400 ರೈಲ್ವೆ ನಿಲ್ದಾಣಗಳನ್ನು ಮರು ಅಭಿವೃದ್ಧಿಗೊಳಿಸಿ ಮೇಲ್ದರ್ಜೆಗೇರಿಸಲು ರೈಲ್ವೆ ಸಚಿವಾಲಯ ನಿರ್ಧಾರ. ಈ ಪೈಕಿ 50 ನಿಲ್ದಾಣಗಳನ್ನು ಆದ್ಯತೆ ಮೇರೆಗೆ ಅಭಿವೃದ್ಧಿ.
ನವದೆಹಲಿ (ಸೆ.18): ವಿಮಾನ ನಿಲ್ದಾಣಗಳಲ್ಲಿ ಇರುವಂತೆ ರೈಲು ನಿಲ್ದಾಣಗಳಲ್ಲೂ ‘ಬಳಕೆದಾರರ ಶುಲ್ಕ’ ಜಾರಿಗೆ ತರಲು ರೈಲ್ವೆ ಸಚಿವಾಲಯ ನಿರ್ಧರಿಸಿದೆ. ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಹೆಚ್ಚಿನ ಸೌಲಭ್ಯ ಒದಗಿಸಲು ಆದಾಯ ಬೇಕಿರುವುದರಿಂದ ಈ ತೆರಿಗೆಯನ್ನು ವಿಧಿಸಲಾಗುತ್ತದೆ ಎಂದು ರೈಲ್ವೆ ಮಂಡಳಿ ಮುಖ್ಯಸ್ಥ ವಿ.ಕೆ ಯಾದವ್ ಗುರುವಾರ ತಿಳಿಸಿದ್ದಾರೆ.
ಆದರೆ, ಈ ಶುಲ್ಕವು ಸೋವಿ ದರದಲ್ಲಿ ಇರಲಿದ್ದು, ದೇಶಾದ್ಯಂತ ಇರುವ 7000 ರೈಲ್ವೆ ನಿಲ್ದಾಣಗಳ ಪೈಕಿ ಅತಿ ಹೆಚ್ಚು ಜನಸಂದಣಿ ಇರುವ ಮತ್ತು ಪುನರ್ ನವೀಕರಣಗೊಂಡಿರುವ ಇಲ್ಲವೇ ನವೀಕರಣಗೊಳ್ಳುತ್ತಿರುವ ಸುಮಾರು 10-15% ನಿಲ್ದಾಣಗಳಿಗೆ ಮಾತ್ರ ಅನ್ವಯವಾಗಲಿದೆ ಎಂದು ಅವರು ತಿಳಿಸಿದ್ದಾರೆ. ಈ ಶುಲ್ಕವನ್ನು ರೈಲ್ವೆ ಟಿಕೆಟ್ನಲ್ಲಿಯೇ ವಿಲೀನಗೊಳಿಸಲಾಗುವುದು. ಇದು ಜಾರಿಯಾದ ಬಳಿಕ, ದೇಶದಲ್ಲಿ ರೈಲ್ವೆ ಪ್ರಯಾಣಿಕರ ಮೇಲೆ ವಿಧಿಸುವ ಅಂಥ ಮೊದಲ ಶುಲ್ಕವಾಗಲಿದೆ.
ಹುಬ್ಬಳ್ಳಿ ರೈಲ್ವೆ ನಿಲ್ದಾಣಕ್ಕೆ ಸಿದ್ಧಾರೂಢರ ಹೆಸರು
ಸುಮಾರು 400 ರೈಲ್ವೆ ನಿಲ್ದಾಣಗಳನ್ನು ಮರು ಅಭಿವೃದ್ಧಿಗೊಳಿಸಿ ಮೇಲ್ದರ್ಜೆಗೇರಿಸಲು ರೈಲ್ವೆ ಸಚಿವಾಲಯ ನಿರ್ಧರಿಸಿದೆ. ಈ ಪೈಕಿ 50 ನಿಲ್ದಾಣಗಳನ್ನು ಆದ್ಯತೆಯ ಮೇರೆಗೆ ಅಭಿವೃದ್ಧಿಪಡಿಸಲಾಗುವುದು.
ರಾಜ್ಯದ ಮೊದಲ ಕಿಸಾನ್ ರೈಲು ಸೆ.19ರಿಂದ ಆರಂಭ
ಬೆಂಗಳೂರು: ಕೃಷಿ ಉತ್ಪನ್ನಗಳ ಸಾಗಣೆಗೆ ಅನುಕೂಲವಾಗಲು ಚಾಲನೆ ನೀಡಿರುವ ರಾಜ್ಯದ ಮೊದಲ ‘ಕಿಸಾನ್ ರೈಲು’ ಸೇವೆ ಸೆ. 19 ರಿಂದ ಬೆಂಗಳೂರು ವಿಭಾಗ ವ್ಯಾಪ್ತಿಯಿಂದ ಆರಂಭವಾಗಲಿದೆ. ಕಿಸಾನ್ ರೈಲು ಸೆ. 19ರಿಂದ ಅ. 17ರವರೆಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣದಿಂದ ದೆಹಲಿಯ ನಿಜಾಮುದ್ದೀನ್ ರೈಲು ನಿಲ್ದಾಣಕ್ಕೆ ಸೇವೆ ನೀಡಲಿದೆ. ಪ್ರತಿ ಶನಿವಾರ ಸಂಜೆ 4.45ಕ್ಕೆ ಕೆಎಸ್ಆರ್ ನಿಲ್ದಾಣದಿಂದ ತೆರಳುವ ರೈಲು ಸೋಮವಾರ ರಾತ್ರಿ 11.45ಕ್ಕೆ ನಿಜಾಮುದ್ದೀನ್ ರೈಲು ನಿಲ್ದಾಣ ತಲುಪಲಿದೆ. ಅದೇ ರೀತಿ ಸೆ. 22ರಿಂದ ಅ. 20ರ ವರೆಗೆ ಪ್ರತಿ ಮಂಗಳವಾರ ಸಂಜೆ 5.45ಕ್ಕೆ ನಿಜಾಮುದ್ದೀನ್ ನಿಲ್ದಾಣದಿಂದ ಹೊರಡುವ ರೈಲು ಶುಕ್ರವಾರ ಮುಂಜಾನೆ 1.45ಕ್ಕೆ ಕೆಎಸ್ಆರ್ ನಿಲ್ದಾಣಕ್ಕೆ ಬರಲಿದೆ.
ಪ್ರಸಕ್ತ ಸಾಲಿನ ಕೇಂದ್ರ ಸರ್ಕಾರದ ಬಜೆಟ್ನಲ್ಲಿ ಘೋಷಿಸಿದಂತೆ ಕೃಷಿ ಉತ್ಪನ್ನಗಳ ಸಾಗಣೆಗಾಗಿ ಕಿಸಾನ್ ರೈಲು ಸೇವೆ ಆರಂಭಿಸಲಾಗಿದೆ. ಉತ್ತರ ಭಾರತದ ಹಲವು ನಗರಗಳಲ್ಲಿ ಈಗಾಗಲೆ ಸೇವೆ ಪುನರಾರಂಭಿಸಲಾಗಿದ್ದು, ಇದೀಗ ಬೆಂಗಳೂರು ವಿಭಾಗದಿಂದ ಕಿಸಾನ್ ರೈಲು ತೆರಳಲಿದೆ. ರೈಲಿನಲ್ಲಿ ಕೃಷಿ ಉತ್ಪನ್ನಗಳಾದ ಕ್ಯಾಬೇಜ್, ಕ್ಯಾಪ್ಸಿಕಂ, ಮೆಣಸಿನಕಾಯಿ ಸೇರಿ ಇನ್ನಿತರ ಆಹಾರ ಪದಾರ್ಥಗಳನ್ನು ಸರಬರಾಜು ಮಾಡಬಹುದಾಗಿದೆ. ಜೊತೆಗೆ, ಹಾಲು, ಮಾಂಸ, ಮೀನು ಸೇರಿ ಬೇಗನೆ ಕೆಡಬಲ್ಲ ಪದಾರ್ಥಗಳನ್ನು ಸಾಗಿಸಬಹುದಾಗಿದೆ. ಅದಕ್ಕಾಗಿ ವಿಶೇಷವಾಗಿ ಕೋಲ್ಡ್ ಸ್ಟೋರೇಜ್ ಬೋಗಿಗಳನ್ನು ಅಳವಡಿಸಲಾಗಿದೆ ಎಂದು ರೈಲ್ವೆ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸೆ. 19ರಿಂದ ಸಂಚಾರ: ಕಿಸಾನ್ ರೈಲು ಸೆ. 19ರಿಂದ ಅ. 17ರವರೆಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣದಿಂದ ದೆಹಲಿಯ ನಿಜಾಮುದ್ದೀನ್ ರೈಲು ನಿಲ್ದಾಣಕ್ಕೆ ಸೇವೆ ನೀಡಲಿದೆ. ಪ್ರತಿ ಶನಿವಾರ ಸಂಜೆ 4.45ಕ್ಕೆ ಕೆಎಸ್ಆರ್ ನಿಲ್ದಾಣದಿಂದ ತೆರಳುವ ರೈಲು ಸೋಮವಾರ ರಾತ್ರಿ 11.45ಕ್ಕೆ ನಿಜಾಮುದ್ದೀನ್ ರೈಲು ನಿಲ್ದಾಣ ತಲುಪಲಿದೆ. ಅದೇ ರೀತಿ ಸೆ. 22ರಿಂದ ಅ. 20ರ ವರೆಗೆ ಪ್ರತಿ ಮಂಗಳವಾರ ಸಂಜೆ 5.45ಕ್ಕೆ ನಿಜಾಮುದ್ದೀನ್ ನಿಲ್ದಾಣದಿಂದ ಹೊರಡುವ ರೈಲು ಶುಕ್ರವಾರ ಮುಂಜಾನೆ 1.45ಕ್ಕೆ ಕೆಎಸ್ಆರ್ ನಿಲ್ದಾಣಕ್ಕೆ ಬರಲಿದೆ.
16 ನಿಲ್ದಾಣಗಳಲ್ಲಿ ನಿಲುಗಡೆ: ರೈಲಿನಲ್ಲಿ 10 ಅಧಿಕ ಸಾಮರ್ಥ್ಯದ ಪಾರ್ಸಲ್ ಬೋಗಿ (10 ವಿಪಿಎಚ್)ಗಳನ್ನು ಅಳವಡಿಸಲಾಗಿರುತ್ತದೆ. ಜೊತೆಗೆ 2 ಲಗೇಜ್ ಕಂ ಜನರೇಟರ್ ಬೋಗಗಳಿರಲಿವೆ. ವಿಶೇಷ ರೈಲು ಮೈಸೂರು, ಹಾಸನ, ಅರಸಿಕೆರೆ, ದಾವಣಗೆರೆ, ಹುಬ್ಬಳ್ಳಿ, ಲೋಂಡಾ, ಬೆಳಗಾವಿ, ಮಿರಜ್, ಪುಣೆ, ಮನ್ಮಾಡ್, ಭೂಸಾವಾಲ್, ಇಟಾರ್ಸಿ, ಭೂಪಾಲ್, ಝಾನ್ಸಿ, ಆಗ್ರಾ ದಂಡು ಮತ್ತು ಮಥುರಾ ನಿಲ್ದಾಣಗಳಲ್ಲಿ ನಿಲುಗಡೆ ಮಾಡಲಿದೆ.
ಬಹು ವಿಧದ ರೈಲು: ಇದೇ ಮೊದಲ ಬಾರಿಗೆ ಬೆಂಗಳೂರಿನಿಂದ ಸೇವೆ ನೀಡುತ್ತಿರುವ ಈ ರೈಲು ಬಹು ವಿಧದ ಸರಕು, ಸಾಗಣೆದಾರರು ಮತ್ತು ಗ್ರಾಹಕರನ್ನು ಹೊಂದಿರಲಿದೆ. ಒಂದು ಸಂಸ್ಥೆ ಅಥವಾ ಒಬ್ಬ ವ್ಯಕ್ತಿಗೆ ಸಂಬಂಧಿಸಿದ ಸರಕುಗಳನ್ನು ಮಾತ್ರ ರೈಲಿನಲ್ಲಿ ತೆಗೆದುಕೊಂಡು ಹೋಗದೆ, ರೈತರು, ಹೈನುಗಾರರು, ಮಾಂಸ ಉತ್ಪಾದಕರ ಪದಾರ್ಥಗಳನ್ನು ಸಾಗಿಸಲಾಗುತ್ತದೆ. ಈವರೆಗೆ ಸರಕು ಸಾಗಣೆ ರೈಲುಗಳಲ್ಲಿ ಆರಂಭದ ಮತ್ತು ಅಂತಿಮ ನಿಲ್ದಾಣಗಳಲ್ಲಷ್ಟೇ ನಿಲುಗಡೆ ನೀಡುತ್ತಿದ್ದವು. ಆದರೆ, ಕಿಸಾನ್ ರೈಲು ಸಾಗುವ ಮಾರ್ಗದಲ್ಲಿ ಸಿಗುವ ನಿಲ್ದಾಣಗಳಲ್ಲಿ ನಿಲುಗಡೆ ನೀಡಿ ಸರಕುಗಳನ್ನು ಲೋಡ್ ಮತ್ತು ಅನ್ಲೋಡ್ ಮಾಡಲು ಅವಕಾಶ ನೀಡಲಾಗುತ್ತದೆ.