ಉದ್ರೇಕಗೊಂಡಿದ್ದ ಒಂಟೆಯೊಂದು ತನ್ನ ಮಾಲೀಕನನ್ನೇ ಕೊಂದು ಹಾಕಿದ್ದು, ಇದರಿಂದ ಸಿಟ್ಟಗೆದ್ದ ಗ್ರಾಮಸ್ಥರು ಒಂಟೆಯನ್ನು ಮರಕ್ಕೆ ಕಟ್ಟಿ ದೊಣ್ಣೆಯಿಂದ ಹೊಡೆದು ಕೊಂದ ಘಟನೆ ರಾಜಸ್ಥಾನದಲ್ಲಿ ನಡೆದಿದೆ.
ಬಿಕ್ನೇರ್: ಉದ್ರೇಕಗೊಂಡಿದ್ದ ಒಂಟೆಯೊಂದು ತನ್ನ ಮಾಲೀಕನನ್ನೇ ಕೊಂದು ಹಾಕಿದ್ದು, ಇದರಿಂದ ಸಿಟ್ಟಗೆದ್ದ ಗ್ರಾಮಸ್ಥರು ಒಂಟೆಯನ್ನು ಮರಕ್ಕೆ ಕಟ್ಟಿ ದೊಣ್ಣೆಯಿಂದ ಹೊಡೆದು ಕೊಂದ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಬಿಕ್ನೇರ್ನ ಪಂಚು ಗ್ರಾಮದಲ್ಲಿ ಸೋಮವಾರ ಸಂಜೆ ಈ ಘಟನೆ ನಡೆದಿದ್ದು, ಮಾಲೀಕನನ್ನು ತುಳಿದು ಸಾಯಿಸಿದ ಒಂಟೆಯನ್ನು ಜನ ಹೊಡೆದು ಸಾಯಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಪಂಚು ಪೊಲೀಸ್ ಠಾಣೆಯ ಮುಖ್ಯಸ್ಥ ಮನೋಜ್ ಯಾದವ್ (Manoj Yadav) ಪ್ರತಿಕ್ರಿಯಿಸಿದ್ದು, ಈ ಹತ್ಯೆಯಾದ ಒಂಟೆಯನ್ನು ಗ್ರಾಮದಲ್ಲಿ ಕಟ್ಟಿ ಹಾಕಲಾಗಿತ್ತು. ಇದೇ ವೇಳೆ ಅಲ್ಲಿ ಸಾಗುತ್ತಿದ್ದ ಇನ್ನೊಂದು ಒಂಟೆಯನ್ನು ನೋಡಿದ ಈ ಒಂಟೆ ತನ್ನನ್ನು ಕಟ್ಟಿ ಹಾಕಿದ ಕಂಬವನ್ನು ಮುರಿದುಕೊಂಡು ಅದರತ್ತ ಓಡಿ ಹೋಗಿದೆ. ಈ ವೇಳೆ ಒಂಟೆಯ ಮಾಲೀಕ ಸೋಹನ್ ರಾಮ್ ನಾಯಕ್(Sohanram Nayak) ತನ್ನ ಒಂಟೆಯನ್ನು ನಿಯಂತ್ರಿಸಲು ಅದರತ್ತ ಹೋಗಿದ್ದಾರೆ. ಈ ವೇಳೆ ಮಾಲೀಕನ ಮೇಲೆ ದಾಳಿ ನಡೆಸಿದ ಒಂಟೆ ಆತನನ್ನು ನೆಲಕ್ಕೆ ತಳ್ಳಿದೆ. ತನ್ನ ಮಾಲೀಕನನ್ನು ಕುತ್ತಿಗೆಯಲ್ಲಿ ಹಿಡಿದು ಮೇಲೆತ್ತಿದ್ದ ಒಂಟೆ ನಂತರ ಆತನನ್ನು ನೆಲಕ್ಕೆ ಕುಕ್ಕಿದೆ. ಅಲ್ಲದೇ ಆತನ ತಲೆಯನ್ನು ಜಗಿದಿದೆ .
ಮೊದಲ ಬಾರಿ ಹಿಮದ ರಾಶಿ ನೋಡಿ ಕುಣಿದಾಡಿದ ಒಂಟೆ... ವೈರಲ್ ವಿಡಿಯೋ
ಈ ವಿಚಾರ ತಿಳಿದ ಸೋಹನ್ ರಾಮ್ ನಾಯಕ್ ಅವರ ಕುಟುಂಬದವರು ಅಲ್ಲಿಗೆ ಆಗಮಿಸಿದ್ದು, ಅದ್ಹೇಗೋ ಒಂಟೆಯನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ. ಉದ್ರಿಕ್ತಗೊಂಡಿದ್ದ ಒಂಟೆಯನ್ನು ಸಮೀಪದ ಮರಕ್ಕೆ ಕಟ್ಟಿ ಹಾಕಿದ ಗ್ರಾಮದ ಜನ ಅದು ಸೌಮ್ಯವಾಗುತ್ತಿದ್ದಂತೆ, ಅದಕ್ಕೆ ಥಳಿಸಲು ಆರಂಭಿಸಿದ್ದಾರೆ. ಪರಿಣಾಮ ಅದು ಸಾವನ್ನಪ್ಪಿದೆ. ಇತ್ತ ಗ್ರಾಮಸ್ಥರು ಒಂಟೆಯನ್ನು ಥಳಿಸಿ ಸಾಯಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದೆ. ಘಟನೆಗೆ ಸಂಬಂಧಿಸಿದಂತೆ ಯಾವುದೇ ಪ್ರಕರಣ ದಾಖಲಾಗಿಲ್ಲ.
ಒಂಟೆ ರಾಜಸ್ಥಾನದ ರಾಜ್ಯ ಪ್ರಾಣಿಯಾಗಿದ್ದು, ರಾಜ್ಯ ಪ್ರಾಣಿಯನ್ನು ಹತ್ಯೆ ಮಾಡಿದ್ದಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರಕರಣ ದಾಖಲಾಗಿಲ್ಲ. ಇತ್ತ ಒಂಟೆಯಿಂದ ಹತ್ಯೆಯಾದ ಸೋಹನ್ ರಾಮ್ ನಾಯಕ್ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಯ ಬಳಿಕ ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ.
ಸೌದಿ ಅರೇಬಿಯಾದಲ್ಲಿದೆ ಒಂಟೆಗಳಿಗೆಂದೇ 5ಸ್ಟಾರ್ ಹೋಟೆಲ್!