Mandya : ನಗರಸಭೆಯಲ್ಲಿ ಆಸ್ತಿ ತೆರಿಗೆ ದಾಖಲು ಅಯೋಮಯ..!

By Kannadaprabha NewsFirst Published Dec 2, 2022, 6:10 AM IST
Highlights

ನಗರಸಭೆಯೊಳಗೆ ಆಸ್ತಿ ತೆರಿಗೆ ದಾಖಲು ಅಯೋಮಯವಾಗಿದೆ. 2002-03ರಿಂದ ಸಮರ್ಪಕವಾಗಿ ಜನರು ಪಾವತಿಸಿದ ಆಸ್ತಿ ತೆರಿಗೆಯನ್ನು ರಿಜಿಸ್ಟರ್‌ನಲ್ಲಿ ದಾಖಲಿಸದೆ ನಗರಸಭೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದು, ಇದೀಗ ಸರ್ಕಾರದ ಆದೇಶದಂತೆ 20 ವರ್ಷಗಳ ಆಸ್ತಿ ತೆರಿಗೆಯನ್ನು ಪುಸ್ತಕದಲ್ಲಿ ದಾಖಲಿಸುವ ಪ್ರಕ್ರಿಯೆ ನಗರಸಭೆಯೊಳಗೆ ಸದ್ದಿಲ್ಲದೆ ಶುರುವಾಗಿದೆ.

 ಮಂಡ್ಯ (ಡಿ.02):  ನಗರಸಭೆಯೊಳಗೆ ಆಸ್ತಿ ತೆರಿಗೆ ದಾಖಲು ಅಯೋಮಯವಾಗಿದೆ. 2002-03ರಿಂದ ಸಮರ್ಪಕವಾಗಿ ಜನರು ಪಾವತಿಸಿದ ಆಸ್ತಿ ತೆರಿಗೆಯನ್ನು ರಿಜಿಸ್ಟರ್‌ನಲ್ಲಿ ದಾಖಲಿಸದೆ ನಗರಸಭೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದು, ಇದೀಗ ಸರ್ಕಾರದ ಆದೇಶದಂತೆ 20 ವರ್ಷಗಳ ಆಸ್ತಿ ತೆರಿಗೆಯನ್ನು ಪುಸ್ತಕದಲ್ಲಿ ದಾಖಲಿಸುವ ಪ್ರಕ್ರಿಯೆ ನಗರಸಭೆಯೊಳಗೆ ಸದ್ದಿಲ್ಲದೆ ಶುರುವಾಗಿದೆ.

ನಗರದ ಜನರು Tax  )ಪಾವತಿಸಿದ ಬಳಿಕ ಅದನ್ನು ರಿಜಿಸ್ಟರ್‌ನಲ್ಲಿ ದಾಖಲಿಸಿಕೊಂಡು ಸುರಕ್ಷಿತವಾಗಿಡಬೇಕಾಗಿರುವುದು ನಗರಸಭೆ ಅಧಿಕಾರಿಗಳ ಆದ್ಯ ಕರ್ತವ್ಯ. ಆದರೆ, ಜನರಿಂದ ಆಸ್ತಿ (property)  ಯನ್ನು ಸಕಾಲದಲ್ಲಿ ಕಟ್ಟಿಸಿಕೊಳ್ಳುವುದಕ್ಕೆ ಹೆಚ್ಚಿನ ಆಸಕ್ತಿ ತೋರುತ್ತಿದ್ದ ಅಧಿಕಾರಿಗಳು ಅದರ ದಾಖಲೆ ರೂಪದಲ್ಲಿ ಇಡುವುದಕ್ಕೆ ಬೇಜವಾಬ್ದಾರಿ ತೋರಿಸುತ್ತಾ ಬಂದಿದ್ದರು.

ನಗರದ ವಸತಿ ಇರುವ ಬಹುತೇಕ ಜನರು ನಗರಸಭೆಗೆ ಪ್ರತಿ ವರ್ಷ ಆಸ್ತಿ ತೆರಿಗೆ ಪಾವತಿಯನ್ನಷ್ಟೇ ಮಾಡುತ್ತಾ ಬಂದಿದ್ದಾರೆಯೇ ವಿನಃ ತೆರಿಗೆ ಕಟ್ಟಿದ ರಸೀದಿಗಳನ್ನು ಸುರಕ್ಷಿತವಾಗಿಟ್ಟುಕೊಂಡಿಲ್ಲ. ಎಷ್ಟೋ ಜನರು ತಮ್ಮ ಆಸ್ತಿ ಸುರಕ್ಷತೆಗಾಗಿ ನಮೂನೆ-3 ಪಡೆದುಕೊಳ್ಳುವ ಗೋಜಿಗೂ ಹೋಗಿಲ್ಲ. ಏಕೆಂದರೆ, ಪ್ರತಿ ವರ್ಷ ತೆರಿಗೆಯನ್ನು ಪಾವತಿಸಿಕೊಂಡು ಬರುತ್ತಿದ್ದು, ಅದರ ದಾಖಲೆಗಳು ನಗರಸಭೆಯಲ್ಲಿವೆ ಎನ್ನುವ ಖಚಿತತೆ ಅವರಲ್ಲಿತ್ತು. ಆದರೆ, ಈಗ ನೋಡಿದರೆ ನಗರಸಭೆಯಲ್ಲಿ ಪ್ರತಿ ವರ್ಷ ಸಾರ್ವಜನಿಕರಿಂದ ಪಾವತಿಸಿಕೊಳ್ಳುವ ಆಸ್ತಿ ತೆರಿಗೆಯನ್ನು ಕ್ರಮಬದ್ಧವಾಗಿ ಪುಸ್ತಕದಲ್ಲಿ ದಾಖಲು ಮಾಡಿಕೊಂಡು ಕಡತಗಳ ರೂಪದಲ್ಲಿ ಸಂಗ್ರಹಿಸಿಡುವ ವ್ಯವಸ್ಥೆಯನ್ನೇ ಮಾಡಿಕೊಂಡಿಲ್ಲದಿರುವುದು ಬೆಳಕಿಗೆ ಬಂದಿದೆ. ಇದು ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡಿದೆ.

ಮೂಲೆಗೆಸೆದಿದ್ದ ಆಸ್ತಿ ತೆರಿಗೆ ದಾಖಲೆಗಳು:

ಪ್ರತಿ ವರ್ಷ ಜನರು ಆಸ್ತಿ ತೆರಿಗೆ ಪಾವತಿಸಿದ ಬಳಿಕ ಕಂದಾಯ ಇಲಾಖೆ ಸಿಬ್ಬಂದಿ ತಮ್ಮ ಬಳಿ ಇಟ್ಟುಕೊಳ್ಳುತ್ತಿದ್ದ ಒಂದು ಕಾಪಿಗಳನ್ನು ಗಂಟುಕಟ್ಟಿಮೂಲೆಗೆಸೆಯುತ್ತಿದ್ದರೇ ವಿನಃ ಅವುಗಳನ್ನು ಎಲ್ಲಿಯೂ ದಾಖಲಿಸಿಕೊಳ್ಳುತ್ತಿರಲಿಲ್ಲ. ಅನೇಕ ಜನರು ತಾವು ನಗರಸಭೆಗೆ ಪಾವತಿಸಿದ ಆಸ್ತಿ ತೆರಿಗೆಯ ರಸೀದಿಗಳನ್ನು ಸುರಕ್ಷಿತವಾಗಿಟ್ಟುಕೊಂಡಿದ್ದರೆ, ಇನ್ನೂ ಅನೇಕರು ರಸೀದಿಗಳನ್ನೇ ಇಟ್ಟುಕೊಂಡಿಲ್ಲದಿರುವುದು, ತೆರಿಗೆ ಪಾವತಿಸಿರುವುದಕ್ಕೆ ಪೂರಕವಾಗಿ ನಮೂನೆ-3 ಪಡೆದುಕೊಂಡು ಆಸ್ತಿ ಸಂರಕ್ಷಣೆ ಮಾಡಿಕೊಳ್ಳುವುದಕ್ಕೆ ಆಸಕ್ತಿ ತೋರದಿರುವುದು ಕಂಡುಬಂದಿದೆ.

ಆಸ್ತಿ ತೆರಿಗೆ ಪಾವತಿಸಿರುವುದಕ್ಕೆ ರಸೀದಿ ಅಥವಾ ನಮೂನೆ-3 ಇಟ್ಟುಕೊಂಡಿದ್ದರೆ ಅಂತಹ ಜನರು ಹೆದರುವ ಅವಶ್ಯಕತೆ ಇಲ್ಲ. ಒಮ್ಮೆ ಏನಾದರೂ ರಸೀದಿ ಅಥವಾ ನಮೂನೆ-3 ಎರಡೂ ಇಟ್ಟುಕೊಳ್ಳದಿದ್ದರೆ ಅಂತಹವರು ಹಿಂದೆ ಎಲ್ಲಿಯವರೆಗೆ ತೆರಿಗೆ ಪಾವತಿಸಿದ್ದಿರೋ ಅಲ್ಲಿಂದ ಇಲ್ಲಿಯವರೆಗೆ ಮತ್ತೆ ತೆರಿಗೆ ಪಾವತಿಸಬೇಕಾದ ಸಂದರ್ಭ ಎದುರಾಗುವ ಸಾಧ್ಯತೆಗಳಿವೆ. ಆಸ್ತಿ ತೆರಿಗೆ ಪಾವತಿಸಿದ್ದರೂ ಮತ್ತೆ ಪಾವತಿಸುವ ಅನಿವಾರ್ಯತೆ ಎದುರಾದರೆ ಯಾರು ಜವಾಬ್ದಾರರು ಎನ್ನುವ ಪ್ರಶ್ನೆಗೆ ನಗರಸಭೆಯ ಯಾರೊಬ್ಬರ ಬಳಿಯೂ ಉತ್ತರವೇ ಇಲ್ಲದಂತಾಗಿದೆ.

ಸರ್ಕಾರ ಆದೇಶದಿಂದ ಎಚ್ಚೆತ್ತರು:

ಸಾರ್ವಜನಿಕರಿಂದ ಸಂಗ್ರಹಿಸಲಾಗುವ ಆಸ್ತಿ ತೆರಿಗೆಯನ್ನು ರಿಜಿಸ್ಟರ್‌ ಪುಸ್ತಕದಲ್ಲಿ ದಾಖಲಿಸಿ ಕಡತಗಳ ರೂಪದಲ್ಲಿ ಸಂಗ್ರಹಿಸಿಡದಿರುವುದು ಮಂಡ್ಯದಲ್ಲಿ ಮಾತ್ರವೇ ಅಲ್ಲ. ಇಡೀ ರಾಜ್ಯದಲ್ಲೇ ಎಲ್ಲಿಯೂ ಈ ವ್ಯವಸ್ಥೆಯನ್ನು ಮಾಡಿಕೊಂಡಿಲ್ಲದಿರುವುದು ಸರ್ಕಾರದ ಗಮನಕ್ಕೆ ಬಂದ ನಂತರ 2002-03 ರಿಂದ ಈವರೆಗೆ ಆಸ್ತಿ ತೆರಿಗೆ ನೋಂದಣಿಯನ್ನು ರಿಜಿಸ್ಟರ್‌ ಪುಸ್ತಕದಲ್ಲಿ ದಾಖಲಿಸುವಂತೆ ಆದೇಶ ಹೊರಡಿಸಿದ ಬಳಿಕ ನಗರಸಭೆ ಅಧಿಕಾರಿಗಳು ಎಚ್ಚೆತ್ತುಕೊಂಡು ರಿಜಿಸ್ಟರ್‌ಗೆ ಆಸ್ತಿ ತೆರಿಗೆಯನ್ನು ದಾಖಲಿಸುವ ಕಾರ್ಯವನ್ನು ಕೈಗೆತ್ತಿಕೊಂಡಿದ್ದಾರೆ.

ಆನ್‌ಲೈನ್‌ನಲ್ಲಿ ದಾಖಲು ಕಡ್ಡಾಯ:

ಮೊದಲು ಆಸ್ತಿ ತೆರಿಗೆ ಪಾವತಿಯಾಗಿರುವ ಬಗ್ಗೆ ರಿಜಿಸ್ಟರ್‌ ಪುಸ್ತಕಕ್ಕೆ ದಾಖಲಿಸಿಕೊಂಡು ಆನಂತರ ಅದನ್ನು ಆನ್‌ಲೈನ್‌ನಲ್ಲಿ ದಾಖಲಿಸಲಿದ್ದಾರೆ. ಇಲ್ಲಿಂದ ಮುಂದೆ ನಗರದ ಜನರು ಪಾವತಿಸುವ ಆಸ್ತಿ ತೆರಿಗೆಯ ಪ್ರತಿಯೊಂದು ಮಾಹಿತಿಯೂ ದಾಖಲಾಗಲಿದೆ. ಇಲ್ಲಿಯವರೆಗೆ ಆಸ್ತಿ ತೆರಿಗೆ ಪಾವತಿಸಿದ ನಂತರ ರಿಜಿಸ್ಟರ್‌ ಪುಸ್ತಕದಲ್ಲಿ ದಾಖಲಿಸುವುದಕ್ಕೆ ನಿರ್ಲಕ್ಷ್ಯ ತೋರುತ್ತಿದ್ದವರು ಇನ್ನು ಮುಂದೆ ಪ್ರತಿ ವರ್ಷ ಸಂಗ್ರಹವಾಗುವ ಆಸ್ತಿ ತೆರಿಗೆಯನ್ನು ಕಡ್ಡಾಯವಾಗಿ ಆನ್‌ಲೈನ್‌ನಲ್ಲಿ ದಾಖಲಿಸಬೇಕಿದೆ. ಇದರಿಂದ ತೆರಿಗೆಯನ್ನು ಪಾವತಿಸಿಯೂ ದಾಖಲೆಗಳನ್ನಿಟ್ಟುಕೊಳ್ಳದಿದ್ದವರ ಮೇಲೆ ಅನಗತ್ಯವಾಗಿ ಬೀಳುತ್ತಿದ್ದ ಆರ್ಥಿಕ ಹೊರೆ ದೂರವಾಗಲಿದೆ.

ರಿಜಿಸ್ಟರ್‌ಗೆ ದಾಖಲಿಸಲು ತರಾತುರಿ:

ಸರ್ಕಾರ ಆದೇಶ ಹೊರಡಿಸಿದ ಬೆನ್ನಹಿಂದೆಯೇ ಮೂಲೆಗೆಸೆದಿದ್ದ ಹಾಗೂ ಧೂಳು ಹಿಡಿದಿದ್ದ ಕಡತಗಳನ್ನು ನಗರಸಭೆಯ ಅಮೃತ ಭವನದ ಸಂಕೀರ್ಣದ ಮೇಲಂತಸ್ತಿನ ಕೊಠಡಿಯಲ್ಲಿ ಪುಸ್ತಕಕ್ಕೆ ದಾಖಲಿಸುವ ಕಾರ್ಯ ತರಾತುರಿಯಲ್ಲಿ ನಡೆದಿದೆ. ಕಂದಾಯ ವಿಭಾಗದ ಸಿಬ್ಬಂದಿ ಆಸ್ತಿ ತೆರಿಗೆ ಕಾಪಿಗಳನ್ನೆಲ್ಲಾ ಹೊರತೆಗೆದು ಪುಸ್ತಕಗಳಿಗೆ ದಾಖಲಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ಪ್ರತಿಯೊಬ್ಬ ಸಿಬ್ಬಂದಿಯೂ ದಿನಕ್ಕೆ ಇಂತಿಷ್ಟುಖಾತೆಗಳ ಆಸ್ತಿ ತೆರಿಗೆಯನ್ನು ರಿಜಿಸ್ಟರ್‌ ಪುಸ್ತಕಕ್ಕೆ ದಾಖಲಿಸಲು ಗುರಿ ನಿಗದಿಪಡಿಸಲಾಗಿದೆ. ಅಷ್ಟನ್ನು ಅವರು ದಾಖಲಿಸಲೇಬೇಕು. ಇಲ್ಲದಿದ್ದರೆ ಷೋಕಾಸ್‌ ನೋಟಿಸ್‌ ಜಾರಿಮಾಡಲಾಗುತ್ತಿದೆ. ಇದು ಯುದ್ಧಕಾಲೇ ಶಸ್ತ್ರಾಭ್ಯಾಸ ಎನ್ನುವಂತಾಗಿದೆ.

ನಗರಸಭೆಯಲ್ಲಿ ಆಸ್ತಿ ತೆರಿಗೆ ಪಾವತಿಸಿರುವ ಖಾತೆದಾರರ ದಾಖಲೆಗಳಿವೆ ಎಂದು ಮೇಲ್ನೋಟಕ್ಕೆ ಹೇಳುತ್ತಿದ್ದಾರೆ. ದಾಖಲೆಗಳಿಲ್ಲದವರ ಖಾತೆ ಸಂಖ್ಯೆಯನ್ನು ದಾಖಲಿಸಿಕೊಂಡು ಅವರ ಮನೆಗೇ ಹೋಗಿ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದಾರೆ. ಇಂತಹ ಪ್ರಕರಣಗಳು ಸಾಕಷ್ಟಿರುವುದರಿಂದ ಖಾಸಗಿ ಸಂಸ್ಥೆಯೊಂದರ ಮೂಲಕ ಸರ್ವೇ ಮಾಡಿಸುವುದಕ್ಕೂ ನಗರಸಭೆ ಆಯುಕ್ತರು ಚಿಂತನೆ ನಡೆಸಿದ್ದಾರೆ.

ನಗರಸಭೆಯಲ್ಲಿ 31,900 ಖಾತೆಗಳಿದ್ದು, ಇದರಲ್ಲಿ 11 ಸಾವಿರದಷ್ಟುಜನರು ಇ-ಆಸ್ತಿ ಮಾಡಿಸಿಕೊಂಡಿದ್ದಾರೆ. ಒಟ್ಟಾರೆ ಶೇ.33ರಷ್ಟುಮಂದಿ ಮಾತ್ರ ಇ-ಆಸ್ತಿಯನ್ನು ಮಾಡಿಸಿಕೊಂಡಿದ್ದು, ಉಳಿದ ಶೇ.67 ಮಂದಿ ಇ-ಆಸ್ತಿಯಿಂದ ದೂರವೇ ಉಳಿದಿದ್ದಾರೆ. ನಗರ ವ್ಯಾಪ್ತಿಯಲ್ಲಿರುವ 11 ಸಾವಿರ ಇ-ಆಸ್ತಿಯನ್ನೇ ದಾಖಲೆ ರೂಪದಲ್ಲಿಡಲು ಸಾಧ್ಯವಾಗದ ಕಂದಾಯ ಇಲಾಖೆ ಸಿಬ್ಬಂದಿ ಇನ್ನು ಎಲ್ಲಾ ಖಾತೆದಾರರು ಇ-ಆಸ್ತಿಗೆ ಒಳಪಟ್ಟಿದ್ದರೆ ಹೇಗೆ ದಾಖಲಿಡುತ್ತಿದ್ದರು ಎನ್ನುವುದು ಸದ್ಯದ ಪ್ರಶ್ನೆಯಾಗಿದೆ.

ಹಲವಾರು ವರ್ಷಗಳಿಂದ ಸಾರ್ವಜನಿಕರು ಪಾವತಿಸಿದ ಆಸ್ತಿ ತೆರಿಗೆಯನ್ನು ರಿಜಿಸ್ಟರ್‌ಗಳಲ್ಲಿ ಸಮರ್ಪಕವಾಗಿ ದಾಖಲಿಸಿರಲಿಲ್ಲ. ಇದೀಗ ರಾಜ್ಯಸರ್ಕಾರದ ಆದೇಶದಂತೆ ಆಸ್ತಿ ತೆರಿಗೆಯ ದಾಖಲೆಗಳನ್ನು ಮೊದಲು ಪುಸ್ತಕದಲ್ಲಿ ದಾಖಲಿಸಿಕೊಂಡು ನಂತರ ಆನ್‌ಲೈನ್‌ಗೆ ಅಪ್‌ಲೋಡ್‌ ಮಾಡಲಾಗುವುದು. ಇನ್ನು ಪ್ರತಿ ವರ್ಷದ ಆಸ್ತಿ ತೆರಿಗೆ ಆನ್‌ಲೈನ್‌ನಲ್ಲಿ ದಾಖಲಾಗಲಿದೆ. ನಗರಸಭೆ ವ್ಯಾಪ್ತಿಯೊಳಗೆ 31,900 ಖಾತೆಗಳಿದ್ದು ಅದರಲ್ಲಿ 11,000 ಖಾತೆಗಳು ಇ-ಆಸ್ತಿ ವ್ಯಾಪ್ತಿಗೊಳಪಟ್ಟಿವೆ. ಉಳಿದವರು ತೆರಿಗೆ ಪಾವತಿಸಿ ಇ-ಸ್ವತ್ತು ಮಾಡಿಕೊಳ್ಳಬೇಕು.

-ಆರ್‌.ಮಂಜುನಾಥ್‌, ಆಯುಕ್ತರು, ನಗರಸಭೆ

click me!