ಶಿವಮೊಗ್ಗದ ಹಿರೇಭಾಸ್ಕರ ಆಣೆಕಟ್ಟು ಬೇಸಿಗೆಯಲ್ಲಿ ಮಾತ್ರ ಕಾಣಸಿಗುವ ಐತಿಹಾಸಿಕ ವಿಸ್ಮಯ. ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ನಿರ್ಮಿತವಾದ ಇದು, 1964ರಲ್ಲಿ ಲಿಂಗನಮಕ್ಕಿ ಜಲಾಶಯ ನಿರ್ಮಾಣವಾದಾಗ ಅದರ ಹಿನ್ನೀರಿನಲ್ಲಿ ಮುಳುಗಡೆಯಾಯಿತು.
ಮಲೆನಾಡಿನ ದಟ್ಟ ಅರಣ್ಯ ಮತ್ತು ಶರಾವತಿ ಹಿನ್ನೀರಿನ ಒಡಲಿನಲ್ಲಿ ಒಂದು ಅದ್ಭುತ ಐತಿಹಾಸಿಕ ತಂತ್ರಜ್ಞಾನದ ಸಾಕ್ಷಿ ಅಡಗಿದೆ. ಅದೇ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಸಿಗಂದೂರು ಸಮೀಪವಿರುವ ‘ಹಿರೇಭಾಸ್ಕರ ಆಣೆಕಟ್ಟು’ (ಮಡೆನೂರು ಡ್ಯಾಮ್). ಮಳೆಗಾಲದಲ್ಲಿ ಕಣ್ಣಿಗೆ ಕಾಣದಂತೆ ಲಿಂಗನಮಕ್ಕಿ ಜಲಾಶಯದ ನೀರಿನಲ್ಲಿ ಸಂಪೂರ್ಣವಾಗಿ ಮುಳುಗಡೆ ಆಗುವ ಈ ಆಣೆಕಟ್ಟು, ಬೇಸಿಗೆಯಲ್ಲಿ ನೀರಿನ ಮಟ್ಟ ಕುಸಿದಾಗ ಮಾತ್ರ ಪ್ರತ್ಯಕ್ಷವಾಗಿ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ.
26
ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದ ಐತಿಹಾಸಿಕ ಆಣೆಕಟ್ಟು
ಶರಾವತಿ ನದಿಯಿಂದ ವಿದ್ಯುತ್ ಉತ್ಪಾದಿಸುವ ಮಹತ್ವಾಕಾಂಕ್ಷಿ ಉದ್ದೇಶದೊಂದಿಗೆ ಈ ಆಣೆಕಟ್ಟಿನ ನಿರ್ಮಾಣಕ್ಕೆ 1939ರ ಫೆಬ್ರುವರಿ 5ರಂದು ಮೈಸೂರಿನ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಜೋಗದಲ್ಲಿ ಅಡಿಗಲ್ಲು ಇಟ್ಟಿದ್ದರು. 1939 ರಿಂದ 1948ರ ಅವಧಿಯಲ್ಲಿ ಇಡೀ ಆಣೆಕಟ್ಟನ್ನು ಕಾಂಕ್ರೀಟ್ನಿಂದಲೇ ನಿರ್ಮಿಸಲಾಯಿತು. ಈ ಜಲಾಶಯವು ಒಟ್ಟು 120 ಮೆಗಾವಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿತ್ತು.
36
ಲಿಂಗನಮಕ್ಕಿ ಒಡಲಲ್ಲಿ ಹಿರೇಭಾಸ್ಕರ ಮುಳುಗಡೆಯಾದ ಕಥೆ
1956ರಲ್ಲಿ ವಿಶಾಲ ಕರ್ನಾಟಕ ರಾಜ್ಯ ಉದಯವಾದಾಗ ತೀವ್ರಗೊಂಡ ವಿದ್ಯುತ್ ಕೊರತೆಯನ್ನು ನೀಗಿಸಲು ಶರಾವತಿಯ ಪೂರ್ಣ ಸಾಮರ್ಥ್ಯ ಬಳಸಿಕೊಳ್ಳಲು ಸರ್ಕಾರ ಮುಂದಾಯಿತು. ಇದಕ್ಕಾಗಿ 1964ರಲ್ಲಿ ಲಿಂಗನಮಕ್ಕಿ ಆಣೆಕಟ್ಟು ನಿರ್ಮಾಣವಾದಾಗ, ಹಿರೇಭಾಸ್ಕರ ಆಣೆಕಟ್ಟು ಅದರ ಹಿನ್ನೀರಿನಲ್ಲಿ ಸಂಪೂರ್ಣವಾಗಿ ಮುಳುಗಡೆಯಾಯಿತು. ಲಿಂಗನಮಕ್ಕಿಯ ಪೂರ್ಣಮಟ್ಟ ಸಮುದ್ರಮಟ್ಟದಿಂದ 1,819 ಅಡಿಯಲ್ಲಿದ್ದರೆ, ಹಿರೇಭಾಸ್ಕರ ಆಣೆಕಟ್ಟು 1,778 ಅಡಿಯಲ್ಲಿದೆ. ಹೀಗಾಗಿ 1968 ರಿಂದ ಪ್ರತಿವರ್ಷ ಈ ಆಣೆಕಟ್ಟಿನ ಮೇಲೆ ಸುಮಾರು 41 ಅಡಿ ನೀರು ನಿಲ್ಲುತ್ತಿದ್ದು, ಬೇಸಿಗೆಯಲ್ಲಿ ನೀರಿನ ಮಟ್ಟ ತಗ್ಗಿದಾಗ (ಪ್ರತಿವರ್ಷ ಮೇ ತಿಂಗಳ ಅಂತ್ಯ ಹಾಗೂ ಜೂನ್ ಆರಂಭದಲ್ಲಿ) ಮಾತ್ರ ಇದು ಕಣ್ಣಿಗೆ ಗೋಚರಿಸುತ್ತದೆ.
ಗಣೇಶ್ ಐಯ್ಯರ್ ಅವರ ಜಗತ್ಪ್ರಸಿದ್ಧ 'ವೊಲ್ಯೂಟ್ ಸೈಫನ್' ತಂತ್ರಜ್ಞಾನ
ಈ ಆಣೆಕಟ್ಟಿನ ಪ್ರಮುಖ ಆಕರ್ಷಣೆಯೇ ಇಲ್ಲಿನ ಎಂಜಿನಿಯರಿಂಗ್ ಅದ್ಭುತ. ಪ್ರವಾಹದ ನೀರನ್ನು ಸ್ವಯಂಚಾಲಿತವಾಗಿ ಹೊರಹಾಕಲು ಪ್ರಸಿದ್ಧ ಸಿವಿಲ್ ಎಂಜಿನಿಯರ್ ಗಣೇಶ್ ಐಯ್ಯರ್ ಅವರು ವಿನ್ಯಾಸಗೊಳಿಸಿದ 11 ವಿಶೇಷ 'ವೊಲ್ಯೂಟ್ ಸೈಫನ್'ಗಳನ್ನು (Volute Siphons) ಇಲ್ಲಿ ಅಳವಡಿಸಲಾಗಿದೆ. ಸುಮಾರು 18 ಅಡಿ ವ್ಯಾಸವನ್ನು ಹೊಂದಿರುವ ಈ ಸೈಫನ್ಗಳು ತಲಾ 11,000 ಕ್ಯೂಸೆಕ್ಸ್ಗೂ ಅಧಿಕ ಪ್ರವಾಹದ ನೀರನ್ನು ಹೊರಹಾಕುವ ದೈತ್ಯ ಸಾಮರ್ಥ್ಯ ಹೊಂದಿವೆ. ಇದರೊಂದಿಗೆ ಜಲಾಶಯದ ನೀರನ್ನು ನಿಯಂತ್ರಿತವಾಗಿ ಹೊರಬಿಡಲು ಆರು ಗೇಟುಗಳನ್ನೂ ಅಳವಡಿಸಲಾಗಿದೆ.
56
ದಟ್ಟ ಕಾಡಿನ ಮಧ್ಯೆ ಚಾರಣದ ಸವಾಲು!
ಸಂರಕ್ಷಿತ ಹಿನ್ನೀರು ಮತ್ತು ದಟ್ಟ ಅರಣ್ಯ ಪ್ರದೇಶದ ಮಧ್ಯೆ ಈ ಆಣೆಕಟ್ಟು ಇರುವುದರಿಂದ ಇಲ್ಲಿಗೆ ತಲುಪುವುದು ಪ್ರವಾಸಿಗರಿಗೆ ದೊಡ್ಡ ಸವಾಲಾಗಿದೆ. ಸಿಗಂದೂರುವರೆಗೆ ಸಾರ್ವಜನಿಕ ಸಾರಿಗೆ ಲಭ್ಯವಿದ್ದು, ಅಲ್ಲಿಂದ ಮುಂದೆ ಆಟೋ ಅಥವಾ ಟ್ಯಾಕ್ಸಿಗಳು ರಸ್ತೆಯ ಕೆಟ್ಟ ಸ್ಥಿತಿಯಿಂದಾಗಿ ಬರಲು ಒಪ್ಪುವುದಿಲ್ಲ. ಹಾಗಾಗಿ, ಕೊನೆಯ ಕೆಲವು ಕಿಲೋಮೀಟರ್ಗಳನ್ನು ಕಾಡಿನ ಹಾದಿಯ ಮೂಲಕ ಚಾರಣ (Treking) ಮಾಡಿಯೇ ತಲುಪಬೇಕಾಗುತ್ತದೆ. ಈ ಸ್ಥಳಕ್ಕೆ ತಲುಪಲು ಸ್ವಂತ ಬೈಕ್ ಅತ್ಯುತ್ತಮ.
66
ಭೇಟಿ ನೀಡುವ ಮುನ್ನ ಅರಣ್ಯ ಇಲಾಖೆಯ ಅನುಮತಿ ಕಡ್ಡಾಯ!
ಇದು ನಿರ್ಜನ ಮತ್ತು ಸಂರಕ್ಷಿತ ಅರಣ್ಯ ವಲಯದಲ್ಲಿ ಇರುವುದರಿಂದ ಇಲ್ಲಿಗೆ ಪ್ರವೇಶಿಸಲು ಸಂದರ್ಶಕರು ಸಂಬಂಧಪಟ್ಟ ಸರ್ಕಾರಿ ಇಲಾಖೆಗಳಿಂದ ವಿಶೇಷ ಪ್ರವೇಶ ಅನುಮತಿಯನ್ನು ಪಡೆಯಬೇಕಾಗುತ್ತದೆ. ಸ್ಥಳೀಯ ನೀರಿನ ಮಟ್ಟ ಮತ್ತು ಕಾಲೋಚಿತ ಅರಣ್ಯ ನಿರ್ಬಂಧಗಳು ಬದಲಾಗುತ್ತಿರುವುದರಿಂದ, ಪ್ರವಾಸ ಯೋಜಿಸುವ ಮುನ್ನ ಶಿವಮೊಗ್ಗದಲ್ಲಿರುವ ಸ್ಥಳೀಯ ಅರಣ್ಯ ಕಚೇರಿ ಅಥವಾ ಪ್ರವಾಸೋದ್ಯಮ ಮಂಡಳಿಯನ್ನು ಸಂಪರ್ಕಿಸಿ, ಚೆಕ್ ಪೋಸ್ಟ್ ಅನುಮತಿ ಪಡೆದು ಜಾಗರೂಕತೆಯಿಂದ ಭೇಟಿ ನೀಡುವುದು ಸೂಕ್ತ.
ದೂರದ ಮಾಹಿತಿ:
ಶಿವಮೊಗ್ಗದಿಂದ: ಸುಮಾರು 105 ಕಿ.ಮೀ.
ಸಿಗಂದೂರಿನಿಂದ: ಸುಮಾರು 3.3 ಕಿ.ಮೀ.
ಮಂಗಳೂರಿನಿಂದ: ಸುಮಾರು 174 ಕಿ.ಮೀ.
ಬೆಂಗಳೂರಿನಿಂದ: ಸುಮಾರು 410 ಕಿ.ಮೀ.
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.