ಬೆಳಗಾವಿ: ತಕ್ಷಣ ಗಡಿ ಉಸ್ತುವಾರಿ ಸಚಿವರ ನೇಮಿಸಿ

By Kannadaprabha NewsFirst Published Dec 8, 2022, 7:30 PM IST
Highlights

ಗಡಿ ವಿವಾದಕ್ಕೆ ಸಂಬಂಧಿಸಿದ ವಿಚಾರಗಳ ಕುರಿತು ಉಸ್ತುವಾರಿ ನೋಡಿಕೊಳ್ಳಲು ಮತ್ತು ತಾತ್ಕಾಲಿಕ ಸೂಕ್ತ ನಿರ್ಣಯಗಳನ್ನು ಕೈಗೊಳ್ಳಲು ಮಹಾರಾಷ್ಟ್ರ ಸರ್ಕಾರ ಇಬ್ಬರು ಸಚಿವರನ್ನು ನೇಮಕ ಮಾಡಿ ತನ್ನ ಬದ್ಧತೆ ಮೆರೆದಿದೆ. ಆದರೆ ಕರ್ನಾಟಕ ಸರ್ಕಾರ ಮಾತ್ರ ಈವರೆಗೆ ಕೈಕಟ್ಟಿ ಕುಳಿತು ತನ್ನ ನಿರಾಸಕ್ತಿಯನ್ನು ಪ್ರದರ್ಶಿಸಿದೆ.

ಬೆಳಗಾವಿ(ಡಿ.08): ಕರ್ನಾಟಕ, ಮಹಾರಾಷ್ಟ್ರ ಗಡಿವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರವು ತಕ್ಷಣ ಇಬ್ಬರು ಗಡಿ ಉಸ್ತುವಾರಿ ಸಚಿವರನ್ನು ನೇಮಿಸಬೇಕೆಂದು ಒತ್ತಾಯಿಸುವ ನಿರ್ಣಯವನ್ನು ಬುಧವಾರ ನಡೆದ ಬೆಳಗಾವಿ ದಿನಪತ್ರಿಕೆಗಳ ಸಂಪಾದಕರ ಸಂಘದಿಂದ ಏರ್ಪಡಿಸಲಾಗಿದ್ದ ಸಂಪಾದಕರ, ಕನ್ನಡ ಸಾಹಿತಿಗಳ ಮತ್ತು ಕನ್ನಡ ಹೋರಾಟಗಾರರ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಗಡಿ ವಿವಾದಕ್ಕೆ ಸಂಬಂಧಿಸಿದ ವಿಚಾರಗಳ ಕುರಿತು ಉಸ್ತುವಾರಿ ನೋಡಿಕೊಳ್ಳಲು ಮತ್ತು ತಾತ್ಕಾಲಿಕ ಸೂಕ್ತ ನಿರ್ಣಯಗಳನ್ನು ಕೈಗೊಳ್ಳಲು ಮಹಾರಾಷ್ಟ್ರ ಸರ್ಕಾರ ಇಬ್ಬರು ಸಚಿವರನ್ನು ನೇಮಕ ಮಾಡಿ ತನ್ನ ಬದ್ಧತೆ ಮೆರೆದಿದೆ. ಆದರೆ ಕರ್ನಾಟಕ ಸರ್ಕಾರ ಮಾತ್ರ ಈವರೆಗೆ ಕೈಕಟ್ಟಿಕುಳಿತು ತನ್ನ ನಿರಾಸಕ್ತಿಯನ್ನು ಪ್ರದರ್ಶಿಸಿದೆ. ಇದನ್ನು ಸಭೆ ಖಂಡಿಸಿದ್ದು ಮತ್ತು ತಕ್ಷಣ ಗಡಿ ಉಸ್ತುವಾರಿಗಾಗಿಯೇ ಇಬ್ಬರು ಸಚಿವರನ್ನು ನೇಮಿಸಬೇಕು. ಸುಪ್ರೀಂ ಕೋರ್ಚ್‌ ಮತ್ತು ಕೇಂದ್ರ ಸರ್ಕಾರದ ಎದುರು ಮಹಾರಾಷ್ಟ್ರದ ಮುಖವಾಡವನ್ನು ಬಯಲು ಮಾಡಬೇಕು ಎಂದು ಸಭೆಯಲ್ಲಿ ಆಗ್ರಹಿಸಲಾಯಿತು. ಗಡಿಭಾಗದಲ್ಲಿ ತ್ವೇಷಮಯ ವಾತಾವರಣ ನಿರ್ಮಾಣವಾಗುತ್ತಿದ್ದರೂ ಈ ಭಾಗದ, ಈ ಜಿಲ್ಲೆಯ ಜನ ಪ್ರತಿನಿಧಿಗಳು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಜಾಣ ಮೌನವಹಿಸಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಗಡಿಭಾಗದ ಜನರ ವಿರೋಧ ವ್ಯಕ್ತವಾಗುವ ಮುನ್ನ ಎಚ್ಚೆತ್ತುಕೊಳ್ಳಬೇಕು. ತಮ್ಮ ಜವಾಬ್ದಾರಿಯನ್ನು ಅವರು ನಿಭಾಯಿಸಬೇಕು ಎಂದು ಸಭೆ ಆಗ್ರಹಿಸಿತು.

Maharashtra Karnataka Border Row: ಬಸ್‌, ಬ್ಯಾಂಕಿಗೆ ಮಸಿ: ಮಹಾ ಪುಂಡಾಟಿಕೆ!

ಕರ್ನಾಟಕದಲ್ಲಿರುವ ಮರಾಠಿ ಭಾಷಿಕರಿಗೆ ಯಾವುದೇ ರೀತಿಯ ಅನ್ಯಾಯವಾಗಿಲ್ಲ. ಕರ್ನಾಟಕದ ಕನ್ನಡಿಗರಿಗೆ ಇರುವ ಎಲ್ಲ ರೀತಿಯ ಸೌಲಭ್ಯಗಳು ಮರಾಠಿ ಭಾಷಿಕರಿಗೂ ಇವೆ. ಈ ವಿಚಾರದಲ್ಲಿ ಬೇಧ ಭಾವವಾಗಿಲ್ಲ. ಅದು ಮರಾಠಿ ಶಾಲೆಗಳಾಗಿರಬಹುದು ಅಥವಾ ಮೂಲ ಸೌಕರ್ಯವಾಗಿರಬಹುದು. ಸಾಲದಕ್ಕೆ ಮರಾಠಿ ಭಾಷಿಕರ ಅಭಿವೃದ್ಧಿಗಾಗಿ ಮರಾಠಿ ಅಭಿವೃದ್ಧಿ ನಿಗಮ ಸ್ಥಾಪಿಸಿ ವಿಶೇಷ ಅನುದಾನವನ್ನು ಸಹ ಸರ್ಕಾರ ನೀಡಿದೆ. ಹೀಗಿರುವಾಗ ಇಲ್ಲಿನ ಮರಾಠಿ ಭಾಷಿಕರಿಗೆ ಅನ್ಯಾಯವಾಗಿದೆ ಎಂದು ದೂರುವ ಮಹಾರಾಷ್ಟ್ರದ ಕೆಲ ನಾಯಕರು ವಾಸ್ತವ ಪರಿಸ್ಥಿಯನ್ನು ಅರಿತು ಮಾತನಾಡಬೇಕು. ಅನಗತ್ಯವಾಗಿ ಪ್ರಚೋದನಾತ್ಮಕ ಹೇಳಿಕೆ ನೀಡಿ ಇಲ್ಲಿನ ಸಾಮರಸ್ಯ ವಾತಾವರಣವನ್ನು ಹಾಳು ಮಾಡಬಾರದು. ಅಷ್ಟಕ್ಕೂ ಬೆಳಗಾವಿ ಮರಾಠಿಗರಿಗಾಗಿ ಮಹಾರಾಷ್ಟ್ರ ಮಾಡಿದ್ದಾರೂ ಏನು? ಕೇವಲ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ತಪ್ಪು ಹೇಳಿಕೆ ನೀಡಿ ಸಮಾಜದ ದಾರಿ ತಪ್ಪಿಸುತ್ತಿದ್ದಾರೆ. ಇದೆ ರೀತಿಯ ಸೌಕರ್ಯ ಮತ್ತು ಸೌಲಭ್ಯಗಳು ಮಹಾರಾಷ್ಟ್ರದಲ್ಲಿನ ಕನ್ನಡಿಗರೇ ಹೆಚ್ಚಿರುವ ಪ್ರದೇಶಗಳಲ್ಲಿ ಇಲ್ಲ ಎನ್ನುವುದನ್ನು ಅಲ್ಲಿನ ಜನರು ಹೇಳುತ್ತಿದ್ದಾರೆ. ಆ ಅನ್ಯಾಯವನ್ನು ಮೊದಲು ಅವರು ಸರಿಪಡಿಸಲಿ ಎಂದು ಸಭೆ ಅಸಮಾಧಾನ ವ್ಯಕ್ತಪಡಿಸಿತು.

ಕನ್ನಡತಿ ಕೆಳದಿ ಚನ್ನಮ್ಮ ಕಷ್ಟಕಾಲದಲ್ಲಿ ಶಿವಾಜಿಯ ಮಗನಿಗೆ ಆಶ್ರಯ ನೀಡಿದ್ದು ಇತಿಹಾಸದಿಂದ ತಿಳಿದುಬರುತ್ತದೆ. ಕಿತ್ತೂರು ಚನ್ನಮ, ಬೆಳವಡಿ ಮಲ್ಲಮ್ಮ, ಛತ್ರಪತಿ ಶಿವಾಜಿ ಇವರುಗಳ ಕಾಲದಿಂದಲೂ ಕನ್ನಡ ಮತ್ತು ಮರಾಠಿ ಭಾಷಿಕರ ಬಾಂಧವ್ಯ ಮತ್ತು ಸಾಮರಸ್ಯ ಜೀವನ ಅತ್ಯುತ್ತಮವಾಗಿ ಇದೆ. ಅದನ್ನು ಹಾಳುಮಾಡವ ಕೆಲಸವಾಗಬಾರದು. ಇದರಿಂದಾಗಿ ಈ ಭಾಗದ ಅಭಿವೃದ್ಧಿ ಕುಂಠಿತವಾಗುತ್ತಿದೆ. ಸಾಮಾನ್ಯ ಜನರ ಜೀವನ ಪದೇಪದೆ ಅಸ್ತವ್ಯಸ್ತವಾಗುತ್ತಿದೆ. ಮಹಾರಾಷ್ಟ್ರದ ನಾಯಕರ ಪ್ರಚೋದನಾತ್ಮಕ ಹೇಳಿಕೆ ನೀಡಿದಾಗ ಅನಿವಾರ್ಯವಾಗಿ ಅದಕ್ಕೆ ನಾವು ಉತ್ತರ ನೀಡಲೇ ಬೇಕಾಗುತ್ತದೆ. ಆಗ ಸಹಜವಾಗಿಯೇ ಘರ್ಷಣೆ ಆರಂಭವಾಗುತ್ತದೆ. ಈ ವಿವಾದಕ್ಕೆ ಶಾಶ್ವತ ಪರಿಹಾರನ್ನು ಎರಡು ರಾಜ್ಯಗಳ ಮುಖ್ಯಮಂತ್ರಿಗಳು ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಈ ವೇಳೆ ಸಂಪಾದಕ ಸಂಘದ ಅಧ್ಯಕ್ಷ ಮುರುಗೇಶ ಶಿವಪೂಜಿ, ಸಾಹಿತಿಗಳಾದ ಬಿ.ಎಸ್‌.ಗವಿಮಠ, ಎಂ.ಎಸ್‌.ಇಂಚಲ, ನಿಲಗಂಗಾ ಚರಂತಿಮಠ, ಯ.ರು.ಪಾಟೀಲ, ಬಸವರಾಜ ಗಾರ್ಗಿ, ಕನ್ನಡ ಹೋರಾಟಗಾರರಾದ ಮಹಾಂತೇಶ ರಣಗಟ್ಟಿಮಠ, ಮಹಾದೇವ ತಳವಾರ, ಪದ್ಮರಾಜ ವೈಜನ್ನವರ, ಕಸ್ತೂರಿ ಬಾವಿ, ಸಂಪತಕುಮಾರ ಮುಚಳಂಬಿ, ಕುಂತಿನಾಥ ಕಲಮನಿ, ಎಸ್‌.ಬಿ.ಧಾರವಾಡಕರ, ಎ.ಬಿಧಾರವಾಡಕರ, ಶಿವರಾಯ ಏಳುಕೋಟಿ, ಹಿರೋಜಿ ಮಾವರಕರ, ಜಕಿಅಹಮ್ಮದ ಧಾರವಾಡಕರ, ಮಲ್ಲಿಕಾರ್ಜುನ ಹೆಗ್ಗನಾಯಿಕ, ಶ್ರೀನಿವಾಸ ಮಾವರಕರ, ಕನ್ನಡ ಹೋರಾಟಗಾರ ಮನೋಹರ ಪಾಯಕ್ಕನವರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
 

click me!