ಚಿಮ್ಮಲಗಿ ತಾಂಡಾದಲ್ಲಿ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿ, ಬರ್ಬರ ಹತ್ಯೆ ಮಾಡಿದ್ದ ಆರೋಪಿ ಬಂಧನ! ತಾಂಡಾದ ಶಿವಾನಂದ ಚಂದು ಲಮಾಣಿ ಬಂಧಿತ ಆರೋಪಿ! ಅಪ್ರಾಪ್ತೆ ಮೇಲಿನ ಅತ್ಯಾಚಾರ ಹಾಗೂ ಹತ್ಯೆಗೆ ಆರೋಪಿ ಹಾಗೂ ಸಂತ್ರಸ್ತೆ ಕುಟುಂಬದ ನಡುವಿನ ಜಾಗದ ವಿವಾದವೇ ಕಾರಣ! ಆರೋಪಿ ಬಂಧನಕ್ಕೆ ಸುಮಾರು 50 ಪೊಲೀಸ್ ಸಿಬ್ಬಂದಿ, ಅಧಿಕಾರಿಗಳ ತಂಡ ರಚನೆ ಮಾಡಲಾಗಿತ್ತು
ವಿಜಯಪುರ(ಅ.8): ಜಿಲ್ಲೆಯ ನಿಡಗುಂದಿ ತಾಲೂಕಿನ ಚಿಮ್ಮಲಗಿ ತಾಂಡಾ ಭಾಗ 2ರಲ್ಲಿ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿ, ಬರ್ಬರ ಹತ್ಯೆ ಮಾಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ ನಿಕ್ಕಂ ಸ್ಪಷ್ಟಪಡಿಸಿದರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಪ್ರಕಾಶ್ ನಿಕ್ಕಂ, ತಾಂಡಾದ ಶಿವಾನಂದ ಚಂದು ಲಮಾಣಿ ಬಂಧಿತ ಆರೋಪಿ ಎಂದು ತಿಳಿಸಿದರು. ಅಪ್ರಾಪ್ತೆ ಮೇಲಿನ ಅತ್ಯಾಚಾರ ಹಾಗೂ ಹತ್ಯೆಗೆ ಆರೋಪಿ ಹಾಗೂ ಸಂತ್ರಸ್ತೆ ಕುಟುಂಬದ ನಡುವಿನ ಜಾಗದ ವಿವಾದವೇ ಕಾರಣ ಎಂಬುವುದು ತನಿಖೆಯಿಂದ ಪತ್ತೆಯಾಗಿದೆ ಎಂಬ ಮಾಹಿತಿಯನ್ನೂ ನಿಕ್ಕಂ ನೀಡಿದ್ದಾರೆ.
ಜಿಲ್ಲೆಯ ನಿಡಗುಂದಿ ತಾಲೂಕಿನ ಚಿಮ್ಮಲಗಿ ತಾಂಡಾ ಭಾಗ 2ರಲ್ಲಿ ಕಳೆದ ಸೆ.30ರಂದು 12 ವರ್ಷ ಬಾಲಕಿ ಮೇಲೆ ಅತ್ಯಾಚಾರ ಎಸಗಿ, ಹತ್ಯೆ ಮಾಡಿದ ಬಗ್ಗೆ ನಿಡಗುಂದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಈ ಪ್ರಕರಣದ ಆರೋಪಿಯನ್ನು ಬಂಧಿಸಲು ಪೊಲೀಸರು ತುಂಬ ಶ್ರಮವಹಿಸಿದ್ದು, ಕೊನೆಗೂ ಅದರಲ್ಲಿ ಯಶಸ್ವಿಯಾಗಿದ್ದಾರೆ ಎಂದು ನಿಕ್ಕಂ ಹೇಳಿದರು.
ಬಾಲಕಿಯನ್ನು ಪತ್ತೆ ಮಾಡುವ ನಾಟಕವಾಡಿದ್ದ ಆರೋಪಿ:
ತಾನು ಹತ್ಯೆ ಮಾಡಿದ ಪ್ರಕರಣ ಯಾರಿಗೂ ಗೊತ್ತಾಗಬಾರದು ಎಂದು ಸ್ವತಃ ಆರೋಪಿಯೇ ತಾಂಡದಿಂದ ನಾಪತ್ತೆಯಾಗಿದ್ದ. ಬಾಲಕಿ ಹುಡುಕಾಟಕ್ಕೆ ಮನೆಯವರೊಂದಿಗೆ ಸೇರಿ ಪತ್ತೆಗಾಗಿ ಕೈಜೋಡಿಸಿದ್ದ ಹಾಗೂ ಅಪ್ರಾಪ್ತೆ ಮೇಲೆ ಅತ್ಯಾಚಾರ, ಕೊಲೆ ನಡೆಸಿದ ಆರೋಪಿಯನ್ನು ಬಂಧಿಸಬೇಕೆಂದು ನಡೆದ ಪ್ರತಿಭಟನೆಯಲ್ಲಿ ಇದೇ ಆರೋಪಿ ಪಾಲ್ಗೊಂಡು ಒತ್ತಾಯಿಸಿದ್ದ.
ಈಗಾಗಲೇ ಆರೋಪಿ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ. ಅಪ್ರಾಪ್ತೆ ಬಾಲಕಿ ತಂದೆ ಹಾಗೂ ಪ್ರಸ್ತುತ ಬಂಧಿತವಾಗಿರುವ ಆರೋಪಿಯ ನಡುವೆ ಸಣ್ಣದೊಂದು ಜಾಗದ ಕುರಿತಾಗಿ ವಿವಾದ ಇತ್ತು. ಈ ಕಾರಣಕ್ಕಾಗಿಯೇ ಈ ಕೃತ್ಯ ಎಸಗಿದ್ದಾಗಿ ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾನೆ
ಇನ್ನು ಪ್ರಕರಣ ಬೇಧಿಸುವಲ್ಲಿ ಬಸವನ ಬಾಗೇವಾಡಿ ಡಿಎಸ್ಪಿ ಮಹೇಶ್ವರ ಗೌಡ ಅವರ ನೇತೃತ್ವದ ತಂಡ ಯಶಸ್ವಿಯಾಗಿದ್ದು, ಸಿಪಿಐ ಎಂ.ಎನ್. ಶಿರಹಟ್ಟಿ, ಪಿಎಸ್ಐ ಬಿ.ಬಿ. ಬಿಸನಕೊಪ್ಪ, ಮನಗೂಳಿ ಪಿಎಸ್ಐ ಸಿ.ಬಿ. ಬಾಗೇವಾಡಿ, ಪಿಎಸ್ಐ ವಸಂತ ಬಂಡಗಾರ, ಗುರುಶಾಂತ ದಾಶ್ಯಾಳ ಅವರನ್ನೊಳಗೊಂಡ ತಂಡ ಯಶಸ್ವಿಯಾಗಿದೆ. ಈ ತಂಡದ ಕಾರ್ಯವನ್ನು ಶ್ಲಾಘಿಸಿ ೨೦ ಸಾವಿರ ರೂ. ಬಹುಮಾನ ಘೋಷಿಸಲಾಗಿದೆ ಎಂದು ಎಸ್.ಪಿ. ನಿಕ್ಕಂ ತಿಳಿಸಿದರು.