ಗುಜರಾತ್‌ನ ಈ ಹನುಮಾನ್ ದೇವಾಲಯ ರಹಸ್ಯಗಳ ನಿಧಿ… ಇಲ್ಲಿ ಬಡವರೂ ಶ್ರೀಮಂತರಾಗ್ತಾರೆ!

First Published Jan 18, 2024, 4:40 PM IST

ಪರಮ ರಾಮ ಭಕ್ತ ಬಜರಂಗ ಬಲಿ ಹನುಮಂತನನ್ನು ಇಡೀ ದೇಶವೇ ಪೂಜಿಸುತ್ತದೆ. ದೇಶಾದ್ಯಂತ ಲಕ್ಷಾಂತರ ಹನುಮಾನ್ ದೇವಾಲಯಗಳಿವೆ. ಆದರೆ, ರಾಜ್ಕೋಟ್ನ ಹಡ್ಮಾಟಿಯಾ ಗ್ರಾಮದಲ್ಲಿ ಒಂದು ದೇವಾಲಯವಿದೆ, ಅಲ್ಲಿ ಪಂಚಮುಖಿ ಹನುಮಾನ್ ಮೂರ್ತಿಯಿದ್ದು, ಅದು ಪ್ರತಿವರ್ಷ ಬೆಳೆಯುತ್ತಲೇ ಇರುತ್ತಂತೆ. 

ನಮ್ಮ ದೇಶವೇ ಹಲವಾರು ದೇಗುಲಗಳಿಗೆ ತವರೂರಾಗಿದೆ. ಅಷ್ಟೆ ಅಲ್ಲ ಕೆಲವೊಂದು ದೇವಾಲಯಗಳ ರಹಸ್ಯ ಎಂದಿಗೂ ತರ್ಕಕ್ಕೆ ಸಿಗದಂತದ್ದು, ಇಂತಹ ದೇಗುಲಗಳಿಗೆ ಭೇಟಿ ನೀಡಿದರೆ, ಮನೋಕಾಮನೆಗಳೆಲ್ಲವೂ ಈಡೇರುತ್ತೆ ಎನ್ನುವ ನಂಬಿಕೆ ಇದೆ. ಅಂತಹ ಒಂದು ಹನುಮಾನ್ (Hanuman) ಮಂದಿರ ನಮ್ಮ ದೇಶದಲ್ಲಿದೆ ಅದರ ವಿಶೇಷತೆಗಳ ಬಗ್ಗೆ ನೀವು ತಿಳಿಯಲೇಬೇಕು.

ಗುಜರಾತಿನ ರಾಜ್ಕೋಟ್ನ ಹಡ್ಮಾಟಿಯಾ ಗ್ರಾಮದಲ್ಲಿ ಒಂದು ದೇವಾಲಯವಿದೆ, ಅಲ್ಲಿ ಪಂಚಮುಖಿ ಹನುಮಾನ್ (Panchamukhi Hanuman) ಮೂರ್ತಿಯಿದ್ದು, ಇಲ್ಲಿ ಬರುವ ಜನರ ಬೇಡಿಕೆಗಳೆಲ್ಲವೂ ಈಡೇರುತ್ತದೆ ಎಂದು ನಂಬಲಾಗಿದೆ. ಜನರು ಈ ಹನುಮಾನ್ ದೇವಸ್ಥಾನಕ್ಕೆ ತಮ್ಮ ದುಃಖವನ್ನು ತೋಡಿಕೊಂಡು ಬರುತ್ತಾರೆ ಬರುತ್ತಾರೆ ಮತ್ತು ದರ್ಶನದ ನಂತರ ಇಲ್ಲಿಂದಲೆ ನಗುತ್ತಲೇ ಹೋಗುತ್ತಾರೆ. ಅಂದರೆ ಭಕ್ತರ ಜೀವನದಲ್ಲಿ ಸಂತೋಷ ತುಂಬಿರುತ್ತದೆ ಎನ್ನಲಾಗುತ್ತದೆ. 

ಈ ಪಂಚಮುಖಿ ಹನುಮಾನ್ ದೇವಸ್ಥಾನದಲ್ಲಿ ವ್ರತವನ್ನು ಪೂರೈಸಲು ದೇಶದ ಮೂಲೆ ಮೂಲೆಯಿಂದ ಜನರು ಬರುತ್ತಾರೆ. ಈ ಹನುಮಾನ್ ದೇವಾಲಯಗಳಲ್ಲಿ, ಎಲ್ಲವೂ ಒಳ್ಳೆಯದಾಗುವಂತೆ ಬೇಡಿಕೊಂಡರೆ, ಹನುಮಂತ ಅದನ್ನು ಈಡೇರಿಸುತ್ತಾನೆ. ಅಷ್ಟೇ ಅಲ್ಲ  ಕೀಲು ನೋವು ಅಥವಾ ಇತರ ಯಾವುದೇ ಕಾಯಿಲೆ ಇರುವ ಜನರು ಈ ದೇಗುಲಕ್ಕೆ ಬಂದು ಸೇವೆ ಸಲ್ಲಿಸಿದರೆ ಶೀಗಘ್ರದಲ್ಲೇ ಅವರ ಸಮಸ್ಯೆ ನಿವಾರಣೆಯಾಗುತ್ತೆ ಎನ್ನುವ ನಂಬಿಕೆ ಇದೆ. 

ಈ ದೇವಾಲಯದ ಆವರಣದಲ್ಲಿ ಸರಸ್ವತಿಬೆನ್ ಎಂಬ ಮಹಿಳೆ ಕ್ಲೀನಿಂಗ್ ಕೆಲಸ ಮಾಡುತ್ತಾರೆ. ಅವರು ಕೆಲವು ವರ್ಷಗಳ ಹಿಂದೆ ಈ ಹದ್ಮಾಟಿಯಾ ಗ್ರಾಮಕ್ಕೆ ಬಂದರಂತೆ. ಅವರ ಆರ್ಥಿಕ ಸ್ಥಿತಿ ತುಂಬಾ ಕೆಟ್ಟದಾಗಿತ್ತು. ಇಡೀ ಕುಟುಂಬ ಒಂದೇ ಕೋಣೆಯಲ್ಲಿ ವಾಸಿಸುತ್ತಿತ್ತಂತೆ. ನಂತರ ಅವರು ತನ್ನ ಮನೆಯಿಂದ ದೇವಾಲಯಕ್ಕೆ ಪಾದಯಾತ್ರೆ ಮಾಡೊದಾಗಿ ಬೇಡಿಕೊಂಡರು. ಅದರ ನಂತರ, ಪಂಚಮುಖಿ ಹನುಮಂತನ ದಯೆಯಿಂದಾಗಿ ಈಗ ಮನೆಯನ್ನು ಸಹ ನಿರ್ಮಿಸಲಾಗಿದೆಯಂತೆ. ಅಷ್ಟೇ ಯಾಕೆ ಎರಡು ಕಾರುಗಳನ್ನು ಸಹ ಖರೀದಿಸಿದ್ದು , ಈಗ ಅವರ ಆರ್ಥಿಕ ಸ್ಥಿತಿ (finacnial condition) ತುಂಬಾ ಉತ್ತಮವಾಗಿದೆ. ಆದರೂ, ಅವರು ಇನ್ನೂ ಈ ಪಂಚಮುಖಿ ಹನುಮಾನ್ ದೇವಾಲಯದ ಸೇವೆ ಮಾಡುತ್ತಲೇ ಇದ್ದಾರಂತೆ. 

ಪಂಚಮುಖಿ ಹನುಮಾನ್ ದೇವಾಲಯದಲ್ಲಿ ಇಂತಹ ಅಸಂಖ್ಯಾತ ಪವಾಡಗಳು ನಡೆದ ಉದಾಹರಣೆಗಳೂ ಇವೆ. ಈ ದೇವಾಲಯದ ಅಂಗಳದಲ್ಲಿ ಪವಾಡಸದೃಶ ಖೇಜ್ರಿ ಮರವೂ ಇದೆ. ಈ ಖೇಜ್ರಿ ಮರವು ಶತಮಾನಗಳಷ್ಟು ಹಳೆಯದು ಎಂದು ಹೇಳಲಾಗುತ್ತದೆ. ಇದರ ವಿಶೇಷ ಅಂದ್ರೆ ಈ  ಖೇಜ್ರಿ ಮರದ ಕಾಂಡವು ಹೊರಗಿನಿಂದ ಬಲವಾಗಿ ಕಾಣುತ್ತದೆ ಆದರೆ ಕಾಂಡದ ಒಳಗಿನಿಂದ ಟೊಳ್ಳಾಗಿರುವುದರಿಂದ, ಇದನ್ನು ಸುರಂಗವಾಗಿ ಬಳಸಬಹುದು. ಏನೆ ಔಷಧಿ ಮಾಡಿದರೂ ಕೆಮ್ಮು ನಿವಾರಣೆಯಾಗದ ರೋಗಿಯು ಖೇಜ್ರಿ ಮರದ ಬೇರಿನೊಳಗೆ ಹಾದುಹೋದರೆ, ಅದು ಗುಣವಾಗುತ್ತದೆ ಎಂದು ಗ್ರಾಮದ ಪ್ರಮುಖ ಜನರು ಹೇಳುತ್ತಾರೆ.

ಈ ಖೇಜ್ರಿ ಮರದ ಎರಡನೇ ಮತ್ತು ದೊಡ್ಡ ಲಕ್ಷಣವೆಂದರೆ ಸುಮಾರು 50 ವರ್ಷಗಳ ಹಿಂದೆ ಅಜ್ಞಾತ ಕಾರಣಗಳಿಗಾಗಿ ಅದರೊಳಗೆ ಬೆಂಕಿ ಕಾಣಿಸಿಕೊಂಡಿತು. ಖೇಜ್ರಿ ಮರವು ಒಳಗಿನಿಂದ ಸಂಪೂರ್ಣವಾಗಿ ಸುಟ್ಟುಹೋಗಿದೆ. ಆ ಸಮಯದಲ್ಲಿ ಬೆಂಕಿ ನಿಯಂತ್ರಣದಲ್ಲಿ ಇರಲಿಲ್ಲ. ಪ್ರಸ್ತುತ, ಖೇಜ್ರಿ ಮರದ ಬೇರುಗಳು ಒಳಗಿನಿಂದ ಸಂಪೂರ್ಣವಾಗಿ ಸುಟ್ಟುಹೋಗಿವೆ. ಆದರೂ, ಈ ಮರವು ಗಟ್ಟಿಯಾಗಿ ನಿಂತಿದೆ. 

ಪಂಚಮುಖಿ ಹನುಮಾನ್ ದೇವಾಲಯದ ಈ ತಿದೊಡ್ಡ ವೈಶಿಷ್ಟ್ಯವನ್ನು ತಿಳಿದರೆ ನೀವು ಅಚ್ಚರಿಯಾಗೋದು ಖಚಿತ, ಅದೇನಂದ್ರೆ. ಈ ದೇವಾಲಯದ ಅರ್ಚಕರು ಹೇಳುವಂತೆ ಹನುಮಂತ ಮೂರ್ತಿ ಪ್ರತಿವರ್ಷ ಅಕ್ಕಿಯ ಗಾತ್ರದಷ್ಟು ಎತ್ತರ ಮತ್ತು ಅಕ್ಕಿಯ ಗಾತ್ರದಷ್ಟು ಅಗಲವಾಗುತ್ತಂತೆ. ಇದು ಪವಾಡವಲ್ಲದೇ ಮತ್ತಿನ್ನೇನು? 

ಈ ವಿಗ್ರಹವು ನೆಲದ ಒಳಗೆ 20 ಅಡಿ ಆಳದವರೆಗೂ ಇದೆ ಎಂದು ಹೇಳಲಾಗಿದೆ. ಇದು ಈಗ ಕೆಲವು ಸಮಯದಿಂದ ಮುನ್ನೆಲೆಗೆ ಬರುತ್ತಿದೆ. ಈ ದೇವಾಲಯದ ಇತಿಹಾಸದ ಬಗ್ಗೆ ಹೇಳೋದಾದ್ರೆ ಶತಮಾನಗಳ ಹಿಂದೆ ರೈತರು ಇಲ್ಲಿ ಕೃಷಿ ಮಾಡುತ್ತಿದ್ದರಂತೆ. ಆ ಸಮಯದಲ್ಲಿ, ಇಲ್ಲಿನ ರೈತರು ನೆಲ ಅಗೆಯುತ್ತಿದ್ದಾಗ, ಇದ್ದಕ್ಕಿದ್ದಂತೆ ನೆಲದಿಂದ ರಕ್ತ ಹರಿಯಲು ಪ್ರಾರಂಭಿಸಿತು, ಅದೇ ಸಮಯದಲ್ಲಿ ಪಂಚಮುಖಿ ಹನುಮಂತನ ಮೂರ್ತಿಯೂ ಹೊರಬಂತು. ನಂತರ ಇಲ್ಲಿ ದೇವಾಲಯವನ್ನು ಸ್ಥಾಪಿಸಲಾಯಿತು. ಈ ಪವಾಡಸದೃಶ ಖೇಜ್ರಿ ಮರವು ದೇವಾಲಯದ ಪಕ್ಕದಲ್ಲಿಯೇ ಇದೆ. ಇಲ್ಲಿ ನಡೆಯುತ್ತಿರುವ ಅನೇಕ ಪವಾಡಗಳಿಗೆ ಆ ಊರಿನ ಜನರು ಸಾಕ್ಷಿಯಾಗಿದ್ದಾರೆ. 

click me!