ರಾಜ್ಯದಲ್ಲಿದೆ ರಾಷ್ಟ್ರಪಿತನ ರಾಜ್ ಘಾಟ್

By Web DeskFirst Published Oct 2, 2018, 3:24 PM IST
Highlights

1944 ರಲ್ಲಿ ಆರಂಭಗೊಂಡ ಈ ಸಂಸ್ಥೆ ಮಧ್ಯಪ್ರದೇಶದ ಇಂಧೂರಿನಲ್ಲಿರುವ ಕಸ್ತೂರ್ ಬಾ ಗಾಂಧಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಅಂಗ ಸಂಸ್ಥೆಯಾಗಿದೆ. ದೇಶಾದ್ಯಂತ 27 ಕೇಂದ್ರಗಳನ್ನು ಹೊಂದಿದೆ ಗಾಂಧೀಜಿ ಯವರ ಅನುಯಾಯಿಯಾಗಿದ್ದ ಕರ್ನಾಟಕದ  ದಿಟ್ಟ ಧೀಮಂತ ಮಹಿಳೆ ಯಶೋದರಮ್ಮ ದಾಸಪ್ಪ ನೇತೃತ್ವದಲ್ಲಿ ಈ ಕೇಂದ್ರ ಆರಂಭವಾಯಿತು.

ವರದಿ: - ದಯಾಶಂಕರ ಮೈಲಿ

ಹಾಸನ[ಅ.02]: ಸ್ವಾತಂತ್ರ್ಯ ಹೋರಾಟಗಾರ್ತಿ ಮಾಜಿ ಸಚಿವೆ ಯಶೋಧರಮ್ಮ ದಾಸಪ್ಪ ಅವರ ಹಲವು ಕನಸುಗಳಿಂದ ಆರಂಭಗೊಂಡು ಉತ್ತುಂಗ ಶಿಖರಕ್ಕೇರಿದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಚಿತಾಭಸ್ಮವಿರುವ ಪಟ್ಟಣದ ಹೊರವಲಯದ ರೇಲ್ವೆ ಗೇಟ್ ಬಳಿ ಇರುವ ಕಸ್ತೂರಬಾ ಟ್ರಸ್ಟ್ ಐತಿಹಾಸಿಕ ಸ್ಥಳವಾಗಿದೆ. ಇದನ್ನು ಕರ್ನಾಟಕ ರಾಜ್ಯದ ರಾಜ್‌ಘಾಟ್ ಎಂದೇ ಕರೆಯಲಾಗುತ್ತಿದೆ.

ದೆಹಲಿಯ ರಾಜ್‌ಘಾಟ್, ಗುಜರಾತಿನ ಸಬರಾಮತಿ ಆಶ್ರಮ ಹೊರತುಪಡಿಸಿದರೆ ಗಾಂಧೀಜಿ ಚಿತಾಭಸ್ಮವಿರುವ ಏಕೈಕ ಸ್ಥಳ ಅರಸೀಕೆರೆ ಎಂಬುದೇ ಹೆಮ್ಮೆಯ ಸಂಗತಿ. ಅರಸೀಕೆರೆ ಪಟ್ಟಣದಿಂದ 2 ಕಿಮೀ ದೂರದಲ್ಲಿ ಇಲ್ಲಿ ಗಾಂಧೀಜಿಯವರ ಸಮಾಧಿ ಇದೆ. ಈ ಕಾರಣಕ್ಕಾಗಿ ಇದನ್ನು 3ನೇ ರಾಜ್ ಘಾಟ್ ಎಂದು ಕರೆಯಲಾಗುತ್ತದೆ. ಗಾಂಧೀಜಿ ಅವರ ಚಿತಾಭಸ್ಮವನ್ನು ತಂದು ಸಮಾಧಿ ನಿರ್ಮಿಸಲಾಗಿದೆ. ಇಲ್ಲಿ ಗಾಂಧೀಜಿಯವರ ಸಂದೇಶಗಳನ್ನು ಸಾರಲಾಗುತ್ತಿದೆ.

ಗಾಂಧಿ ಅವರ ಜತೆ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಂಡಿದ್ದ ಯಶೋಧರ ದಾಸಪ್ಪನವರು, ಗಾಂಧೀಜಿ ಅವರ ಸೂಚನೆಯಂತೆ ಈ ಟ್ರಸ್ಟ್ ಆರಂಭಿಸಿದ್ದರು. ಗಾಂಧಿ ಅವರ ಇಹಲೋಕ ತ್ಯಜಿಸಿದ ನಂತರ ಅವರ ಚಿತಾಭಸ್ಮವನ್ನು ತಂದು ಸಮಾಧಿ ನಿರ್ಮಿಸಿದ್ದಾರೆ. 

1944 ರಲ್ಲಿ ಆರಂಭಗೊಂಡ ಈ ಸಂಸ್ಥೆ ಮಧ್ಯಪ್ರದೇಶದ ಇಂಧೂರಿನಲ್ಲಿರುವ ಕಸ್ತೂರ್ ಬಾ ಗಾಂಧಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಅಂಗ ಸಂಸ್ಥೆಯಾಗಿದೆ. ದೇಶಾದ್ಯಂತ 27 ಕೇಂದ್ರಗಳನ್ನು ಹೊಂದಿದೆ ಗಾಂಧೀಜಿಯವರ ಅನುಯಾಯಿಯಾಗಿದ್ದ ಕರ್ನಾಟಕದ ದಿಟ್ಟ ಧೀಮಂತ ಮಹಿಳೆ ಯಶೋದರಮ್ಮ ದಾಸಪ್ಪ ನೇತೃತ್ವದಲ್ಲಿ ಈ ಕೇಂದ್ರ ಆರಂಭವಾಯಿತು.

ಮಾಜಿ ಮುಖ್ಯಮಂತ್ರಿ ನಿಜಲಿಂಗಪ್ಪ ನವರ ಮಂತ್ರಿಮಂಡಲದಲ್ಲಿ ಮಹಿಳೆ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿದ್ದ ಅವರು ಅಂದಿನ ಸರ್ಕಾರ ಪಾನ ನಿಷೇಧವನ್ನು ಜಾರಿಗೆ ತರದ ಧೋರಣೆಯನ್ನು ಪ್ರತಿಭಟಿಸಿ ಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿದ ದಿಟ್ಟ ಮಹಿಳೆ ಎನಿಸಿಕೊಂಡಿದ್ದರು.

ದೀನ ದಲಿತರ ಬಡಮಕ್ಕಳ ವಿಪರ್ಯಾಸ ಹಾಗೂ ಹಳ್ಳಿಯ ಹೆಣ್ಣುಮಕ್ಕಳಿಗೆ ಉದ್ಯೋಗಾಧಾರಿತ ತರಬೇತಿ ನೀಡಲು ಹೊಲಿಗೆ ಕಸೂತಿಯ ಮೂಲಕ ಮಹಿಳೆಯರಿಗೆ ಸ್ವಯಂ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಸಮಾಜ ಕಲ್ಯಾಣ ಇಲಾಖೆ ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಯೋಜನೆಯಡಿ ಸಾವಿರಾರು ಮಹಿಳೆಯರಿಗೆ ಅಂಗನವಾಡಿ ಕಾರ್ಯಕರ್ತೆಯರಿಗೆ ತರಬೇತಿ ನೀಡಲಾಗುತ್ತಿತ್ತು.

ಈ ಸಂಸ್ಥೆಗೆ ಹಬ್ಬನಘಟ್ಟ ಕಾವಲಿನಲ್ಲಿ 85 ಎಕರೆ 27 ಗುಂಟೆ ಜಮಿನನ್ನು ಹೊಂದಿದ್ದು ಈ ಸ್ಥಳದಲ್ಲಿ ಗಾಂಧೀಜಿಯವರ ಚಿತಾಭಸ್ಮದ ಸಮಾಧಿ ಈ ಕೇಂದ್ರದ ಸ್ಥಾಪನೆಯ ರೂವಾರಿಯದ ಯಶೋಧಮ್ಮ ಅವರ ಸಮಾಧಿ ಯೂ ಇದೆ. 1946 ರಿಂದ 1996 ರವರೆಗೆ ಯಶೋದರಮ್ಮ ದಾಸಪ್ಪ ಸೇರಿದಂತೆ ಉಮಾಬಾಯಿ ಕುಂದಾಪುರ್ ಸಾವಿತ್ರಮ್ಮ ಅಣ್ಣೇಗೌಡ ಸುಮಿತ್ರಾ ನಿಂಬಾಳ್ಕರ ಪ್ರಭಾಕರ್, ಬಿ.ಕೆ ಸರಸ್ವತಮ್ಮ ಸೇರಿದಂತೆ ಅನೇಕರು ಕೇಂದ್ರದ ಮುಖ್ಯಸ್ಥರಾಗಿ ಅಭಿವೃದ್ಧಿಗೆ ಶ್ರಮಿಸಿದ್ದಾರೆ.

ಆದರೆ ಸ್ವಾತಂತ್ರ್ಯ ಲಭಿಸಿ ಹಾಗೂ ನಿಧಾನರಾಗಿ ದಶಕಗಳೇ ಕಳೆದಿವೆ. ಆದರೂ ಸರ್ಕಾರಗಳು ಮಾತ್ರ, ಇಂತಹ ಪುಣ್ಯಸ್ಥಳವನ್ನು ನಿರ್ಲಕ್ಷಿಸಿವೆ ಎಂಬ ಟೀಕೆಗಳು ಕೇಳಿಬರುತ್ತಿವೆ.

ವಿಶೇಷತೆಗಳೇನು ?
ಟ್ರಸ್ಟ್ ಆವರಣದಲ್ಲಿ ಕೆಟ್ಟದ್ದನ್ನು ನೋಡಬೇಡ, ಕೆಟ್ಟದ್ದನ್ನು ಕೇಳಬೇಡ ಹಾಗೂ ಕೆಟ್ಟದ್ದನ್ನು ಮಾತನಾಡಬೇಡ ಎಂಬ ಸಂದೇಶ ಸಾರುವ ಮೂರು ಕೋತಿಗಳ ಸುಂದರ ಪ್ರತಿಮೆಗಳು, ಗಾಂಧೀಜಿ ಸಂದೇಶ ಸಾರುವ ನಾಮಲಕಗಳನ್ನು ಇತ್ತೀಚಿಗೆ ನೂತನವಾಗಿ ನಿರ್ಮಿಸಲಾಗಿರುವ ಉದ್ಯಾನವನದಲ್ಲಿ ಅಳವಡಿಸಲಾಗಿದೆ.

ಗರಿಗೆದರಿದ ಚಟುವಟಿಕೆಗಳು
ಕಳೆದೊಂದು ವರ್ಷದಿಂದ ಕಸ್ತೂರಬಾ ಟ್ರಸ್ಟ್ ಆವರಣದಲ್ಲಿ ವೈವಿದ್ಯಮಯ ಟ್ರಸ್ಟ್ ಕಾರ್ಯಕ್ರಮಗಳನ್ನು ಆಯೋಜಿಸಿ ನಾಡೋಜ ಪಾಟೀಲ ಪುಟ್ಟಪ್ಪ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್. ದೊರೆಸ್ವಾಮಿ, ನಿವೃತ್ತ ಐ.ಎ.ಎಸ್. ಅಧಿಕಾರಿ ಶಂಕರಲಿಂಗೇಗೌಡ ಮುಂತಾದ ಗಣ್ಯರನ್ನು ಆಹ್ವಾನಿಸಿ ವಿನೂತನ ಸಮಾರಂಭಗಳನ್ನು ನಡೆಸಲಾಗಿದೆ. ಅಲ್ಲದೇ ತುಮಕೂರಿನ ರಾಮಕೃಷ್ಣಾಶ್ರಮದ ವೀರೇಶಾನಂದ ಶ್ರೀಗಳನ್ನು ಆಹ್ವಾನಿಸಿ ಶಿಕ್ಷಕ ಸಮುದಾಯಕ್ಕೆ ಉಪನ್ಯಾಸದ ಸುಧೆ ಉಣಿಸಲಾಗಿದೆ.

ಬೆಂಗಳೂರಿನ ಗಾಂಧಿ ಸ್ಮಾರಕ ಟ್ರಸ್ಟ್, ಮದ್ಯಪಾನ ಸಂಯಮ ಮಂಡಳಿ ವತಿಯಿಂದಲೂ ವಿನೂತನ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ ಇಲ್ಲಿ. ಜನರ ಗಮನ ಸೆಳೆಯುವ ಕೆಲಸ ನಿರಂತರವಾಗಿ ಸಾಗಿದೆ. ಇದರಿಂದಾಗಿ ಮಹಾತ್ಮನ ಪವಿತ್ರ ಕ್ಷೇತ್ರ ಹೆಚ್ಚು ಪ್ರಚಲಿತಕ್ಕೆ ಬಂದಂತಾಗಿದೆ.

ಮಹಾತ್ಮನ ಪವಿತ್ರ ಸ್ಥಳವನ್ನು ಅಭಿವೃದ್ಧಿಪಡಿಸಲು ಇಂದಿನ ಸರ್ಕಾರ ಚುನಾಯಿತ ಜನಪ್ರತಿನಿಧಿಗಳು, ಅಧಿಕಾರಿಗಳು ಇಂತಹದ್ದೊಂದು ಪುಣ್ಯಭೂಮಿಯನ್ನು ಅಂತಾರಾಷ್ಟ್ರೀಯ ರಾಷ್ಟ್ರೀಯ ಮಟ್ಟದ ಪ್ರವಾಸಿ ಸ್ಥಳವನ್ನಾಗಿ ಪರಿವರ್ತಿಸಲು ಮುಂದಾಗಬೇಕೆಂದು ನಾಗರೀಕರು ಬಯಸಿದ್ದಾರೆ.

ದೆಹಲಿಯ ರಾಜ್ ಘಾಟ್ ಮಾದರಿಯಲ್ಲಿ ನವೀಕರಣ 
ಮಹಾತ್ಮ ಗಾಂಧೀಜಿಯವರ ಅನುಯಾಯಿಯಾಗಿದ್ದ  ಶ್ರೀಮತಿ ಯಶೋಧರಮ್ಮ ದಾಸಪ್ಪ ಅವರ ಪ್ರಯತ್ನದ ಫಲವಾಗಿ, ಕರ್ನಾಟಕದಲ್ಲಿರುವ ಏಕೈಕ ಮಹಾತ್ಮ ಗಾಂಧಿ ಚಿತಾಭಸ್ಮ ಸಮಾಧಿ ಅರಸೀಕೆರೆಯ ಕಸ್ತೂರಬಾ ಗಾಂಧಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ (ಕಸ್ತೂರಬಾ ಶಿಬಿರ) ಆವರಣದಲ್ಲಿ ನಿರ್ಮಾಣಗೊಂಡಿತು. ಇತ್ತೀಚೆಗೆ, ರಾಜ್ಯ ಸರ್ಕಾರ, ಸ್ಥಳೀಯ ದಾನಿಗಳ ಸಹಕಾರ ಮತ್ತು ಇತರೆ ಅನುದಾನಗಳಿಂದ ಈ ಸ್ಥಳವನ್ನು ದೆಹಲಿಯ ರಾಜ್ ಘಾಟ್ ಮಾದರಿಯಲ್ಲಿ ನವೀಕರಿಸಲಾಗಿದೆ.
 

click me!