
ವಿಜಯಪುರ (ಮೇ.1): ಎಂ ಬಿ ಪಾಟೀಲ್ ಜಲಸಂಪನ್ಮೂಲ ಸಚಿವರಾಗಿ ಉತ್ತಮ ಕೆಲಸ ಮಾಡಿದ್ದಾರೆ. ಹೀಗಾಗಿ ಈ ಭಾಗದಲ್ಲಿ ಅಭಿವೃದ್ಧಿಯಾಗಿದೆ. ಇದು ಲೋಕಸಭಾ ಚುನಾವಣೆಯಲ್ಲಿ ವಿಜಯಪುರ ಅಭ್ಯರ್ಥಿ ರಾಜೂ ಆಲಗೂರ ಗೆಲುವಿಗೆ ಅನಕೂಲವಾಗುತ್ತದೆ ಎಂದು ಸಚಿವ ರಾಮಲಿಂಗಾರೆಡ್ಡಿ ನುಡಿದರು.
ಲೋಕಸಭಾ ಚುನಾವಣೆ ಹಿನ್ನೆಲೆ ಇಂದು ವಿಜಯಪುರ ಜಿಲ್ಲೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಕೇಂದ್ರದಿಂದ ರಾಜ್ಯಕ್ಕೆ ಮಲತಾಯಿ ಧೋರಣೆ ಆಗುತ್ತಿದೆ. ಬರಗಾಲ ಘೋಷಣೆ ವಿಚಾರ ತಾರತಮ್ಯ ಮಾಡಿದೆ. ಮನವಿ ನೀಡಿ ಏಳು ತಿಂಗಳಾದರೂ ಬರಪರಿಹಾರ ನೀಡಲಿಲ್ಲ. ಮೋದಿ ಅಮಿತ್ ಶಾ ಅವರಿಗೆ ರಾಜ್ಯದ ಬಗ್ಗೆ ಅಸಡ್ಡೆ ಇದೆ. ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋತಿದ್ದೇ ಅವರಿಗೆ ಸಿಟ್ಟು. ಈ ಕೋಪವನ್ನು ರೈತರ ಮೇಲೆ ತೋರಿಸಿಕೊಳ್ಳುತ್ತಿದ್ದಾರೆ ಎಂದರು.
ಮೋದಿ ಸತ್ತರೆ ಮುಂದೆ ಯಾರೂ ಪ್ರಧಾನಿ ಆಗೊಲ್ಲೇನು? ನಾಲಗೆ ಹರಿಬಿಟ್ಟ ಶಾಸಕ ರಾಜು ಕಾಗೆ
ರಾಜ್ಯದಿಂದ ₹4.34 ಲಕ್ಷ ಕೋಟಿ ತೆರಿಗೆಯನ್ನ ಕೇಂದ್ರಕ್ಕೆ ಕಟ್ಟುತ್ತೇವೆ. ಆದರೆ ರೂಪಾಯಿಯಲ್ಲಿ ಕೇವಲ 13 ಪೈಸೆ ಮಾತ್ರ ಬರುತ್ತಿದೆ. ಈ ವಿಚಾರ ಸಿಎಂ ಜನರಿಗೆ ತಿಳಿಸಿದ್ದಾರೆ. ಕೇಂದ್ರಕ್ಕೆ ಮನವಿ ಪತ್ರ ಸಲ್ಲಿಸಿ ಭೇಟಿ ಮಾಡಿದರೂ ಹಣ ರಾಜ್ಯಕ್ಕೆ ನೀಡಿಲ್ಲ. ಆದರೆ ಉತ್ತರ ಭಾರತದ ರಾಜ್ಯಗಳಿಗೆ ಹೆಚ್ಚು ಹಣ ನೀಡುತ್ತಾರೆ. ಅತಿ ಹೆಚ್ಚು ತೆರಿಗೆ ಕಟ್ಟುವ ನಮಗೆ ಕಡಿಮೆ ನೀಡುತ್ತಾರೆ. ಅಧಿಕಾರಕ್ಕೆ ಬಂದ ಹತ್ತು ವರ್ಷದಿಂದ ಮೋದಿ ಸುಳ್ಳು ಹೇಳುತ್ತಿದ್ದಾರೆಂದು ಮಕ್ಕಳಿಗೂ ಸಹ ಗೊತ್ತಾಗಿದೆ. ಕೃಷಾ ನದಿ ನೀರಿನ ಗೆಜೆಟ್ ಮಾಡಿಲ್ಲ, ಬರ, ಟ್ಯಾಕ್ಸ್ ಅನುಪಾತ ತಾರತಮ್ಯ ಮಾಡುತ್ತಿದೆ. ಈ ವಿಚಾರವನ್ನು ರಾಜ್ಯದ ಸಂಸದರು ಕೇಂದ್ರದ ಬಳಿ ಮಾತನಾಡಲ್ಲ. ಬಿಜೆಪಿ ಸರ್ಕಾರ ಇದ್ದಾಗ ಕೇಂದ್ರದ ಮೇಲೆ ಹಣಕ್ಕೆ ಒತ್ತಾಯ ಮಾಡಿಲ್ಲ, ಕೇಳಿಲ್ಲ ಟ್ಯಾಕ್ಸ್ ಹಣ ಕೊಟ್ಟಿದ್ದರೆ ಜನರಿಗೆ ಅನಕೂಲವಾಗುತ್ತಿತ್ತು ಆದರೆ ಜನರ ಅನುಕೂಲವಾಗುವ ಯಾವುದನ್ನೂ ಕೇಂದ್ರ ಮಾಡಿಲ್ಲ. ಇಷ್ಟೆಲ್ಲ ಆದ್ರೂ ರಾಜ್ಯದ ಸಂಸದರು ಮೌನವಾಗಿದ್ದಾರೆ. ಇಂಥ ಸಂಸದರು ನಮಗೆ ಬೇಕಿಲ್ಲ ಹಾಗಾಗಿ ಕಾಂಗ್ರೆಸ್ ಹೆಚ್ವು ಸಂಸದರು ಲೋಕಸಭೆಗೆ ಆಯ್ಕೆಯಾಗಬೇಕು ಎಂದರು.
ಸಿಎಂ ಪುತ್ರ ದಿ.ರಾಕೇಶ್ ಮೃತಪಟ್ಟಾಗ ಮೋದಿ ಸಹಾಯ ಮಾಡಿದ್ದಾರೆ ಎಂಬ ಎಚ್ಡಿಕೆ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವ ರಾಮಲಿಂಗಾರೆಡ್ಡಿ, ಅಂಥದ್ದೇನು ಸಹಾಯ ಇದ್ದರೆ ದಾಖಲೆ ಇದ್ದರೆ ಕೊಡಿ ಎಂದರು. ಮುಂದುವರಿದು, ಆ ವೇಳೆ ಸಿಎಂ ಪ್ರಧಾನಿ ಮೋದಿ ಅವರ ಸಹಾಯ ಪಡೆದಿಲ್ಲ. ಸಿಎಂ ಜೊತೆಗೆ ನಾನೇ ಇದ್ದೆ. ಇಂಥ ಆರೋಪ ರಾಜಕೀಯದಲ್ಲಿ ಸಹಜ. ರಾಜ್ಯದ ಹಿತದ ದೃಷ್ಟಿಯಿಂದ ಬಿಜೆಯ ಎಲ್ಲ ಅಭ್ಯರ್ಥಿಗಳು ಸೋಲಬೇಕು ಎಂದರು.
ನೇಹಾ ಕೊಲೆ ಪ್ರಕರಣದಂತೆ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ವಿಚಾರದಲ್ಲಿ ಬಿಜೆಪಿಯವರು ಪ್ರತಿರೋಧ ಮಾಡಿಲ್ಲಾ ಎಂಬ ಹೇಳಿಕೆಗೆ, ಬಿಜೆಪಿಯವರು ಮಹಿಳಾ ವಿರೋಧಿಗಳು. ಬಿಜೆಪಿಯವರು ಮಹಿಳೆಯರಿಗೆ ಯಾವುದೇ ಶಿಕ್ಷಣ ಕೊಟ್ಟಿಲ್ಲ. ಮಾತೃ ಶಕ್ತಿ ಎನ್ನುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಣಿಪುರದ ಮಹಿಳೆ ಮೇಲೆ ರ ಅತ್ಯಾಚಾರ ಆದಾಗ ಮಾತನಾಡಿಲ್ಲ, ಉತ್ತರ ಪ್ರದೇಶದಲ್ಲಿ ಒಬ್ಬರು ತಪ್ಪು ಮಾಡಿದರೆ ಬುಲ್ಡೋಜರ್ ನಿಂದ ಮನೆ ಒಡೆಯುತ್ತಾರೆ, ಯುಪಿಯಲ್ಲಿ ಎಂಪಿ ಯನ್ನು ಗುಂಡಿಕ್ಕಿ ಕೊಂದರು, ಈ ವಿಚಾರದಲ್ಲಿ ಅಮಿತ್ ಶಾ ಬಾಯಿ ಬಿಡಲಿಲ್ಲ, ದೆಹಲಿಯಲ್ಲಿ ರೈತರ ಹೋರಾಟದಲ್ಲಿ 700 ಜನ ರೈತರು ಮೃತಪಟ್ಟರು ಆಗಲೂ ಮಾತನಾಡಲಿಲ್ಲ.ಪ್ರಜ್ವಲ್ ರೇವಣ್ಣನ ರೀತಿ ಕಾಂಗ್ರೆಸ್ ಮಾಡಿದ್ದರೆ ಬಿಜೆಪಿಯವರು ಬೊಬ್ಬೆ ಹೊಡೆಯುತ್ತಿದ್ದರು ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋಗಳನ್ನು ಡಿಕೆ ಶಿವಕುಮಾರ ಬಿಡುಗಡೆ ಮಾಡಿದ್ದಾರೆಂಬ ಅರೋಪ ಅಲ್ಲಗೆಳೆದ ಸಚಿವ, ಶಿವಕುಮಾರ ಹೆಸರು ಹೇಳದಿದ್ದರೆ ಕೆಲವರಿಗೆ ನಿದ್ದೇ ಬರಲ್ಲ. ಡಿಕೆಶಿ ಹೆಸರನ್ನು ನೂರು ಸಲ, ನೂರು ವಿಚಾರಗಳಲ್ಲಿ ಹೇಳುತ್ತಾರೆ. ಜಾರಕಿಹೋಳಿ ವಿಚಾರದಲ್ಲಿಯೂ ಡಿಕೆಶಿ ಹೆಸರು ಹೇಳಿದ್ದರು ಎಂದರು. ಇದೇ ವೇಳೆ ರಾಜ್ಯದಲ್ಲಿ ಬಾಂಬ್ ಸ್ಟೋಟವಾಗಿದ್ದರ ಕುರಿತು ಸರ್ಕಾರದ ಮೇಲೆ ಮೋದಿ ಆರೋಪಕ್ಕೆ ಪ್ರತಿಕ್ರಿಯಿಸಿದ ರಾಮಲಿಂಗಾರೆಡ್ಡಿ, 2008 ರಲ್ಲಿ ಸಿಎಂ ಯಡಿಯೂರಪ್ಪ ಕಂಠೀರವ ಸ್ಟುಡಿಯೋ ಬಳಿ ಬಾಂಬ್ ಸ್ಪೋಟವಾಗಿತ್ತು 2010 ಸರಣಿ ಬಾಂಬ್ ಸ್ಪೋಟವಾಗಿತ್ತು, 2013 ಮಲ್ಲೇಶ್ವರಂನಲ್ಲಿ ಜಗದೀಶ್ ಶೆಟ್ಟರ್ ಸಿಎಂ ಆಗಿದ್ದಾಗ ಸ್ಪೋಟವಾಗಿತ್ತು, 2020 ರಲ್ಲಿ ಯಡಿಯೂರಪ್ಪ ಸಿಎಂ ಆಗಿದ್ದಾಗ ಬಾಂಬ್ ಬ್ಲಾಸ್ಟ್ , 2022 ರಲ್ಲಿ ಬೊಮ್ಮಾಯಿ, 2024 ರಲ್ಲಿ ಬೆಂಗಳೂರಿನಲ್ಲಿ ರಾಮೇಶ್ವರ ಕೆಫೆ ಬ್ಲಾಸ್ಟ್ ಆಗಿದೆ. ಈಗ ಮೋದಿ ಯಾರ ಅಧಿಕಾರದಲ್ಲಿ ಹೆಚ್ಚು ಸ್ಪೋಟ ಆಗಿದೆ ಎಂದು ಹೇಳಲಿ ಎಂದು ಸವಾಲು ಹಾಕಿದರು.
ಕಾಂಗ್ರೆಸ್ ಪಕ್ಷಕ್ಕೆ ಲೀಡ್ ಕಡಿಮೆ ಕೊಟ್ರೆ ಕರೆಂಟ್ ಕೊಡಲ್ಲ; ಮತದಾರರಿಗೆ ಬೆದರಿಕೆ ಹಾಕಿದ ಶಾಸಕ ರಾಜು ಕಾಗೆ
ಮೋದಿಯಷ್ಟು ಸುಳ್ಳು ಹೇಳೋ ವ್ಯಕ್ತಿ ಜಗತ್ತಲ್ಲೇ ಇಲ್ಲ. ಮೋದಿ ಕಾರ್ಯಕ್ರಮಕ್ಕೆ ಜನರೇ ಬರುತ್ತಿಲ್ಲ. ಖಾಲಿ ಖುರ್ಚಿಗಳು ಇರುತ್ತವೆ. ಬೆಂಗಳೂರಿಗೆ ಬಂದರೆ ಇವರು ಜನರನ್ನು ಕರೆದುಕೊಂಡು ಬರುತ್ತಾರೆ. ಮೋದಿಗೆ ಮೊದಲಿನಷ್ಟು ಜನಪ್ರಿಯತೆ ಇಲ್ಲ. ಜನರಿಗೆ ಮೋದಿ ಮೋಸ ಮಾಡುತ್ತಾರೆ. ಬಿಜೆಪಿಗೆ 200 ಸ್ಥಾನಗಳು ಮಾತ್ರ ಬರುತ್ತವೆ. ಶಕ್ತಿ ಯೋಜನೆಯಲ್ಲಿ 200 ಕೋಟಿ ಮಹಿಳೆಯರು ಪ್ರಯಾಣ ಮಾಡಿದ್ದಾರೆ. ಬಸ್ ನಲ್ಲಿ ಹೆಚ್ವಿನ ಮಹಿಳಾ ಪ್ರಯಾಣಿಕರು ಓಡಾಡುತ್ತಿದ್ದಾರೆ. 5800 ಹೊಸ ಬಸ್ ಗಳನ್ನು ಖರೀಧಿ ಮಾಡುತ್ತೇವೆ. ಇದರಿಂದ ಬಸ್ ನಲ್ಲಿನ ರಷ್ ಕಡಿಮೆಯಾಗಲಿದೆ 5200 ಕೋಟಿ ಸಾರಿಗೆ ಇಲಾಖೆ ಮೇಲೆ ಬಿಜೆಪಿ ಸಾಲ ಇಟ್ಟಿದ್ದರು ಆ ಕಾರಣ ಸಾರಿಗೆ ಇಲಾಖೆ ಸಿಬ್ಬಂದಿಗಳಿಗೆ ಅರಿಯರ್ಸ್ ಕೊಟ್ಟಿಲ್ಲ. ಮುಂದಿನ ದಿನಗಳಲ್ಲಿ ಅರಿಯರ್ಸ್ ಕೊಡಲಾಗುತ್ತದೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.