ಯಾದಗಿರಿ: ಬಾಯಲ್ಲಿ ನೀರೂರಿಸಿದ ಜಿಲೇಬಿ ಜಾತ್ರೆ..!

By Suvarna NewsFirst Published Dec 19, 2019, 11:03 AM IST
Highlights

ಎಲ್ಲಿ ನೋಡಿದರೂ ಬಿಸಿಬಿಸಿ ಜಿಲೇಬಿ | ಸಗರದ ಸೈಯ್ಯದ್ ಹಜರತ್ ಮುನಾವರ್ ಬಾಷಾ ದರ್ಗಾ ಉರುಸ್ | ಮೂರ್ನಾಲ್ಕು ಗಂಟೆಗಳ ಜಾತ್ರೆಯಲ್ಲಿ ಲಕ್ಷಾಂತರ ರು.ಗಳ ವ್ಯವಹಾರ | ಹಿಂದೂ ಮುಸ್ಲಿಂ ಭಾವೈಕ್ಯತೆಯ ಸಂಕೇತ ಮುನಾವರ್ ಬಾಷಾ ದರ್ಗಾ|

ಸಗರ ಮಂಜು 

ಸಗರ(ಡಿ.19): ಪ್ರತಿ ಜಾತ್ರೆಯಲ್ಲೂ ಜಿಲೇಬಿ ಸಿಗೋದು ಕಾಮನ್. ಆದರೆ, ಜಿಲೇಬಿಯೇ ಇಲ್ಲಿ ಸ್ಪೆಷಲ್. ಬಾಯಲ್ಲಿ ನೀರೂರಿಸುವ ಬಿಸಿ ಬಿಸಿ ತರಹೇವಾರಿ ಜಿಲೇಬಿಗಳೇ ಇಲ್ಲಿನ ವಿಶೇಷ. ಶಹಾಪೂರ ತಾಲೂಕಿನ ಸಗರ ಗ್ರಾಮದಲ್ಲಿ ಬುಧವಾರ ಪ್ರತಿ ವರ್ಷದಂತೆ ಈ ವರ್ಷವೂ ಜಿಲೇಬಿ ಜಾತ್ರೆ ಅದ್ಧೂರಿಯಾಗಿ ನಡೆಯಿತು. 

ಗ್ರಾಮದ ಸೈಯ್ಯದ್ ಹಜರತ್ ಮುನಾವರ್ ಬಾಷಾ ಉರುಸ್ ದರ್ಗಾದ ದೇವರು ಹಿಂದೂ ಮುಸ್ಲಿಂರ ಆರಾಧ್ಯದೈವ. ಊರ ಚಾವಡಿ ಮುಂದೆ ವರ್ಷಕ್ಕೊಮ್ಮೆ ನಡೆಯುವ ಜಿಲೇಬಿ ಜಾತ್ರೆಯಲ್ಲಿ ಸಾಕಷ್ಟು ಜನರು ಸೇರಿ, ತಮ್ಮ ತಮ್ಮ ಹರಕೆಗಳನ್ನು ತೀರಿಸುತ್ತಾರೆ. ಈ ಜಾತ್ರೆಯ ವಿಶೇಷ ರಸಮಯ ಜಿಲೇಬಿಗಳು. ಬುಧವಾರ ಸಂಜೆಯಿಂದ ರಾತ್ರಿವರೆಗೆ ನಡೆಯುವ ಈ ಜಾತ್ರೆಯಲ್ಲಿ ಕೇವಲ ಮೂರ್ನಾಲ್ಕು ಗಂಟೆಗಳಲ್ಲೇ ಲಕ್ಷಾಂತರ ರುಪಾಯಿಗಳ ವಹಿವಾಟು ನಡೆಯುತ್ತದೆ ಅನ್ನೋದು ಗಮನಾರ್ಹ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ವಿವಿಧ ಭಾಗಗಳಿಂದ ಬಂದ ವ್ಯಾಪಾರಸ್ಥರು ಇಲ್ಲಿ ಜಿಲೇಬಿ ವಹಿವಾಟು ನಡೆಸುತ್ತಾರೆ. ಸಕ್ಕರೆ ಜಿಲೇಬಿ, ಬೆಲ್ಲದ ಜಿಲೇಬಿ, ಸಜ್ಜೆ ಜಿಲೇಬಿ ಮುಂತಾದ ತರಹೇವಾರಿ ಜಿಲೇಬಿಗಳು ಇಲ್ಲಿನ ಮಾಡಲಾಗುತ್ತದೆ. ಎಲ್ಲಿ ನೋಡಿದರು ವಿವಿಧ ನಮೂನೆಯ ಜಿಲೇಬಿಗಳು ಕಾಣುತ್ತವೆ. ಪ್ರತಿಯೊಬ್ಬರ ಗಮನ ಸೆಳೆಯುವ ವಿಶೇಷತೆ ಜಿಲೇಬಿ ಜಾತ್ರೆಯಾಗಿದೆ. ಸಜ್ಜಿ ಜಿಲೇಬಿ ತುಂಬಾ ಫೇಮಸ್, ಅಲ್ಲಿನ ಜಿಲೇಬಿ ಮಾತ್ರ ತಿನ್ನೋದಷ್ಟೇ ಅಲ್ಲ. ಮನೆಗೆ ಹೋಗುವಾಗ ಜಿಲೇಬಿ ಮಾಡಿಸ್ಕೊಂಡು ಒಯ್ಯೋದು ಮರೆಯೋಲ್ಲ. ಸಂಜೆ ಆರಂಭವಾಗಿ ತಡರಾತ್ರಿವರೆಗೆ ಕೇವಲ ಮೂರ್ನಾಲ್ಕು ಗಂಟೆಗಳ ಕಾಲ ಜಿಲೇಬಿ ಜಾತ್ರೆ ನಡೆಯುತ್ತದೆ. 

ಜಿಲೇಬಿ ಖರೀದಿಗೆ ಜನ ಮುಗಿಬಿದ್ದಿರುತ್ತದೆ. ಜಿಲೇಬಿ ವ್ಯಾಪಾರಿಗಳು ಬೇಡಿದ ಭಕ್ತರಿಗೆ ತಕ್ಷಣ ಬಿಸಿ ಬಿಸಿ ಜಿಲೇಬಿ ಹಾಕಿಕೊಡುತ್ತಾರೆ. ಅಷ್ಟೊಂದು ಜನಸಂಖ್ಯೆ ಈ ಜಾತ್ರೆಯಲ್ಲಿ ಕಾಣಬಹುದು. ಕೇವಲ ಮೂರ್ನಾಲ್ಕು ಗಂಟೆಗಳಲ್ಲೇ ಒಂದೊಂದು ಅಂಗಡಿಯಲ್ಲಿ 35 ರಿಂದ 50 ಸಾವಿರ ರು.ಗಳ ಜಿಲೇಬಿ ಮಾರಾಟವಾಗುತ್ತದೆ. ಜಾತ್ರೆಯಲ್ಲಿ ಬಿಸಿ ಬಿಸಿ ಜಿಲೇಬಿಗಳನ್ನ ಖರೀದಿಸಿ, ತಿನ್ನದೇ ಇರುವವರು ಸಿಗುವುದಿಲ್ಲ. ವಾಡಿಕೆಯಂತೆ ಭಕ್ತಾಧಿಗಳು ಜಿಲೇಬಿ ಖರೀದಿಸಿ, ದರ್ಗಾದ ಮುನಾವರ್ ಬಾಷಾಗೆ ನಮಸ್ಕರಿಸಿ ಪೂಜೆ ಸಲ್ಲಿಸಿ, ಜಿಲೇಬಿ ಪ್ರಸಾದ ಸೇವಿಸಿ ಪುನಿತರಾಗುತ್ತಾರೆ. 

ಈ ಪದ್ಧತಿ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿದೆ. ಇದರಿಂದ ತಮ್ಮ ಇಷ್ಟಾರ್ಥಗಳು ಈಡೇರುತ್ತವೆ ಎನ್ನುವ ನಂಬಿಕೆಯಿದೆ. ಹಿಂದೂ ಮುಸ್ಲಿಂ ಭಾವೈಕ್ಯತೆಯ ಸಂಕೇತವಾಗಿರುವ ಸಗರ ಗ್ರಾಮದ ಮುನಾ ವರ್ ಬಾಷಾ ದರ್ಗಾ. ಇಲ್ಲಿಯ ದೇವರ ದರ್ಶನಕ್ಕೂ ಜಿಲೇಬಿ ತಿನ್ನುವುದಕ್ಕೂ ಏನು ಒಂದು ಸಂಬಂಧವಿದೆ. ಇಂದಿನ ಸಮಾಜದಲ್ಲಿ ಕೆಲವರು ಜಾತಿ ಜಾತಿಗಳ ಹೆಸರಿನಲ್ಲಿ ಕಚ್ಚಾಡುವವರಿಗೆ ಮಾದರಿಯಾಗಲೆಂದು ಜಿಲೇಬಿಯಂತೆ ಮನಸ್ಸು ಹಾಗೂ ಮಾತು ಸಿಹಿಯಾಗಿರಲಿ ಅನ್ನೋದೇ ಈ ದರ್ಗಾದ ಸಂದೇಶವಾಗಿದೆ. 

ಜಿಲೇಬಿ ಜಾತ್ರೆ ಇಲ್ಲಿನ ವಿಶೇಷ, ಮುನಾವರ್ ಬಾಷಾ ಉರಸ್‌ಗೆ ಬಂದವರು ದರ್ಶನದ ನಂತರ, ವಿಶೇಷವಾಗಿ ಜಿಲೇಬಿ ತಿಂದು ಹೋಗುತ್ತಾರೆ. ಸಿಹಿ ಜಿಲೇಬಿಯಂತೆ ಮುಂದಿ ನ ದಿನಗಳೂ ಸಹ ಸಿಹಿಯಾಗಿರಲಿ ಅನ್ನೋದು ಸಂಕೇತ ಎಂದು ಸಗರ ಗ್ರಾಮಸ್ಥ ಬಾಪು ಸಜ್ಜನ್ ಅವರು ತಿಳಿಸಿದ್ದಾರೆ. 

ಪ್ರತಿ ವರ್ಷದ ಜಾತ್ರೆಗೆ ಜಿಲೇಬಿಯೇ ವಿಶೇಷ. ನಾವೆಲ್ಲ ಜಿಲೇಬಿ ಮಾರಾಟ ಮಾಡುತ್ತೇವೆ. ಮೂರ್ನಾಲ್ಕು ಗಂಟೆ ಗಳಲ್ಲೇ ವ್ಯಾಪಾರ ಭರ್ಜರಿಯಾಗಿರುತ್ತದೆ. ದೂರದ ಅಹಮದಾಬಾದ್, ಮುಂಬೈಗೂ ಭಕ್ತರು ಜಿಲೇಬಿ ಒಯ್ತಾರೆ ಎಂದು ಸಗರ ಗ್ರಾಮದ ವ್ಯಾಪಾರಸ್ಥ ಸಂಗಣ್ಣ ತುಂಬಗಿ ತಿಳಿಸಿದ್ದಾರೆ. 
 

click me!