Jun 25, 2018, 9:30 PM IST
ವಿಜಯಪುರ(ಜೂ.25): ವಿಜಯಪುರ ಜಿಲ್ಲೆಯಲ್ಲಿ ಭಾನಾಮತಿ ಕಾಟ ಶುರುವಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಸಿಂದಗಿ ತಾಲೂಕಿನ ಬಂದಾಳ ಗ್ರಾಮದಲ್ಲಿ ಇದ್ದಕ್ಕಿದ್ದಂತೆ ಮನೆಗಳ ಮೇಲೆ ಕಲ್ಲು ಬೀಳುತ್ತಿವೆ. ಏಕಾಏಕಿ ಮನೆಗಳ ಮೇಲೆ ಭಾರೀ ಪ್ರಮಾಣದಲ್ಲಿ ಕಲ್ಲುಗಳು ಬೀಳುತ್ತಿದ್ದು, ಗ್ರಾಮಸ್ಥರು ಭಯಭೀತರಾಗಿದ್ದಾರೆ.
ಗ್ರಾಮದ ನಿಂಗಪ್ಪ ಬಿರಾದರ್ ಎಂಬುವವರ ಮನೆ ಮೇಲೆ ಕಲ್ಲುಗಳು ಬೀಳುತ್ತಿರುವ ದೃಶ್ಯವನ್ನು ಸೆರೆ ಹಿಡಿಯಲಾಗಿದೆ. ಮನೆಯ ಟಿವಿ, ಫ್ರಿಡ್ಜ್ ಗಳ ಮೇಲೆ ಏಕಾಏಕಿ ಕಲ್ಲುಗಳು ಬೀಳುತ್ತಿರುವುದನ್ನು ದೃಶ್ಯದಲ್ಲಿ ಕಾಣಬಹುದಾಗಿದೆ. ಗ್ರಾಮಸ್ಥರು ಬಿರಾದರ್ ಮನೆಗೆ ಹೋಗಲು ಹೆದರಿಕೊಳ್ಳುತ್ತಿದ್ದಾರೆ.
ಘಟನೆಯಲ್ಲಿ ಸಾವಿತ್ರಿ ಬಿರಾದರ್ ಎಂಬುವವರಿಗೆ ಗಾಯಗಳಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.