Chitradurga: ಟಗರನಹಟ್ಟಿ ಗ್ರಾಮದಲ್ಲಿ ಬುಡಕಟ್ಟು ಸಮುದಾಯದ ಸಾಂಪ್ರದಾಯಿಕ ಹಬ್ಬ, ಹೊರಗಿನವರಿಗೆ ನೋ ಎಂಟ್ರಿ!

By Suvarna NewsFirst Published Feb 21, 2023, 7:16 PM IST
Highlights

ಚಿತ್ರದುರ್ಗ ಟಗರನಹಟ್ಟಿ ಗ್ರಾಮದಲ್ಲಿ ಬುಡಕಟ್ಟು ಸಮುದಾಯದ ಸಾಂಪ್ರದಾಯಿಕ ಹಬ್ಬ. ಪ್ರತೀ ಮನೆಯಿಂದ ಹಾಲು ತಂದು ಕಾಯಿಸಿ ಬೆಣ್ಣೆ, ಮೊಸರು ಮಾಡಿ ದೇವರಿಗೆ ನೈವೇದ್ಯ ಮಾಡುವುದೇ ವಿಶೇಷ. ಹಬ್ಬದ ಸಮಯದಲ್ಲಿ ಹೊರಗಿನಿಂದ ಬರುವವರೆಗೂ ನೋ ಎಂಟ್ರಿ.

ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿತ್ರದುರ್ಗ (ಫೆ.21): ಈ ಜಿಲ್ಲೆಯಲ್ಲಿ ಬುಡಕಟ್ಟು ಸಮುದಾಯದ ಜನರೇ ಹೆಚ್ಚು ವಾಸವಾಗಿದ್ದಾರೆ. ಅವರ ಸಾಂಪ್ರದಾಯಿಕ ಆಚರಣೆಗಳು ಇಂದಿಗೂ ಜೀವಂತವಾಗಿರುವುದೇ ಇಲ್ಲಿನ ವಿಶೇಷ. ಆಧುನಿಕ ಕಾಲದಲ್ಲಿಯೂ ಸಾಂಪ್ರದಾಯಿಕ ಬುಡಕಟ್ಟು ಆಚರಣೆಗಳನ್ನು ನೋಡೋದೆ ಚೆಂದ.‌ ಅಷ್ಟಕ್ಕೂ ಆ ಬುಡಕಟ್ಟು ಸಮುದಾಯಗಳ ತವರೂರಾಗಿರೋ‌ ಜಿಲ್ಲೆ ಯಾವುದು ಅಂತೀರಾ. ಒಂದು ಕಡೆ ಗ್ರಾಮಕ್ಕೆ ಯಾರೂ ಹೊರಗಿನವರು ಬರಬಾರದು ಎಂದು ಬೇಲಿ ಹಾಕ್ತಿರೋ ಗ್ರಾಮದ ಮುಖಂಡರು. ಮತ್ತೊಂದೆಡೆ ಜಾನುವಾರುಗಳಲ್ಲಿ ಹಾಲು ಕರೆದು ಮಡಿಕೆಗಳನ್ನು ಕಾಯಿಸ್ತಿರೋ ಜನರು. ಇಂತಹ ಅಪರೂಪದ ಬುಡಕಟ್ಟು ಸಂಸ್ಕೃತಿ ಸಾರುವ ದೃಶ್ಯಗಳು ಕಂಡು ಬಂದಿದ್ದು ಚಿತ್ರದುರ್ಗ ತಾಲ್ಲೂಕಿನ ಟಗರನಹಟ್ಟಿ ಗ್ರಾಮದ ಬಳಿ. ಅಷ್ಟಕ್ಕೂ ಇವರು ಈ ರೀತಿ ಮಾಡೋದಕ್ಕೂ ಒಂದು ಹಿನ್ನೆಲೆ‌ ಇದೆ. ಏನಂದ್ರೆ ಹಿರಿಯೂರು ತಾಲ್ಲೂಕಿನ ಕೂಡ್ಲಹಳ್ಳಿ ಗ್ರಾಮದಲ್ಲಿ ಇರುವ ಪಾತಲಿಂಗೇಶ್ವರ ದೇವರ ಆರಾಧಕರು ಈ ಗ್ರಾಮದ  ಗೊಲ್ಲ ಸಮುದಾಯದ ಬುಡಕಟ್ಟು ಜನರು. ಆ ಸ್ವಾಮಿಗೆ ಇಂದಿಗೂ ನಿತ್ಯ ತುಪ್ಪದ ದೀಪ ಹಚ್ಚೋದ್ರಿಂದ ಈ ಗ್ರಾಮದಿಂದಲೇ ಬೆಣ್ಣೆ ಮೊಸರು ತೆಗೆದುಕೊಂಡು ಹೋಗಿ ನೈವೇದ್ಯ ಮಾಡುವ ಪ್ರತೀತಿ ಪೂರ್ವಜರ ಕಾಲದಿಂದ ನಡೆದುಕೊಂಡು ಬಂದಿದೆ.

Latest Videos

ಹಾಗಾಗಿ ಸತತ ಮೂರು ದಿನಗಳ ಕಾಲ ಪ್ರತೀ ಮನೆಯವರು ತಮ್ಮ ಮನೆಯಲ್ಲಿರುವ ಜಾನುವಾರುಗಳಿಂದ ಹಾಲು ಕರೆದುಕೊಂಡು ಬಂದು ದೇವಸ್ಥಾನದ ಬಳಿ ತುಂಬಾ ಶಾಸ್ತ್ರೋಕ್ತವಾಗಿ ಹಾಲು ಕಾಯಿಸಿ ಅದ್ರಿಂದ ಬೆಣ್ಣೆ ಮಾಡಿ ಹಾಗೂ ಮೊಸರು ಮಾಡಿ ಮಡಿಕೆಗಳಲ್ಲಿ ಭದ್ರವಾಗಿ ಶೇಖರಣೆ ಮಾಡ್ಕೊಳ್ತಾರೆ. ಬಳಿಕ ಟಗರನಹಟ್ಟಿ ಯಿಂದ ಕಾಲ್ನಡಿಗೆ ಮೂಲಕ ಕೂಡ್ಲಹಳ್ಳಿಗೆ ತೆರಳಿ ಅಲ್ಲಿ ಬೆಣ್ಣೆ ಕಾಯಿಸಿ ಆ ತುಪ್ಪದಿಂದ ದೇವರ ದೀಪ ಹಚ್ಚುವುದು ಈ ಒಂದು ಜಾತ್ರೆಯ ವಿಶೇಷತೆ ಅಂತಾರೆ ಸ್ಥಳೀಯರು.

Mythology: ಸ್ತ್ರೀಗೇ ರತಿ ಸುಖ ಹೆಚ್ಚೆಂದು ಹೆಣ್ಣಾಗೇ ಇರಲು ಇಷ್ಟ ಪಟ್ಟ ರಾಜ! ಏನಿವನ ಕತೆ?

ಈ ಒಂದು ಬುಡಕಟ್ಟು ಸಮುದಾಯದ ಸಂಸ್ಕೃತಿ, ಆಚರಣೆಗಳು ಯಾವುದೇ ನಶಿಸಿ ಹೋಗಬಾರದು ಎಂದು ನಮ್ಮ ಆಚರಣೆಗಳನ್ನು ಇಂದಿಗೂ ನಡೆಸಿಕೊಂಡು ಬರ್ತಿದ್ದೇವೆ. ಈ ಆಚರಣೆ ಮಾಡುವ ಸಮಯದಲ್ಲಿ ಯಾವುದೇ ಲೋಪ ಆಗದ ಹಾಗೆ ಕಟ್ಟುನಿಟ್ಟಾಗಿ ಗ್ರಾಮದ ಪ್ರತಿಯೊಬ್ಬರೂ ಶುದ್ದವಾಗಿಯೇ ಇರ್ತೇವೆ. ಇದ್ರಿಂದಾಗಿ ಇಡೀ ಗ್ರಾಮದ ಜನರು ಸುಖಃ, ಶಾಂತಿ, ನೆಮ್ಮದಿ, ಹಾಗೂ ಉತ್ತಮ ಆರೋಗ್ಯದಿಂದ ಇರ್ತಾರೆ ಎನ್ನುವ ವಾಡಿಕೆ. ಹಾಲು, ಬೆಣ್ಣೆಯನ್ನು ಮಡಿಕೆಗಳಲ್ಲಿ ಹಾಕಿಕೊಂಡು ಇಡೀ ಗ್ರಾಮದ ಸುತ್ತ ಮೆರವಣಿಗೆ ಮಾಡಲಾಗುವುದು. ಹಾಗೂ ಆ ಗುಂಪನ್ನು ಕುರಿಗಳು ಸುತ್ತುವರೆಯುವುದು ಕೂಡ ವಿಶೇಷವಾಗಿದೆ.

ಹಿಂದೂ ವಿವಾಹದಲ್ಲಿ ವಧು, ವರನ ಎಡಭಾಗದಲ್ಲಿ ಏಕೆ ಕುಳಿತುಕೊಳ್ಳುತ್ತಾಳೆ?

ಹೀಗೆ ಮಾಡುವುದರ ಉದ್ದೇಶ ಏನಂದ್ರೆ, ಕಾಡು ಗೊಲ್ಲ ಸಮುದಾಯವಾದ ನಾವು ಕುರಿ ಮತ್ತು ಮೇಕೆಗಳನ್ನು ಹೆಚ್ಚು ಸಾಕಾಣಿಕೆ‌ ಮಾಡೋದ್ರಿಂದ ಅವುಗಳಿಗೆ ಯಾವುದೇ ತೊಂದರೆ ಆಗದಿರಲಿ. ಹಾಗೂ ಅವುಗಳ ಮೇಲೆ ನಮ್ಮ ಆರಾಧ್ಯ ದೈವದ ಕೃಪೆ ಇರಲಿ ಎಂದು ಈ ಕಾರ್ಯಕ್ರಮ ಹಮ್ಮಿಕೊಳ್ತೀವಿ ಅಂತಾರೆ ಗ್ರಾಮದ ಹಿರಿಯರು. ಒಟ್ಟಾರೆಯಾಗಿ ಆಧುನಿಕ ಪ್ರಪಂಚದಲ್ಲಿ ಬುಡಕಟ್ಟು ಸಮುದಾಯದ ಸಾಂಪ್ರದಾಯಿಕ ಆಚರಣೆಗಳು ನಡೆಯುತ್ತಿರೋದೆ ನಮ್ಮ ಜಿಲ್ಲೆಯ ವಿಶೇಷ. ನಶಿಸಿ ಹೋಗ್ತಿರೋ ಹಳೆ ಕಾಲದ ಪದ್ದತಿಗಳು ಇನ್ನೂ ಮುನ್ನೆಲೆಗೆ ಬರಲಿ ಎಂಬುದು ನಮ್ಮೆಲ್ಲರ ಆಶಯ.

ರುದ್ರಾಕ್ಷಿ ಧರಿಸಿ ಈ 5 ಸ್ಥಳಗಳಿಗೆ ಹೋಗಬೇಡಿ, ಅಪಾರ ನಷ್ಟ ಎದುರಿಸಬೇಕಾದೀತು!

click me!