ತಿರುವನಂತಪುರ: ಪೊಲೀಸ್ ಠಾಣೆಯಲ್ಲೇ ಇಟ್ಟಿದ್ದ ಸಾಕ್ಷ್ಯದ ಮಾಲನ್ನು ಖಾಕಿ ಅಧಿಕಾರಿಯೊಬ್ಬ ಕದ್ದೊಯ್ದ ಘಟನೆ ಕೇರಳದ ಸುಲ್ತಾನ್ ಬತ್ತೇರಿಯಲ್ಲಿ ನಡೆದಿದೆ. ನಿಷೇಧಿತ ತಂಬಾಕು ಉತ್ಪನ್ನಗಳ ಕಳ್ಳತನ ಪ್ರಕರಣದಲ್ಲಿ ಆರೋಪಿಯಾಗಿರುವ ಸೀನಿಯರ್ ಸಿವಿಲ್ ಪೊಲೀಸ್ ಅಧಿಕಾರಿ ಸಬಿತ್ನನ್ನು ಅಮಾನತುಗೊಳಿಸಲಾಗಿದೆ. ಸಬಿತ್, ಸ್ಟೇಷನ್ನ ಸ್ಟೋರ್ ರೂಮ್ನಲ್ಲಿದ್ದ ಬರೋಬ್ಬರಿ ಏಳು ಚೀಲ 'ಹ್ಯಾನ್ಸ್' ಅನ್ನು ಕದ್ದೊಯ್ದಿದ್ದ. ಈತ ಸದ್ಯ ತಲೆಮರೆಸಿಕೊಂಡಿದ್ದು, ಇಲಾಖಾ ಮಟ್ಟದ ಕ್ರಮಕ್ಕೆ ಬತ್ತೇರಿ ಡಿವೈಎಸ್ಪಿ ಶಿಫಾರಸು ಮಾಡಿದ್ದಾರೆ.
ಏಳು ಚೀಲ ಹ್ಯಾನ್ಸ್ ಕಳ್ಳತನ
ಸುಲ್ತಾನ್ ಬತ್ತೇರಿ ಪೊಲೀಸ್ ಠಾಣೆಯ ಸ್ಟೋರ್ ರೂಮ್ನಲ್ಲಿ ಇಟ್ಟಿದ್ದ ಏಳು ಚೀಲ ನಿಷೇಧಿತ ತಂಬಾಕು ಉತ್ಪನ್ನಗಳು ಕಳುವಾಗಿದ್ದವು. ಕಳೆದ 10ನೇ ತಾರೀಖಿನಂದು ಸ್ಟೇಷನ್ನ ರೈಟರ್ ಮತ್ತು ಅಸಿಸ್ಟೆಂಟ್ ರೈಟರ್ ಪರಿಶೀಲನೆ ನಡೆಸಿದಾಗ ಈ ಕಳ್ಳತನ ಬೆಳಕಿಗೆ ಬಂದಿದೆ. ಸ್ಟೋರ್ ರೂಮ್ನ ಬೀಗದಕೈ ಬಳಸಿ ಬಾಗಿಲು ತೆರೆದು ಕಳ್ಳತನ ಮಾಡಿರುವುದರಿಂದ, ಮೊದಲಿನಿಂದಲೂ ಸ್ಟೇಷನ್ನ ಸಿಬ್ಬಂದಿ ಮೇಲೆಯೇ ಪೊಲೀಸರಿಗೆ ಅನುಮಾನವಿತ್ತು.
ಜುಲೈ 18 ರಂದು ಜಿಡಿ ಚಾರ್ಜ್ನಲ್ಲಿದ್ದ ಸಬಿತ್, ಮಧ್ಯರಾತ್ರಿ 12 ಗಂಟೆಯ ನಂತರ ಈ ಕೃತ್ಯ ಎಸಗಿದ್ದಾನೆ. ತನ್ನ ಸ್ವಂತ ಕಾರಿನಲ್ಲೇ 7 ಚೀಲ ಹ್ಯಾನ್ಸ್ ಸಾಗಿಸಿದ್ದಾನೆ. ಸಿಸಿಟಿವಿ ದೃಶ್ಯಗಳು ತನಿಖಾ ತಂಡಕ್ಕೆ ಆರೋಪಿಯನ್ನು ಪತ್ತೆಹಚ್ಚಲು ಪ್ರಮುಖ ಸಾಕ್ಷಿಯಾದವು.
08:26 AM (IST) Sep 15