7 Gods for 7 days: ಯಾವ ದಿನ ಯಾವ ದೇವರನ್ನು ಪೂಜಿಸಬೇಕು?

By Suvarna NewsFirst Published Dec 21, 2021, 12:07 PM IST
Highlights

ಹಿಂದೂಗಳಲ್ಲಿ ವಾರದ ಏಳು ದಿನಗಳೂ ಒಂದೊಂದು ದೇವರಿಗೆ ಮೀಸಲಾಗಿವೆ. ಆಯಾ ದಿನ ಆಯಾ ದೇವರಿಗೆ ವಿಶೇಷ ಪೂಜೆ ಸಲ್ಲಿಸುವುದರಿಂದ ಹೆಚ್ಚು ಕೃಪೆಗೆ ಪಾತ್ರರಾಗಿ ವಿಶೇಷ ಫಲಗಳನ್ನು ಪಡೆಯಬಹುದು.

ಹಿಂದೂಗಳಿಗೆ ಒಂದಲ್ಲಾ, ಎರಡಲ್ಲ, ಮುಕ್ಕೋಟಿ ದೇವರು. ಹಾವು, ಹಕ್ಕಿ, ಕಾಡು ಮೇಡು, ಶುಕ, ಶುನಕದಲ್ಲೂ ದೇವರನ್ನು ಕಾಣುವವರು ಹಿಂದೂಗಳು. ನಿತ್ಯ ಪ್ರಕೃತಿ ಹಾಗೂ ಪ್ರಾಣಿಗಳನ್ನು ಪವಿತ್ರ ಭಾವನೆಯಲ್ಲಿ ಕಾಣುವ ಜೊತೆಗೆ, ಎಲ್ಲಕ್ಕಿಂತ ಪ್ರಮುಖವಾದ ದೇವರೆಂದು ಪರಿಗಣಿಸಿರುವ ಕೆಲ ದೇವರನ್ನು ಸ್ಮರಿಸಬೇಕು. ಹೀಗೆ ವಾರದ ಏಳು ದಿನಗಳ ಕಾಲ ಏಳು ಪ್ರಮುಖ ದೇವರ ಆರಾಧನೆಗೆ ಮೀಸಲಾಗಿದೆ. ಆಯಾ ದಿನ ಆಯಾ ದೇವರನ್ನು ಆರಾಧಿಸುವುದರಿಂದ ದೇವರ ವಿಶೇಷ ಕೃಪೆಗೆ ಕಾರಣವಾಗಬಹುದು ಎನ್ನುತ್ತವೆ ಶಾಸ್ತ್ರಗಳು. ಹಾಗಾದರೆ ಯಾವ ದಿನ ಯಾವ ದೇವರನ್ನು ಪೂಜಿಸಬೇಕು ನೋಡೋಣ.

ಭಾನುವಾರ(Sunday)
ಭಾನು ಎಂದರೆ ಸೂರ್ಯ. ಈ ದಿನವೇ ಸೂರ್ಯನದ್ದು. ಸೂರ್ಯದೇವನಿಗೆ ಹಿಂದೂ ಪುರಾಣ(Hindu mythology)ಗಳಲ್ಲಿ ಬಹಳ ಪ್ರಾಮುಖ್ಯತೆ ಇದೆ. ಭೂಮಿ ಮೇಲಿನ ಪ್ರತಿಯೊಂದು ಕೂಡಾ ಸೃಷ್ಟಿಯಂತೆ ನಡೆಸಿಕೊಂಡು ಹೋಗುವವನು ಸೂರ್ಯ. ಆತನಿಲ್ಲದೆ, ಇಲ್ಲಿ ಜೀವಿಗಳಿರಲು ಸಾಧ್ಯವಿಲ್ಲ. ಹಾಗಾಗಿ ಭಾನುವಾರ ಸೂರ್ಯನನ್ನು ಸ್ಮರಿಸಬೇಕು. ಬೆಳಗ್ಗೆ ಬೇಗ ಎದ್ದು ಇಡೀ ಮನೆ ಹಾಗೂ ದೇಹವನ್ನು ಸ್ವಚ್ಚಗೊಳಿಸಿಕೊಂಡ ನಂತರ ಸೂರ್ಯನಿಗೆ ಅರ್ಘ್ಯ ಸಲ್ಲಿಸುತ್ತಾ ಗಾಯತ್ರಿ ಮಂತ್ರ(Gayatri Mantra) ಜಪಿಸಬೇಕು. ಸೂರ್ಯನನ್ನು ಪೂಜಿಸುವಾಗ ಹಣೆಯಲ್ಲಿ ಗಂಧ ಹಾಗೂ ಕುಂಕುಮ ಮಿಶ್ರಿತ ತಿಲಕವಿರಬೇಕು. 
ಸೂರ್ಯನಿಗೆ ಕೆಂಪು ಬಣ್ಣ(Red colour) ಶ್ರೇಷ್ಠವಾದ್ದರಿಂದ ಅದೇ ಬಣ್ಣದ ಬಟ್ಟೆ ಧರಿಸಿ ಪೂಜೆ ಮಾಡುತ್ತಾ, ಕೆಂಪು ಹೂಗಳನ್ನು ಸೂರ್ಯನಿಗೆ ಅರ್ಪಿಸಬೇಕು. 

Strong spirits: ಈ ರಾಶಿಯವರು ಗಟ್ಟಿ ಮನೋಬಲದ ಜಗಜಟ್ಟಿಗಳು ..

ಸೋಮವಾರ(Monday)
ಸೋಮವಾರ ಮಹಾದೇವ(Lord Shiva)ನ ದಿನ. ಈ ದಿನ ಶಿವನ ದೇವಾಲಯಕ್ಕೆ ಭೇಟಿ ನೀಡಿ ಶಿವಪಾರ್ವತಿಗೆ ನಮಸ್ಕರಿಸಿ ಪೂಜಿಸಬೇಕು. ಈ ದಿನ ಸೂರ್ಯನ ಆಭರಣವಾದ ಚಂದ್ರನನ್ನೂ ಸ್ಮರಿಸಬೇಕು. ಶಿವ ಬೇಗ ಒಲಿಯುವವನು. ಸೋಮವಾರ ಬೇಗ ಎದ್ದು ಶುಚಿರ್ಭೂತಿಗಳನ್ನು ಪೂರೈಸಿ, ಶಿವಲಿಂಗಕ್ಕೆ ಜಲಾಭಿಷೇಕ, ಕ್ಷೀರಾಭಿಷೇಕ ನಡೆಸಬೇಕು. ಈ ದಿನ ಬಿಳಿ ಇಲ್ಲವೇ ಬೂದು ಬಣ್ಣದ ಬಟ್ಟೆ ಧರಿಸುವುದು ಉತ್ತಮ. ಶಿವಲಿಂಗಕ್ಕೆ ಗಂಧ, ಭಸ್ಮ ಇಡಿಸಿ, ಬಿಲ್ವ ಹಾಗೂ ಬಿಳಿ ಹೂಗಳನ್ನು ಸಮರ್ಪಿಸಿ. 'ಓಂ ನಮಃ ಶಿವಾಯ' ಎಂದು ಪುನರುಚ್ಚರಿಸುತ್ತಾ ಪೂಜಿಸಬೇಕು. 

ಮಂಗಳವಾರ(Tuesday)
ಮಂಗಳವಾರವು ಆಂಜನೇಯನಿಗೆ ಶ್ರೇಷ್ಠ. ಮಂಗಳ ಗ್ರಹದ ದಿನ. ಆಂಜನೇಯನು ಶಿವನ ಅವತಾರ(incarnation)ವಾಗಿದ್ದು, ಈತ ಜನರ ಮನಸ್ಸಿನ ಭಯಗಳನ್ನು ದೂರ ಮಾಡಬಲ್ಲ. ಇಂದು ಸ್ನಾನ ಮಾಡಿ ಸ್ವಚ್ಛ ಕೆಂಪು ಬಟ್ಟೆ ಧರಿಸಿ, ಸೂರ್ಯನಿಗೆ ಅರ್ಘ್ಯ ಸಲ್ಲಿಸಿ. ಬಳಿಕ ಹನುಮಾನ್ ಚಾಲೀಸ್ ಹೇಳುತ್ತಾ, ಕೆಂಪು ಹೂಗಳನ್ನು ಹಾಗೂ ಕೆಂಪು ಹಣ್ಣುಗಳನ್ನು ಆಂಜನೇಯನಿಗೆ ಅರ್ಪಿಸಿ, ದೀಪ ಹಚ್ಚಿ. ಆಂಜನೇಯನ ಹಣೆಗೆ ತಿಲಕ ಹಚ್ಚಿ.

Mangal Dosh : ಮಂಗಳನ ಕೆಟ್ಟ ಪರಿಣಾಮದಿಂದ ಜೀವನದಲ್ಲಿ ಏನೆಲ್ಲಾ ನಡೆಯುತ್ತೆ ?

ಬುಧವಾರ(Wednesday)
ಬುಧವಾರವು ಗಣೇಶ(Lord Ganesh)ನ ದಿನ. ಬುದ್ಧಿವಂತಿಕೆ, ಕಲಿಕೆ ಹಾಗೂ ಕಲೆಯನ್ನು ಸಿದ್ಧಿಸುವ ಸಿದ್ಧಿ ವಿನಾಯಕ ಭಕ್ತನ ಬದುಕಿನಿಂದ ನಕಾರಾತ್ಮಕತೆಯನ್ನು ದೂರ ಮಾಡಬಲ್ಲ. ಎಲ್ಲ ಪೂಜೆಗೂ ಮೊದಲು ಪ್ರತಿ ದಿನ ಗಣೇಶನನ್ನು ಪೂಜಿಸುವುದು ಇದ್ದೇ ಇದೆ. ಬುಧವಾರ ವಿಶೇಷವಾಗಿ ಗಣೇಶ ಹಾಗೂ ಕೃಷ್ಣನಿಗೆ ಪೂಜೆ ಸಲ್ಲಿಸಬೇಕು. ಗಣಪತಿಗೆ ದೂರ್ವೆ, ಹಳದಿ ಹಾಗೂ ಬಿಳಿ ಹೂಗಳನ್ನು ನೀಡಿ, ಬಾಳೆಹಣ್ಣು ಮತ್ತು ಸಿಹಿಯನ್ನು ನೀಡಿ ಪೂಜಿಸಬೇಕು. ಈ ಸಂದರ್ಭದಲ್ಲಿ ಗಣೇಶ ಮಂತ್ರವನ್ನು ಹೇಳುತ್ತಿರಬೇಕು. ಇಂದು ಹಸಿರು ಇಲ್ಲವೇ ಹಳದಿ ಬಣ್ಣದ ಬಟ್ಟೆ ಧರಿಸಬಹುದು. 

ಗುರುವಾರ(Thursday)
ಗುರುವಾರ ವಿಷ್ಣು(Lord Vishnu)ವಿನ ಹಾಗೂ ದೇವರೆಲ್ಲರ ಗುರುವಾದ ಬೃಹಸ್ಪತಿ(Brihaspati)ಯ ದಿನ. ಇಂದು ಶ್ರೀ ಗುರು ರಾಘವೇಂದ್ರ ಸ್ವಾಮಿ ಹಾಗೂ ಸಾಯಿಬಾಬಾರನ್ನು ಪೂಜಿಸಲೂ ಶುಭದಿನ. ಹಳದಿ ಬಣ್ಣದ ಬಟ್ಟೆ ಧರಿಸಿ, ಗುರು ಹಾಗೂ ವಿಷ್ಣುವಿನ ಪೂಜೆಗಾಗಿ ಬಾಳೆಗಿಡದ ಕೆಳಗೆ ದೀಪ ಹಚ್ಚಬೇಕು. ಬಾಳೆದಿಂಡಿಗೆ ಕುಂಕುಮ ಹಚ್ಚಿ ಹಳದಿ ಹೂಗಳು, ತುಪ್ಪ, ಹಾಲನ್ನು ಸಮರ್ಪಿಸಬೇಕು. ಭಗವದ್ಗೀತೆ ಹೇಳಿಕೊಳ್ಳುವುದು ಉತ್ತಮ. ಇಲ್ಲದಿದ್ದಲ್ಲಿ 'ಓಂ ಜೈ ಜಗದೀಶ್ ಹರೇ' ಹೇಳಿಕೊಳ್ಳಿ. 

ಶುಕ್ರವಾರ(Friday)
ಶುಕ್ರವಾರವು ಮಹಾಲಕ್ಷ್ಮೀ(Goddess Mahalakshami)ಯ ದಿನ. ದುರ್ಗೆ, ಅನ್ನಪೂರ್ಣೆ, ಶಾರದಾಂಬೆ ಸೇರಿದಂತೆ ಅಮ್ಮನವರಿಗೆ ಶ್ರೇಷ್ಠ ದಿನ. ಬಿಳಿ ಅಥವಾ ತಿಳಿ ಬಣ್ಣದ ಬಟ್ಟೆ ಧರಿಸಿ ಅಮ್ಮನವರನ್ನು ಬಿಳಿ ಹೂಗಳಿಂದ ಪೂಜಿಸಿ. ಲಲಿತಾ ಸಹಸ್ರನಾಮ ಸೇರಿದಂತೆ ಯಾವುದೇ ತಾಯಿಯ ಶ್ಲೋಕ ಹೇಳಿಕೊಳ್ಳುತ್ತಾ, ತುಪ್ಪ, ಹಾಲು, ಬೆಲ್ಲ ಸಮರ್ಪಿಸಿ. 

ಶನಿವಾರ(Saturday)
ಶನಿವಾರವು ಶನಿ(Lord Shani)ಯ ದಿನ. ಕರ್ಮಕ್ಕೆ ತಕ್ಕ ಫಲ ನೀಡುವವನು ಶನಿ. ಇಂದು ಶನಿಯ ಅನುಗ್ರಹ ಪಡೆಯಲು ಆತನನ್ನು ಪೂಜಿಸಬೇಕು. ಕಪ್ಪು ಬಣ್ಣದ ಬಟ್ಟೆ ಧರಿಸಿ ಕರಿ ಎಳ್ಳು, ಸಾಸಿವೆ, ಧೂಪ, ದೀಪ, ಪಂಚಾಮೃತಗಳನ್ನು ಶನಿಗೆ ಅರ್ಪಿಸಬೇಕು. ನೀಲಿ ಬಣ್ಣದ ಹೂಗಳನ್ನು ಏರಿಸಬೇಕು. ಅಶ್ವತ್ಥ ಮರ ಇಲ್ಲವೇ ಶಮಿ ವೃಕ್ಷ(Shami tree)ದ ಕೆಳಗೆ ದೀಪ ಹಚ್ಚಿ ಪೂಜೆ ಮಾಡಬಹುದು. 

click me!