಕಾರದ ಮೊತ್ತಕ್ಕೆ ರಾಜ್ಯದ ಪಾಲು ಸೇರಿಸಿ ಬರ ಪರಿಹಾರ ನೀಡಲಿ: ಬೊಮ್ಮಾಯಿ
ಮೋದಿಯಿಂದ ಭಯೋತ್ಪಾದನೆ ಮುಕ್ತ ರಾಷ್ಟ್ರ ನಿರ್ಮಾಣ
ನರೇಂದ್ರ ಮೋದಿಯವರು ಭಯೋತ್ಪಾದನೆ ಮುಕ್ತ ರಾಷ್ಟ್ರ ನಿರ್ಮಾಣ ಮಾಡಿದ್ದಾರೆ ಎಂದು ಮಾಜಿ ಸಿಎಂ ಹಾಗೂ ಹಾವೇರಿ-ಗದಗ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಭಯೋತ್ಪಾದನೆ ಮುಕ್ತ ರಾಷ್ಟ್ರ ನಿರ್ಮಾಣ ಮಾಡಿದ್ದಾರೆ. ಅನ್ನಭಾಗ್ಯ, ಹಸಿವು ಮುಕ್ತ ಕರ್ನಾಟಕ ಅಂತ ಮಾತಾಡ್ತಾರೆ. ಯಾರೂ ಅನ್ನ ಊಟ ಮಾಡಿರ್ಲೇ ಇಲ್ಲ ಇವರು ಅಕ್ಕಿ ಕೊಡೋ ಮುಂಚೆ?. ಮೋದಿಯವರು ನೀಡಿದ ಲಿಸಿಕೆ ತಗೋಬೇಡಿ ಮಕ್ಕಳಾಗಲ್ಲ ಎಂದು ಅಪಪ್ರಚಾರ ಮಾಡಿದರು. ಈಗ ಮಕ್ಕಳಾಗಿಲ್ವಾ ? ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ.
ರಾಹುಲ್ ಗಾಂಧಿ ಹೊಸ ಕಾನೂನು ತರ್ತಿದ್ದಾರೆ. ನಿಮ್ಮ ಆಸ್ತಿಗೆ 55% ತೆರಿಗೆ ಕಟ್ಟಬೇಕಂತೆ. ಇಂಥ ಹುಚ್ಚಾಟದ ಕಾನೂನು ಬೇಕಾ? ಇಂಥ ಹುಚ್ಚರಿರೋ ಪಕ್ಷ ಬೇಕಾ?. ನಿಮ್ಮ ಮನೆ ಮಗನಾಗಿ ಇರ್ತೀನಿ ಮತ ಹಾಕಿ ಎಂದು ಬಸವರಾಜ ಬೊಮ್ಮಾಯಿ ಮನವಿ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.