ವಾಜಪೇಯಿ ಮೊನಚು ಮಾತು, ಜಾಫರ್ ಶರೀಫ್‌ಗೆ ಗೊತ್ತು..ಕಾರಣ?

By Kannadaprabha NewsFirst Published Aug 18, 2018, 9:23 AM IST
Highlights

ಭಾರತೀಯರ ಅಂತರಾಳದಲ್ಲಿ ಅಮರರಾಗಿರುವ ಅಟಲ್ ಬಿಹಾರಿ ವಾಜಪೇಯಿ ಅವರ ಬಗ್ಗೆ ಹಿರಿಯ ಮುತ್ಸದ್ಧಿ ರಾಜಕಾರಣಿ, ಕೇಂದ್ರದ ರೈಲ್ವೆ ಇಲಾಖೆ ಮಾಜಿ ಸಚಿವ ಸಿ.ಕೆ. ಜಾಫರ್‌ ಶರೀಫ್‌ ಮಾತನಾಡಿದ್ದಾರೆ. ವಾಜಪೇಯಿ ಅವರ ಕುರಿತು ಏನು ಹೇಳಿದ್ದಾರೆ... ಅವರ ಮಾತುಗಳಲ್ಲೇ ಕೇಳಿ...

ಸ್ವತಂತ್ರ ಭಾರತದ ಇತಿಹಾಸದಲ್ಲಿ ಮಾಜಿ ಪ್ರಧಾನಮಂತ್ರಿ ಅಟಲ್‌ಬಿಹಾರಿ ವಾಜಪೇಯಿ ಅವರು ದಿಟ್ಟರಾಜಕಾರಣಿ ಎಂದೇ ಗುರುತಿಸಿಕೊಳ್ಳುತ್ತಾರೆ. ವಿದ್ವತ್‌, ಪಾಂಡಿತ್ಯ ಹಾಗೂ ವಾಗ್ಝರಿ ಎಲ್ಲವನ್ನೂ ಮೇಳೈಸಿಕೊಂಡಿದ್ದ ವ್ಯಕ್ತಿತ್ವ . ವಾಜಪೇಯಿ ಅವರು ಬಹಳ ದೊಡ್ಡ ದೇಶ ಪ್ರೇಮಿ.

ನಾನು ಕೇಂದ್ರ ಸಚಿವನಾಗಿದ್ದಾಗ ವಿರೋಧಪಕ್ಷದಲ್ಲಿದ್ದರೂ ಆಡಳಿತ ಪಕ್ಷದವರ ಬಗ್ಗೆ ಅಸಹನೆ ತೋರಿದವರಲ್ಲ. ಬದಲಿಗೆ ಮೊನಚಾದ ಮಾತಿನ ಮೂಲಕ ಸಲಹೆ ನೀಡುತ್ತಿದ್ದರು. ಬಳಿಕ ಪ್ರಧಾನಮಂತ್ರಿಯಾದ ಮೇಲೂ ಹಲವು ಕಾರ್ಯಕ್ರಮಗಳ ಮೂಲಕ ಜನರ ಮನ ಗೆದ್ದಿದ್ದರು.

ದೆಹಲಿಯಿಂದ ಲಾಹೋರ್‌ಗೆ ಬಸ್ಸು ಪ್ರಯಾಣ ಮಾಡುವ ಮೂಲಕ ಇತಿಹಾಸವನ್ನೇ ಸೃಷ್ಟಿಮಾಡಿದ್ದರು. ಇದಕ್ಕೂ ಮೊದಲು ವಿದೇಶಾಂಗ ಸಚಿವರಾಗಿ ಪಾಕಿಸ್ತಾನ ಹಾಗೂ ಭಾರತದ ನಡುವೆ ಕ್ರಿಕೆಟ್‌ ಕ್ರೀಡೆ ಪುನರ್‌ ಆರಂಭಕ್ಕೆ ಮಹತ್ವದ ಹೆಜ್ಜೆ ಇಟ್ಟಿದ್ದರು. ಪಾಕಿಸ್ತಾನ ಹಾಗೂ ಭಾರತದ ನಡುವೆ ಪರಸ್ಪರ ಬಾಂಧವ್ಯ ಕಟ್ಟುವ ನಿಟ್ಟಿನಲ್ಲಿ ಹಲವು ದಿಟ್ಟಕ್ರಮಗಳನ್ನು ಕೈಗೊಂಡಿದ್ದರು.

ಹಲವಾರು ಬಾರಿ ಅವರೊಂದಿಗೆ ವೈಯಕ್ತಿಕವಾಗಿ ಭೇಟಿ ಮಾಡಿ ಮಾತುಕತೆ ನಡೆಸುವ ಅವಕಾಶ ನನಗೆ ಒದಗಿ ಬಂದಿತ್ತು. ಅವರ ಜತೆಗಿನ ಒಡನಾಟವೂ ಸಹ ನನಗೆ ಅಚ್ಚಳಿಯದೆ ನೆನಪಿದೆ. ನಾನು ರೈಲ್ವೇ ಸಚಿವನಾಗಿದ್ದಾಗ ಕೆ.ಆರ್‌. ಪುರದ ಕೇಬಲ್‌ ಬ್ರಿಡ್ಜ್‌ ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತು. ಬಳಿಕ 2003ರಲ್ಲಿ ಇದರ ಉದ್ಘಾಟನೆಗೆ ಪ್ರಧಾನಮಂತ್ರಿ ಅಟಲ್‌ ಬಿಹಾರಿ ವಾಜಪೇಯಿ ಅವರು ಬಂದಿದ್ದರು. ಈ ವೇಳೆಯೂ ಸಹ ಅವರು ಆತ್ಮೀಯವಾಗಿ ನಡೆದುಕೊಂಡಿದ್ದರು. ಅವರ ಅಗಲಿಕೆಯಿಂದಾಗಿ ದಿಟ್ಟರಾಜಕಾರಣಿಯೊಬ್ಬರನ್ನು ದೇಶ ಕಳೆದುಕೊಂಡಿದೆ ಎಂದು ಹೇಳಬಹುದು.

click me!